Table of Contents
Research Articles
ಬಾಣಭಟ್ಟನ ಕಾದಂಬರಿ: ಕನ್ನಡಕ್ಕೆ ಅನುವಾದಗೊಂಡ ಬಗೆ
01 to 09
ಭಾಷೆಭಾಷೆಗಳ ನಡುವಿನ ತಾರತಮ್ಯವನ್ನು, ಘರ್ಷಣೆಯನ್ನು ತೊಡೆದು ಹಾಕಿ, ಪರಸ್ಪರ ಸಾಮಾಜಿಕ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಮಾಡುವ ಪ್ರಯತ್ನದಲ್ಲಿ ʼಅನುವಾದವುʼ ಅತೀ ಪ್ರಮುಖ ಪಾತ್ರವಹಿಸುವುದು. ಜಾಗತಿಕ ಮಟ್ಟದಲ್ಲಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಪರಿಣಾಮಕಾರಿಯಾದ ಅನುವಾದವು ಭಾಷೆಯನ್ನು ಸಾಂಸ್ಕೃತಿಕವಾಗಿ, ಶಾಬ್ದಿಕವಾಗಿ ಶ್ರೀಮಂತಗೊಳಿಸುವುದು. ಒಂದು ಭಾಷೆಯ ಅನುವಾದವಾಗುವ ಕೃತಿಯೊಂದಿಗೆ ಅದರಲ್ಲಿ ಅಡಕವಾಗಿರುವ ಮೌಲ್ಯಗಳೂ ಸಹ ಇಂದಿನ ಜನಾಂಗಕ್ಕೆ ಮುಟ್ಟಬೇಕು. ಆಗ ಮಾತ್ರ ಅನುವಾದಕ್ಕೂ ಮತ್ತು ಓದುಗರಿಗೂ ಪೂರ್ಣಫಲ ಲಭಿಸುವುದು. ಸಂಸ್ಕೃತದ ಅನೇಕ ಕೃತಿಗಳು ಕನ್ನಡವೇ ಮೊದಲಾದ ಭಾಷೆಗಳಿಗೆ ಅನುವಾದಗೊಂಡಿವೆ. ಪ್ರಸ್ತುತ ಇಂತಹ ಕೃತಿಗಳಲ್ಲಿ ʼಬಾಣಭಟ್ಟನ ಕಾದಂಬರಿʼ ಎಂಬ ಗದ್ಯಕಾವ್ಯವು ಕನ್ನಡಕ್ಕೆ ಅನುವಾದಗೊಂಡ ಬಗೆಯ ಪಕ್ಷಿ ನೋಟ ಇಲ್ಲಿದೆ.
ಕಾದಂಬರಿ ಛಂದೋಂಬುಧಿಯನ್ನು ಬರೆದ ನಾಗವರ್ಮನು ಒಬ್ಬನೇ. ಕಾವ್ಯಾವಲೋಕನ, ಭಾಷಾಭೂಷಣ, ವಸ್ತುಕೋಶಗಳನ್ನು ರಚಿಸಿದವರು ಮಾತ್ರ ಮತ್ತೊಬ್ಬನು ಎಂದು ನರಸಿಂಹಚಾರ್ಯರು ಅಭಿಪ್ರಾಯಪಡುತ್ತಾರೆ. ಇವೆಲ್ಲವುಗಳನ್ನು ರಚಿಸಿದವನು ಒಬ್ಬನೇ ಎಂದು ಡಾ. ವೆಂಕಟಸುಬ್ಬಯ್ಯನವರ ಅಭಿಪ್ರಾಯ. ಒಂದು ಭಾಷೆಯಲ್ಲಿಯ ಕಾವ್ಯದ ಅರ್ಥವನ್ನು ಅದರ ಪದರಚನಾ ಮಹತ್ವದೊಡನೆ ಮತ್ತೊಂದು ಭಾಷೆಯಲ್ಲಿ ತರುವುದು ಸಾಮಾನ್ಯದ ಕೆಲಸವಲ್ಲ. ಪರಿವರ್ತನಾಕಾರನು ದ್ವಿಭಾಷಾ ಪಂಡಿತನಾಗಿರುವುದು ಅವಶ್ಯ. ನಾಗವರ್ಮನು ಅನುವಾದ ಮಾಡಿದ್ದರೂ, ಅವನ ಕೃತಿ ಪ್ರಥಮ ವರ್ಗ ಪರಿವರ್ತನವಾಗಿದೆ. ನಾಗವರ್ಮನು ಬಾಣನ ಕೃತಿಯನ್ನೇ ಅನುಸರಿಸಿದ್ದರೂ ಹೆಜ್ಜೆ ಹೆಜ್ಜೆಗೆ ಅನುಸರಿಸಿಲ್ಲ. ಎಲ್ಲಿ ವರ್ಣನೆ ಅನವಶ್ಯಕವೋ ಅಲ್ಲಿ ನಾಗವರ್ಮನು ವರ್ಣನೆಯಲ್ಲಿ ಬಹುಭಾಗವನ್ನು ಬಿಟ್ಟುಬಿಟ್ಟಿದ್ದಾನೆ. ಉದಾಹರಣೆಗೆ ಶೂದ್ರಕ ರಾಜನ ವರ್ಣನೆಯನ್ನೇ ನೋಡಬಹುದು. ಬಾಣನಷ್ಟು ದೀರ್ಘವಾಗಿ ಬೆಳೆಸದೆ, ಸ್ವಲ್ಪದರಲ್ಲಿಯೇ ಮುಗಿಸಿ ಕಥೆಯನ್ನು ಮುಂದೋಡಿಸುತ್ತಾನೆ. ಬಹು ದೀರ್ಘವಾದ ವಾಕ್ಯಗಳನ್ನು ನಾಗವರ್ಮನು ಹೆಚ್ಚಾಗಿ ಉಪಯೋಗಿಸಿಲ್ಲ; ಸಮಾಸಗಳನ್ನಾದರೂ ಹಾಗೇ; ಗದ್ಯಪದ್ಯ ಎರಡನ್ನೂ ಸೇರಿಸಿದ್ದರಿಂದ ಶೈಲಿಯಲ್ಲಿ ವೈವಿಧ್ಯವುಂಟಾಗಿದೆ. ಶೈಲಿಯಲ್ಲಿಯ ಮಾರ್ಪಾಟಿನಿಂದ, ಕಥೆಯ ಕುತೂಹಲವನ್ನು ಕಾಯ್ದಿಡುವುದರಿಂದ ನಾಗವರ್ಮನ ಕೃತಿ ಕನ್ನಡದ ಅನುವಾದ ಕೃತಿಗಳಲ್ಲಿ ಗಣ್ಯವಾಗಿದೆ. ಬಾಣಕವಿಯ ಕೃತಿಯ ಆಧಾರದಿಂದಲೇ ಕನ್ನಡದಲ್ಲಿ ಕೃಷ್ಣಾಚಾರ್ಯರ ಕಾದಂಬರಿಯೂ ಗದ್ಯದಲ್ಲಿ ಬಂದಿದೆ. ಹಾಗೆಯೇ ಶ್ರೀ ಗಂಗಾಧರ ಮಡಿವಾಳೇಶ್ವರ ತುರಮರಿಯವರು ಹೊಸಗನ್ನಡದಲ್ಲಿ ಬಾಣನ ಕಾದಂಬರಿಯನ್ನು ಅನುವಾದಿಸಿದ್ದಾರೆ. ಬಾಣನಲ್ಲಿ ಅಪರಿಮಿತವಾಗಿ ಬರುವ ಶ್ಲೇಷೆಯನ್ನು ಕನ್ನಡದಲ್ಲಿ ತರುವುದು ಸುಲಭ ಸಾಧ್ಯವಿಲ್ಲ. ಆದರೂ ಬಾಣ ಕಾದಂಬರಿಯನ್ನು ಕನ್ನಡೀಕರಿಸಿರುವವರೆಲ್ಲಾ ಅವರದ್ದೇ ಶೈಲಿಯಲ್ಲಿ ಅವರವರ ಕಾಲ ಘಟ್ಟದ ಸಹೃದಯರ ಅಭಿರುಚಿಗೆ ತಕ್ಕಂತೆ ಒಪ್ಪ ಓರಣಗೊಳಿಸಿ ಅಲಂಕರಿಸಿರುವುದಂತೂ ಸತ್ಯ. ಸಂಸ್ಕೃತದ ಮಹತ್ಕೃತಿಯ ಸಾರವನ್ನು ಕನ್ನಡದಲ್ಲಿ ತಿಳಿಯಾಗಿ ಸ್ವಾರಸ್ಯವಾಗಿ ಹೇಳಬಹುದೆಂಬುದನ್ನು ಸಾಧಿಸಿದ್ದಾರೆ ಕೂಡ. ಮೂಲ ಸಂಸ್ಕೃತದ ಕೃತಿಗಳನ್ನು ಓದಲಾಗದ, ಅರ್ಥೈಸಿಕೊಳ್ಳಲಾಗದ ಅನೇಕರಿಗೆ ಕನ್ನಡದಲ್ಲಿ ಅನುವಾದಗೊಂಡ ಕೃತಿಗಳು ವರದಾನವೇ ಸರಿ. ಹೀಗೆ ಅಪರಿಚಿತ ಭಾಷೆ, ಸಾಹಿತ್ಯವನ್ನು ತಿಳಿಯುವಲ್ಲಿ ಭಾಷಾಂತರ ಪ್ರಮುಖ ಪಾತ್ರವಹಿಸುತ್ತದೆ.
ಕನ್ನಡ ಜಾನಪದ ರಂಗಭೂಮಿಯ ಪರಂಪರೆ
10 to 18
ಬದುಕಿನ ಅಸಂಖ್ಯ ಪಾಠಗಳ ಗಣಿ ರಂಗಭೂಮಿ. ಅದರ ಆಳಕ್ಕಿಳಿದಷ್ಟು ಅನುಭವಗಳ ಸುರಳಿ ಬಿಚ್ಚಿಕೊಳ್ಳುತ್ತದೆ. ಶತಮಾನಗಳ ಹಿಂದೆ ತನ್ನ ಸ್ವರೂಪವನ್ನು ಕಟ್ಟಿಕೊಂಡಿದ್ದರೂ, ವಿಭಿನ್ನ ಕಾಲಘಟ್ಟಗಳ ಮನೋಧರ್ಮಗಳಿಗೆ ಅನುಗುಣವಾಗಿ ಹಲವು ಹತ್ತು ಮಾರ್ಪಾಡುಗಳಿಗೆ ಒಳಗಾಗುತ್ತಾ ಇಂದಿಗೂ ತನ್ನ ಬೇರುಗಳನ್ನು ಉಳಿಸಿಕೊಂಡಿದೆ ರಂಗಭೂಮಿ. ಬದುಕಿನ ಬವಣೆಗಳನ್ನೇ ತಮ್ಮ ಅನುಭವದ ಮೂಲಕ ಮನರಂಜನೆಯನ್ನಾಗಿಸಿಕೊಂಡ ಜಾನಪದ ರಂಗಭೂಮಿ, ಹಗಲು ರಾತ್ರಿ ತಾಲೀಮು ನಡೆಸಿ ವಿಶಿಷ್ಟ ಪ್ರಯೋಗಗಳನ್ನು ನೀಡಿದ ರಂಗಭೂಮಿ. ಈ ಜಾನಪದ ರಂಗಭೂಮಿಯು ಪರಂಪರೆಯ ಮುಂದುವರಿಕೆಗೆ ನೀಡಿದ ಕೊಡುಗೆಗಳು ಅಷ್ಟಿಷ್ಟಲ್ಲ. ಅಲ್ಲಿ ಜಾನಪದೀಯ ಸೊಗಡಿತ್ತು; ವಿಭನ್ನ ಕಾಲಘಟ್ಟದ ಸಾಮಾಜಿಕ ಚಹರೆಗಳಿದ್ದವು; ಬದುಕಿನ ವಿವಿಧ ಆಯಾಮಗಳಿದ್ದವು; ಪ್ರೇಕ್ಷಕರಿಗೆ ರಸದೌತಣ ಉಣಬಡಿಸುವ ಉದ್ದೇಶವಿತ್ತು; ನೈತಿಕ ಮೌಲ್ಯವನ್ನು ಸಾರುವ ಸಾಮಾಜಿಕ ಹೊಣೆಗಾರಿಕೆಯಿತ್ತು; ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಕಳಕಳಿಯಿತ್ತು; ಅದನ್ನೊಂದು ವೇದಿಕೆಯನ್ನಾಗಿ ಬಳಸಿಕೊಂಡು ತಾನು ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ಹಂಬಲವಿತ್ತು; ಏನಾದರೂ ಸರಿ ರಂಗಭೂಮಿಯನ್ನು ಉಳಿಸಿ ಬೆಳೆಸೋಣ ಎನ್ನುವ ಹುಂಬುತನವಿತ್ತು ಇವೆಲ್ಲವೂ ಕನ್ನಡ ರಂಗಭೂಮಿಯನ್ನು ಹುಟ್ಟುಹಾಕಿವೆ, ಬೆಳೆಸಿವೆ ಮತ್ತು ಉಳಿಸಿವೆ. ಇವುಗಳನ್ನು ಅರಿತುಕೊಳ್ಳಬೇಕಾದರೆ ರಂಗಭೂಮಿಯ ಪರಂಪರೆಯನ್ನು ಚಾರಿತ್ರಿಕ ಕ್ರಮದ ಮೂಲಕ ನೋಡಿದರೆ ಸಾಕಾಗುವುದಿಲ್ಲ. ರಂಗಭೂಮಿಯ ನಿಜವಾದ ಚರಿತ್ರೆಯನ್ನು ಅರಿಯಬೇಕಾದರೆ ಅದಕ್ಕಾಗಿ ದುಡಿದ ಜೀವಗಳ ಅನುಭವ ಕಥನಗಳನ್ನು ಅವಲೋಕಿಸಬೇಕು. ಆ ಜೀವಗಳ ಕಷ್ಟಕಾರ್ಪಣ್ಯಗಳನ್ನು, ಸುಖಸಂತೋಷಗಳನ್ನು, ಏಳುಬೀಳುಗಳನ್ನು ಅರಿತುಕೊಳ್ಳಬೇಕು. ಅವರ ತವಕತಲ್ಲಣಗಳನ್ನು ಅರ್ಥೈಸಿಕೊಳ್ಳಬೇಕು. ನಟನೆಯ ಹಿಂದಿನ ತಾಲೀಮನ್ನು, ತೆರೆಯ ಹಿಂದಿನ ವಾಸ್ತವವನ್ನು, ಬಣ್ಣದ ಹಿಂದಿನ ಬದುಕನ್ನು, ಬೆಳಕಿನ ಕೆಳಗಿನ ನೆರಳನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ಅವುಗಳನ್ನು ಮತ್ತೆ ಮತ್ತೆ ಪುನರ್ ಮೌಲ್ಯೀಕರಣಕ್ಕೆ ಒಳಪಡಿಸಬೇಕು. ಹಾಗಾದಾಗ ಮಾತ್ರ ರಂಗಭೂಮಿಯ ನಿಜವಾದ ಚರಿತ್ರೆಯನ್ನು ಕಟ್ಟಿಕೊಡಲು ಸಾಧ್ಯವಾಗುತ್ತದೆ.
ಜನಪದ ಆಚರಣೆಗಳು: ಒಂದು ಅವಲೋಕನ
19 to 25
ಮಾನವನು ಪ್ರಕೃತಿಯ ಆರಾಧನೆಯನ್ನು ಮಾಡುತ್ತಿದ್ದಂತೆ ಅದಕ್ಕೆ ಪೂರಕವಾದಂತಹ ಕೆಲವು ನಂಬಿಕೆಗಳನ್ನು ಹುಟ್ಟುಹಾಕಿಕೊಂಡ. ನಂಬಿಕೆಯು ಗ್ರಾಮೀಣ ಜನರಲ್ಲಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿರುವುದಾಗಿದೆ. ನಂಬಿಕೆಯು ಒಂದು ಪುನರಾವರ್ತನೆ ಹಾಗೂ ಸಾಮೂಹಿಕ ನಿರೀಕ್ಷೆಗಳಿಗೆ ಪ್ರಮುಖವಾಗಿರುತ್ತವೆ. ನಂಬಿಕೆಯು ಗ್ರಾಮೀಣ ಜನರ ಜೀವನಾನುಭವದ ಉತ್ಪನ್ನವಾಗಿದೆ. ಹೀಗೆ ಮಾನವನ ಬದುಕಿಗೂ ನಂಬಿಕೆಗೂ ಅವಿನಾಭಾವ ಸಂಬಂಧವಿದೆ. ಅವು ವಿಧಿನಿಷೇಧಗಳು, ನಿರ್ದೇಶನಗಳು, ಆದೇಶ ಮತ್ತು ಆಜ್ಞೆಯ ರೂಪದಲ್ಲಿ ಪ್ರತಿನಿತ್ಯ ಬದುಕಿನೊಂದಿಗೆ ಸಂಬಂಧವನ್ನು ಕಂಡುಕೊಂಡಿವೆ. ನಂಬಿಕೆ ಎನ್ನುವುದು ಜನಪದರು ಪರಂಪರಾಗತವಾಗಿ ಒಪ್ಪಿಕೊಂಡು ಬಂದಿರುವ ತಿಳುವಳಿಕೆ. ಅನೇಕ ಕೆಲಸಗಳನ್ನು ಕೈಗೊಳ್ಳುವಲ್ಲಿ ಹಾಗೂ ಯಶಸ್ಸನ್ನು ಹೊಂದಲು ಪುಷ್ಟೀಕರಣ ನೀಡುತ್ತವೆ. ಮಾನವನ ಮೂಲ ಪ್ರವೃತ್ತಿಯು ಪ್ರಕೃತಿಯಲ್ಲಾದ ಬದಲಾವಣೆ ಹಾಗೂ ಅದರಿಂದುಂಟಾದಂತಹ ಅನುಭವಗಳ ಆಧಾರದ ಮೇಲೆ ನಂಬಿಕೆಗಳು ಹುಟ್ಟಿಕೊಂಡವು. ಇವು ಕಾಲಕ್ರಮೇಣ ಜನಪದರ ಜೀವನದಲ್ಲಿ ಅನೇಕ ಬದಲಾವಣೆ ಪಡೆದುಕೊಂಡು ಪ್ರಸ್ತುತ ದಿನಮಾನದಲ್ಲಿ ಜನಪದರ ಜೀವನಾಡಿಯಾಗಿ ಬದಲಾಗಿವೆ. ನಂಬಿಕೆ ಹಿನ್ನೆಲೆಯ ಆಚರಣೆಗಳನ್ನು ಕೈಬಿಡಲು ಜನರ ಮನದಲ್ಲಿ ಭಯವಿದೆ. ಏಕೆಂದರೆ ಬಹುಪಾಲು ನಂಬಿಕೆಗಳು ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿವೆ. ಆದ್ದರಿಂದ ನಂಬಿಕೆಗಳು ಜನರಲ್ಲಿ ಗಾಢವಾಗಿ ಬೇರೂರಿವೆ. ನಂಬಿಕೆಗಳ ಕಾರ್ಯ ರೂಪಗಳೇ ಆಚರಣೆಗಳಾಗಿವೆ ಎಂದು ಹೇಳಬಹುದು.
ಸಾಹಿತ್ಯದಲ್ಲಿ ಮಾಧ್ಯಮಗಳ ಪ್ರಭಾವ
26 to 31
ಸಾಹಿತ್ಯ ಒಂದು ಸಾಗರ, ಸಾಗರದಲ್ಲಿ ಧುಮುಕಿ ಈಜುವ ಜೀವನ ಬಹು ಸುಂದರ, ಆನಂದವನ್ನು ಕೊಡುವುದರ ಜೊತೆಗೆ ಮನುಕುಲಕ್ಕೆ ಅಮೃತವನ್ನು ಧಾರೆಯೆರಿಯುವ ಸಾಹಿತ್ಯದ ಕೊಡುಗೆ ಅಪಾರ. ಸಾಹಿತ್ಯದಲ್ಲಿ ನಾನಾ ಪ್ರಕಾರಗಳು. ಅದು ಮನುಷ್ಯನಿಗೆ ಒಂದಿಲ್ಲದ ಒಂದು ರೀತಿ ಆಯುಷ್ಯ ಹೆಚ್ಚಿಸುವ ಸಂಜೀವಿನಿಯಂತೆ. ಸಾಹಿತ್ಯ ಜನರ ನಡುವೆ ಸಂಬಂಧ ಕಲ್ಪಿಸುವ ಅದ್ಭುತ ಸಾಧನ. ಸಾಹಿತ್ಯ, ಸಂಗೀತ, ಯಕ್ಷಗಾನ, ನಾಟಕ, ನೃತ್ಯ, ಇತ್ಯಾದಿಗಳ ಮೂಲಕ ನಂಟು ಏರ್ಪಡುವುದು. ಒಂದು ಪಟ್ಟಣದಿಂದ ಇನ್ನೊಂದು ಪಟ್ಟಣಕ್ಕೆ ಜನರು ಸೇರಿ ಸಂತೋಷ ಹಂಚಿಕೊಳ್ಳುತ್ತಿದ್ದರು. ಆದರೆ ಆಧುನಿಕತೆಯಲ್ಲಿ ಸಮೂಹ ಮಾಧ್ಯಮಗಳ ಬಳಕೆಯಿಂದ ಜನರ ನಡುವಿನ ಬಾಂಧವ್ಯ ಮಾಧ್ಯಮಗಳ ಮೂಲಕವೇ ಆಗುತ್ತಿದೆ.
ಸಾಹಿತ್ಯದಲ್ಲಿ ಪಂಪಪೂರ್ವಯುಗದಿಂದಲೂ ಸಾಹಿತ್ಯವಿತ್ತು. ಆದರೆ ಸಮೂಹ ಮಾಧ್ಯಮಗಳ ಬಳಕೆ ಇರಲಿಲ್ಲ. ಆದರೆ ದಂಡಿ, ವಾಮನ, ಅಸಗ, ಗುಣನಂದಿ, ಮುಂದೆ ಬಂದ ಪಂಪ, ಪೊನ್ನ, ರನ್ನ ಸಹೃದಯರಿಗೆ ಕನ್ನಡ ಕಂಪುನ್ನು ಎಲ್ಲಡೆ ಬೀರಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ ವಚನಗಳ ಮೂಲಕ ಸಾಹಿತ್ಯವನ್ನು ಬೆಳೆಸಿದರು. ಆಧುನಿಕತೆಯಲ್ಲಿ ಕುಮಾರವ್ಯಾಸ ಸಾಹಿತ್ಯ ಎಂಬ ಮರವನ್ನು ವಿಶಾಲವಾಗಿ ಬೆಳೆಸಿದರು. ಮೊದಲು ಸಾಹಿತ್ಯ, ಕತೆ, ನಾಟಕ, ಪದ್ಯ, ಪಾಠಗಳ ಮೂಲಕ ಜನರಿಗೆ ನೇರವಾಗಿ ತಲುಪುತ್ತಿತ್ತು. ಆದರೆ ಈಗ ಅದೇ ಮಾಧ್ಯಮಗಳ ಮೂಲಕ ತಲುಪುತ್ತದೆ. ವ್ಯತ್ಯಾಸವಿಷ್ಟೆ, ಜನಸಾಮಾನ್ಯರು ಎಲ್ಲರೂ ಒಟ್ಟಿಗೆ ಕೂಡಿ ಸಾಹಿತ್ಯ ರುಚಿಯನ್ನು ಸವಿಯುತ್ತಿದ್ದರು. ಆದರೆ ಮಾಧ್ಯಮಗಳ ಆರಂಭದಿಂದ ಮನುಷ್ಯ ಒಬ್ಬಂಟಿಯಾಗಿದ್ದಾನೆ. ಉದಾ: ಮೊಬೈಲ್. ಕನ್ನಡ ಸಾಹಿತ್ಯ ಪರಂಪರೆ ಉಳಿಸಿ, ಆಧುನಿಕತೆಯನ್ನು ಅಳವಡಿಸಿ.
ಸಾಹಿತ್ಯ ಮತ್ತು ಮಾಧ್ಯಮಗಳೆರಡು ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವಂತೆ ಕಾಣಿಸುತ್ತದೆ. ಒಂದು ಅಂತರಂಗದ ಜೊತೆ ಸಖ್ಯ ಬೆಳೆಸುತ್ತದೆ. ಇನ್ನೊಂದು ಬಹಿರಂಗದಲ್ಲಿ. ಆದರೆ ಇವೆರಡನ್ನು ದೂರವಿಡಲು ಸಾಧ್ಯವಿಲ್ಲ. ಸಾಹಿತ್ಯದ ರೂಪ, ಸೊಗಡು ಒಂದೊಂದು ಕಾಲಕ್ಕೆ ಒಂದೊಂದು ರೀತಿಯಲ್ಲಿ ಬದಲಾವಣೆ ಸ್ವರೂಪ ಪಡೆಯುತ್ತದೆ. ಸಾಹಿತ್ಯದಲ್ಲಿ ನಿರಂತರ ಬದಲಾವಣೆಯಾಗುವುದನ್ನು ನಾವು ನೋಡುತ್ತಾ ಬಂದಿದ್ದೇವೆ. ಮೊದಲು ಸಂಜೆ ಹೊತ್ತು ಮನೆ ಜಗಲಿಯ ಮೇಲೆ ಕುಳಿತು ಕತೆ ಹೇಳುತ್ತಿದ್ದರು. ಅವರ ಮಾತು, ಧ್ವನಿಗಳೇ ಮಾಧ್ಯಮಗಳಾಗಿದ್ದವು.
ಸಾಹಿತ್ಯದಲ್ಲಿ ಯಾವುದೇ ಒಂದು ವಿಷಯವನ್ನು ಜನರಿಂದ ಜನರಿಗೆ ತಿಳಿಸಲು ನಾಟಕ, ಸಂಗೀತದ ಮೂಲಕ ತಲುಪುತ್ತಿತ್ತು. ಆದರೆ ಈಗಿನ ಯುಗದಲ್ಲಿ ಮಾಧ್ಯಮಗಳೇ ಜನರಿಂದ ಜನರಿಗೆ ತಲುಪಿಸುವ ಸೇತುವೆಯಾಗಿದೆ. ಮೊದಲು ಜನರು ತಮ್ಮ ಮನೆಗಳಲ್ಲಿ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಲು ಅಜ್ಜಿಯ ಸಹಾಯ ಪ್ರೀತಿಯಿಂದ ಆಲಿಸುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಜಂಗಮವಾಣಿ, ದೂರದರ್ಶನ, ಅಂಚೆ, ಮಿಂಚಂಚೆ, ವೆಬ್ಸೈಟ್, ಇಂಟರ್ನೆಟ್ ಬಳಕೆ. ಬ್ರಿಟಿಷರ ಆಗಮನ ತರುವಾಯ ನಮ್ಮ ಸಾಹಿತ್ಯ ಸಂಸ್ಕೃತಿಗಳು ದೇಶದಲ್ಲಿ ಬದಲಾವಣೆ ಹೊಂದಿ ಅಂಚೆ ವ್ಯವಸ್ಥೆ ವ್ಯಾಪಕವಾಗಿ ಹರಡಿತು.
ಆಧುನಿಕ ಸಾಹಿತ್ಯದಲ್ಲಿ ತಂತ್ರಜ್ಞಾನ
32 to 36
ಮಾನವನ ಸಂಸ್ಕೃತಿ, ಸಂವೇದನೆ, ಕಲ್ಪನೆ, ಅನುಭವ ಇತ್ಯಾದಿಗಳನ್ನು ಶಾಶ್ವತವಾಗಿ ಉಳಿಸುವ ಸಾಧನವೆಂದರೆ ಸಾಹಿತ್ಯ. ಅದು ಕೇವಲ ಮನರಂಜನೆ ನೀಡುವುದಲ್ಲ; ಬದುಕಿನ ಅರ್ಥವನ್ನು ತೆರೆದಿಡುವ ಕನ್ನಡಿಯೂ ಹೌದು. ಇನ್ನೊಂದೆಡೆ, ಇಂದಿನ ಯುಗವನ್ನು “ತಂತ್ರಜ್ಞಾನ ಯುಗ” ಎಂದು ಕರೆಯಬಹುದು. ವಿಜ್ಞಾನ ಮತ್ತು ತಂತ್ರಜ್ಞಾನಗಳ ಬೆಳವಣಿಗೆಯಿಂದ ಮಾನವನ ಬದುಕಿನಲ್ಲಿ ಅಸಂಖ್ಯಾತ ಬದಲಾವಣೆಗಳು ಸಂಭವಿಸಿವೆ. ಹಳೆಯ ಕಾಲದಲ್ಲಿ ಕಾಗದಲೇಖನಿ ಮೇಲೆ ಅವಲಂಬಿಸಿದ್ದ ಸಾಹಿತ್ಯ, ಇಂದಿಗೆ ಸ್ಮಾರ್ಟ್ಫೋನ್, ಲ್ಯಾಪ್ಟಾಪ್, ಇಂಟರ್ನೆಟ್ ಮೂಲಕ ಸೃಷ್ಟಿಯಾಗುತ್ತಿದೆ ಮತ್ತು ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಆಧುನಿಕ ಸಾಹಿತ್ಯ ಮತ್ತು ತಂತ್ರಜ್ಞಾನದ ನಡುವಿನ ಸಂಬಂಧವನ್ನು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ.
ಕನ್ನಡ ನಾಟಕಕ್ಕೆ ಮಹಿಳೆಯರ ಕೊಡುಗೆ
37 to 48
ಸುದೀರ್ಘ ಇತಿಹಾಸ ಹೊಂದಿದ ಕನ್ನಡ ನಾಟಕಗಳ ಬೆಳವಣಿಗೆಯು ಅನೇಕ ಕಾಲಘಟ್ಟಗಳನ್ನು ದಾಟಿ ಬಂದು ಆಧುನಿಕ ಜಗತ್ತಿನಲ್ಲಿಯೂ ನಾಟಕ ತನ್ನ ಹೆಜ್ಜೆಯ ಗುರುತುಗಳನ್ನು ಉಳಿಸಿಕೊಂಡು ಮುಂದುವರೆದಿದೆ. ನಾಟಕವು ಪ್ರಾಚೀನ ಕಲೆಯಾಗಿ, ಕಲಾಪ್ರಕಾರವಾಗಿ ಹೆಚ್ಚು ಮನ್ನಣೆ ಪಡೆದುಕೊಂಡು ದೃಶ್ಯಶ್ರವ್ಯ ಕಾವ್ಯವೂ ಆಗಿದೆ. ಎಲ್ಲಾ ವರ್ಗದ ಜನರನ್ನು ಒಂದೆಡೆ ಕೂಡಿಸಿ, ಎಲ್ಲರಿಗೂ ಮನರಂಜನೆ ಹಾಗೂ ನೀತಿಯನ್ನು ಬೋಧಿಸುವ ಪ್ರದರ್ಶನ ಕಲೆಯಾಗಿ ಮಹತ್ವವನ್ನು ಪಡೆದುಕೊಂಡಿದೆ. ನಾಟಕ ಈ ಪದವನ್ನು ನಾವು ಯಾವ ಅರ್ಥದಲ್ಲಿ ಉಪಯೋಗಿಸುತ್ತೇವೆ? ಎಂಬುದಕ್ಕೆ ಎರಡು ಅರ್ಥಗಳಿವೆ. ಬರೆದಿಟ್ಟ ಸಾಹಿತ್ಯ ಕೃತಿ, ನಾಟಕವು ಒಂದು ಸಾಹಿತ್ಯದ ಪ್ರಕಾರ. ಅದು ಸಂಭಾಷಣೆಗಳಿಂದಲೇ ಕಟ್ಟಿದ ಒಂದು ಭಾಷಾ ಬಂಧ ಎನ್ನುವುದು ಒಂದು ಅರ್ಥವಾದರೆ, ಇನ್ನೊಂದು ಅರ್ಥ ರಂಗನಿರ್ಮಿತಿ ಎನ್ನುವುದು. ನಟರು ರಂಗಭೂಮಿಯ ಮೇಲೆ ವೇಷಭೂಷಣಗಳ ಸಮೇತ ಅಭಿನಯಿಸುವ ಆಟ. ಸಾಹಿತ್ಯ ನಾಟಕದ ಏಕೈಕ ಮಾಧ್ಯಮ ಎಂದರೆ ಭಾಷೆ.
“ಬೇರೆ ಬೇರೆ ರುಚಿಗಳನ್ನು ಏಕಕಾಲದಲ್ಲಿ ತಣಿಸಬಲ್ಲದು ಎಲ್ಲ ಬಗೆಯ ಜನರನ್ನು ಒಮ್ಮೆಗೆ ಸೆರೆಹಿಡಿಯಬಲ್ಲದು”. ಎಂಬ ಕಾರಣದಿಂದಲೂ ಸಾಮೂಹಿಕವಾಗಿ ನೋಡಿದಾಗ ದೃಶ್ಯವಾಗುವ ಒಬ್ಬನೇ ಕುಳಿತು ಓದಿ ನಾಲ್ಕು ಜನ ಕೇಳಿದಾಗ ʼಶ್ರವ್ಯಕಾವ್ಯʼ ವಾಗುವ ಕಾರಣದಿಂದಲೂ ನಾಟಕ ದೇಶದ ಸಾಹಿತ್ಯದಲ್ಲಿ ಹಿರಿಮೆಯ ಸ್ಥಾನವನ್ನು ಗಳಿಸಿಕೊಂಡಿತು. ಇಂತಹ ಸರ್ವಾಕರ್ಷಣ ಗುಣ ಇರುವುದು ನಾಟಕ ಒಂದರಲ್ಲೇ. ರಂಗಭೂಮಿಯ ಇತಿಹಾಸಕಾರರೂ, ವಿಮರ್ಶಕರೂ ಆದ ಅಲಾರ್ಡಿಸ್ ನಿಕಲ್ ಅವರು ಒಂದು ದೇಶದಲ್ಲಿ ನಾಟಕ ಸಾಹಿತ್ಯಕ್ಕಿರುವ ಸ್ಥಾನವನ್ನು ಕುರಿತು ವಿಮರ್ಶಿಸುತ್ತ “ಸಾಹಿತ್ಯದ ಪ್ರಕಾರಗಳಲ್ಲಿ ನಾಟಕ ಅತ್ಯಂತ ವಿಚಿತ್ರವೂ ಗಹನವೂ ಆದುದು. ನಾಟಕದಲ್ಲಿ ಸಾಮೂಹಿಕ ರಂಜನಾ ಸಾಮರ್ಥ್ಯವಿದೆ. ಒಂದು ನಾಡಿನ ಬಾಹ್ಯ ಜೀವನ ಹಾಗೂ ಅಂತಃಸತ್ವದ ಚಿತ್ರವಿದೆ. ಸಮಾಜ ಧರ್ಮದ ವಿವೇಚನೆಯಿದೆ. ಸಮಾಜದಲ್ಲಿನ ವಿಷಮತೆಯನ್ನು ನಿವಾರಿಸುವ ಮಾರ್ಗದ ನಿರೂಪಣೆಯಿದೆ. ಹಾಸ್ಯವ್ಯಂಗ್ಯಗಳ ಆಳದಲ್ಲಿ ಅದು ನೋಟಕನನ್ನೇ ಮುಳುಗಿಸುವಂತೆ ಕಾವ್ಯಾನುಭವದ ಶಿಖರಕ್ಕೆ ಹತ್ತಿಸಲೂ ಶಕ್ತವಾಗಿದೆ. ಅದರಿಂದ ಮಾನವನ ಬೌದ್ಧಿಕ ಸೃಷ್ಟಿಯಲ್ಲಿ ನಾಟಕ ಅತ್ಯಂತ ಸ್ವಾರಸ್ಯವಾದುದು.” ಎಂದಿದ್ದಾರೆ. ನಾಟಕ ಸಾಹಿತ್ಯದಲ್ಲಿ ಅನೇಕ ನಾಟಕಗಳನ್ನು ಓದುವಾಗ ಅಲ್ಲಿನ ಪಾತ್ರಗಳು ಓದಿಸಿಕೊಂಡು ಹೋಗುವ ರೀತಿ ನಮ್ಮ ಕಣ್ಮುಂದೆ ಒಂದು ರಂಗನಿರ್ಮಿತಿ ಮಾಡಿಬಿಡುತ್ತದೆ.
ಕಲಿ-ಕತೆ: ವ್ಹಾಯಾ ಬೈಪಾಸ್
49 to 62
ಭಾಷೆ ಮತ್ತು ಸಾಹಿತ್ಯದಲ್ಲಿ ಅನುವಾದ ಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆ. ಕನ್ನಡದಲ್ಲಿ ಸೃಜನಶೀಲ ಸಾಹಿತ್ಯದಷ್ಟೆ ಈ ಭಾಷಾಂತರ ಪ್ರಕ್ರಿಯೆಯು ಬೆಳೆದು ಬಂದಿದೆ. ಅನುವಾದವು ಭಾಷೆಗಳ ನಡುವಿನ ಅಂತರವನ್ನು ಹೋಗಲಾಡಿಸಿ ಅನಿಸಿಕೆಗಳ ಮುಕ್ತ ಕೊಡುಕೊಳ್ಳುವಿಕೆಗೆ ಕಾರಣವಾಗಿದೆ. ಇದರಿಂದ ಭಾಷೆಗಳು ಸಮೃದ್ಧವಾಗಿ ಬೆಳೆದಿವೆ. ಈ ಭಾಷಾಂತರವು ವಿವಿಧ ಭಾಷೆ, ದೇಶ, ಸಂಸ್ಕೃತಿ ಹಾಗೆಯೇ ಸಾಹಿತ್ಯಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಒಂದುಗೂಡಲು ಕಾರಣವಾಗಿದೆ.
ಕನ್ನಡದಲ್ಲಿ ಹಳಗನ್ನಡ, ನಡುಗನ್ನಡ ಕಾಲದಲ್ಲಿ ಕೃತಿಗಳು ಅನುವಾದಗೊಂಡವು. ಹಾಗೆಯೇ ನವೋದಯ ಪೂರ್ವದಲ್ಲಿ ಪಾಶ್ಚಾತ್ಯ ಸಾಹಿತ್ಯದ ಪ್ರಭಾವದಿಂದಾಗಿ ಹಲವಾರು ಕೃತಿಗಳು ಅನುವಾದಗೊಂಡವು. ನಂತರ ಹೊಸಗನ್ನಡ ಸಾಹಿತ್ಯದಲ್ಲೂ ಕನ್ನಡ ಕೃತಿಗಳನ್ನು ಇತರ ಭಾಷೆಗೆ, ಹಾಗೆಯೇ ಇತರ ಭಾಷೆಯ ಕೃತಿಗಳನ್ನು ಕನ್ನಡ ಭಾಷೆಗೆ ಅನುವಾದಿಸಿದರು. ಇವರಲ್ಲಿ ಧರಣೇಂದ್ರ ಕುರಕುರಿಯವರು ಪ್ರಮುಖ ಅನುವಾದಕರಾಗಿದ್ದಾರೆ. ಇವರು ಹಿಂದಿ ಭಾಷೆಯ ಪ್ರಾಧ್ಯಾಪಕರಾಗಿ ಕನ್ನಡ ಮತ್ತು ಹಿಂದಿ ಭಾಷೆಯ ಮೇಲೆ ಪ್ರಭುತ್ವವನ್ನು ಪಡೆದುಕೊಂಡು ಗದ್ಯ ಹಾಗೂ ಪದ್ಯ ಎರಡೂ ಪ್ರಕಾರಗಳಲ್ಲಿ ಅನುವಾದ ಕಾರ್ಯವನ್ನು ಯಶಸ್ವಿಗೊಳಿಸಿದ್ದಾರೆ. ಅನುವಾದ ಕ್ಷೇತ್ರದ ದಿಕ್ಕನ್ನು ಮತ್ತಷ್ಟು ಗಟ್ಟಿಗೊಳಿಸಿ ಕನ್ನಡ ಮತ್ತು ಹಿಂದಿ ಸಾಹಿತ್ಯಕ್ಕೆ ಒಂದು ಹೊಸ ಮೆರಗನ್ನು ನೀಡಿದ್ದಾರೆ.
ಖ್ಯಾತ ಲೇಖಕಿಯರಾದ ಅಲಕಾ ಸರಾವಗಿಯವರು ಹಿಂದಿ ಭಾಷೆಯಲ್ಲಿ ʼಕಲಿ ಕತಾ: ವ್ಹಾಯಾ ಬೈಪಾಸ್ʼ ಎಂಬ ಕಾದಂಬರಿಯನ್ನು ರಚಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡ ಈ ಕಾದಂಬರಿಯನ್ನು ಧರಣೇಂದ್ರ ಕುರಕುರಿಯವರು ಕನ್ನಡ ಭಾಷೆಗೆ ಅನುವಾದಿಸಿದ್ದಾರೆ.
ಈ ಕಾದಂಬರಿಯು ಭಾರತದ ಸ್ವಾತಂತ್ರ್ಯಪೂರ್ವದ ಬ್ರೀಟಿಷರ ಕಾಲದಿಂದ ಆರಂಭಿಸಿ, ಬಾಬರಿ ಮಸೀದಿ ಕೆಡುವುವರೆಗಿನ ಸುದೀರ್ಘವಾದ ಕಾಲಘಟ್ಟದ ರಾಜಕೀಯ, ಸಾಮಾಜಿಕ ಬದುಕಿನ ಹಿನ್ನಲೆಯನ್ನು ಹೊಂದಿದೆ. ಕಾದಂಬರಿಯಲ್ಲಿ ಕಿಶೋರಬಾಬು ಅವರ ಪಾತ್ರದ ಮುಖಾಂತರ ಒಬ್ಬ ವ್ಯಕ್ತಿಯಲ್ಲಿ ನಡೆಯಬಹುದಾದ ವಿಚಿತ್ರ ಪರಿವರ್ತನೆಯ ಚಿತ್ರಣವನ್ನು ಚಿತ್ರಿಸಿದ್ದಾರೆ. ಕಿಶೋರಬಾಬುವಿನ ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆ ನಂತರ ಅವನೊಳಗಾದ ಬದಲಾವಣೆಯಿಂದ ಕಥೆ ಆರಂಭವಾಗುತ್ತದೆ. ಕಿಶೋರಬಾಬು ತನ್ನ ಯೋಚನೆಗಳಿಂದ ಮುಕ್ತಿ ಪಡೆಯಲು ಮತ್ತು ತಮ್ಮ ವಂಶದ ಇತಿಹಾಸವನ್ನು ಹುಡುಕುವ ಚಿತ್ರಣವನ್ನು ಕಾಣಬಹುದಾಗಿದೆ.
ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಭಾಷೆಗೆ ಇರುವ ಸವಾಲುಗಳು
63 to 69
ನಮ್ಮ ಹಿರಿಯರನೇಕರು ಈ ನಾಡುನುಡಿಗಳನ್ನು ಕಟ್ಟಿ ಬೆಳೆಸಿದ್ದಾರೆ. ಈ ಕಟ್ಟುವ ಕೆಲಸವನ್ನು ಇಂದಿನವರು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಈ ಕೆಲಸ ಸತತವಾಗಿ ನಡೆಯಬೇಕಾಗಿರುವಂಥದ್ದು. ನಮ್ಮ ಭಾಷೆಸಾಹಿತ್ಯಗಳ ಅಭಿವೃದ್ಧಿಗಾಗಿ ಕನ್ನಡ ನಾಡಿನ ಸರ್ವಾಂಗೀಣ ಬೆಳವಣಿಗೆಗಾಗಿ ನಾವೆಲ್ಲರೂ ಸಂಕಲ್ಪ ಬಲದಿಂದ ದುಡಿಯಬೇಕಾಗಿದೆ. ಭಾಷೆ ಬೆಳೆದರೆ ಸಂಸ್ಕೃತಿಯೂ ಬೆಳೆಯುತ್ತದೆ. ಶ್ರೀಮಂತ ಭಾಷೆಯಲ್ಲಿ ಮಾತ್ರವೇ ವಿಚಾರಗಳು ಸ್ಪಂದಿಸಬಲ್ಲವು. ಸಮಾಜದ ಆರೋಗ್ಯ ಪಾಲನೆಯಲ್ಲಿ ಭಾಷೆಯದೂ ಮಹತ್ವದ ಪಾಲಿದೆ. ಕರ್ನಾಟಕದಲ್ಲಿ ಕನ್ನಡವೇ ಮುಖ್ಯ. ನಾವು ಎಲ್ಲಿಯೇ ಇರಲಿ ಕನ್ನಡಿಗರು ನಮ್ಮ ರಾಜ್ಯದ ವಿಮಾನ ನಿಲ್ದಾಣ, ರೈಲ್ವೆ, ಅಂಚೆ ಕಛೇರಿ ಮತ್ತು ಬ್ಯಾಂಕ್ ಇತರ ಕೇಂದ್ರ ಕಛೇರಿಗಳಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಬೇಕು. ನಾವು ಮೊದಲು ಕನ್ನಡಿಗರಾಗಬೇಕು. ನಮ್ಮ ವ್ಯವಹಾರ ಕನ್ನಡದಲ್ಲಿರಬೇಕು. ನಮ್ಮ ಕಲಿಕೆ ಮಾತೃಭಾಷೆಯಲ್ಲಿರಬೇಕು.
ಬೀಜದಿಂದ ಹೆಮ್ಮರವಾದ ಕನ್ನಡ ಸಾಹಿತ್ಯ ಚರಿತ್ರೆ
70 to 79
ಒಂದು ಬೀಜದ ಒಳಗೆ ಹಲವು ಮರಗಳ ಸೃಷ್ಟಿ ಅಡಗಿರುತ್ತವೆ. ಅಂದರೆ ಬೀಜವು ಮೊಳಕೆ ಒಡೆದು ಲಕ್ಷಾಂತರ ಸಸ್ಯ ಸಂಕುಲಗಳ ಸೃಷ್ಟಿಗೆ ಕಾರಣೀಭೂತವಾಗಿರುತ್ತದೆ. ಹೇಗೆಂದರೆ ಬೀಜ ಮೊಳಕೆ ಒಡೆದು ಮರವಾಗಿ ಬೆಳೆದು ಲಕ್ಷಾಂತರ ಬೀಜಗಳನ್ನು ಈ ಪ್ರಕೃತಿಗೆ ಕೊಟ್ಟು ಕಗ್ಗಾಡನ್ನು ಸೃಷ್ಟಿಸುವ ಹಾಗೆ ಕನ್ನಡ ಸಾಹಿತ್ಯ ಎಂಬುವುದು ಕೇವಲ ಸಂವಹನ ಭಾಷೆಯಾಗಿರದೆ ಅನೇಕ ರೀತಿಯ ಸಾಹಿತ್ಯ ಪ್ರಕಾರಗಳನ್ನ ತನ್ನೊಳಗೆ ಅಡಗಿಸಿಗೊಂಡು ಬೆಳೆದು ನಿಂತ ಹೆಮ್ಮರದ ಸಾಹಿತ್ಯವಾಗಿದೆ. ಜಗತ್ತಿನ ಇತರೆ ಭಾಷೆಗಳಿಗೆ ಹೋಲಿಸಿದರೆ ವಿಶಿಷ್ಟ ರೀತಿಯ ಸಾಹಿತ್ಯ ಪ್ರಕಾರಗಳು ಕನ್ನಡ ಸಾಹಿತ್ಯದಲ್ಲಿ ಕಂಡುಬರುತ್ತವೆ. ಉದಾಹರಣೆಗೆ: ವಚನ ಸಾಹಿತ್ಯ, ಷಟ್ಪದಿ ಸಾಹಿತ್ಯ, ರಗಳೆ ಸಾಹಿತ್ಯ, ಸಾಂಗತ್ಯ ಇನ್ನು ಅನೇಕ ಸಾಹಿತ್ಯ ಪ್ರಕಾರಗಳು ಅನ್ಯಭಾಷೆಯ ಸಾಹಿತಿಗಳ ಕಲ್ಪನೆಗೂ ನಿಲುಕದ ಸಾಹಿತ್ಯ ರಚನೆಯು ಕನ್ನಡದಲ್ಲಿ ಮೂಡಿ ಬಂದಿದೆ. ಇದು ಕನ್ನಡ ಭಾಷೆಯ ವೈಶಿಷ್ಟ್ಯವಾಗಿದೆ. ಕನ್ನಡ ಭಾಷೆ ಶಿಷ್ಟಸಾಹಿತ್ಯ ಅಷ್ಟೇ ಅಲ್ಲದೆ ಮೌಖಿಕ ಸಾಹಿತ್ಯದಲ್ಲೂ ಸಹ ಅನ್ಯಭಾಷೆಯ ಜನಪದ ಸಾಹಿತ್ಯ ಪ್ರಕಾರಗಳಲ್ಲಿ ಎಲ್ಲೂ ಇಲ್ಲದ ಸಾಹಿತ್ಯ ಪ್ರಕಾರಗಳು ಇದರಲ್ಲಿ ಹುಟ್ಟುಕೊಂಡಿವೆ. ಉದಾಹರಣೆ: ಜನಪದ ಗೀತೆಗಳು, ಜನಪದ ಕತೆಗಳು, ಜನಪದ ಪೌರಾಣಿಕ ಕಥೆಗಳು, ಜನಪದ ಒಡಪುಗಳು, ಜನಪದ ಒಗಟುಗಳು, ಜನಪದ ರಂಗರೂಪಗಳು, ಜನಪದ ನಂಬಿಕೆಗಳು, ಜನಪದ ನೃತ್ಯಗಳು, ಜನಪದ ಸಂಗೀತ, ಜನಪದ ಯಕ್ಷಗಾನ, ಜನಪದ ಗೊಂಬೆಯಾಟ ಹೀಗೆ ಇನ್ನು ಮುಂತಾದ ಜನಪದ ಸಾಹಿತ್ಯ ಪ್ರಕಾರಗಳು ಕಂಡುಬರುತ್ತವೆ. ಇದು ಕನ್ನಡ ಭಾಷೆಗೆ ಇರುವ ಶಕ್ತಿ ಅಥವಾ ವೈಶಿಷ್ಟ್ಯದ ಶಕ್ತಿ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು.
ಆಧುನಿಕ ಯುಗದಲ್ಲಿ ರಾಜ್ಯಶಾಸ್ತ್ರ ಮತ್ತು ಕನ್ನಡ ಸಾಹಿತ್ಯದಲ್ಲಿ ಅಭಿವ್ಯಕ್ತಿಯ ಸ್ವಾತಂತ್ರ್ಯ
80 to 92
ಅಭಿವ್ಯಕ್ತಿಯ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಮೂಲಭೂತ ಅಂಶವಾಗಿದ್ದು, ಸಾಹಿತ್ಯ ಮತ್ತು ರಾಜಕೀಯ ಎರಡರಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ. ಕನ್ನಡ ಸಾಹಿತ್ಯದಲ್ಲಿ ಸಮಾಜದ ದುರ್ಬಲತೆಗಳನ್ನು, ಅಸಮಾನತೆಯನ್ನು, ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಬಿಂಬಿಸುವ ಅಭಿವ್ಯಕ್ತಿಗಳು ವಚನಸಾಹಿತ್ಯದಿಂದ ಇಂದಿನ ಆಧುನಿಕ ಬರಹಗಳವರೆಗೂ ಕಾಣಿಸಿಕೊಳ್ಳುತ್ತವೆ. ಇತ್ತ, ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಮತ್ತು ಇಸಾಹಿತ್ಯವು ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕೆ ಹೊಸ ದಾರಿ ತೆರೆದಿದ್ದರೂ, ಅದೇ ಸಮಯದಲ್ಲಿ ನಿರ್ಬಂಧಗಳು, ಸೆನ್ಸರ್ ಪ್ರಕ್ರಿಯೆಗಳು ಮತ್ತು ಮಾಹಿತಿಯ ದುರುಪಯೋಗವು ಹೊಸ ಸವಾಲುಗಳನ್ನೂ ತಂದುಕೊಟ್ಟಿವೆ.
ರಾಜ್ಯಶಾಸ್ತ್ರದ ದೃಷ್ಟಿಯಿಂದ, ಅಭಿವ್ಯಕ್ತಿಯ ಸ್ವಾತಂತ್ರ್ಯವು ಕೇವಲ ಸಂವಿಧಾನಿಕ ಹಕ್ಕಾಗಿಯೇ ಅಲ್ಲ, ಸಮಗ್ರ ನಾಗರಿಕ ಸಮಾಜದ ಬೆಳವಣಿಗೆಯ ಅಸ್ತಿತ್ವವಾದುದು. ಕನ್ನಡ ಸಾಹಿತ್ಯವು ಈ ಹಕ್ಕಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಆಯಾಮಗಳನ್ನು ಅನಾವರಣಗೊಳಿಸುವ ಮಹತ್ವದ ಮಾಧ್ಯಮವಾಗಿದೆ. ತಂತ್ರಜ್ಞಾನವು ಇದಕ್ಕೆ ವೇಗ ಮತ್ತು ವ್ಯಾಪ್ತಿ ನೀಡಿದರೆ, ರಾಜಕೀಯ ವ್ಯವಸ್ಥೆಯು ಅದಕ್ಕೆ ದಿಕ್ಕು ಮತ್ತು ನಿಯಂತ್ರಣ ನೀಡುತ್ತದೆ. ಈ ಲೇಖನವು ಆಧುನಿಕತೆ, ರಾಜ್ಯಶಾಸ್ತ್ರ ಮತ್ತು ಕನ್ನಡ ಸಾಹಿತ್ಯದ ಸಮ್ಮಿಲನದಲ್ಲಿ ಅಭಿವ್ಯಕ್ತಿಯ ಸ್ವಾತಂತ್ರ್ಯದ ಸ್ಥಿತಿ, ಸವಾಲುಗಳು ಮತ್ತು ಭವಿಷ್ಯದ ಸಾಧ್ಯತೆಗಳನ್ನು ವಿಶ್ಲೇಷಿಸುವ ಪ್ರಯತ್ನ ಮಾಡುತ್ತದೆ.
ಕನ್ನಡ ಕಾದಂಬರಿ ಸಾಹಿತ್ಯದಲ್ಲಿ ಬಸವಣ್ಣನವರು: ಒಂದು ಅವಲೋಕನ
93 to 100
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಸವಣ್ಣನವರು ಅನನ್ಯ ವ್ಯಕ್ತಿತ್ವವಾಗಿ ಹೊರಹೊಮ್ಮಿದ್ದಾರೆ. ವಚನ ಸಾಹಿತ್ಯದ ಮೂಲಕ ಸಮಾಜಮುಖಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ರಾಂತಿಯನ್ನು ಸೃಷ್ಟಿಸಿದ ಬಸವಣ್ಣನವರ ಜೀವನ ಮತ್ತು ಸಾಧನೆಗಳು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅನಾವರಣಗೊಂಡಿವೆ. ವಿಶೇಷವಾಗಿ ಕಾದಂಬರಿ ಪ್ರಕಾರದಲ್ಲಿ ಬಸವಣ್ಣನವರ ಬದುಕು, ತತ್ವ, ಆಧ್ಯಾತ್ಮಿಕ ಸಾಧನೆಗಳು, ಸಾಮಾಜಿಕ ಸುಧಾರಣಾ ಚಳವಳಿಗಳು ಹಾಗೂ ಅನುಭವ ಮಂಟಪದ ಚಟುವಟಿಕೆಗಳನ್ನು ಆಧಾರವಾಗಿಸಿಕೊಂಡು ಹಲವಾರು ಕೃತಿಕಾರರು ಕಾದಂಬರಿಗಳನ್ನು ರಚಿಸಿದ್ದಾರೆ. ದಿ.ಬಿ.ಪುಟ್ಟಸ್ವಾಮಯ್ಯ, ಡಾ. ಎಚ್.ತಿಪ್ಪೇರುದ್ರಸ್ವಾಮಿ, ಜಿ.ಹೆಚ್.ಹನ್ನೆರಡುಮಠ, ಲಕ್ಕಪ್ಪ ಅ. ಶಿರಹಟ್ಟಿ, ಶಾಂತಾದೇವಿ ಮಾಳವಾಡ, ಮಂಗಾಪುರಮಠ ಚಂದ್ರಶೇಖರಶಾಸ್ತ್ರಿ ಮುಂತಾದ ಕಾದಂಬರಿಕಾರರು ಬಸವಣ್ಣನವರ ಚರಿತ್ರೆಯನ್ನು ವೈವಿಧ್ಯಮಯ ದೃಷ್ಟಿಕೋನಗಳಿಂದ ಕಟ್ಟಿಕೊಟ್ಟಿದ್ದಾರೆ. ಈ ಕಾದಂಬರಿಗಳಲ್ಲಿ ಬಸವಣ್ಣನವರ ರಾಜಕೀಯ, ಧಾರ್ಮಿಕ, ಸಾಮಾಜಿಕ, ತತ್ವಜ್ಞಾನಿ ಹಾಗೂ ಪವಾಡಪುರುಷ ಎಂಬ ಅಂಶಗಳು ಪ್ರಬಲವಾಗಿ ವ್ಯಕ್ತವಾಗಿವೆ. ಹೀಗಾಗಿ, ಕನ್ನಡ ಕಾದಂಬರಿ ಸಾಹಿತ್ಯದಲ್ಲಿ ಬಸವಣ್ಣನವರ ವ್ಯಕ್ತಿತ್ವವು ಸಮಗ್ರವಾಗಿ ಪ್ರತಿಬಿಂಬಿತವಾಗಿದೆ ಎಂಬುದನ್ನು ಈ ಅವಲೋಕನ ಸ್ಪಷ್ಟಪಡಿಸುತ್ತದೆ.
ಹೈದರಬಾದ್ ಕರ್ನಾಟಕ ಆಧುನಿಕ ವಚನ ಸಾಹಿತ್ಯ
101 to 110
ಹನ್ನೆರಡನೆಯ ಶತಮಾನದಲ್ಲಿ ಶರಣರು ರೂಪಿಸಿದ ವಚನ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ಸಮಾಜೋದ್ಧಾರಕ, ಧಾರ್ಮಿಕ ಕ್ರಾಂತಿಕಾರಕ ಹಾದಿಯನ್ನು ತೋರಿಸಿತು. ಆ ಪರಂಪರೆಯ ಪ್ರಭಾವದಿಂದ ಆಧುನಿಕ ಕಾಲದಲ್ಲಿಯೂ ಹೊಸ ರೂಪ, ಹೊಸ ಚಿಂತನೆಗಳನ್ನು ಪ್ರತಿಬಿಂಬಿಸುವ ಆಧುನಿಕ ವಚನ ಸಾಹಿತ್ಯ ಹುಟ್ಟಿಕೊಂಡಿದೆ. ವಿಶೇಷವಾಗಿ ಹೈದರಬಾದ್ ಕರ್ನಾಟಕ ಪ್ರದೇಶದಲ್ಲಿ ಸಮಾಜದ ನಾನಾ ವರ್ಗಗಳ ವ್ಯಕ್ತಿಗಳು; ಸಾಹಿತಿಗಳು, ಶಿಕ್ಷಕರು, ವೃತ್ತಿಜೀವಿಗಳು, ಮಹಿಳೆಯರು, ಮಠಾಧೀಶರು, ಕವಿಗಳು, ವಕೀಲರು ಮುಂತಾದವರು, ತಮ್ಮ ಅನುಭವ, ಸಂವೇದನೆ, ಚಿಂತನೆಗಳನ್ನು ಆಧುನಿಕ ವಚನಗಳ ಮೂಲಕ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಧರ್ಮಆಧ್ಯಾತ್ಮಕ್ಕಿಂತ ಸಾಮಾಜಿಕ ಜಾಗೃತಿ, ಮಾನವೀಯ ಮೌಲ್ಯಗಳು, ಸಮಾನತೆ, ವಿಜ್ಞಾನ, ಶಿಕ್ಷಣ, ಶೋಷಣೆ ವಿರುದ್ಧದ ಬಂಡಾಯದ ಧ್ವನಿಗಳು ಹೆಚ್ಚು ಒತ್ತು ಪಡೆದಿವೆ. ಡಾ.ಸಿದ್ಧಯ್ಯ ಪುರಾಣಿಕ, ಡಾ.ಶೈಲಜಾ ಉಡಚಣ, ಡಾ.ಚನ್ನಣ್ಣ ವಾಲೀಕಾರ, ಡಾ.ಕೆ.ಬಿ.ಬ್ಯಾಳಿ, ಸತ್ಯಜ್ಞ, ಬಿ.ಎಸ್.ಖುಬಾ ಮುಂತಾದ ವಚನಕಾರರು ಹೊಸ ದಾರಿಯನ್ನು ತೆರೆದಿದ್ದಾರೆ. ಇವರು ವಚನದ ಮೂಲ ಪರಂಪರೆಯನ್ನು ಅನುಸರಿಸಿದರೂ ಅದಕ್ಕೆ ಆಧುನಿಕ ರೂಪ, ಶೈಲಿ, ವೈಜ್ಞಾನಿಕತೆ, ಸಾಮಾಜಿಕ ಪ್ರಜ್ಞೆಯನ್ನು ತುಂಬಿದ್ದಾರೆ. ಹೈದರಬಾದ್ ಕರ್ನಾಟಕದ ಆಧುನಿಕ ವಚನ ಸಾಹಿತ್ಯವು ಕನ್ನಡ ನಾಡಿನ ಆಧುನಿಕ ವಚನ ಚಳವಳಿಗೆ ಪ್ರಾದೇಶಿಕ ವೈಶಿಷ್ಟ್ಯವನ್ನು ನೀಡುವುದರೊಂದಿಗೆ ಭವಿಷ್ಯದ ಅಧ್ಯಯನಕ್ಕೆ ಸಮೃದ್ಧ ನೆಲೆಯನ್ನು ಒದಗಿಸಿದೆ.
ರವೀಂದ್ರನಾಥ ಠಾಕೂರರ ಪೌರಾಣಿಕ ನಾಟಕಗಳ ಸ್ವರೂಪ ಮತ್ತು ವಿನ್ಯಾಸ (ಠಾಕೂರರ ಕನ್ನಡಾನುವಾದ ನಾಟಕಗಳನ್ನು ಅನುಲಕ್ಷಿಸಿ)
111 to 117
ರವೀಂದ್ರನಾಥ್ ಠಾಕೂರರು 19ನೇ ಶತಮಾನದ ಶ್ರೇಷ್ಠ ನಾಟಕಗಾರರಾಗಿ ಗುರುತಿಸಲ್ಪಟ್ಟವರು. ಪೌರಾಣಿಕ, ಸಾಮಾಜಿಕ, ಐತಿಹಾಸಿಕ, ಸಾಂಕೇತಿಕ ಹೀಗೆ ಅನೇಕ ಬಗೆಯ ನಾಟಕಗಳನ್ನು ವರ್ತಮಾನದ ತುರ್ತಿಗೆ ಪ್ರತಿಸ್ಪಂದಿಸುವಂತೆ ನಾಟಕಗಳನ್ನು ರಚಿಸಿದವರು. ಭಾರತೀಯ ನಾಟಕ ಸಾಹಿತ್ಯದ ಮೂಲಬೇರಾದ ಸಂಸ್ಕೃತದ ನಾಟಕ ಪರಂಪರೆಯಲ್ಲಿಯೂ ರಾಮಾಯಣ ಮಹಾಭಾರತ ಮಹಾಕಾವ್ಯಗಳನ್ನೇ ವಸ್ತುವಾಗಿರಿಸಿಕೊಳ್ಳುವುದರ ಮೂಲಕ ಆರಂಭಗೊಂಡಿರುವುದನ್ನು ಗಮನಿಸಬಹುದು. ಇದೇ ಮಾದರಿ ಕನ್ನಡ ರಂಗಭೂಮಿಯಲ್ಲಿಯೂ ಪ್ರಯೋಗಗೊಂಡಿರುವುದನ್ನು ಕಾಣಬಹುದಾಗಿದೆ. ವಿಶ್ವದ ಎಲ್ಲಾ ಭಾಗದ ರಂಗಭೂಮಿಯನ್ನು ಗಮನಿಸಿದರೂ ನಾಟಕ ವಸ್ತು ಪೌರಾಣಿಕತೆಯಿಂದಲೇ ಆರಂಭವಾಗಿ ಸಾಮಾಜಿಕತೆಯಕಡೆಗೆ ನಡೆದ ಇತಿಹಾಸವನ್ನು ದಾಖಲಿಸುತ್ತದೆ. ಅದರಲ್ಲೂ ಠಾಕೂರರ ಪೌರಾಣಿಕ ನಾಟಕಗಳನ್ನು ಗಮನಿಸಿದರೆ ಹೊಸ ರೀತಿಯಲ್ಲಿ ದರ್ಶಿಸಿರುವುದನ್ನು ಕಾಣಬಹುದು. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳಲ್ಲಿ ಅಂಚಿನ ಪಾತ್ರಗಳನ್ನು ಮುನ್ನೆಲೆಗೆ ತಂದು ಹೊಸ ರೂಪವನ್ನು ಕೊಟ್ಟವರು. ಈಗ ಹಿನ್ನೆಲೆಯಲ್ಲಿ ಠಾಕೂರರ ಪೌರಾಣಿಕ ನಾಟಕಗಳ ವಸ್ತು ಮತ್ತು ವಿನ್ಯಾಸ ತಿಳಿಯುವುದು ಬಹಳ ಮುಖ್ಯವೆನಿಸುತ್ತದೆ.
ಹೊಸ ತಲೆಮಾರಿನ ಬರಹಗಾರರ ತಲ್ಲಣಗಳು
118 to 124
ಬರಹವು ಬರಹಗಾರನ ಆಲೋಚನೆ, ಭಾವನೆ, ಅನುಭವ, ಜ್ಞಾನ ಮತ್ತು ಕಲ್ಪನೆಗಳನ್ನು ಅಕ್ಷರಗಳ ಮೂಲಕ ದಾಖಲಿಸುವ ಪ್ರಕ್ರಿಯೆಯಾಗಿದ್ದು, ಪ್ರತಿಯೊಂದು ಯುಗದಲ್ಲಿಯೂ ಸಾಹಿತ್ಯವು ಸಮಾಜದ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಜೀವನದ ಪ್ರತಿಬಿಂಬವಾಗಿದೆ. ಇಂದಿನ ಜಾಗತೀಕರಣ, ತಂತ್ರಜ್ಞಾನ, ಹೊಸ ಮೌಲ್ಯಗಳು, ಸಾಮಾಜಿಕ ಬದಲಾವಣೆ ಹಾಗೂ ಬದುಕಿನ ಒತ್ತಡಗಳು ಹೊಸ ತಲೆಮಾರಿನ ಬರಹಗಾರರಿಗೆ ಹಲವು ತಲ್ಲಣಗಳನ್ನು ಉಂಟುಮಾಡಿವೆ. ಏನು ಬರೆಯಬೇಕು? ಯಾರಿಗಾಗಿ ಬರೆಯಬೇಕು? ಯಾವ ಭಾಷೆಯಲ್ಲಿ ಬರೆಯಬೇಕು? ಪುಸ್ತಕ ರೂಪದಲ್ಲಾ ಅಥವಾ ಡಿಜಿಟಲ್ ವೇದಿಕೆಯಲ್ಲಿ ಬರೆಯಬೇಕಾ? ಎಂಬ ಪ್ರಶ್ನೆಗಳು ಇವರ ಮುಂದೆ ನಿಂತಿವೆ. ಕೃತಕ ಬುದ್ಧಿಮತ್ತೆ, ಡಿಜಿಟಲ್ ಜಗತ್ತು, ಮಾರುಕಟ್ಟೆ ಧೋರಣೆಗಳು, ಭಾಷಾಸಾಮಾಜಿಕ ಅಸಮಾನತೆಗಳು, ಪ್ರಶಸ್ತಿಗಳ ರಾಜಕೀಯ – ಇವುಗಳೆಲ್ಲ ಬರಹಗಾರರಲ್ಲಿ ಗೊಂದಲವನ್ನು ಸೃಷ್ಟಿಸುತ್ತವೆ. ಆದರೂ ಈ ತಲ್ಲಣಗಳೇ ಸೃಜನಶೀಲತೆಗೆ ಚಿಲುಮೆಗಳಾಗಿ ಹೊಸ ಸಾಹಿತ್ಯ ಪರಂಪರೆಯನ್ನು ರೂಪಿಸುತ್ತಿವೆ. ಇಂದಿನ ಬರಹಗಾರರು ಲಿಂಗಸಮಾನತೆ, ಮಾನವ ಹಕ್ಕುಗಳು, ಪರಿಸರ ಸಂರಕ್ಷಣೆ, ಮಾನಸಿಕ ಆರೋಗ್ಯ, ಜಾಗತೀಕರಣ ಮುಂತಾದ ಪ್ರಸ್ತುತ ವಿಷಯಾಧಾರಿತ ಸಾಹಿತ್ಯವನ್ನು ಸೃಷ್ಟಿಸುತ್ತಿದ್ದು, ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕನ್ನು ತೋರಿಸುತ್ತಿದ್ದಾರೆ. ಹೀಗಾಗಿ, ಹೊಸ ತಲೆಮಾರಿನ ಬರಹಗಾರರ ತಲ್ಲಣಗಳು ಸಾಹಿತ್ಯದ ಸ್ಥಗಿತವಲ್ಲ; ಅದು ಸಾಹಿತ್ಯ ಸೃಷ್ಟಿಯ ಹೊಸ ಮಾರ್ಗದ ಸೂಚನೆಯಾಗಿದೆ.
ಆಧುನಿಕ ಮಾಧ್ಯಮಗಳಲ್ಲಿ ಸಂತ ಶಿಶುನಾಳ ಶರೀಫರು
125 to 141
ಸಂತ ಶಿಶುನಾಳ ಶರೀಫರು ಕರ್ನಾಟಕದ ಜನಮನಗಳನ್ನು ಗೆದ್ದ ತತ್ವಜ್ಞಾನಿ, ಕವಿ ಹಾಗೂ ಸಮಾಜ ಸೇವಕರಾಗಿದ್ದಾರೆ. ಅವರ ತತ್ವಪದಗಳು ಸರಳತೆ, ಸಾಂದ್ರತೆ ಮತ್ತು ಸಾಮಾಜಿಕ ಸಮಾನತೆಗಾಗಿ ಹೋರಾಡುವ ದೃಷ್ಟಿಕೋನವನ್ನು ವ್ಯಕ್ತಪಡಿಸುತ್ತವೆ. ಈ ಚಿಂತನೆಗಳು ಕೇವಲ ಮಠಮಂದಿರಗಳಲ್ಲದೆ ಆಧುನಿಕ ಮಾಧ್ಯಮಗಳ ಮೂಲಕವೂ ವ್ಯಾಪಕವಾಗಿ ಹರಡಿವೆ. ಆಕಾಶವಾಣಿ (ರೇಡಿಯೋ) ಮೂಲಕ ಶರೀಫರ ತತ್ವಪದಗಳು ಜನಪದ ಗೀತೆ, ಸುಗಮ ಸಂಗೀತ, ಭಜನೆ ಹಾಗೂ ನಾಟಕ ರೂಪಕಗಳಲ್ಲಿ ಪ್ರಸಾರಗೊಂಡು ಜನಮನೆಗಳಿಗೆ ತಲುಪಿವೆ. ದೂರದರ್ಶನದಲ್ಲಿ ʼಈಶ್ವರ ಅಲ್ಲಾ ನೀನೇ ಎಲ್ಲಾʼ ಧಾರಾವಾಹಿ ಹಾಗೂ ʼತತ್ವರಸಾಯನʼ ಕಾರ್ಯಕ್ರಮಗಳ ಮೂಲಕ ಶರೀಫರ ಜೀವನ ಹಾಗೂ ತತ್ವಗಳನ್ನು ದೃಶ್ಯರೂಪದಲ್ಲಿ ಪ್ರೇಕ್ಷಕರು ಕಂಡಿದ್ದಾರೆ. ಚಲನಚಿತ್ರ ಮಾಧ್ಯಮದ ಮೂಲಕ ಟಿ.ಎಸ್.ನಾಗಾಭರಣ ನಿರ್ದೇಶಿಸಿದ ʼಸಂತ ಶಿಶುನಾಳ ಶರೀಫʼ ಚಿತ್ರವು ಅವರ ತತ್ವಪದಗಳನ್ನು ಜೀವಂತಗೊಳಿಸಿ ಅಂತರಾಷ್ಟ್ರೀಯ ಮಟ್ಟದ ಮೆಚ್ಚುಗೆಯನ್ನೂ ಪಡೆದಿದೆ. ಹೀಗಾಗಿ, ಆಧುನಿಕ ಮಾಧ್ಯಮಗಳು ಶಿಶುನಾಳ ಶರೀಫರ ಸಂದೇಶವನ್ನು ಇಂದಿನ ಪೀಳಿಗೆಗೂ ತಲುಪಿಸುವಲ್ಲಿ ಶ್ರೇಷ್ಠ ಪಾತ್ರ ವಹಿಸಿವೆಯೆಂದು ಹೇಳಬಹುದು.
ಯುವ ಬರಹಗಾರರ ತಲ್ಲಣಗಳು ಮತ್ತು ಹೊಸ ಹುಡುಕಾಟ
142 to 149
ಸಾಹಿತ್ಯವು ಸ್ಥಿರವಾಗಿರುವುದಿಲ್ಲ; ಅದು ಕಾಲದ ಹಾದಿ ಅನುಸರಿಸಿ ನಿರಂತರವಾಗಿ ರೂಪಾಂತರಗೊಳ್ಳುತ್ತದೆ. ಪ್ರತಿಯೊಂದು ಪೀಳಿಗೆಯ ಬರಹಗಾರರು ತಮ್ಮದೇ ಆದ ಹೊಸ ಹಾದಿಯನ್ನು ಹುಡುಕುತ್ತಾರೆ. ಈ ಪೈಕಿ ಯುವ ಬರಹಗಾರರ ಹೊಸ ಹುಡುಕಾಟ ಅತ್ಯಂತ ವಿಶೇಷ. ಏಕೆಂದರೆ, ಯುವಕರಲ್ಲಿ ಉತ್ಸಾಹ, ಬದಲಾವಣೆಯ ಹಂಬಲ, ಹೊಸತನದ ತವಕ ಇವೆಲ್ಲವೂ ತೀವ್ರವಾಗಿ ಕಾಣುತ್ತವೆ. ಭಾಷೆಯಲ್ಲಿನ ಹೊಸತನದೊಂದಿಗೆ ಯುವ ಬರಹಗಾರರು ಪರಂಪರೆಯ ಕಠಿಣ ಶೈಲಿಯಿಂದ ದೂರವಾಗಿ ಸರಳ, ನುಡಿಗಟ್ಟುಗಳ ಸಮೃದ್ಧ ಭಾಷೆಯನ್ನು ಬಳಸುತ್ತಿದ್ದಾರೆ. “ನನ್ನ ನುಡಿಯೇ ನನ್ನ ಕಲೆ” ಎಂಬ ತೇಜಸ್ವಿಯವರ ನಿಲುವು ಇವರಿಗೂ ಪ್ರೇರಣೆ. ಇಂದಿನ ಯುವ ಬರಹಗಾರರು ತಮ್ಮ ದೈನಂದಿನ ಬದುಕಿನ ಮಾತುಗಳನ್ನು ಸಾಹಿತ್ಯದ ಹೃದಯವಾಗಿಸುತ್ತಿದ್ದಾರೆ. ಶೈಲಿಯ ವೈವಿಧ್ಯತೆಯಲ್ಲಿ ಯುವ ಬರಹಗಾರರು ಕಥೆ–ಕವನ–ಕಾದಂಬರಿಯ ಸಾಂಪ್ರದಾಯಿಕ ಹಾದಿಗೆ ಸೀಮಿತವಾಗದೆ, ಕಿರು ಕತೆಗಳು, ಕವಿತೆಗಳ ನವ್ಯ ರೂಪಗಳು, ಬ್ಲಾಗ್ ಬರಹ, ಡಿಜಿಟಲ್ ಸಾಹಿತ್ಯ ಮುಂತಾದ ಹಾದಿಗಳನ್ನು ಹುಡುಕುತ್ತಿದ್ದಾರೆ. ಹೀಗೆ ಸಾಹಿತ್ಯವನ್ನು ಹೊಸ ಮಾಧ್ಯಮಗಳಲ್ಲಿ ತಲುಪಿಸಲು ಅವರ ಪ್ರಯತ್ನ ಕಾಣಿಸುತ್ತದೆ. ಜೊತೆಗೆ ಬದಲಾವಣೆಯ ಹಂಬಲ ಬಯಸುವ ಯುವ ಬರಹಗಾರರು ಹಳೆಯ ಮೌಲ್ಯಗಳನ್ನು ಕುರುಡಾಗಿ ಅನುಸರಿಸುವುದಿಲ್ಲ. ಬದಲಾಗಿ, ಅವುಗಳನ್ನು ಪ್ರಶ್ನಿಸಿ ಹೊಸ ಅರ್ಥ ನೀಡಲು ಪ್ರಯತ್ನಿಸುತ್ತಾರೆ. ಕುವೆಂಪುರವರು ಹೇಳಿದಂತೆ –”ಹೊಸ ಹೊಲವು ಬಿತ್ತನೆಗೆ ಬಯಸುತ್ತದೆ” ಅವನ ಬರಹವೂ ಸಮಾಜದಲ್ಲಿ ಬದಲಾವಣೆಯ ಬಿತ್ತನೆ ಮಾಡಲು ಹಂಬಲಿಸುತ್ತದೆ. ಯುವ ಬರಹಗಾರನ ಮತ್ತೊಂದು ಹೊಸ ಹುಡುಕಾಟ ಎಂದರೆ ತನ್ನದೇ ಆದ ಧ್ವನಿಯನ್ನು ಕಂಡುಹಿಡಿಯುವುದು. ಅಡಿಗರು ನವ್ಯ ಚಳವಳಿ ಆರಂಭಿಸಿದAತೆ, ಇಂದಿನ ಯುವ ಬರಹಗಾರರೂ ತಮ್ಮದೇ ಆದ ನವೀನ ಧ್ವನಿಯನ್ನು ರೂಪಿಸುತ್ತಿದ್ದಾರೆ. ಅವರು “ಹಿರಿಯರ ಪ್ರತಿಧ್ವನಿಯಲ್ಲ, ನನ್ನದೇ ಸ್ವರ ಬೇಕು” ಎಂಬ ತವಕದಿಂದ ಬರೆಯುತ್ತಿದ್ದಾರೆ. ಯುವ ಬರಹಗಾರರ ಹೊಸ ಹುಡುಕಾಟವು ಕನ್ನಡ ಸಾಹಿತ್ಯಕ್ಕೆ ನೂತನ ಚೈತನ್ಯ ನೀಡುತ್ತಿದೆ. ಹೊಸ ವಿಷಯಗಳು, ಹೊಸ ಶೈಲಿಗಳು, ಹೊಸ ದೃಷ್ಟಿಕೋನಗಳು ಅವರ ಬರಹದ ಮೂಲಕ ಸಾಹಿತ್ಯವನ್ನು ಸಮೃದ್ಧಗೊಳಿಸುತ್ತಿವೆ. ಹೀಗಾಗಿ, ಯುವ ಬರಹಗಾರರ ಹೊಸ ಹುಡುಕಾಟವೆಂದರೆ ಕೇವಲ ಸೃಜನಶೀಲತೆಯ ಚಟುವಟಿಕೆ ಅಲ್ಲ; ಅದು ಸಮಾಜವನ್ನು ಬದಲಿಸುವ ಶಕ್ತಿ.
ಆಧುನಿಕ ಕಾವ್ಯದಲ್ಲಿ ಮಹಿಳಾ ಸಂವೇದನೆ
150 to 154
ಆಧುನಿಕ ಕನ್ನಡ ಕಾವ್ಯದಲ್ಲಿ ಮಹಿಳೆಯ ಸಂವೇದನೆ ಪ್ರಮುಖ ಅಂಶವಾಗಿ ಹೊರಹೊಮ್ಮಿದೆ. ಪುರಾತನ ಕಾಲದಿಂದ ಮಹಿಳೆಯನ್ನು ಸಮಾಜವು ಚಾರಿತ್ರಿಕ ದಾಖಲೆಗಳಿಂದ ದೂರವಿಟ್ಟು ಮೌನಗೊಳಿಸಿದ್ದರೆ, ಆಧುನಿಕ ಕಾಲದಲ್ಲಿ ಆಕೆ ತನ್ನ ಸ್ವರವನ್ನು ಪುರುಷಪ್ರಧಾನ ವ್ಯವಸ್ಥೆಯ ವಿರುದ್ಧ ಎತ್ತಿಕೊಂಡಿದ್ದಾಳೆ. ತನ್ನ ಬದುಕಿನ ನೋವು, ಸಂಕಟ, ಅನ್ಯಾಯ, ಶೋಷಣೆ ಮತ್ತು ಪ್ರತಿರೋಧವನ್ನು ಕಾವ್ಯದ ಮೂಲಕ ವ್ಯಕ್ತಪಡಿಸುತ್ತಿದ್ದಾಳೆ. ಮಹಿಳಾ ಕಾವ್ಯವು ಕೇವಲ ಪುರುಷ ವಿರೋಧಿ ಧೋರಣೆಯಲ್ಲ, ಬದಲಿಗೆ ತನ್ನ ಅಸ್ತಿತ್ವವನ್ನು ದೃಢಪಡಿಸುವ, ಬದುಕನ್ನು ತನ್ನ ದೃಷ್ಟಿಕೋನದಿಂದ ನೋಡುವ ಸಾಹಿತ್ಯದ ಹಾದಿಯಾಗಿದೆ. ಆಧುನಿಕ ಮಹಿಳಾ ಕವಿಗಳು ತಮ್ಮ ಕಾವ್ಯದಲ್ಲಿ ಶೋಷಣೆ, ಲೈಂಗಿಕ ದೌರ್ಜನ್ಯ, ಭಯ, ಸಾಮಾಜಿಕ ಅನ್ಯಾಯಗಳ ಕುರಿತ ಕಳವಳವನ್ನು ಬಿಂಬಿಸುತ್ತಾರೆ. ಈ ಸಾಹಿತ್ಯ ಮಹಿಳೆಯ ಆತ್ಮವಿಶ್ವಾಸಕ್ಕೆ, ಸಾಮಾಜಿಕ ಹೋರಾಟಕ್ಕೆ ಮತ್ತು ಸಾಹಿತ್ಯದ ಪ್ರಾಧಾನ್ಯತೆಗೂ ದಾರಿ ತೋರಿಸುತ್ತದೆ.
ಹೊಸ ವಿಳಾಸದ ಹೆಜ್ಜೆಗಳು: ಸಾಮಾಜಿಕ ತಲ್ಲಣಗಳು
155 to 159
ಸಾಮಾಜಿಕ ತಲ್ಲಣಗಳನ್ನು ಪ್ರತಿಬಿಂಬಿಸುವ ಕಾವ್ಯ ಕನ್ನಡ ಸಾಹಿತ್ಯದಲ್ಲಿ ಹೊಸ ಹಾದಿಯನ್ನು ತೆರೆಯುತ್ತಿದೆ. ಡಾ. ಸಂತೋಷ ನಾಯಕ್ ಅವರ “ಹೊಸ ವಿಳಾಸದ ಹೆಜ್ಜೆಗಳು” ಕವನ ಸಂಕಲನವು ಸಾಮಾಜಿಕ ಜವಾಬ್ದಾರಿ, ಮಾನವೀಯ ಮೌಲ್ಯಗಳು, ಶಾಂತಿ, ಸಹಜೀವನ, ಸ್ತ್ರೀಪರ ಸಂವೇದನೆ ಮತ್ತು ಧಾರ್ಮಿಕ ಶೋಷಣೆಯ ವಿರುದ್ಧದ ಆಕ್ರೋಶಗಳನ್ನು ಪ್ರತಿಬಿಂಬಿಸುತ್ತದೆ. ಈ ಸಂಕಲನದಲ್ಲಿ ಕವಿ ಮೌನ ಮುರಿಯುವ ಪ್ರಯತ್ನ ಮಾಡುತ್ತಾ ಸಾಮಾಜಿಕ ಬದಲಾವಣೆಯ ಅವಶ್ಯಕತೆಯನ್ನು ಕವಿತೆಗಳ ಮೂಲಕ ಅಭಿವ್ಯಕ್ತಿಸುತ್ತಾರೆ. ಪಾರಿವಾಳದ ಪ್ರತೀಕದ ಮೂಲಕ ಶಾಂತಿ ಮತ್ತು ಸಹಜೀವನದ ಸಂದೇಶವನ್ನು ಹರಡುವ ಈ ಕಾವ್ಯ, ಸಾಮಾಜಿಕವಾಗಿ ಶೋಷಿತ ಜನರ ನೋವು, ಸಂಕಟ, ಆಶಾಭಾವನೆಗಳನ್ನು ಶಕ್ತಿ ತುಂಬಿದ ಸ್ವರದಲ್ಲಿ ಹೊರಹಾಕುತ್ತದೆ. ಧರ್ಮ, ಸಂಪ್ರದಾಯ, ಪಿತೃತ್ವದ ಹೆಸರಿನಲ್ಲಿ ನಡೆಯುವ ಶೋಷಣೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೃತಿಯಾಗಿ ಇದು ಗುರುತಿಸಿಕೊಳ್ಳುತ್ತದೆ.
ಯು.ಆರ್. ಅನಂತಮೂರ್ತಿ ಅವರ ವ್ಯಕ್ತಿತ್ವದ ಆಂಶಿಕ ರೂಪ ʼಸೂರ್ಯನ ಕುದುರೆʼ
160 to 168
ಆಧುನಿಕ ಕನ್ನಡ ಸಾಹಿತ್ಯದಲ್ಲಿ 1950ರಿಂದ 1970ರ ವರೆಗೆ ಕನ್ನಡ ಸಾಹಿತ್ಯದಲ್ಲಿ ಕಾಣಿಸಿಕೊಂಡ ಪಂಥ ನವ್ಯ. ಈ ನವ್ಯ ಪಂಥದ ಪ್ರಮುಖ ಬರಹಗಾರರಲ್ಲಿ ಯು. ಆರ್. ಅನಂತಮೂರ್ತಿಯವರು ಒಬ್ಬರು. ತಮ್ಮದೇಯಾದ ತಾತ್ವಿಕ ವಿಚಾರಗಳ ಮೂಲಕ ಸೃಜನಶೀಲ ಹಾಗೂ ಸೃಜನೇತರ ಬರವಣಿಗೆಯಲ್ಲಿ ತಮ್ಮದೇಯಾದ ಸೈದ್ಧಾಂತಿಕತೆಯನ್ನು ಪ್ರತಿಪಾದಿಸಿದರು. ಕನ್ನಡ ಸಣ್ಣ ಕಥಾ ಪರಂಪರೆಗೆ ಪ್ರಮುಖವಾಗಿ ʼಎಂದೆಂದೂ ಮುಗಿಯದ ಕಥೆʼ ʼಪ್ರಶ್ನೆʼ, ʼಮೌನಿʼ, ʼಆಕಾಶ ಮತ್ತು ಬೆಕ್ಕುʼ, ʼಸೂರ್ಯನ ಕುದುರೆʼ, ʼಪಚ್ಚೆ ರೆಸಾರ್ಟ್ʼ ಕಥಾ ಸಂಕಲನವನ್ನು ನೀಡಿದ್ದಾರೆ.
1995ರಲ್ಲಿ ಪ್ರಥಮ ಬಾರಿಗೆ ಬಿಡುಗಡೆಗೊಂಡ ಇವರ ಕಥಾ ಸಂಕಲನ ʼಸೂರ್ಯನ ಕುದುರೆʼ. ʼಸೂರ್ಯನ ಕುದುರೆʼ ಎಂಬುದು ನಾಲ್ಕು ಕಥೆಗಳನ್ನು ಒಳಗೊಂಡ ಕಥಾ ಸಂಕಲನವಾಗಿದೆ. ಇದರಲ್ಲಿ ʼಸೂರ್ಯನ ಕುದುರೆʼ, ʼಅಕ್ಕಯ್ಯʼ, ʼಕಾಮರೂಪಿʼ, ಹಾಗೂ ʼಜರತ್ಕಾರುʼ ಎಂಬ ನಾಲ್ಕು ಕಥೆಗಳನ್ನು ಒಳಗೊಂಡಿದೆ.
ಜಿ. ಎಸ್ ಅಮೂರ ಅವರು ಕೃತಿಯ ಪ್ರಸ್ತಾವನೆಯಲ್ಲಿ “ಅನಂತ ಮೂರ್ತಿಯವರ ಸಾಹಿತ್ಯದಲ್ಲಿ ಚರಿತ್ರೆಯ ಶೋಧ ಅನುಭವದ ನೆಲೆಯಲ್ಲಿ ನಡೆಯುವುದರಿಂದ ಅದು ಆತ್ಮಚರಿತ್ರೆಯು ಆಗುವುದು ಅನಿವಾರ್ಯ. ʼಸೂರ್ಯನ ಕುದುರೆʼಯ ಎಲ್ಲಾ ಕಥೆಗಳ ನಾಯಕರು ಅನಂತಮೂರ್ತಿಯವರ ವ್ಯಕ್ತಿತ್ವದ ಆಂಶಿಕ ಬಿಂಬ ಪ್ರತಿಬಿಂಬಗಳೇ ಆಗಿವೆ” ಎಂದು ಅಭಿಪ್ರಾಯಿಸುತ್ತಾರೆ.
ಅನಂತಮೂರ್ತಿಯವರ ಕಥೆಗಳಲ್ಲಿ ಇತಿಹಾಸವನ್ನು ಸಂಶೋಧಿಸುವುದರೊಂದಿಗೆ ತಮ್ಮ ಆತ್ಮಚರಿತ್ರೆಯ ಎಳೆಗಳನ್ನು ದಾಖಲಿಸುವ, ಅವರ ವ್ಯಕ್ತಿತ್ವದ ಸಣ್ಣ ಸಣ್ಣ ಅಂಶಗಳು ಅವರ ಕಥೆಗಳಲ್ಲಿರುತ್ತವೆ ಎಂಬುದನ್ನು ಇವರ ಮಾತು ತಿಳಿಸುತ್ತದೆ.
ʼಸೂರ್ಯನ ಕುದುರೆʼ ಕಥೆಯಲ್ಲಿ ಅನಂತು ವಿದೇಶಗಳಲ್ಲಿ ಓದಿ ಬಂದವನು. ತನ್ನ ಊರಿಗೆ ಒಮ್ಮೆ ಹೀಗೆ ಭೇಟಿಕೊಟ್ಟಾಗ ಆತನ ಬಾಲ್ಯಕಾಲದ ಸ್ನೇಹಿತ ವೆಂಕಟನ ದರ್ಶನ ಸಂತೆಯಲ್ಲಿ ಆಗುತ್ತದೆ. ಇವರಿಬ್ಬರ ಸ್ನೇಹದ ಜೊತೆ ಜೊತೆಯಲ್ಲಿ ಅನಂತುವಿನ ಆಧುನಿಕತೆಯ ವ್ಯಕ್ತಿತ್ವ, ಆಲೋಚನ ಕ್ರಮಗಳನ್ನು ಕಾಣಬಹುದು. ಆದರೆ ವೆಂಕಟನದು ಭಾರತೀಯ ಮನಃಸ್ಥಿತಿ. ಅನಂತು ವ್ಯವಸ್ಥೆಯು ಹೀಗೆ ಇದ್ದರೆ ದೇಶ ಹೇಗೆ ಬದಲಾವಣೆಯಾಗುತ್ತದೆ ಎಂಬ ಹೇಳಿಕೆಗೆ ಭಾರತೀಯತೆಯ ಪ್ರತೀಕವಾದ ವೆಂಕಟನು ತಾನು ತಮ್ಮ ಹೆಂಡತಿಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲದಿದ್ದಾಗ ಇನ್ನು ಹೇಗೆ ಉಳಿದೆಲ್ಲವನ್ನು ಬದಲಾವಣೆಯನ್ನು ನೋಡಬಹುದೆಂಬ ವಾಸ್ತವ ದೃಷ್ಟಿ ವ್ಯಕ್ತವಾಗುತ್ತದೆ.
ತಂತ್ರಜ್ಞಾನ ಮತ್ತು ಸೃಜನಶೀಲತೆಯ ಅವಸಾನ
169 to 173
ಮಾನವ ಸಮಾಜದ ಬೆಳವಣಿಗೆಯಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರವಹಿಸಿದೆ. ಚಕ್ರದ ಅವಿಷ್ಕಾರದಿಂದ ಇಂದಿನ ಕೃತಕ ಬುದ್ಧಿಮತ್ತೆಯವರೆಗೆ ಪ್ರತಿಯೊಂದು ಹಂತವೂ ಮಾನವನ ಜೀವನವನ್ನು ಸುಲಭಗೊಳಿಸಿದೆ. ಆದರೆ ಇತ್ತೀಚಿನ ವರ್ಷದಲ್ಲಿ “ತಂತ್ರಜ್ಞಾನ ಸೃಜನಶೀಲತೆಯ ಅವಸಾನ” ಎಂಬ ಚರ್ಚೆ ಗಂಭೀರವಾಗಿ ನಡೆಯುತ್ತಿದೆ. ತಂತ್ರಜ್ಞಾನ ಎಂದರೆ ವೈಜ್ಞಾನಿಕ ಜ್ಞಾನವನ್ನು ಬಳಸಿ ವಸ್ತುಗಳು, ಯಂತ್ರಗಳು, ಉಪಕರಣಗಳು ಮತ್ತು ತಂತ್ರಗಳನ್ನು ಸೃಷ್ಟಿಸಿ ಹೊಸ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಅಸ್ತಿತ್ವದಲ್ಲಿರುವ ಪರಿಹಾರಗಳನ್ನು ಸುಧಾರಿಸಲು ಬಳಸುವ ಪ್ರಕ್ರಿಯೆಯಾಗಿದೆ. ಇಂದಿನ 21ನೇ ಶತಮಾನದ ಯುಗವನ್ನು ತಂತ್ರಜ್ಞಾನದ ಯುಗ ಎಂದು ಕರೆಯಲಾಗುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನವು ಮಾನವ ಬದುಕಿನಲ್ಲಿ ಅಪಾರ ಬದಲಾವಣೆಗಳನ್ನು ತಂದಿದೆ. ಒಂದು ಕಡೆ ತಂತ್ರಜ್ಞಾನದ ವೇಗದ ಬೆಳವಣಿಗೆಗಳು, ಮಾನವನ ಜೀವನವನ್ನು ಸುಗಮಗೊಳಿಸಿದರೆ, ಮತ್ತೊಂದು ಕಡೆ ಅದು ಮಾನವನ ಸಹಜ ಸೃಜನಶೀಲತೆಯನ್ನು ನಿಧಾನವಾಗಿ ಕುಗ್ಗಿಸುತ್ತಿರುವುದನ್ನು ಕಾಣಬಹುದು. ಇದು ಸಮಾಜದ ಪ್ರಗತಿಗೆ ಮತ್ತು ಮಾನವನ ಜೀವನ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ ದೈನಂದಿನ ಕ್ರಿಯೆಗಳು, ಸಂವಹನ, ವಿದ್ಯೆ, ಕೆಲಸ, ಮನರಂಜನೆ ಎಲ್ಲವೂ ತಂತ್ರಜ್ಞಾನದಿಂದ ಪ್ರೇರೇಪಿತವಾಗಿದೆ. ಆದರೆ ಇದು ಮನುಷ್ಯನ ವಿಚಾರ ಶಕ್ತಿಯನ್ನು ಕಳೆದುಕೊಳ್ಳುವ ಹಾಗೆ ಮಾಡುತ್ತಿದೆ ಹಾಗೂ ಸಂಪನ್ಮೂಲಗಳ ಸವಕಳಿಯಂತಹ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತಿರುವ ರೀತಿಯನ್ನು ನಾವು ಕಾಣಬಹುದಾಗಿದೆ.
ಶರಣರ ನಡೆ-ನುಡಿ
174 to 180
ಶರಣರ ನಡೆ-ನುಡಿಗಳು ಮಾನವ ಜೀವನಕ್ಕೆ ಮಾರ್ಗದರ್ಶಕ ಶಕ್ತಿಯಾಗಿದೆ. ಗುರುತತ್ವ, ಸತ್ಯ, ತಾಳ್ಮೆ, ಪ್ರೀತಿ, ಸಹನೆ, ಸಮಾನತೆ, ದೈವಭಕ್ತಿ ಇವುಗಳ ಸಮ್ಮಿಶ್ರಣವೇ ಶರಣರ ಬದುಕಿನ ಮೂಲಾಧಾರ. ಶರಣರು ತಮ್ಮ ಜೀವನವನ್ನು ಕೇವಲ ತ್ಯಾಗಮಯವನ್ನಾಗಿಸದೆ, ಸಮಾಜಮುಖಿ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿನ ಮಾದರಿಯನ್ನು ತೋರಿಸಿದ್ದಾರೆ. “ಮಾತೇ ಮುತ್ತು, ಮಾತೇ ಮೃತ್ಯು” ಎಂಬ ತತ್ತ್ವದೊಂದಿಗೆ, ಶರಣರು ಮಾತು, ನಡೆ-ನುಡಿ, ಕಾರ್ಯಗಳಲ್ಲಿ ಶ್ರೇಷ್ಠ ಆದರ್ಶಗಳನ್ನು ಬೆಳೆಸಿಕೊಂಡರು. ಇಂದಿನ ಜಾಗತೀಕರಣ, ಆಧುನೀಕರಣದ ಅಲೆಗಳಲ್ಲಿ ಮನುಷ್ಯ ಕೃತಕತೆಯ ಹಿಂದೆ ಓಡುತ್ತಿರುವಾಗ ಶರಣರ ಜೀವನ ಮನುಕುಲಕ್ಕೆ ನಿಜವಾದ ದಾರಿದೀಪವಾಗಿದೆ. ಮಾನವೀಯತೆ, ಸತ್ಯ, ಭಕ್ತಿ, ಶುದ್ಧತೆ, ಸಹಜತೆ, ಮತ್ತು ಸಮಾನತೆಯ ಜೀವನವೇ ಶರಣರ ನಡೆ-ನುಡಿಯ ನಿಜವಾದ ಅರ್ಥ. ಈ ಪ್ರಬಂಧದಲ್ಲಿ ಶರಣರ ನಡೆ-ನುಡಿಗಳ ಆವಶ್ಯಕತೆ, ಆಧುನಿಕ ಯುಗದಲ್ಲಿಯೂ ಅವುಗಳ ಪ್ರಸ್ತುತತೆ ಹಾಗೂ ಮಾನವ ಬದುಕಿಗೆ ನೀಡುವ ದಾರಿದೀಪದ ಸಂದೇಶವನ್ನು ವಿವರಿಸಲಾಗಿದೆ.
ಜಾನಪದ ಸಾಹಿತ್ಯದ ಮೇಲೆ ಆಧುನಿಕತೆಯ ಪ್ರಭಾವ
181 to 190
ಭಾರತದ ಸಂಸ್ಕೃತಿಯ ಸಮೃದ್ಧಿಯನ್ನು ಪ್ರತಿಬಿಂಬಿಸುವ ಒಂದು ಪ್ರಮುಖ ಅಂಶವೆಂದರೆ ಜಾನಪದ ಸಾಹಿತ್ಯ. ಈ ಸಾಹಿತ್ಯವು ಗ್ರಾಮೀಣ ಬದುಕಿನ ನಿಜ ಸ್ವರೂಪವನ್ನು, ಜನರ ಭಾವನೆಗಳನ್ನು, ಆಚಾರ-ವಿಚಾರಗಳನ್ನು ಮತ್ತು ಜೀವನದ ಸೂಕ್ಷ್ಮತೆಯನ್ನು ತನ್ನಲ್ಲಿ ಒಳಗೊಂಡಿದೆ. ಇಂತಹ ಜಾನಪದ ಸಾಹಿತ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಇಂದು ಆಧುನಿಕ ಯುಗದಲ್ಲಿ ಅತ್ಯಂತ ಪ್ರಸ್ತುತವಾಗಿದೆ. ಜಾನಪದ ಸಾಹಿತ್ಯ ಎಂಬುದು ಜ್ಞಾನಮೂಲದಿಂದ ಹುಟ್ಟಿದದ್ದು ಅಲ್ಲ, ಅದು ಅನುಭವಗಳಿಂದ, ಜನಜೀವನದ ಸತ್ಯ ಘಟನೆಗಳಿಂದ ಮತ್ತು ಕಾಲಕ್ರಮೇಣ ಜನರು ಸಂಗ್ರಹಿಸಿಕೊಂಡ ಜ್ಞಾನದಿಂದ ರೂಪಗೊಂಡಿದ್ದು. ಇದು ಸಾಹಿತ್ಯದ ಅತೀ ಹಳೆಯ ರೂಪವಾಗಿದ್ದು, ಮೌಖಿಕವಾಗಿ ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಾ ಬಂದಿದೆ. ಜಾನಪದವು ಹಳ್ಳಿಗೆ ಮಾತ್ರವೇ ಸೀಮಿತವಾದದ್ದು, ಅನಕ್ಷರಸ್ಥರ ಸ್ವತ್ತು, ಅರ್ಥಹೀನ ಆಚರಣೆಗಳ ಮೊತ್ತ – ಇವೆಲ್ಲಾ ಗತಿಸಿ ಹೋದ ಅಭಿಪ್ರಾಯಗಳು. ಜಾನಪದವು ಸಮಾಜದ ಉನ್ನತ ಹಾಗೂ ನಿರಂತರವಾಗಿ ಸೃಷ್ಟಿ ಆಗುವಂತದ್ದು. ಸಮಾಜದ ಬದಲಾವಣೆಯೊಂದಿಗೆ ಜಾನಪದವು ಬೆಳೆಯುತ್ತಾ ಹಾಗೂ ಬದಲಾಗುತ್ತಾ ಬರುತ್ತದೆ. ಬದಲಾಗದಿರುವಂತಹ ಯಾವುದೇ ಸಂಕೀರ್ಣತೆಯು ಜಾನಪದದಲ್ಲಿಲ್ಲ. ಒಂದು ವೇಳೆ ಅಂತಹ ಅಂಶಗಳಿದ್ದರೂ ಅವುಗಳು ಗೊತ್ತಾಗದಂತೆ ಅಳಿದು ಹೋಗಿರುವುದನ್ನು ನೋಡಬಹುದು. ಅವುಗಳು ಅಳಿದು ಹೋಗಿ ನಂತರ ಹೊಸತು ಸೃಷ್ಟಿಯಾಗುತ್ತದೆ. ಜಾನಪದವು ಎಲ್ಲಾ ಕಾಲಕ್ಕೆ ಸ್ವೀಕೃತವಾದದ್ದು, ಆಧುನಿಕತೆಯನ್ನೊಳಗೊಂಡು ಮುಂದುವರೆಯುತ್ತದೆ.
ಕನ್ನಡ ಭಾಷೆ ಮತ್ತು ಅನುವಾದ ಸಾಹಿತ್ಯ
191 to 202
ಕನ್ನಡ ಭಾಷೆ ಮತ್ತು ಅನುವಾದ ಸಾಹಿತ್ಯʼ ಕುರಿತ ಈ ಲೇಖನವು ಕನ್ನಡದಲ್ಲಿನ ಅನುವಾದ ಪರಂಪರೆಯ ಬೆಳವಣಿಗೆ ಮತ್ತು ಮಹತ್ವವನ್ನು ವಿಶ್ಲೇಷಿಸುತ್ತದೆ. ಪ್ರಾಚೀನ ಮೌಖಿಕ ಪರಂಪರೆ ಹಾಗೂ ಶಾಸನಗಳಿಂದ ಹಿಡಿದು, ಮಧ್ಯಕಾಲೀನ ಸಂಸ್ಕೃತ ಸಾಹಿತ್ಯದ ಪ್ರಭಾವ, ವಸಾಹತು ಯುಗದ ಪಾಶ್ಚಾತ್ಯ ಸಾಹಿತ್ಯದ ಆಮದು, ಇತ್ಯಾದಿ ಹಂತಗಳನ್ನು ಈ ಲೇಖನ ಸ್ಪಷ್ಟಪಡಿಸುತ್ತದೆ. ಕನ್ನಡದಲ್ಲಿನ ಅನುವಾದವು ಮೂಲದ ನಕಲು ಅಲ್ಲ, ಬದಲಾಗಿ ಹೊಸ ಅನುಸೃಷ್ಟಿ ಮತ್ತು ಮರುರೂಪವೆಂಬುದಾಗಿ ಲೇಖನ ತೋರಿಸುತ್ತದೆ. ಕುವೆಂಪು, ಬೇಂದ್ರೆ, ಬಿ.ಎಂ. ಶ್ರೀ ಮುಂತಾದ ಗಣ್ಯರ ಕೃತಿಗಳಲ್ಲಿ ಅನುವಾದವು ಸ್ವತಂತ್ರ ಸೃಜನಾತ್ಮಕ ರೂಪ ಪಡೆದಿದೆ. ಬೈಬಲ್, ಖುರಾನ್, ಗೀತೆ ಮೊದಲಾದ ಧಾರ್ಮಿಕ ಗ್ರಂಥಗಳ ಅನುವಾದವೂ ಕನ್ನಡ ಸಾಹಿತ್ಯ ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದೆ. ಆಧುನಿಕ ಸಂದರ್ಭದಲ್ಲಿ ಅನುವಾದವು ಕೇವಲ ಸಾಹಿತ್ಯವಷ್ಟೇ ಅಲ್ಲ, ಶಿಕ್ಷಣ, ರಾಜಕೀಯ, ಸಾಮಾಜಿಕ ವಲಯಗಳಲ್ಲಿಯೂ ಮಹತ್ವ ಪಡೆದುಕೊಂಡಿದೆ. ಹೀಗಾಗಿ, ಕನ್ನಡದ ಅನುವಾದ ಸಾಹಿತ್ಯವು ಭಾಷಾ ಸಾಂಸ್ಕೃತಿಕ ಸೇತುವೆಯಾಗಿದ್ದು, ಬೌದ್ಧಿಕ ವಿನಿಮಯ ಮತ್ತು ಸಾಹಿತ್ಯ ಸಂಪತ್ತಿಗೆ ಶ್ರೀಮಂತಿಕೆ ನೀಡಿದೆ.
ಜಾನಪದ ಸಾಹಿತ್ಯದ ಶ್ರೀಮಂತಿಕೆ
203 to 210
ಈ ಲೇಖನವು ಕನ್ನಡದ ಜಾನಪದ ಸಾಹಿತ್ಯದ ಶ್ರೀಮಂತಿಕೆಯನ್ನು ವಿಶ್ಲೇಷಿಸುತ್ತದೆ. ಮೌಖಿಕ ಪರಂಪರೆಯಿಂದ ಹರಿದು ಬಂದ ಜನಪದ ಸಾಹಿತ್ಯವು ಗ್ರಾಮೀಣ ಜನರ ಭಾವನೆಗಳು, ಸಂಪ್ರದಾಯಗಳು, ನಂಬಿಕೆಗಳು ಮತ್ತು ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುವ ಶಕ್ತಿಯುತ ಮಾಧ್ಯಮವಾಗಿದೆ. ತ್ರಿಪದಿಗಳು, ಗಾದೆಗಳು, ಗರತಿಯ ಹಾಡುಗಳು, ಭಜನೆಗಳು, ಕುಣಿತಗಳು ಮುಂತಾದ ಪ್ರಕಾರಗಳಲ್ಲಿ ಜನಪದ ಸಾಹಿತ್ಯ ವ್ಯಕ್ತವಾಗಿದೆ. ಇವುಗಳಲ್ಲಿ ತಾಯಿ-ತವರು, ಭೂಮಿತಾಯಿ, ದೇವತೆಗಳು, ಪ್ರೀತಿ, ಭಕ್ತಿ, ಸಹೋದರತೆ, ಸಹಬಾಳ್ವೆ ಮತ್ತು ದುಡಿಮೆಯ ಮೌಲ್ಯಗಳು ವ್ಯಕ್ತವಾಗಿವೆ. ಜನಪದ ಸಾಹಿತ್ಯವು ಕೇವಲ ಮನರಂಜನೆ ಮಾತ್ರವಲ್ಲ, ಜೀವನದ ದರ್ಶನ, ನೈತಿಕ ಬೋಧನೆ ಮತ್ತು ಸಾಂಸ್ಕೃತಿಕ ಸಂರಕ್ಷಣೆಯ ಪ್ರಮುಖ ಸಾಧನವಾಗಿದೆ. ಆಧುನಿಕ ಜಾಗತೀಕರಣದ ಯುಗದಲ್ಲೂ ಜನಪದ ಸಾಹಿತ್ಯದ ಮೌಲ್ಯಗಳು ಸಮಾಜಕ್ಕೆ ಪ್ರೇರಣೆಯಾಗಿ, ಹೊಸ ಪೀಳಿಗೆಗೆ ಮಾರ್ಗದರ್ಶಕವಾಗಿವೆ. ಹೀಗಾಗಿ, ಜಾನಪದ ಸಾಹಿತ್ಯವು ಕನ್ನಡ ಸಂಸ್ಕೃತಿಯ ತಾಯಿ ಬೇರಾಗಿದ್ದು, ಹಳೆಬೇರು-ಹೊಸ ಚಿಗುರುಗಳನ್ನು ಸೇರ್ಪಡೆಗೊಳಿಸುವ ಶ್ರೀಮಂತ ಪರಂಪರೆಯ ಪ್ರತೀಕವಾಗಿದೆ.
ಜಾನಪದ ಸಾಹಿತ್ಯ ಮತ್ತು ಸ್ತ್ರೀ ಚಿಂತನೆ
211 to 219
ಈ ಲೇಖನವು ಕನ್ನಡದ ಜಾನಪದ ಸಾಹಿತ್ಯದ ಶ್ರೀಮಂತಿಕೆಯನ್ನು ವಿಶ್ಲೇಷಿಸುತ್ತದೆ. ಮೌಖಿಕ ಪರಂಪರೆಯಿಂದ ಹರಿದು ಬಂದ ಜನಪದ ಸಾಹಿತ್ಯವು ಗ್ರಾಮೀಣ ಜನರ ಭಾವನೆಗಳು, ಸಂಪ್ರದಾಯಗಳು, ನಂಬಿಕೆಗಳು ಮತ್ತು ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುವ ಶಕ್ತಿಯುತ ಮಾಧ್ಯಮವಾಗಿದೆ. ತ್ರಿಪದಿಗಳು, ಗಾದೆಗಳು, ಗರತಿಯ ಹಾಡುಗಳು, ಭಜನೆಗಳು, ಕುಣಿತಗಳು ಮುಂತಾದ ಪ್ರಕಾರಗಳಲ್ಲಿ ಜನಪದ ಸಾಹಿತ್ಯ ವ್ಯಕ್ತವಾಗಿದೆ. ಇವುಗಳಲ್ಲಿ ತಾಯಿ-ತವರು, ಭೂಮಿತಾಯಿ, ದೇವತೆಗಳು, ಪ್ರೀತಿ, ಭಕ್ತಿ, ಸಹೋದರತೆ, ಸಹಬಾಳ್ವೆ ಮತ್ತು ದುಡಿಮೆಯ ಮೌಲ್ಯಗಳು ವ್ಯಕ್ತವಾಗಿವೆ. ಜನಪದ ಸಾಹಿತ್ಯವು ಕೇವಲ ಮನರಂಜನೆ ಮಾತ್ರವಲ್ಲ, ಜೀವನದ ದರ್ಶನ, ನೈತಿಕ ಬೋಧನೆ ಮತ್ತು ಸಾಂಸ್ಕೃತಿಕ ಸಂರಕ್ಷಣೆಯ ಪ್ರಮುಖ ಸಾಧನವಾಗಿದೆ. ಆಧುನಿಕ ಜಾಗತೀಕರಣದ ಯುಗದಲ್ಲೂ ಜನಪದ ಸಾಹಿತ್ಯದ ಮೌಲ್ಯಗಳು ಸಮಾಜಕ್ಕೆ ಪ್ರೇರಣೆಯಾಗಿ, ಹೊಸ ಪೀಳಿಗೆಗೆ ಮಾರ್ಗದರ್ಶಕವಾಗಿವೆ. ಹೀಗಾಗಿ, ಜಾನಪದ ಸಾಹಿತ್ಯವು ಕನ್ನಡ ಸಂಸ್ಕೃತಿಯ ತಾಯಿ ಬೇರಾಗಿದ್ದು, ಹಳೆಬೇರು-ಹೊಸ ಚಿಗುರುಗಳನ್ನು ಸೇರ್ಪಡೆಗೊಳಿಸುವ ಶ್ರೀಮಂತ ಪರಂಪರೆಯ ಪ್ರತೀಕವಾಗಿದೆ.
ಆಧುನಿಕ ಜಗತ್ತಿನಲ್ಲಿ ಭಾಷಾ ಅನುವಾದದ ಪ್ರಾಮುಖ್ಯತೆ
220 to 226
ಸಂಸ್ಕೃತವು ಎಲ್ಲಾ ಭಾಷೆಗಳ ತಾಯಿ ಮತ್ತು ದೇವ ವಾಣಿ ಎಂದು ಕರೆಯಲ್ಪಡುತ್ತದೆ. ಇದು ಭಾರತದ ಪ್ರಾಚೀನ, ಧಾರ್ಮಿಕ ಗ್ರಂಥಗಳಾದ ವೇದಗಳು, ಮಹಾಭಾರತ ಮತ್ತು ರಾಮಾಯಣದ ಭಾಷೆಯಾಗಿದೆ. ಸಂಸ್ಕೃತವು ಭಾರತೀಯ ಸಾಹಿತ್ಯ, ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯ ಮೂಲ ಸ್ತಂಭವಾಗಿದೆ. ಇದರ ಅಧ್ಯಯನವೂ ಜ್ಞಾನ ಮತ್ತು ವಿಜ್ಞಾನದ ಪ್ರಗತಿಗೆ ಹಾಗೂ ಭಾರತದ ಭಾಷೆಗಳ ಏಕತೆ ಮತ್ತು ಸಂಸ್ಕೃತಿಯನ್ನು ಬೆಳೆಸಲು ಸಹಾಯ ಮಾಡುತ್ತದೆ. ಸಂಸ್ಕೃತದಲ್ಲಿ ಅಪಾರವಾದ ಜ್ಞಾನ ಮತ್ತು ಸಾಹಿತ್ಯವಿದೆ. ಕಾಳಿದಾಸನ ಕೃತಿಗಳು, ಭಗವದ್ಗೀತೆ ಮತ್ತು ವೇದಗಳು ಸಂಸ್ಕೃತದಲ್ಲಿಯೇ ರಚಿತವಾಗಿವೆ. ಹಿಂದೂ, ಬೌದ್ಧ ಮತ್ತು ಜೈನ ಧರ್ಮಗಳ ಪ್ರಾಚೀನ ಗ್ರಂಥಗಳು ಸಂಸ್ಕೃತದಲ್ಲಿವೆ. ಹಿಂದೂ ಧಾರ್ಮಿಕ ಆಚರಣೆಗಳು ಮತ್ತು ಸಂಸ್ಕಾರಗಳು ಸಂಸ್ಕೃತದಲ್ಲಿ ನಡೆಯುತ್ತವೆ. ಅನೇಕ ಭಾರತೀಯ ಭಾಷೆಗಳು ಸಂಸ್ಕೃತದಿಂದಲೇ ಹುಟ್ಟಿಕೊಂಡಿವೆ, ಅಥವಾ ಅದರ ಪ್ರಭಾವಕ್ಕೆ ಒಳಗಾಗಿವೆ ಎಂದು ಹೇಳಬಹುದು. ಭಾರತೀಯ ಭಾಷೆಗಳ ನಡುವೆ ಏಕತೆಯನ್ನು ಬೆಳೆಸಲು ಸಹಾಯವಾಗಿದೆ. ಸಂಸ್ಕೃತ ಅಧ್ಯಯನವೋ ಭಾರತೀಯ ಪೂರ್ವಜರ ಜ್ಞಾನ, ತತ್ವಶಾಸ್ತ್ರ ಮತ್ತು ವೈಜ್ಞಾನಿಕ ಸಂಶೋಧನೆಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಈ ಆಧುನಿಕ ಜಗತ್ತಿನಲ್ಲಿ ಭಾಷಾ ಅನುವಾದ ಎನ್ನುವುದು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ವಿವಿಧ ಭಾಷಾ ಹಿನ್ನೆಲೆಯ ಜನರಿಗೆ ಅರ್ಥ ಮಾಡಿಕೊಳ್ಳಲು ಮತ್ತು ತಮ್ಮನ್ನು ತಾವು ವ್ಯಕ್ತಪಡಿಸಲು ಭಾಷಾಂತರವು ಅನುವು ಮಾಡಿಕೊಡುತ್ತದೆ. ಸಂಸ್ಕೃತಿ ಮತ್ತು ಸಾಹಿತ್ಯದ ಪ್ರಸಾರಕ್ಕಾಗಿ ಅನುವಾದವು ಬಹಳ ಮುಖ್ಯವಾಗಿದೆ. ಸಾಹಿತ್ಯ, ಕಲೆ ಮತ್ತು ಇತರ ಸಂಸ್ಕೃತಿಗಳನ್ನು ಪ್ರಪಂಚದಾದ್ಯಂತ ಹರಡಲು ಸಹಾಯ ಮಾಡುತ್ತದೆ. ಭಾಷಾ ಅನುವಾದವು ಒಂದು ಭಾಷೆಯ ಸಂದೇಶವನ್ನು ಇನ್ನೊಂದು ಭಾಷೆಗೆ ಅರ್ಥ, ಸಂದರ್ಭ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳನ್ನು ಸಂರಕ್ಷಿಸಿ ವರ್ಗಾಯಿಸುವ ಪ್ರಕ್ರಿಯೆಯಾಗಿದೆ. ಜಾಗತಿಕ ಸಂವಹನವನ್ನು ಸುಧಾರಿಸುವುದು, ಸಾಹಿತ್ಯ ಮತ್ತು ಜ್ಞಾನವನ್ನು ಹಂಚಿಕೊಳ್ಳುವುದು, ವ್ಯಾಪಾರ ಮತ್ತು ರಾಜಕೀಯ ಸಂಬಂಧಗಳನ್ನು ಬೆಳೆಸುವುದು, ಮತ್ತು ವಿವಿಧ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದರಲ್ಲಿ ಇದರ ಮಹತ್ವವಿದೆ.
ವಚನ ಕ್ರಾಂತಿ ಮತ್ತು ನಾಟಕ ಸಾಹಿತ್ಯ
227 to 236
ಕನ್ನಡ ನಾಟಕ ಸಾಹಿತ್ಯವು ಪ್ರಾಚೀನ ಕಾಲದಲ್ಲಿ ಜನರ ನಂಬಿಕೆ, ಆಚರಣೆ ಮತ್ತು ಸಂಪ್ರದಾಯದ ಪ್ರದರ್ಶನವಾಗಿದ್ದರೆ, ಆಧುನಿಕ ಕಾಲದಲ್ಲಿ ಅದು ಸ್ವತಂತ್ರ ಕಲೆಯ ರೂಪವನ್ನು ಪಡೆದಿದೆ. ʼಮಿತ್ರವಿಂದ ಗೋವಿಂದʼ ನಾಟಕದಿಂದ ಆರಂಭವಾಗಿ, ಸಂಸ್ಕೃತ ಮತ್ತು ಗ್ರೀಕ್ ರಂಗಭೂಮಿಯ ಪ್ರಭಾವದಲ್ಲಿ ಕನ್ನಡ ನಾಟಕವು ತನ್ನ ಪೂರ್ಣ ಸ್ವರೂಪವನ್ನು ತಲುಪಿತು. ಮೈಸೂರು ಒಡೆಯರ ಕಾಲದಿಂದ ಪ್ರಾರಂಭಗೊಂಡ ಆಧುನಿಕ ಕನ್ನಡ ನಾಟಕ ಪರಂಪರೆಯಲ್ಲಿ ಶಾಕುಂತಲಾ ನಾಟಕ ನಾಂದಿ ಹಾಡಿತು. ಶರಣರ ವಚನ ಚಳುವಳಿ 12ನೇ ಶತಮಾನದ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂದೇಶಗಳನ್ನು ಒಳಗೊಂಡಿದ್ದು, ಆಧುನಿಕ ನಾಟಕಕಾರರು ಈ ಚಳುವಳಿಯ ಅಂಶಗಳನ್ನು ಸಮಕಾಲೀನ ಸನ್ನಿವೇಶಗಳಿಗೆ ಹೊಂದಿಕೊಂಡು ನಾಟಕಗಳನ್ನು ರಚಿಸುತ್ತಿದ್ದಾರೆ. ಪಿ. ಲಂಕೇಶರ ʼಸಂಕ್ರಾಂತಿʼ, ಗಿರೀಶ್ ಕಾರ್ನಾಡರ ʼತಲೆದಂಡʼ, ಹೆಚ್.ಎಸ್.ಶಿವಪ್ರಕಾಶರ ʼಮಹಾಚೈತ್ರʼ, ಚಂದ್ರಶೇಖರ್ ಕಂಬಾರ ಅವರ ʼಶಿವರಾತ್ರಿʼ, ಡಾ. ನಟರಾಜ್ ಬೂದಾಳ್, ಡಾ. ವಿಕ್ರಂ ವಿಸಾಜಿ ಅವರ ನಾಟಕಗಳು ವಚನ ಕ್ರಾಂತಿಯ ಪರಂಪರೆಯನ್ನು ನವೀಕೃತವಾಗಿ ಸಮಕಾಲೀನ ದೃಷ್ಟಿಕೋನದಲ್ಲಿ ಪ್ರದರ್ಶಿಸುತ್ತವೆ. ಈ ನಾಟಕಗಳು ಶರಣರ ತತ್ತ್ವಗಳನ್ನು ಸಾಮಾಜಿಕ ನ್ಯಾಯ, ಜಾತಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಪ್ರಚಾರಕ್ಕೆ ಉಪಯೋಗಿಸುತ್ತವೆ.
ಬೇಂದ್ರೆಯವರ ಕಾವ್ಯ: ಜನಪದ ಸಾಹಿತ್ಯದ ಪ್ರಭಾವ
237 to 244
ಬೇಂದ್ರೆಯವರು ನವೋದಯ ಕಾಲದ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರು ಕಾವ್ಯ ಕೃತಿಯಿಂದ ಕೇವಲ ಕರ್ನಾಟಕವಷ್ಟೇ ಅಲ್ಲ, ಇಡೀ ವಿಶ್ವದ ಶ್ರೇಷ್ಠ ಕವಿಗಳಲ್ಲಿ ಒಬ್ಬರೆನಿಸಿಕೊಂಡವರು. ʼಜಗದ ಕವಿ ಯುಗದ ಕವಿʼ ಎಂದೇ ಪ್ರಸಿದ್ಧಿಯಾಗಿದ್ದು ಹೀಗೆ. ಆಧುನಿಕ ಕಾಲದ ಕಾವ್ಯಕ್ಕೆ ಅತ್ಯಂತ ಸತ್ವಶಾಲಿಯಾದಂತಹ ಕವನಗಳನ್ನು ನೀಡುವುದರ ಮೂಲಕ ಆ ಕಾಲದ ಕಾವ್ಯಕ್ಕೆ ಕಸುವನ್ನೂ, ಚಿಂತನೆಯ ಸತ್ವವನ್ನೂ, ಬೇಂದ್ರೆಯವರ ಕಾವ್ಯದಲ್ಲಿ ಮನಗಾಣಬಹುದು. ಬೇಂದ್ರೆಯವರ ಕಾವ್ಯದ ಪ್ರೇರಣೆ ಮತ್ತು ಪ್ರಭಾವಗಳನ್ನು ಗುರುತಿಸುವಾಗ ಕನ್ನಡ ಸಾಹಿತ್ಯದ ಬಹುದೊಡ್ಡದಾದ ಪರಂಪರೆಯೊಂದನ್ನು ಕವಿ ತಮ್ಮ ಕವಿತಾ ಸಾಮರ್ಥ್ಯಕ್ಕೆ ಇಟ್ಟುಕೊಂಡಿದ್ದು ಅರಿವಾಗುತ್ತದೆ. ಇದರೊಂದಿಗೆ ಜನಪದ ಸಾಹಿತ್ಯವು ಅವರ ಕಾವ್ಯವನ್ನು ಪ್ರಭಾವಿಸಿರುವುದನ್ನು ಕಾಣುತ್ತೇವೆ. ಈ ನಿಟ್ಟಿನಲ್ಲಿ ಪ್ರಸ್ತುತ ಈ ಲೇಖನದಲ್ಲಿ ಬೇಂದ್ರೆಯವರ ಕಾವ್ಯದಲ್ಲಿ ಜನಪದ ಸಾಹಿತ್ಯದ ಪ್ರಭಾವವನ್ನು ಪರಾಮರ್ಶಿಸಲಾಗಿದೆ.
ಹೊಸ ತಲೆಮಾರಿನ ಕವಿಗಳನ್ನು ಕಾಡುತ್ತಿರುವ ಯುದ್ಧ ಮತ್ತು ಪ್ರಕೃತಿ ವಿನಾಶ
245 to 252
ಯುದ್ಧ ಮತ್ತು ಪ್ರಕೃತಿ ವಿನಾಶ ಇವತ್ತು ಜಗತ್ತು ಎದುರಿಸುತ್ತಿರುವ ಬಹು ದೊಡ್ಡ ಜಾಗತಿಕ ಸಮಸ್ಯೆಗಳಾಗಿವೆ. ಯುದ್ಧ ಮತ್ತು ಪ್ರಕೃತಿಯಿಂದಾಗುವ ವಿನಾಶ ರಣಭಯಂಕರವಾಗಿರುತ್ತದೆ. ಮನುಷ್ಯನ ದುರಹಂಕಾರ, ಅತೀ ಆಸೆ, ಅವನ ಕುಬ್ಜ ಮನೋವ್ಯಾಕುಲತೆಗಳು ಇದಕ್ಕೆ ಕಾರಣವಾಗಿವೆ. ಹೊಸ ತಲೆಮಾರಿನ ಕಾವ್ಯದ ಬಾಹ್ಯ ಶರೀರ ಬದಲಾವಣೆಯಾದಂತೆ ಆಂತರಿಕವಾಗಿಯೂ ಆಗಿರುವ ಅನೇಕ ಬದಲಾವಣೆಗಳನ್ನು ಗುರುತಿಸಬಹುದು. ಮತ್ತು ಇದು ಅನಿವಾರ್ಯ ಕೂಡಾ. ಏಕೆಂದರೆ ಪ್ರತಿ ಕಾಲ ಸಂದರ್ಭದ ಪ್ರತಿನಿಧಿಯಾಗಿ ಕವಿ ಪ್ರತಿಸ್ಪಂದಿಸಬೇಕಾದುದು ಕವಿಗಳ ಬಹು ದೊಡ್ಡ ಜವಾಬ್ದಾರಿ. ಸಮಾಜದಲ್ಲಿ ಹೆಚ್ಚುತ್ತಿರುವ ಹಿಂಸಾರತಿಯ ಪ್ರಹಾರ, ಅವ್ಯಾಹತವಾಗಿ ನಡೆದಿರುವ ಅತ್ಯಾಚಾರ, ಶೋಷಣೆ, ಕೋಮುವಾದದ ವಿಕ್ಷಿಪ್ತತೆ, ಅರಾಜಕತೆ ಇತ್ಯಾದಿಗಳನ್ನು ಇಂದಿನ ಸಮಾಜ ಗರ್ಭೀಕರಿಸಿಕೊಂಡಿದೆ. ಇಂತಹ ಅನಾರೋಗ್ಯಕರ ಸಮಾಜಕ್ಕೆ ಔಷಧ ಖಡ್ಗಕ್ಕಿಂತಲೂ ಪ್ರಬಲ ಅಸ್ತ್ರವಾದ ಲೇಖನಿಯಿಂದ ಸಿಗಬೇಕಿದೆ. ಮತ್ತು ಈ ಹಿನ್ನಲೆಯಲ್ಲಿಯೇ ಇವತ್ತಿನ ಬಹುತೇಕ ಸಾಹಿತ್ಯಿಕ ಕೃಷಿಯೂ ಸೃಷ್ಟಿಯಾಗಿದೆ. ಇದು ಪ್ರಸ್ತುತ ತಲೆಮಾರು ಕಂಡು ಎದುರಿಸಿದ ಅತ್ಯಂತ ಭಯಾನಕವಾದ ಸತ್ಯ. ಅದುವೇ ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಯುದ್ಧದ ತೀವ್ರತೆ, ಭಯಾನಕತೆ. ಈ ಬಗ್ಗೆ ಅನೇಕ ಕವಿಗಳು ತಮ್ಮ ಕವನಗಳ ಮೂಲಕ ಆ ಭೀಕರತೆಯ ಸಂಕಟವನ್ನು ವಿಷಾದತೆಯನ್ನು ಹೊರಚಲ್ಲಿದ್ದಾರೆ. ಕಾರ್ಗಿಲ್, ಇರಾಕ್-ಅಮೇರಿಕಾ, ಇರಾನ್-ಇರಾಕ್, ಕ್ಯೂಬಾ-ಅಮೇರಿಕಾ, ಪ್ಯಾಲೆಸ್ತೇನ್-ಇಸ್ರೆಲ್, ಉಕ್ರೇನ್- ರಷ್ಯಾ, ಗಾಜಾಪಟ್ಟಿ ಹೀಗೆ ಇಂದಿನ ತಲೆಮಾರು ಅನೇಕ ಯುದ್ಧಗಳನ್ನು ಮತ್ತು ಅದರ ಪರಿಣಾಮಗಳನ್ನು ತಮ್ಮ ಕವನಗಳಲ್ಲಿ ಕಂಡರಿಸಿದ್ದಾರೆ. ನೀರು, ಪ್ರಕೃತಿ ವಿನಾಶ, ರಕ್ಷಣೆ ಈ ಎಲ್ಲದರ ಕುರಿತು ತಮ್ಮ ಕವನಗಳ ಮೂಲಕ ಅಭಿವ್ಯಕ್ತಿಸಿದ್ದಾರೆ.
ಜಾನಪದ ಗರತಿ ಮತ್ತು ಆಧುನಿಕ ಮಹಿಳೆ
253 to 258
ಈ ನೆಲದ ಸತ್ವವನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಜನಪದರ ಕೊಡುಗೆ ಅಪಾರ. ದಿನದ ಪ್ರತಿ ಕಾರ್ಯದಲ್ಲೂ ದೇಶೀಯತೆಯ ಸೊಗಡನ್ನು ಹೇಗೆ ಹರಡಿದ್ದರು ಎಂಬುದನ್ನು ನಮ್ಮ ಜನಪದ ಸಾಹಿತ್ಯ ಹೇಳುತ್ತದೆ. ಬದಲಾಗಿರುವ ಇಂದಿನ ಆಧುನಿಕ, ಆಧುನಿಕೋತ್ತರ ಭಾರತದಲ್ಲಿ ಭಾರತೀಯ ಸ್ತ್ರೀಯರ ಮನೋಭಾವ, ಜೀವನಶೈಲಿಯಲ್ಲಿ ಮೇಲ್ನೋಟಕ್ಕೆ ಸಾಕಷ್ಟು ಬದಲಾವಣೆಯಾಗಿದೆ ಎಂಬಂತೆ ಕಂಡರೂ ಜಾನಪದ ಗರತಿ ಮತ್ತು ಆಧುನಿಕ ಮಹಿಳೆಯ ಸಾಮ್ಯತೆಗಳಿರುವುದನ್ನು ಕಾಣುತ್ತೇವೆ. ಮನೆಯ ನಾಲ್ಕು ಗೋಡೆಗೆ ಸೀಮಿತಳಾಗಿದ್ದ ಮಹಿಳೆಯ ಮನರಂಜನೆಯ ಒಂದು ಅಂಶವಾಗಿದ್ದ ಜನಪದ ಕ್ರೀಡೆಗಳಲ್ಲೂ ಮಹಿಳೆಯರನ್ನು ಕೇವಲ ಒಳಾಂಗಣ ಆಟಕ್ಕೆ ಮಾತ್ರ ಮೀಸಲಿರಿಸಿದರು. ಹೆಣ್ಣುಮಕ್ಕಳ ಆಟಗಳನ್ನು ಆಟಗಳೆಂದು ಕರೆಯುತ್ತಿದ್ದರೆ ಹೊರತು ಕ್ರೀಡೆಗಳೆಂದಲ್ಲ. ಇಂದಿನ ಮಹಿಳೆ ಕುಟುಂಬದ ಆರ್ಥಿಕ ಪ್ರಗತಿ, ಮಕ್ಕಳ ಶ್ರೇಯೋಭಿವೃದ್ಧಿ, ತನ್ನ ಅಸ್ಮಿತೆ, ಸ್ವಾವಲಂಬಿ ಬದುಕಿಗೋಸ್ಕರ ಆರ್ಥಿಕ ಸ್ವಾತಂತ್ರ್ಯವನ್ನು ಪಡೆದಿರುವ ಮಹಿಳೆ ಪುರುಷನಿಗೆ ಸರಿಸಮಾನವಾಗಿ ದುಡಿಯುತ್ತಿರುವುದರಿಂದ ಮಕ್ಕಳ ಆರೈಕೆಗೋಸ್ಕರ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದಾಳೆ.