ಕಲಿ-ಕತೆ: ವ್ಹಾಯಾ ಬೈಪಾಸ್
Main Article Content
Abstract
ಭಾಷೆ ಮತ್ತು ಸಾಹಿತ್ಯದಲ್ಲಿ ಅನುವಾದ ಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆ. ಕನ್ನಡದಲ್ಲಿ ಸೃಜನಶೀಲ ಸಾಹಿತ್ಯದಷ್ಟೆ ಈ ಭಾಷಾಂತರ ಪ್ರಕ್ರಿಯೆಯು ಬೆಳೆದು ಬಂದಿದೆ. ಅನುವಾದವು ಭಾಷೆಗಳ ನಡುವಿನ ಅಂತರವನ್ನು ಹೋಗಲಾಡಿಸಿ ಅನಿಸಿಕೆಗಳ ಮುಕ್ತ ಕೊಡುಕೊಳ್ಳುವಿಕೆಗೆ ಕಾರಣವಾಗಿದೆ. ಇದರಿಂದ ಭಾಷೆಗಳು ಸಮೃದ್ಧವಾಗಿ ಬೆಳೆದಿವೆ. ಈ ಭಾಷಾಂತರವು ವಿವಿಧ ಭಾಷೆ, ದೇಶ, ಸಂಸ್ಕೃತಿ ಹಾಗೆಯೇ ಸಾಹಿತ್ಯಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಒಂದುಗೂಡಲು ಕಾರಣವಾಗಿದೆ.
ಕನ್ನಡದಲ್ಲಿ ಹಳಗನ್ನಡ, ನಡುಗನ್ನಡ ಕಾಲದಲ್ಲಿ ಕೃತಿಗಳು ಅನುವಾದಗೊಂಡವು. ಹಾಗೆಯೇ ನವೋದಯ ಪೂರ್ವದಲ್ಲಿ ಪಾಶ್ಚಾತ್ಯ ಸಾಹಿತ್ಯದ ಪ್ರಭಾವದಿಂದಾಗಿ ಹಲವಾರು ಕೃತಿಗಳು ಅನುವಾದಗೊಂಡವು. ನಂತರ ಹೊಸಗನ್ನಡ ಸಾಹಿತ್ಯದಲ್ಲೂ ಕನ್ನಡ ಕೃತಿಗಳನ್ನು ಇತರ ಭಾಷೆಗೆ, ಹಾಗೆಯೇ ಇತರ ಭಾಷೆಯ ಕೃತಿಗಳನ್ನು ಕನ್ನಡ ಭಾಷೆಗೆ ಅನುವಾದಿಸಿದರು. ಇವರಲ್ಲಿ ಧರಣೇಂದ್ರ ಕುರಕುರಿಯವರು ಪ್ರಮುಖ ಅನುವಾದಕರಾಗಿದ್ದಾರೆ. ಇವರು ಹಿಂದಿ ಭಾಷೆಯ ಪ್ರಾಧ್ಯಾಪಕರಾಗಿ ಕನ್ನಡ ಮತ್ತು ಹಿಂದಿ ಭಾಷೆಯ ಮೇಲೆ ಪ್ರಭುತ್ವವನ್ನು ಪಡೆದುಕೊಂಡು ಗದ್ಯ ಹಾಗೂ ಪದ್ಯ ಎರಡೂ ಪ್ರಕಾರಗಳಲ್ಲಿ ಅನುವಾದ ಕಾರ್ಯವನ್ನು ಯಶಸ್ವಿಗೊಳಿಸಿದ್ದಾರೆ. ಅನುವಾದ ಕ್ಷೇತ್ರದ ದಿಕ್ಕನ್ನು ಮತ್ತಷ್ಟು ಗಟ್ಟಿಗೊಳಿಸಿ ಕನ್ನಡ ಮತ್ತು ಹಿಂದಿ ಸಾಹಿತ್ಯಕ್ಕೆ ಒಂದು ಹೊಸ ಮೆರಗನ್ನು ನೀಡಿದ್ದಾರೆ.
ಖ್ಯಾತ ಲೇಖಕಿಯರಾದ ಅಲಕಾ ಸರಾವಗಿಯವರು ಹಿಂದಿ ಭಾಷೆಯಲ್ಲಿ ʼಕಲಿ ಕತಾ: ವ್ಹಾಯಾ ಬೈಪಾಸ್ʼ ಎಂಬ ಕಾದಂಬರಿಯನ್ನು ರಚಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡ ಈ ಕಾದಂಬರಿಯನ್ನು ಧರಣೇಂದ್ರ ಕುರಕುರಿಯವರು ಕನ್ನಡ ಭಾಷೆಗೆ ಅನುವಾದಿಸಿದ್ದಾರೆ.
ಈ ಕಾದಂಬರಿಯು ಭಾರತದ ಸ್ವಾತಂತ್ರ್ಯಪೂರ್ವದ ಬ್ರೀಟಿಷರ ಕಾಲದಿಂದ ಆರಂಭಿಸಿ, ಬಾಬರಿ ಮಸೀದಿ ಕೆಡುವುವರೆಗಿನ ಸುದೀರ್ಘವಾದ ಕಾಲಘಟ್ಟದ ರಾಜಕೀಯ, ಸಾಮಾಜಿಕ ಬದುಕಿನ ಹಿನ್ನಲೆಯನ್ನು ಹೊಂದಿದೆ. ಕಾದಂಬರಿಯಲ್ಲಿ ಕಿಶೋರಬಾಬು ಅವರ ಪಾತ್ರದ ಮುಖಾಂತರ ಒಬ್ಬ ವ್ಯಕ್ತಿಯಲ್ಲಿ ನಡೆಯಬಹುದಾದ ವಿಚಿತ್ರ ಪರಿವರ್ತನೆಯ ಚಿತ್ರಣವನ್ನು ಚಿತ್ರಿಸಿದ್ದಾರೆ. ಕಿಶೋರಬಾಬುವಿನ ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆ ನಂತರ ಅವನೊಳಗಾದ ಬದಲಾವಣೆಯಿಂದ ಕಥೆ ಆರಂಭವಾಗುತ್ತದೆ. ಕಿಶೋರಬಾಬು ತನ್ನ ಯೋಚನೆಗಳಿಂದ ಮುಕ್ತಿ ಪಡೆಯಲು ಮತ್ತು ತಮ್ಮ ವಂಶದ ಇತಿಹಾಸವನ್ನು ಹುಡುಕುವ ಚಿತ್ರಣವನ್ನು ಕಾಣಬಹುದಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಧರಣೇಂದ್ರ ಕುರಕುರಿ, (2010), ಕಲಿಕತೆ: ವ್ಹಾಯಾ ಬೈಪಾಸ್ (ಅಲಕಾ ಸರಾವಗಿ ಅವರ ಹಿಂದಿ ಕಾದಂಬರಿ), ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ.
ಧರಣೇಂದ್ರ ಕುರಕುರಿ, (1983), ನಾವು ಮೆಚ್ಚಿದ ಹಿಂದಿ ಕಥೆಗಳು, ಪೆರಿಯಾರ ಪ್ರಕಾಶನ, ಧಾರವಾಡ.
ಧರಣೇಂದ್ರ ಕುರಕುರಿ, (2019), ಮೋಹನದಾಸ, ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ.
ಪ್ರಧಾನ ಗುರುದತ್ತ, (2012), ಭಾಷಾಂತರ ಕಲೆ, ಸಪ್ನಾ ಬುಕ್ ಹೌಸ್, ಬೆಂಗಳೂರು.
ಕರ್ನಾಟಕ ವಿಶ್ವವಿದ್ಯಾಲಯ, (2006), ಆಧುನಿಕ ಕನ್ನಡ ಸಾಹಿತ್ಯದ ರೂಪಗಳು, ಪ್ರಸಾರಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.