ಕನ್ನಡ ನಾಟಕಕ್ಕೆ ಮಹಿಳೆಯರ ಕೊಡುಗೆ

Main Article Content

ಪತ್ರೆಮ್ಮ ಕೆ. ಧಾರವಾಡ

Abstract

ಸುದೀರ್ಘ ಇತಿಹಾಸ ಹೊಂದಿದ ಕನ್ನಡ ನಾಟಕಗಳ ಬೆಳವಣಿಗೆಯು ಅನೇಕ ಕಾಲಘಟ್ಟಗಳನ್ನು ದಾಟಿ ಬಂದು ಆಧುನಿಕ ಜಗತ್ತಿನಲ್ಲಿಯೂ ನಾಟಕ ತನ್ನ ಹೆಜ್ಜೆಯ ಗುರುತುಗಳನ್ನು ಉಳಿಸಿಕೊಂಡು ಮುಂದುವರೆದಿದೆ. ನಾಟಕವು ಪ್ರಾಚೀನ ಕಲೆಯಾಗಿ, ಕಲಾಪ್ರಕಾರವಾಗಿ ಹೆಚ್ಚು ಮನ್ನಣೆ ಪಡೆದುಕೊಂಡು ದೃಶ್ಯಶ್ರವ್ಯ ಕಾವ್ಯವೂ ಆಗಿದೆ. ಎಲ್ಲಾ ವರ್ಗದ ಜನರನ್ನು ಒಂದೆಡೆ ಕೂಡಿಸಿ, ಎಲ್ಲರಿಗೂ ಮನರಂಜನೆ ಹಾಗೂ ನೀತಿಯನ್ನು ಬೋಧಿಸುವ ಪ್ರದರ್ಶನ ಕಲೆಯಾಗಿ ಮಹತ್ವವನ್ನು ಪಡೆದುಕೊಂಡಿದೆ. ನಾಟಕ ಈ ಪದವನ್ನು ನಾವು ಯಾವ ಅರ್ಥದಲ್ಲಿ ಉಪಯೋಗಿಸುತ್ತೇವೆ? ಎಂಬುದಕ್ಕೆ ಎರಡು ಅರ್ಥಗಳಿವೆ. ಬರೆದಿಟ್ಟ ಸಾಹಿತ್ಯ ಕೃತಿ, ನಾಟಕವು ಒಂದು ಸಾಹಿತ್ಯದ ಪ್ರಕಾರ. ಅದು ಸಂಭಾಷಣೆಗಳಿಂದಲೇ ಕಟ್ಟಿದ ಒಂದು ಭಾಷಾ ಬಂಧ ಎನ್ನುವುದು ಒಂದು ಅರ್ಥವಾದರೆ, ಇನ್ನೊಂದು ಅರ್ಥ ರಂಗನಿರ್ಮಿತಿ ಎನ್ನುವುದು. ನಟರು ರಂಗಭೂಮಿಯ ಮೇಲೆ ವೇಷಭೂಷಣಗಳ ಸಮೇತ ಅಭಿನಯಿಸುವ ಆಟ. ಸಾಹಿತ್ಯ ನಾಟಕದ ಏಕೈಕ ಮಾಧ್ಯಮ ಎಂದರೆ ಭಾಷೆ.
“ಬೇರೆ ಬೇರೆ ರುಚಿಗಳನ್ನು ಏಕಕಾಲದಲ್ಲಿ ತಣಿಸಬಲ್ಲದು ಎಲ್ಲ ಬಗೆಯ ಜನರನ್ನು ಒಮ್ಮೆಗೆ ಸೆರೆಹಿಡಿಯಬಲ್ಲದು”. ಎಂಬ ಕಾರಣದಿಂದಲೂ ಸಾಮೂಹಿಕವಾಗಿ ನೋಡಿದಾಗ ದೃಶ್ಯವಾಗುವ ಒಬ್ಬನೇ ಕುಳಿತು ಓದಿ ನಾಲ್ಕು ಜನ ಕೇಳಿದಾಗ ʼಶ್ರವ್ಯಕಾವ್ಯʼ ವಾಗುವ ಕಾರಣದಿಂದಲೂ ನಾಟಕ ದೇಶದ ಸಾಹಿತ್ಯದಲ್ಲಿ ಹಿರಿಮೆಯ ಸ್ಥಾನವನ್ನು ಗಳಿಸಿಕೊಂಡಿತು. ಇಂತಹ ಸರ್ವಾಕರ್ಷಣ ಗುಣ ಇರುವುದು ನಾಟಕ ಒಂದರಲ್ಲೇ. ರಂಗಭೂಮಿಯ ಇತಿಹಾಸಕಾರರೂ, ವಿಮರ್ಶಕರೂ ಆದ ಅಲಾರ್ಡಿಸ್ ನಿಕಲ್ ಅವರು ಒಂದು ದೇಶದಲ್ಲಿ ನಾಟಕ ಸಾಹಿತ್ಯಕ್ಕಿರುವ ಸ್ಥಾನವನ್ನು ಕುರಿತು ವಿಮರ್ಶಿಸುತ್ತ “ಸಾಹಿತ್ಯದ ಪ್ರಕಾರಗಳಲ್ಲಿ ನಾಟಕ ಅತ್ಯಂತ ವಿಚಿತ್ರವೂ ಗಹನವೂ ಆದುದು. ನಾಟಕದಲ್ಲಿ ಸಾಮೂಹಿಕ ರಂಜನಾ ಸಾಮರ್ಥ್ಯವಿದೆ. ಒಂದು ನಾಡಿನ ಬಾಹ್ಯ ಜೀವನ ಹಾಗೂ ಅಂತಃಸತ್ವದ ಚಿತ್ರವಿದೆ. ಸಮಾಜ ಧರ್ಮದ ವಿವೇಚನೆಯಿದೆ. ಸಮಾಜದಲ್ಲಿನ ವಿಷಮತೆಯನ್ನು ನಿವಾರಿಸುವ ಮಾರ್ಗದ ನಿರೂಪಣೆಯಿದೆ. ಹಾಸ್ಯವ್ಯಂಗ್ಯಗಳ ಆಳದಲ್ಲಿ ಅದು ನೋಟಕನನ್ನೇ ಮುಳುಗಿಸುವಂತೆ ಕಾವ್ಯಾನುಭವದ ಶಿಖರಕ್ಕೆ ಹತ್ತಿಸಲೂ ಶಕ್ತವಾಗಿದೆ. ಅದರಿಂದ ಮಾನವನ ಬೌದ್ಧಿಕ ಸೃಷ್ಟಿಯಲ್ಲಿ ನಾಟಕ ಅತ್ಯಂತ ಸ್ವಾರಸ್ಯವಾದುದು.” ಎಂದಿದ್ದಾರೆ. ನಾಟಕ ಸಾಹಿತ್ಯದಲ್ಲಿ ಅನೇಕ ನಾಟಕಗಳನ್ನು ಓದುವಾಗ ಅಲ್ಲಿನ ಪಾತ್ರಗಳು ಓದಿಸಿಕೊಂಡು ಹೋಗುವ ರೀತಿ ನಮ್ಮ ಕಣ್ಮುಂದೆ ಒಂದು ರಂಗನಿರ್ಮಿತಿ ಮಾಡಿಬಿಡುತ್ತದೆ.

Article Details

Section

Research Articles

Author Biography

ಪತ್ರೆಮ್ಮ ಕೆ. ಧಾರವಾಡ

ಅತಿಥಿ ಉಪನ್ಯಾಸಕರು, ಕನ್ನಡ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ.

How to Cite

ಪತ್ರೆಮ್ಮ ಕೆ. ಧಾರವಾಡ. (2025). ಕನ್ನಡ ನಾಟಕಕ್ಕೆ ಮಹಿಳೆಯರ ಕೊಡುಗೆ. ಅಕ್ಷರಸೂರ್ಯ (AKSHARASURYA), 8(02), 37 to 48. https://aksharasurya.com/index.php/latest/article/view/1390

References

ಅಶೋಕ ಟಿ.ಪಿ. (ಸಂ), (2011), ಕೆ.ವಿ.ಸುಬ್ಬಣ್ಣ ಅವರ ಆಯ್ದ ಲೇಖನಗಳು, ಅಕ್ಷರ ಪ್ರಕಾಶನ, ಹೆಗ್ಗೋಡು.

ರಂಗನಾಥ ಎಚ್.ಕೆ., (2014), ಕರ್ನಾಟಕ ರಂಗಭೂಮಿ, ಹೇಮಂತ ಸಾಹಿತ್ಯ, ಬೆಂಗಳೂರು.

ಸುಮಿತ್ರಾಬಾಯಿ ಬಿ.ಎನ್., (2018) ಸ್ತ್ರೀವಾದ, ಅಹರ್ನಿಶಿ ಪ್ರಕಾಶನ, ಶಿವಮೊಗ್ಗ.

ಮಲ್ಲಿಕಾ ಘಂಟಿ, (2005), ಚಾಜ, ಗೌತಮ ಪ್ರಕಾಶನ, ಬಳ್ಳಾರಿ.