Published: 2026-02-28

Table of Contents

Table of Contents

I to XIV

ತೇಜಸ್ವಿ ಮಾಯಲೋಕ ಕಾದಂಬರಿಯಲ್ಲಿನ ಮನುಷ್ಯ ಸಮಾಜ ಹಾಗೂ ಪರಿಸರದ ಅವಿನಾಭಾವ ಸಂಬಂಧಗಳು

ಸುಜಾತ ಎ.

01 to 06

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಮಾಯಾಲೋಕ’ ಕಾದಂಬರಿಯು ಗ್ರಾಮೀಣ ಭಾರತದ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕಲ್ಲೋಲಗಳನ್ನು ಪರಿಸರದ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತದೆ. ಗೊಂದಲಗೇರಿ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿನ ದೈನಂದಿನ ಬದುಕಿನ ಸಂಕೀರ್ಣತೆಗಳು, ಜಾತಿ, ವೃತ್ತಿ ಹಾಗೂ ಬದಲಾಗುತ್ತಿರುವ ಆರ್ಥಿಕ ವ್ಯವಸ್ಥೆಯ ಚಿತ್ರಣವನ್ನು ಇಲ್ಲಿ ಚರ್ಚಿಸಲಾಗಿದೆ. ಸತತ ಮೂರು ವರ್ಷಗಳ ಬರಗಾಲವು ಸೃಷ್ಟಿಸುವ ಆಡಳಿತಾತ್ಮಕ ಅರಾಜಕತೆ, ರೈತ ಚಳವಳಿ ಮತ್ತು ಇಲಾಖೆಗಳ ನಡುವಿನ ಸಂಘರ್ಷಗಳು ಮಾನವನ ಅಸಹಾಯಕತೆಯನ್ನು ತೋರುತ್ತವೆ. ಮನುಷ್ಯನ ಅಹಂಕಾರದ ಮೇಲಾಟಗಳು ಪ್ರಕೃತಿಯ ಅನಂತ ಶಕ್ತಿಯೆದುರು ಹೇಗೆ ಅರ್ಥಹೀನವಾಗುತ್ತವೆ ಎಂಬುದನ್ನು ಈ ಅಧ್ಯಯನವು ಪ್ರತಿಪಾದಿಸುತ್ತದೆ. ಮಹಾಮಳೆಯ ಆಗಮನದೊಂದಿಗೆ ಮಾನವ ನಿರ್ಮಿತ ‘ಗೊಂದಲ’ಗಳು ಕೊಚ್ಚಿಹೋಗಿ, ಪರಿಸರವೇ ಅಂತಿಮ ನಿರ್ಧಾರಕ ಶಕ್ತಿ ಎಂಬ ಆಶಯವನ್ನು ಕಾದಂಬರಿಯ ಮೂಲಕ ಇಲ್ಲಿ ಗುರುತಿಸಲಾಗಿದೆ.

Read More »

ಮನುಷ್ಯ ಸಂಸ್ಕೃತಿ: ಅರ್ಥ, ಸ್ವರೂಪ, ವಿಕಾಸ ಮತ್ತು ವಿರೂಪಗಳ ಒಂದು ಸಮಗ್ರ ವಿಶ್ಲೇಷಣೆ

ವಜ್ರೇಶ್ವರಿ ಎಸ್. ಮೂರ್ತಿ

07 to 115

ಮನುಷ್ಯನನ್ನು ಜೈವಿಕ ಪ್ರೇರಣೆಗಳಿಂದ ಬೇರ್ಪಡಿಸಿ, ಸಾಂಘಿಕ ಜೀವನಕ್ಕೆ ಯೋಗ್ಯನನ್ನಾಗಿ ರೂಪಿಸುವ ಪ್ರಕ್ರಿಯೆಯೇ ಸಂಸ್ಕೃತಿ. ಕೇವಲ ಬದುಕುವ ಕ್ರಮವಲ್ಲದೆ, ಅಂತರಂಗದ ಶುದ್ಧೀಕರಣವಾಗಿರುವ ಸಂಸ್ಕೃತಿಯು ಕುಟುಂಬ, ಶಿಕ್ಷಣ ಮತ್ತು ಧರ್ಮದ ಮೂಲಕ ಪೋಷಣೆ ಪಡೆಯುತ್ತದೆ. ಜಾಗತೀಕರಣದ ಪ್ರಭಾವ, ಭೌತಿಕವಾದದ ಅಬ್ಬರ ಮತ್ತು ಅಂಧಾನುಕರಣೆಯಿಂದಾಗಿ ಇಂದು ಮೌಲ್ಯಗಳು ಕುಸಿಯುತ್ತಿದ್ದು, ಸಾಂಸ್ಕೃತಿಕ ವಿರೂಪಗಳು ಸಮಾಜವನ್ನು ಕಾಡುತ್ತಿವೆ. ಭಾರತೀಯ ಪರಂಪರೆಯ ವಿಶೇಷವಾದ ‘ವಸುಧೈವ ಕುಟುಂಬಕಂ’ ಮತ್ತು ಪ್ರಕೃತಿ ಆರಾಧನೆಯ ತತ್ವಗಳು ಈ ಸಂಕಷ್ಟಕ್ಕೆ ಪರಿಹಾರ ನೀಡಬಲ್ಲವು. ಆಧುನಿಕತೆಯ ಭರಾಟೆಯಲ್ಲಿ ಕಳೆದುಹೋಗುತ್ತಿರುವ ಮಾನವೀಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಿ, ತಲೆಮಾರುಗಳ ನಡುವಿನ ಕಂದಕವನ್ನು ನಿವಾರಿಸುವ ಮೂಲಕ ಸುಸ್ಥಿರ ಮತ್ತು ನೈತಿಕ ಸಮಾಜವನ್ನು ನಿರ್ಮಿಸುವ ಅಗತ್ಯವನ್ನು ಇಲ್ಲಿ ಪ್ರತಿಪಾದಿಸಲಾಗಿದೆ.

Read More »

ವಚನ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ

ಮಾಧವ ಎಂ.ಕೆ.

16 to 22

ಮಾನವ ಮತ್ತು ಪರಿಸರದ ನಡುವಿನ ಅವಿನಾಭಾವ ಸಂಬಂಧವನ್ನು 12ನೇ ಶತಮಾನದ ವಚನ ಸಾಹಿತ್ಯವು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದೆ. ವಚನಕಾರರು ಪ್ರಕೃತಿಯನ್ನು ಕೇವಲ ಭೋಗದ ವಸ್ತುವಾಗಿ ನೋಡದೆ, ಅದನ್ನು ದೈವತ್ವದ ಸ್ವರೂಪವಾಗಿ ಮತ್ತು ಬದುಕಿನ ಆಧಾರವಾಗಿ ಪರಿಗಣಿಸಿದ್ದರು. ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿಯವರ ವಚನಗಳಲ್ಲಿ ಪರಿಸರ ಸಮತೋಲನ, ಅಂತರಂಗ-ಬಹಿರಂಗ ಶುದ್ಧಿ ಮತ್ತು ಜೀವಿಗಳ ಪರಸ್ಪರ ಅವಲಂಬನೆಯ ಕುರಿತಾದ ವೈಜ್ಞಾನಿಕ ಒಳನೋಟಗಳು ಕಂಡುಬರುತ್ತವೆ. ಆಧುನಿಕ ಬದುಕಿನ ದುರಾಸೆ ಮತ್ತು ತಾಂತ್ರಿಕತೆಯ ಭರಾಟೆಯಲ್ಲಿ ಪ್ರಕೃತಿ ನಾಶವಾಗುತ್ತಿದ್ದು, ಈ ಜಾಗತಿಕ ಸಮಸ್ಯೆಗೆ ವಚನಗಳ ಮೌಲ್ಯಗಳು ಪರಿಹಾರ ನೀಡಬಲ್ಲವು. ಭವಿಷ್ಯದ ಸುಸ್ಥಿರ ಬದುಕಿಗಾಗಿ ಶರಣರ ಸರಳ ಹಾಗೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಇಲ್ಲಿ ಪ್ರತಿಪಾದಿಸಲಾಗಿದೆ.

Read More »

ಆಧುನಿಕ ವಚನಕಾರರ ವಚನಗಳಲ್ಲಿ ಸಾಮಾಜಿಕ ವಿಚಾರಗಳು

ಕುಮಾರ ಹೆಚ್.ಎಂ., ರಾಜಶೇಖರ ಜಮದಂಡಿ

23 to 28

ಆಧುನಿಕ ಯುಗದಲ್ಲೂ ಶರಣರ ಜಾಡನ್ನು ಹಿಡಿದು 20ನೇ ಶತಮಾನದಲ್ಲಿ ಆಧುನಿಕ ಕನ್ನಡ ವಿದ್ವಾಂಸರು ಪ್ರಸ್ತುತ ಸಮಾಜವನ್ನು ತಿದ್ದುವ ಪ್ರಯತ್ನದಲ್ಲಿ ತಮ್ಮದೇ ಆದ ವಿಚಾರಗಳನ್ನು ವಚನ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಆಧುನಿಕ ವಚನಗಳು ಯಾರ ಹಂಗಿಲ್ಲದೆ, ನೇರವಾಗಿ, ಕಿರಿದಾಗಿ ಹೇಳುವ ಸಾಮರ್ಥ್ಯ ಪಡೆದಿವೆ. ಅಂದಿನ ನಡುಗನ್ನಡ ವಚನಕಾರರಂತೆ ಇಂದಿನ ಹೊಸಗನ್ನಡ ವಚನಕಾರರು ತಮ್ಮ ವಚನದ ಕೊನೆಗೆ ಅಂಕಿತನಾಮವಾಗಿ ತಮ್ಮದೇ ನಾಮಧೇಯ, ಇಷ್ಟದೈವ ಅಥವಾ ಇನ್ಯಾವುದೋ ಕುರುಹನ್ನು ಬಳಸಿಕೊಂಡಿರುವುದುಂಟು. ಇಬ್ಬರ ಆಶಯಗಳು ಜನಮುಖಿ ಮತ್ತು ಜೀವನಮುಖಿಯಾಗಿವೆ. ಸಮಾಜ ಪರಿವರ್ತನೆಗೆ ಬೇಕಾಗುವ ಗುಣಗಳಲ್ಲಿ ಸಮೃದ್ಧವಾಗಿ ಕಂಡುಬರುವ ದೈವೀಶ್ರದ್ಧೆ, ಶ್ರಮದ ದುಡಿಮೆ, ಗುಣದೋಷಗಳ ವಿಮರ್ಶೆ, ಆತ್ಮನಿರೀಕ್ಷೆ, ಜೀವನ ಪ್ರೀತಿ, ಉಪಕಾರ ಸ್ಮರಣೆ, ನಿಸರ್ಗ ನಂಬಿಕೆ, ಪ್ರಾಮಾಣಿಕತೆ, ವಿಚಾರಶೀಲತೆ, ಮನೋವೈಶಾಲ್ಯತೆ, ಸಭ್ಯತೆ ಇತ್ಯಾದಿ ಅಂಶಗಳನ್ನು ವಚನಗಳಲ್ಲಿ ಕಾಣುತ್ತೇವೆ.

Read More »

ಡಿಜಿಟಲ್ ಯುಗದಲ್ಲಿ ಭಾಷೆಯ ರೂಪಾಂತರ: ಸಾಮಾಜಿಕ ಮಾಧ್ಯಮಗಳ ಪ್ರಭಾವ

ಜ್ಯೋತಿ ಎನ್. ಭಟ್‌

29 to 34

ಜನರು ವಿವಿಧ ಸಮುದಾಯಗಳೊಂದಿಗೆ ಸಂವಹನ ನಡೆಸಲು ಮತ್ತು ಸಂಪರ್ಕಿಸಲು ಇಂದಿನ ಜನ ಸಮುದಾಯವು ಸಾಮಾಜಿಕ ಮಾಧ್ಯಮವನ್ನು ವೇದಿಕೆಯಾಗಿ ಬಳಸುತ್ತಿದ್ದಾರೆ. ಡಿಜಿಟಲ್ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳ ವ್ಯಾಪಕ ಬಳಕೆ ಮಾನವ ಸಂವಹನದ ಸ್ವರೂಪವನ್ನೇ ಬದಲಾಯಿಸಿದೆ. ಭಾಷೆ ಒಂದು ಚಲನೆಯುತ ಸಾಮಾಜಿಕ ವ್ಯವಸ್ಥೆಯಾಗಿದ್ದು, ಡಿಜಿಟಲ್ ಯುಗದಲ್ಲಿ ಅದು ಹೊಸ ರೂಪಗಳು, ಶೈಲಿಗಳು ಮತ್ತು ಅರ್ಥಾತ್ಮಕ ಬದಲಾವಣೆಗಳನ್ನು ಅನುಭವಿಸುತ್ತಿದೆ. ಭಾಷೆಯ ಬೆಳವಣಿಗೆಯ ಮೇಲೆ ಸಾಮಾಜಿಕ ಮಾಧ್ಯಮವು ಅಗಾಧವಾದ ಪರಿಣಾಮವನ್ನುಂಟು ಮಾಡಿದೆ. ಸಾಮಾಜಿಕ ಮಾಧ್ಯಮವು ಪ್ರಸ್ತುತವಾಗಿ ಹೆಚ್ಚಾಗಿ ಬೆಳೆಯುತ್ತಿದ್ದು, ಭಾಷೆಯ ಸ್ವರೂಪ, ಬಳಕೆ ಮತ್ತು ವಿಕಾಸದ ಮೇಲೆ ಗಣನೀಯ ಪ್ರಭಾವವನ್ನು ಬೀರುತ್ತಿವೆ. ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಂ, ಟ್ವಿಟರ್ (X) ಮತ್ತು ಯೂಟ್ಯೂಬ್ ಮತ್ತಿತರ ಸಾಮಾಜಿಕ ಮಾಧ್ಯಮದ ವೇದಿಕೆಗಳು ಭಾಷೆಯ ಸಂಕ್ಷಿಪ್ತೀಕರಣ, ಹೊಸ ಪದಗಳ ಸೃಷ್ಟಿ ಹಾಗೂ ಲಿಪಿ ಬಳಕೆಯಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣವಾಗಿವೆ ಎಂದರೆ ತಪ್ಪಾಗಲಾರದು.
ಈ ಸಂಶೋಧನಾ ಪ್ರಬಂಧವು ಸಾಮಾಜಿಕ ಮಾಧ್ಯಮದಲ್ಲಿ ಭಾಷೆಯ ಶಬ್ದಕೋಶ, ವ್ಯಾಕರಣ, ಲಿಪಿ ಹಾಗೂ ಭಾಷಾ ಗುರುತಿನ ಮೇಲೆ ಬೀರುವ ಪರಿಣಾಮಗಳನ್ನು ವಿಶ್ಲೇಷಿಸುತ್ತದೆ. ಅಧ್ಯಯನವು ಭಾಷೆಯ ರೂಪಾಂತರವು ಸೃಜನಶೀಲತೆಯನ್ನು ಹೆಚ್ಚಿಸಿದರೂ, ಶುದ್ಧತೆ ಮತ್ತು ವ್ಯಾಕರಣದ ಮೇಲಿನ ಗಮನ ಕಡಿಮೆಯಾಗುತ್ತಿರುವುದನ್ನೂ ತೋರಿಸುತ್ತದೆ. ಈ ಅಧ್ಯಯನವು ಗುಣಾತ್ಮಕ ವಿಧಾನವನ್ನು ಅನುಸರಿಸಿದ್ದು, ಸಾಮಾಜಿಕ ಮಾಧ್ಯಮದ ಉದಾಹರಣೆಗಳು ಹಾಗೂ ಇತ್ತೀಚಿನ ಭಾಷಾ ಪ್ರವೃತ್ತಿಗಳ ವಿಶ್ಲೇಷಣೆಯ ಮುಖಾಂತರ ಭಾಷೆಯ ಮೇಲೆ ಸಾಮಾಜಿಕ ಮಾಧ್ಯಮದ ಧನಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳನ್ನು ಚರ್ಚಿಸುತ್ತದೆ. ಸಾಮಾಜಿಕ ಮಾಧ್ಯಮವು ಭಾಷೆಯ ವಿಕಾಸಕ್ಕೆ ಸಹಕಾರಿಯಾಗಿರುವುದರ ಜೊತೆಗೆ, ಮಾನಕ ಭಾಷೆಯ ಬಳಕೆಗೆ ಸವಾಲುಗಳನ್ನುಂಟು ಮಾಡುತ್ತಿರುವುದನ್ನು ನಾವು ಪ್ರಸ್ತುತವಾಗಿ ಕಾಣಬಹುದಾಗಿದೆ.

Read More »

ಜನಪದವೂ... ನಾವೂ... ಪ್ರಸ್ತುತ ಸಂದರ್ಭವೂ...

ಕುಮಾರ ಬಿ.

35 to 39

ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ಹರಿದು ಬಂದ ಜೀವನ ಕ್ರಮವೇ ಜನಪದವಾಗಿದ್ದು, ಇದು ಕೇವಲ ಸಾಹಿತ್ಯವಲ್ಲದೆ ಬದುಕಿನ ಸಮಗ್ರ ದರ್ಶನವಾಗಿದೆ. ಅನಕ್ಷರಸ್ಥರಾಗಿದ್ದರೂ ಕೃಷಿ, ಕಲೆ ಮತ್ತು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಜನಪದರು, ಸತ್ಯ, ಸಹಬಾಳ್ವೆ ಮತ್ತು ಸಮಷ್ಟಿ ಪ್ರಜ್ಞೆಯ ಮೂಲಕ ಸುಸ್ಥಿರ ಸಮಾಜವನ್ನು ಕಟ್ಟಿದ್ದರು. ಆದರೆ ಪ್ರಸ್ತುತ ಸಂದರ್ಭದಲ್ಲಿ ಆಧುನಿಕ ಶಿಕ್ಷಣ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಈ ಮೂಲ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಸರಳವಾಗಿದ್ದ ನಿಸರ್ಗದ ಆರಾಧನೆಯು ಕಾಂಕ್ರೀಟ್ ಕಟ್ಟಡಗಳ ಆಡಂಬರ ಮತ್ತು ವೈದಿಕ ಆಚರಣೆಗಳಿಗೆ ಜಾಗ ಮಾಡಿಕೊಟ್ಟಿದೆ. ಸ್ವಾರ್ಥ, ತೋರಿಕೆ ಮತ್ತು ವಾಣಿಜ್ಯೀಕರಣಗೊಂಡ ಇಂದಿನ ಬದುಕಿನಲ್ಲಿ, ಜನಪದರ ನೈತಿಕ ನೆಲೆಗಟ್ಟುಗಳು ಮತ್ತು ಸಾಮೂಹಿಕ ಬದುಕಿನ ಮಹತ್ವವನ್ನು ಕಳೆದುಕೊಳ್ಳುತ್ತಿರುವ ವೈರುಧ್ಯವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

Read More »

ಕಾರಂತರ ‘ಸರಸಮ್ಮನ ಸಮಾಧಿ’ ಕಾದಂಬರಿಯಲ್ಲಿ ದಾಂಪತ್ಯ ಬದುಕಿನ ಅನಾವರಣ

ನಂದಿನಿ ಎ.ಆರ್.

40 to 47

‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ’ ಎಂದರೆ ಎಲ್ಲಿ ಸ್ತ್ರೀಯರನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂದು ಮನುಸ್ಮೃತಿಯಲ್ಲಿ ತಿಳಿಸಲಾಗಿದೆ. ಆದರೆ ಅನಾದಿ ಕಾಲದಿಂದಲೂ ಸ್ತ್ರೀಯು ದ್ವಿತೀಯ ಪ್ರಜೆಯ ಸ್ಥಾನವನ್ನು ಪಡೆದಿದ್ದು, ಸಮಾಜದ ಮೂಲ ಘಟಕವಾದ ಕುಟುಂಬದಲ್ಲಿಯೇ ಹೆಣ್ಣು ಗೌರವಿಸಲ್ಪಡುತ್ತಿದ್ದಾಳೆಯೇ ಎಂದು ಪ್ರಶ್ನೆ ಹಾಕಿದರೆ ಅದಕ್ಕೆ ನಕಾರತ್ಮಕವಾದ ಉತ್ತರ ದೊರೆಯುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕಾರಂತರು 1937ರಲ್ಲಿ ದಾಂಪತ್ಯ ಜೀವನದಲ್ಲಿ ಸ್ತ್ರೀಯು ಹೇಗೆ ಶೋಷಿತಳಾಗುತ್ತಿದ್ದಾಳೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ಸ್ತ್ರೀ ಪಾತ್ರಗಳನ್ನು ಕಟ್ಟಿಕೊಟ್ಟಿದ್ದಾರೆ. ಇದಕ್ಕೆ ನಿದರ್ಶನವೆನ್ನುವಂತೆ 1994ರಲ್ಲಿ ಈ ಕೃತಿಯ ಮರು ಮುದ್ರಣದ ಮುನ್ನುಡಿಯಲ್ಲಿ ಒಂದು ಉದಾಹರಣೆಯನ್ನು ಕಾರಂತರು ನೀಡುತ್ತಾರೆ. ರಜಪೂತಾನದಲ್ಲಿ ರೂಪಕನ್ವಾರ್ ಎನ್ನುವ ಮಹಿಳೆಯ ಸತಿಧ್ವಂಸ ಪ್ರಕರಣ. ಇದೇ ಮುನ್ನುಡಿಯಲ್ಲಿ ಮುಂದುವರೆದು ಕಾರಂತರೇ ಈ ರೀತಿ ಹೇಳುತ್ತಾರೆ: ಪುರುಷ ಪ್ರಧಾನ ಸಮಾಜದಲ್ಲಿ “ಜೀವನದ ಅನೇಕ ಕ್ಷೇತ್ರಗಳಲ್ಲಿ ಸ್ತ್ರೀಯ ಮನಸ್ಸು ಮತ್ತು ಶರೀರಗಳೆರಡೂ ಅವನ ಸೊತ್ತು. ಅದಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ”. ಸರಸಮ್ಮನ ಸಮಾಧಿ ಕಾದಂಬರಿಯಲ್ಲಿ ಬರುವ ಪ್ರಮುಖ ಸ್ತ್ರೀ ಪಾತ್ರಗಳೆಂದರೆ ಜಾನಕಿ, ಭಾಗೀರಥಿ, ಸುನಾಲಿನಿ, ಸರಸಮ್ಮ, ನಾಗವೇಣಿ. ಇವರಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ.
ತನ್ನ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಗಂಡನೊಂದಿಗೆ ಮಾತನಾಡಿ ವಿಫಲಳಾಗುವ ಜಾನಕಿ, ಗಂಡನ ಸಮಯವನ್ನು ತನಗಾಗಿ ಕೇಳುವ ಸುನಾಲಿನಿ ಗಂಡ ಮತ್ತು ಅತ್ತೆಯ ಶೋಷಣೆಗೆ ಒಳಗಾಗುತ್ತಾಳೆ. ಮದುವೆಯಾಗಿ ಮಾವನ ಮನೆಗೆ ಬರುವ ಭಾಗೀರಥಿ, ಅತ್ತೆ ಮಾವನಲ್ಲಿ ಸೊಸೆಯ ಬಗೆಗಿರುವ ಭಾವನೆ ತಿಳಿದು ತವರು ಮನೆಗೆ ತೆರಳಿ ಜನರ ಬಾಯಿಂದ ವ್ಯಭಿಚಾರಿಣಿ ಎನಿಸಿಕೊಳ್ಳುವಳು. ಜನರ ಬಾಯಿಯಲ್ಲಿ ಮಹಾಸತಿ, ದಾಂಪತ್ಯ ದೇವತೆ ಎಂದು ಪ್ರಸಿದ್ಧಿ ಪಡೆದಿರುವ ಸರಸಮ್ಮ ತನ್ನ ಪ್ರೀತಿಯನ್ನು ಪಡೆಯಲು, ಆತ್ಮಸಖನಿಗಾಗಿ ಅತೃಪ್ತ ಆತ್ಮವಾಗಿ ಅಲೆದಾಡುವುದನ್ನು ಕಾಣಬಹುದಾಗಿದೆ. ಹೀಗೆ ಹಲವು ಮಜಲುಗಳಲ್ಲಿ ದಾಂಪತ್ಯ ಸಂಬಂಧದಲ್ಲಿನ ಸ್ತ್ರೀ ಸಂವೇದನೆಯನ್ನು ಕಾರಂತರು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.

Read More »

ಕನ್ನಡ ಮಹಿಳಾ ಕಥಾಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಗಳ ಸ್ವರೂಪ: ಆಯ್ದ ಕಥೆಗಾರ್ತಿಯರನ್ನು ಅನುಲಕ್ಷಿಸಿ

ಎಂ. ಶೆಲ್ವಿ ಬಾಲಕೃಷ್ಣನ್

48 to 60

ಕನ್ನಡ ಮಹಿಳಾ ಕಥಾಸಾಹಿತ್ಯವು ಹೆಣ್ಣಿನ ಅಂತರಂಗದ ತುಮುಲ, ಅವಳ ವಿಶಿಷ್ಟ ಅನುಭವಗಳು ಮತ್ತು ಅಸ್ಮಿತೆಯ ಹುಡುಕಾಟದ ಪ್ರಬಲ ಅಭಿವ್ಯಕ್ತಿಯಾಗಿದೆ. ಪಿತೃಪ್ರಧಾನ ವ್ಯವಸ್ಥೆಯ ಚೌಕಟ್ಟಿನಲ್ಲಿ ನೊಂದು ಬೆಂದ ಹೆಣ್ಣು, ಕಾಲಕ್ರಮೇಣ ಸಾಂಪ್ರದಾಯಿಕ ಮೌಲ್ಯಗಳನ್ನು ಪ್ರಶ್ನಿಸುವ ಮತ್ತು ಪ್ರತಿರೋಧ ಒಡ್ಡುವ ಹಂತಕ್ಕೆ ಬೆಳೆದ ಪರಿಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ವೈದೇಹಿ, ಸಾರಾ ಅಬೂಬಕರ್, ನೇಮಿಚಂದ್ರ ಮುಂತಾದ ಕಥೆಗಾರ್ತಿಯರು ಸ್ತ್ರೀ ಸಂವೇದನೆಯ ಮೂಲಕ ಕೌಟುಂಬಿಕ ಮತ್ತು ಸಾಮಾಜಿಕ ಶೋಷಣೆಗಳನ್ನು ತೆರೆದಿಡುತ್ತಾರೆ. ಲೈಂಗಿಕತೆ, ಸಮಾನತೆ ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳುವ ಸ್ವಾತಂತ್ರ್ಯದ ಕುರಿತಾದ ಸ್ತ್ರೀವಾದಿ ಚಿಂತನೆಗಳು ಆಧುನಿಕ ಕಥೆಗಳಲ್ಲಿ ಹೇಗೆ ಸಾಕಾರಗೊಂಡಿವೆ ಮತ್ತು ಮಹಿಳಾ ಪ್ರಜ್ಞೆಯು ಹೇಗೆ ವಿಕಾಸಗೊಂಡಿದೆ ಎಂಬುದರ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

Read More »

ನಾಟಕ ಮತ್ತು ಜನಪ್ರಿಯ ಸಂಸ್ಕೃತಿ

ಗಣೇಶ ಎನ್‌.

61 to 67

ಸಮಾಜದ ಜೀವಂತ ಕಲಾರೂಪವಾದ ನಾಟಕವು ಜನಪ್ರಿಯ ಸಂಸ್ಕೃತಿಯ ಪ್ರತಿಬಿಂಬ ಮಾತ್ರವಲ್ಲದೆ, ಅದನ್ನು ಮರುರೂಪಿಸುವ ಪ್ರಬಲ ಮಾಧ್ಯಮವಾಗಿದೆ. ಸಾಮಾನ್ಯ ಜನರ ದೈನಂದಿನ ಬದುಕು, ಆಚರಣೆ ಮತ್ತು ನಂಬಿಕೆಗಳೇ ನಾಟಕದ ಮೂಲಾಧಾರವಾಗಿದ್ದು, ಇವು ರಂಗಭೂಮಿಯ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವ ಕೈಗನ್ನಡಿಯಾಗಿವೆ. ಹಾಸ್ಯ ಮತ್ತು ವ್ಯಂಗ್ಯದ ಮೂಲಕ ಗಂಭೀರ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಾಟಕಗಳು, ಸಾಮಾಜಿಕ ಜಾಗೃತಿ ಮತ್ತು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಆಧುನಿಕ ಮಾಧ್ಯಮಗಳ ಪ್ರಭಾವದ ನಡುವೆಯೂ, ಸ್ಥಳೀಯ ಪರಂಪರೆ ಮತ್ತು ಮೌಲ್ಯಗಳನ್ನು ಉಳಿಸಿಕೊಳ್ಳುವಲ್ಲಿ ನಾಟಕದ ಪಾತ್ರ ಹಿರಿದು. ಸಾಮಾಜಿಕ ಪರಿವರ್ತನೆಯ ವಾಹಕವಾಗಿ ಮತ್ತು ಸಾಂಸ್ಕೃತಿಕ ದಾಖಲೆಯಾಗಿ ನಾಟಕವು ಜನಪ್ರಿಯ ಸಂಸ್ಕೃತಿಯೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

Read More »

ನಾಟಕ ಮತ್ತು ಜನಪ್ರಿಯ ಸಂಸ್ಕೃತಿ

ಭಾರತಿ ಎಂ.ಎಸ್

68 to 73

ಜೀವಂತ ಕಲೆಯಾದ ನಾಟಕ ಮತ್ತು ಜನಸಾಮಾನ್ಯರ ಬದುಕಿನ ಭಾಗವಾದ ಜನಪ್ರಿಯ ಸಂಸ್ಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಇಲ್ಲಿ ಚರ್ಚಿಸಲಾಗಿದೆ. ಸಿನಿಮಾ ಮತ್ತು ತಂತ್ರಜ್ಞಾನದ ಅಬ್ಬರದ ನಡುವೆಯೂ, ನೇರ ಸಂವಹನ ಮತ್ತು ಭಾವನಾತ್ಮಕ ಅನುಭವ ನೀಡುವ ರಂಗಭೂಮಿಯು ತನ್ನ ವಿಶಿಷ್ಟ ಅಸ್ತಿತ್ವವನ್ನು ಕಾಯ್ದುಕೊಂಡಿದೆ. ಸಮಾಜದ ನಂಬಿಕೆ, ಆಚರಣೆ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವ ನಾಟಕಗಳು, ಮನರಂಜನೆಯ ಜೊತೆಗೆ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿವೆ. ‘ನಾಗಮಂಡಲ’ದಂತಹ ಕೃತಿಗಳ ಮೂಲಕ ರಂಗಭೂಮಿ ಮತ್ತು ಸಿನಿಮಾದ ನಡುವಿನ ಕೊಡುಕೊಳ್ಳುವಿಕೆಯನ್ನು ವಿಶ್ಲೇಷಿಸುತ್ತಾ, ಸಾಮಾಜಿಕ ಬದಲಾವಣೆ ಮತ್ತು ಸಾಂಸ್ಕೃತಿಕ ಜಾಗೃತಿಯಲ್ಲಿ ನಾಟಕವು ವಹಿಸುವ ಪ್ರಮುಖ ಪಾತ್ರವನ್ನು ಇಲ್ಲಿ ಪ್ರತಿಪಾದಿಸಲಾಗಿದೆ.

Read More »

ಡಿಜಿಟಲ್ ಜಗತ್ತಿನಲ್ಲಿ ಕನ್ನಡ: ಕನ್ನಡ ಭಾಷಾ ಕಲಿಕೆಯ ಮೇಲೆ ತಂತ್ರಜ್ಞಾನದ ಪ್ರಭಾವ

ಶ್ರೀಮಹಾಂತೇಶ ವಿ. ಅಂಗಡಿ

74 to 85

ಜ್ಞಾನ ಮತ್ತು ಭಾವನೆಗಳ ಸಮ್ಮಿಲನವಾದ ಭಾಷೆಯು ತಂತ್ರಜ್ಞಾನದ ಸ್ಪರ್ಶದಿಂದ ಹೊಸ ಆಯಾಮವನ್ನು ಪಡೆದುಕೊಂಡಿದೆ. ಆಧುನಿಕ ಡಿಜಿಟಲ್ ಯುಗದಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳು, ಕೃತಕ ಬುದ್ಧಿಮತ್ತೆ (AI) ಮತ್ತು ವರ್ಚುವಲ್ ತರಗತಿಗಳು ಕನ್ನಡ ಕಲಿಕೆಯನ್ನು ಸರಳ ಹಾಗೂ ಪರಿಣಾಮಕಾರಿಯಾಗಿಸಿವೆ. ಡ್ಯುಯೊಲಿಂಗೋದಂತಹ ಗ್ಯಾಮಿಫಿಕೇಶನ್ ಮಾದರಿಗಳು, ‘ಟೆಕ್ಸ್ಟ್ ಟು ಸ್ಪೀಚ್’ ತಂತ್ರಜ್ಞಾನಗಳು ಮತ್ತು ಸಾಮಾಜಿಕ ಜಾಲತಾಣಗಳು ಭಾಷಾ ಪ್ರಸರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಯಂತ್ರ ಕಲಿಕೆ (Machine Learning) ಮತ್ತು ಧ್ವನಿ ಸಹಾಯಕ ತಂತ್ರಜ್ಞಾನಗಳಲ್ಲಿ ಕನ್ನಡದ ಅಳವಡಿಕೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಮತ್ತು ತಂತ್ರಜ್ಞರ ಸಂಘಟಿತ ಪ್ರಯತ್ನದ ಅಗತ್ಯವಿದೆ. ಜಾಗತಿಕ ಮಟ್ಟದಲ್ಲಿ ಕನ್ನಡದ ಅಸ್ತಿತ್ವ ಮತ್ತು ಬೆಳವಣಿಗೆಗೆ ತಂತ್ರಜ್ಞಾನದ ಸದ್ಬಳಕೆ ಅನಿವಾರ್ಯ ಎಂಬುದನ್ನು ಇಲ್ಲಿ ಪ್ರತಿಪಾದಿಸಲಾಗಿದೆ.

Read More »

ನಾಟಕ ಮತ್ತು ಜನಪ್ರಿಯ ಸಂಸ್ಕೃತಿ

ಹರೀಶ ಎಂ.ಸಿ.

86 to 91

ನಾಟಕವು ಮನುಷ್ಯನ ಜೀವನದ ಪ್ರಮುಖ ಘಟನೆಗಳು, ಮನೋಭಾವನೆಗಳು, ಸಂಘರ್ಷಗಳು ಮತ್ತು ಸಾಮಾಜಿಕ ವಾಸ್ತವ್ಯಗಳನ್ನು ಅಭಿನಯ, ಸಂಭಾಷಣೆ, ಚಲನೆ ಮತ್ತು ವೇದಿಕೆಯ ಪ್ರದರ್ಶನದ ಮೂಲಕ ಜೀವಂತವಾಗಿ ವ್ಯಕ್ತಪಡಿಸುವ ಒಂದು ಪ್ರಮುಖ ಸಾಹಿತ್ಯದ ಕಲಾರೂಪವಾಗಿದೆ. ಕೇವಲ ಓದಲು ಮಾತ್ರವಲ್ಲ, ಪ್ರೇಕ್ಷಕರ ಮುಂದೆ ಅಭಿನಯದ ಮೂಲಕ ರೂಪುಗೊಂಡ ಸಾಹಿತ್ಯವೇ ನಾಟಕ.
ಜನಪ್ರಿಯ ಸಂಸ್ಕೃತಿ (Popular Culture) ಎನ್ನುವುದು ಸಾಮಾನ್ಯ ಜನರು ದೈನಂದಿನ ಜೀವನದಲ್ಲಿ ಅನುಸರಿಸಲಾಗುವ ಜೀವನಶೈಲಿ, ಆಚಾರ–ವಿಚಾರಗಳು, ಭಾಷೆ, ಮನರಂಜನೆ, ಸಂಪ್ರದಾಯ, ನಂಬಿಕೆಗಳು ಹಾಗೂ ಸಾಮಾಜಿಕ ಅಭಿವ್ಯಕ್ತಿಗಳ ಒಟ್ಟುಗೂಡಿದ ರೂಪವಾಗಿದೆ. ಇದು ಜನಸಾಮಾನ್ಯರ ಬದುಕಿನಿಂದಲೇ ಹುಟ್ಟಿಕೊಂಡು, ಅವರ ಅನುಭವಗಳು, ಆಸಕ್ತಿಗಳು ಮತ್ತು ಅಗತ್ಯಗಳಿಗೆ ಅನುಗುಣವಾಗಿ ನಿರಂತರವಾಗಿ ರೂಪಾಂತರಗೊಳ್ಳುತ್ತದೆ.
ಜನಪ್ರಿಯ ಸಂಸ್ಕೃತಿಯಲ್ಲಿ ಜನಪದ ಹಾಡುಗಳು, ನಾಟಕಗಳು, ಜಾತ್ರೆಗಳು, ಹಬ್ಬಗಳು, ಸಿನೆಮಾ, ದೂರದರ್ಶನ ಧಾರಾವಾಹಿಗಳು, ಸಾಮಾಜಿಕ ಜಾಲತಾಣಗಳು, ಫ್ಯಾಷನ್, ಆಹಾರ ಪದ್ಧತಿ, ಮಾತಿನ ಶೈಲಿ, ಹಾಸ್ಯ ಅಂಶಗಳು ಸೇರಿವೆ. ಇವುಗಳಲ್ಲಿ ಉನ್ನತ ಸಂಸ್ಕೃತಿ (Elite Culture) ಯಂತೆ ಯಾವುದೇ ಕಠಿಣ ನಿಯಮಗಳು ಇರುವುದಿಲ್ಲ.
ನಾಟಕವು ಸಮಾಜದ ಸಾಂಸ್ಕೃತಿಕ ಸಂರಚನೆ ಮತ್ತು ಮಾನವ ಅನುಭವಗಳ ವಿಶ್ಲೇಷಣೆಗೆ ಅತ್ಯಂತ ಪ್ರಮುಖ ಕಲಾರೂಪವಾಗಿದ್ದು, ಜನಸಾಮಾನ್ಯರ ಜೀವನಶೈಲಿ, ಸಾಮಾಜಿಕ ಸಂಬಂಧಗಳು ಮತ್ತು ಇತಿಹಾಸಾತ್ಮಕ ಬದಲಾವಣೆಗಳನ್ನು ಕಲಾತ್ಮಕವಾಗಿ ಪ್ರತಿನಿಧಿಸುತ್ತದೆ. ಜನಪ್ರಿಯ ಸಂಸ್ಕೃತಿ ಎನ್ನುವುದು ಸಾಮಾನ್ಯ ಜನರ ದೈನಂದಿನ ಬದುಕಿನಲ್ಲಿ ರೂಪುಗೊಳ್ಳುವ ಭಾಷೆ, ಆಚರಣೆ, ನಂಬಿಕೆ, ಮನರಂಜನೆ, ಮಾಧ್ಯಮೀಯ ಅಭಿವ್ಯಕ್ತಿ ಮತ್ತು ಸಾಮಾಜಿಕ ಆಚರಣಾ ವಿಧಾನಗಳ ಸಮಗ್ರ ರೂಪವಾಗಿದೆ. ಈ ಸಂಶೋಧನಾ ಪತ್ರಿಕೆ ನಾಟಕ ಮತ್ತು ಜನಪ್ರಿಯ ಸಂಸ್ಕೃತಿಯ ನಡುವಿನ ಪರಸ್ಪರ ಸಂಬಂಧವನ್ನು ಸಾಂಸ್ಕೃತಿಕ ಅಧ್ಯಯನ ಹಾಗೂ ನಾಟಕ ಸಿದ್ಧಾಂತದ ಚೌಕಟ್ಟಿನಲ್ಲಿ ವಿಶ್ಲೇಷಿಸುವ ಉದ್ದೇಶವನ್ನು ಹೊಂದಿದೆ.
ಭಾರತೀಯ ಹಾಗೂ ಕನ್ನಡ ನಾಟಕ ಪರಂಪರೆಯಲ್ಲಿ ಯಕ್ಷಗಾನ, ಬಯಲಾಟ, ಸಣ್ಣಾಟ, ಜನಪದ ನಾಟಕಗಳಂತಹ ರೂಪಗಳು ಜನಪ್ರಿಯ ಸಂಸ್ಕೃತಿಯ ಜೀವಂತ ಸಾಕ್ಷಿಗಳಾಗಿವೆ. ಇವು ಜನಸಾಮಾನ್ಯರ ಭಾಷೆ, ಹಾಸ್ಯ, ಸಂಗೀತ, ವೇಷಭೂಷಣ ಮತ್ತು ಸ್ಥಳೀಯ ಅನುಭವಗಳನ್ನು ಸಾಮಾಜಿಕ ವೇದಿಕೆಗೆ ತಂದು, ಸಾಂಸ್ಕೃತಿಕ ಮೌಲ್ಯಗಳು ಮತ್ತು ಶಕ್ತಿ ಸಂಬಂಧಗಳನ್ನು ಪ್ರತಿಬಿಂಬಿಸುತ್ತವೆ. ಸ್ವಾತಂತ್ರ್ಯೋತ್ತರ ಹಾಗೂ ಸಮಕಾಲೀನ ಕನ್ನಡ ನಾಟಕಗಳಲ್ಲಿ ಜನಪ್ರಿಯ ಸಂಸ್ಕೃತಿಯ ಅಂಶಗಳನ್ನು ವಿಮರ್ಶಾತ್ಮಕವಾಗಿ ಅಳವಡಿಸಿಕೊಂಡು ವರ್ಗಸಂಘರ್ಷ, ಲಿಂಗ ರಾಜಕೀಯ, ಶೋಷಣೆ, ಅಸ್ಮಿತೆ, ಸಂವೇದನೆ, ರಾಜಕೀಯ ಪ್ರಜ್ಞೆ ಮತ್ತು ಜಾಗತೀಕರಣದ ಪರಿಣಾಮಗಳಂತಹ ಸಂಕೀರ್ಣ ಸಾಮಾಜಿಕ ಪ್ರಶ್ನೆಗಳನ್ನು ಚರ್ಚಿಸಲಾಗಿದೆ.
ಆಧುನಿಕೋತ್ತರ ಕಾಲಘಟ್ಟದಲ್ಲಿ ಚಲನಚಿತ್ರ, ದೂರದರ್ಶನ, ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ವಿಸ್ತಾರದಿಂದ ಜನಪ್ರಿಯ ಸಂಸ್ಕೃತಿಯ ಸ್ವರೂಪದಲ್ಲಿ ಮಹತ್ವದ ಪರಿವರ್ತನೆಗಳು ಸಂಭವಿಸಿವೆ. ಈ ಮಾಧ್ಯಮಿಕ ಬದಲಾವಣೆಗಳು ನಾಟಕದ ರೂಪರಚನೆ, ಕಥನಶೈಲಿ ಮತ್ತು ಪ್ರದರ್ಶನ ತಂತ್ರಗಳ ಮೇಲೂ ಪರಿಣಾಮ ಬೀರಿವೆ. ನಾಟಕವು ಜನಪ್ರಿಯ ಸಂಸ್ಕೃತಿಯನ್ನು ಅಂಧವಾಗಿ ಅನುಕರಿಸದೆ, ವಿಮರ್ಶಾತ್ಮಕವಾಗಿ ಅಳವಡಿಸಿಕೊಂಡಾಗ ಮಾತ್ರ ಅದು ಸಾಮಾಜಿಕ ಜಾಗೃತಿ, ಬೌದ್ಧಿಕ ಸಂವಾದ ಮತ್ತು ಸಾಂಸ್ಕೃತಿಕ ವಿಮರ್ಶೆಯ ಪರಿಣಾಮಕಾರಿ ವೇದಿಕೆಯಾಗುತ್ತದೆ. ಆದ್ದರಿಂದ, ನಾಟಕ ಮತ್ತು ಜನಪ್ರಿಯ ಸಂಸ್ಕೃತಿ ನಡುವಿನ ಸಂಬಂಧ ಅತ್ಯಂತ ಮಹತ್ವಪೂರ್ಣ ವಿಷಯವಾಗಿದೆ.

Read More »

ವ್ಯಕ್ತಿತ್ವದ ಸೌರಭಕ್ಕೆ ಮೌಲ್ಯದ ಬೀಜ

ಸುಮಂಗಲ ಎಸ್. ಹೆಗಡೆ

92 to 95

ವ್ಯಕ್ತಿಯೊಬ್ಬನ ಮಹತ್ವವು ಆತ ಪಾಲಿಸುವ ತತ್ತ್ವ ಮತ್ತು ಆದರ್ಶಗಳ ಮೇಲೆ ನಿರ್ಧಾರವಾಗುತ್ತದೆ. ಬದುಕು ಅರ್ಥಪೂರ್ಣವಾಗಲು ಮತ್ತು ನೈತಿಕ ನೆಲೆಗಟ್ಟಿನಲ್ಲಿ ಸಾಗಲು ಮೌಲ್ಯಗಳೆಂಬ ಬೀಜಗಳು ಅತ್ಯಗತ್ಯ. ಸತ್ಯ, ಅಹಿಂಸೆ, ಪ್ರೀತಿ, ತಾಳ್ಮೆ ಮತ್ತು ಜಿತೇಂದ್ರಿಯತೆಯಂತಹ ಗುಣಗಳು ವ್ಯಕ್ತಿತ್ವವನ್ನು ರೂಪಿಸುವ ಮೂಲಾಧಾರಗಳಾಗಿವೆ. ಇಂದ್ರಿಯ ನಿಗ್ರಹ ಮತ್ತು ಸುಖ-ದುಃಖಗಳಲ್ಲಿ ಸಮಾನ ಭಾವ ಹೊಂದುವುದು ಯಶಸ್ವಿ ಜೀವನಕ್ಕೆ ದಾರಿದೀಪವಾಗಿದೆ. ರಾಮಾಯಣ, ಮಹಾಭಾರತ ಹಾಗೂ ವಚನ ಸಾಹಿತ್ಯದ ಉದಾಹರಣೆಗಳ ಮೂಲಕ, ಮೌಲ್ಯಧಾರಿತ ಬದುಕು ಹೇಗೆ ವ್ಯಕ್ತಿತ್ವಕ್ಕೆ ಸೌರಭವನ್ನು ತುಂಬಿ ಸಮಾಜಕ್ಕೆ ಮಾದರಿಯಾಗಬಲ್ಲದು ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಅಂತರಂಗ ಮತ್ತು ಬಹಿರಂಗ ಶುದ್ಧಿಯೊಂದಿಗೆ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಸುಂದರ ಜೀವನ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ಇಲ್ಲಿ ಪ್ರತಿಪಾದಿಸಲಾಗಿದೆ.

Read More »

ಸಾಮಾಜಿಕ ಮಾಧ್ಯಮ: ಒಂದು ಸಾಂಸ್ಕೃತಿಕ ಚಿಂತನೆ

ಸೌಮ್ಯ ವಿ.

96 to 100

ಮಾನವ ಸಂಸ್ಕೃತಿಯು ನಿರಂತರವಾಗಿ ಹರಿಯುವ ನದಿಯಿದ್ದಂತೆ. ಅದು ಕಾಲಕ್ಕೆ ತಕ್ಕಂತೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಾ ಬಂದಿದೆ. ಹಿಂದೆ ಸಂಸ್ಕೃತಿಯು ಮೌಖಿಕ ಪರಂಪರೆ, ಬರಹ ಮತ್ತು ಕಲೆಯ ಮೂಲಕ ಹರಿದು ಬರುತ್ತಿತ್ತು. ಆದರೆ ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಸಾಮಾಜಿಕ ಮಾಧ್ಯಮ ಸಂಸ್ಕೃತಿಯ ಹೊಸ ವಾಹಕವಾಗಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಎಕ್ಸ್ ಮತ್ತು ಯೂಟ್ಯೂಬ್‌ಗಳಂತಹ ವೇದಿಕೆಗಳು ಕೇವಲ ಮನರಂಜನೆಯ ಸಾಧನಗಳಾಗಿ ಉಳಿಯದೆ, ಸಮಾಜದ ಆಲೋಚನಾ ಲಹರಿ ಮತ್ತು ಸಾಂಸ್ಕೃತಿಕ ನಡವಳಿಕೆಯನ್ನು ನಿರ್ಧರಿಸುವ ಶಕ್ತಿಗಳಾಗಿ ಹೊರಹೊಮ್ಮಿವೆ.
ಇತ್ತೀಚಿನ ದಿನಗಳಲ್ಲಿ ಜನರ ಜೀವನ ಕ್ರಮದಲ್ಲಿ ಕ್ಷಿಪ್ರವಾದ ಬದಲಾವಣೆಯನ್ನು ಕಾಣುತ್ತಿದೆ. ಈ ಬದಲಾವಣೆಯ ರುವಾರಿ ಸಾಮಾಜಿಕ ಮಾಧ್ಯಮ. ಈ ಮಾಧ್ಯಮವು ಸಣ್ಣ ಮಕ್ಕಳಿಂದ ವಯೋವೃದ್ಧರಿಗೂ ಪ್ರಿಯವಾದ ಮಾಧ್ಯಮವಾಗಿ ಜನಪ್ರಿಯತೆಯನ್ನು ಗಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರೇ ನೇರವಾಗಿ ಪಾಲ್ಗೊಳ್ಳುವ ಅವಕಾಶ ಜನಪ್ರಿಯತೆಯನ್ನು ಪಡೆಯಲು ಸಾಧ್ಯವಾಗಿದೆ ಎನಿಸಿದೆ. ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್, ಎಕ್ಸ್ ಇವೇ ಮೊದಲಾದ ಮಾಧ್ಯಮಗಳ ಮೂಲಕವಾಗಿ ಜನರು ಸಮೂಹದೊಂದಿಗೆ ಭಾಗಿದಾರರಾಗಿ ಸ್ಪಂದಿಸಲು ತೊಡಗಿದ್ದಾರೆ. ಹಿಂದೆ ಪತ್ರಿಕೆ, ಟಿ.ವಿ. ಮಾಧ್ಯಮಗಳ ಮೂಲಕ ಸುದ್ದಿಯನ್ನು, ಮನರಂಜನೆಯ ಅರಿವನ್ನು ಹೊಂದಿದ್ದರು. ಅಂದರೆ ಜನರಿಗೆ ಸುದ್ದಿಯ ಕುರಿತು, ವರದಿಯ ಕುರಿತು, ತಾವು ಮೆಚ್ಚಿದ ಮನರಂಜನೆಯ ಅಥವಾ ಇತರ ಕಾರ್ಯಕ್ರಮಗಳ ಕುರಿತ ವಿಚಾರಗಳನ್ನು ಅಭಿವ್ಯಕ್ತಪಡಿಸುವ ಮಾಧ್ಯಮಗಳು ಸೀಮಿತವಾಗಿದ್ದವು. ಹಾಗೂ ತಮ್ಮ ಅನಿಸಿಕೆಗಳನ್ನು, ವಿಚಾರಗಳನ್ನು ಹಂಚಿಕೊಳ್ಳುವುದು ಎಲ್ಲರಿಗೂ ಸುಲಭವಾದ ವಿಚಾರವಾಗಿರಲಿಲ್ಲ. ಈ ಮೇಲೆ ತಿಳಿಸಿದ ಸಾಮಾಜಿಕ ಮಾಧ್ಯಮಗಳು ಅಕ್ಷರ ಕಲಿತ, ಅಕ್ಷರ ಕಲಿಯದ, ನಗರದ, ಹಳ್ಳಿಯ, ಬುಡಕಟ್ಟಿನ ಇವೇ ಮೊದಲಾದ ಎಲ್ಲರಿಗೂ ತಮಗೆ ಅನ್ನಿಸಿದ್ದನ್ನು ಅಭಿವ್ಯಕ್ತಪಡಿಸಲು ಮುಕ್ತವಾಗಿಸಿವೆ. ಈ ಮುಕ್ತತೆಯ ಮಾಧ್ಯಮವನ್ನು ಜನರು ಬೆರಗು ನೋಟದೊಂದಿಗೆ ಮುಕ್ತವಾಗಿಯೇ ಸ್ವಾಗತಿಸಿದ್ದಾರೆ.

Read More »

ಬಯಲಾಟ ಪರಂಪರೆ: ಆಧುನಿಕತೆಯ ಪ್ರಭಾವಗಳು

ವಿರೂಪಾಕ್ಷಿ ಎನ್.ಬಿ.

101 to 109

ಕರ್ನಾಟಕದ ಸಮೃದ್ಧ ಜನಪದ ರಂಗಭೂಮಿ ಪ್ರಕಾರಗಳಾದ ಬಯಲಾಟ ಮತ್ತು ದೊಡ್ಡಾಟಗಳ ಉಗಮ, ವಿಕಾಸ ಹಾಗೂ ಪ್ರಸ್ತುತ ಸ್ಥಿತಿಗತಿಗಳನ್ನು ಈ ಲೇಖನವು ಚರ್ಚಿಸುತ್ತದೆ.  ದ್ರಾವಿಡ ಮೂಲದ ಈ ಕಲೆಗೆ ಆಧುನಿಕತೆಯ ಸ್ಪರ್ಶದಿಂದಾಗಿ ಆಗಿರುವ ಬದಲಾವಣೆಗಳನ್ನು ಲೇಖಕರು ವಿಶ್ಲೇಷಿಸಿದ್ದಾರೆ. ಪ್ರಮುಖವಾಗಿ ವೇಷಭೂಷಣ, ರಂಗಸಜ್ಜಿಕೆ, ಮತ್ತು ಸಂಗೀತದಲ್ಲಿ ಚಲನಚಿತ್ರದ ಪ್ರಭಾವಗಳು ನುಸುಳಿರುವುದನ್ನು, ಸ್ತ್ರೀ ಪಾತ್ರಗಳಲ್ಲಿನ ಬದಲಾವಣೆಗಳನ್ನು ಇಲ್ಲಿ ಗುರುತಿಸಲಾಗಿದೆ. ಯಕ್ಷಗಾನದಂತೆ ಕಾಲಕ್ಕೆ ಒಗ್ಗಿ ಬದಲಾಗದ ಕಾರಣ, ಈ ಕಲೆ ಎದುರಿಸುತ್ತಿರುವ ಸವಾಲುಗಳು ಮತ್ತು ಭಾಷಾ ಕ್ಲಿಷ್ಟತೆಯನ್ನು ನಿವಾರಿಸಿ  ಸರಳೀಕರಣಗೊಳಿಸುವ ಅಗತ್ಯವನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಜಾಗತೀಕರಣದ ಅಬ್ಬರದ ನಡುವೆಯೂ ದೇಸಿ ಸೊಗಡನ್ನು ಉಳಿಸಿಕೊಳ್ಳುವ ಅನಿವಾರ್ಯತೆಯನ್ನು ಲೇಖನವು ಒತ್ತಿಹೇಳುತ್ತದೆ.

Read More »

ಭಾಷೆಯ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವ

ಗುರುಸ್ವಾಮಿ ಹಿರೇಮಠ

110 to 117

ಭಾಷೆ ಜೀವ ಸಂಕುಲಗಳ ಸಂಪರ್ಕ ಜಾಲವಾಗಿದೆ. ಪ್ರತಿಯೊಂದು ಜೀವಿಯೂ ತನ್ನ ಭಾವನೆಗಳನ್ನು, ಸುಖ-ದುಃಖಗಳನ್ನು ಹಂಚಿಕೊಳ್ಳುವ ಮತ್ತು ಬಾಂಧವ್ಯವನ್ನು ಕಟ್ಟಿಕೊಳ್ಳುವ, ಮುಂದುವರೆಸುವ ಪ್ರತಿ ಹಂತದಲ್ಲೂ ಭಾಷೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಮನುಷ್ಯ ಸಂಬಂಧಗಳು, ಸಾಮಾಜಿಕ ಬಂಧಗಳು, ಸಂಘಟನಾತ್ಮಕ ಮತ್ತು ವಿಘಟನಾತ್ಮಕ ಸಂಗತಿಗಳು ನಿರ್ಧಾರವಾಗುವುದೇ ಈ ಭಾಷೆಯಿಂದ. ಹಾಗಾಗಿ ಈ ಭಾಷಾ ವ್ಯವಸ್ಥೆ ಮನುಷ್ಯ ಬದುಕಿನ ವ್ಯಷ್ಟಿ ಮತ್ತು ಸಮಷ್ಟಿ ಸ್ಥಿತಿಯನ್ನು ರೂಪಿಸುವಲ್ಲಿ ಮಹತ್ವದ ಪ್ರಭಾವವನ್ನು ಬೀರಿದರೂ, ಈ ಭಾಷೆಯ ಮೇಲೂ ಇದನ್ನು ಪ್ರಭಾವಿಸುವ ಸಂಗತಿಗಳೂ ಮಹತ್ತರ ಪಾತ್ರವನ್ನು ವಹಿಸುತ್ತವೆ.
ಅದು ಕಲಿಕಾ ವಾತಾವರಣವನ್ನು ಮೊದಲ್ಗೊಂಡು ವ್ಯಾವಹಾರಿಕ ಸಂಬಂಧಗಳಲ್ಲಿ, ರಾಜತಾಂತ್ರಿಕ ಒಪ್ಪಂದಗಳಲ್ಲಿ, ವೈಯಕ್ತಿಕ ಹಾಗೂ ಸಾಮುದಾಯಿಕ ಸಂಬಂಧಗಳ ಸೌಹಾರ್ದತೆ ಮತ್ತು ಸಂಘರ್ಷಾತ್ಮಕ ಸ್ಥಿತಿಗತಿಗೆ ಇದೊಂದು ಪ್ರಭಾವಿ ವೇದಿಕೆಯಾಗಿ ಪರಿಗಣಿಸಲ್ಪಡುತ್ತದೆ. ಜೊತೆಗೆ ಸಂವಹನವನ್ನು ಸಕಾರಾತ್ಮಕ ಹಾಗೂ ಋಣಾತ್ಮಕವಾಗಿಯೂ ವಿಸ್ತರಿಸುವ ಮತ್ತು ಪ್ರಸ್ತುತೀಕರಣಗೊಳಿಸುವಲ್ಲಿ ಸಾಮಾಜಿಕ ಮಾಧ್ಯಮಗಳು ಉಪಯುಕ್ತವೆನಿಸುತ್ತವೆ. ಅದರಲ್ಲೂ ಮಾಹಿತಿ ತಂತ್ರಜ್ಞಾನದಲ್ಲಿ ಆಗುತ್ತಿರುವ ಅಭಿವೃದ್ಧಿಯ ಪರಿಣಾಮವಾಗಿ ಕ್ರಾಂತಿಕಾರಕವಾದ ಬದಲಾವಣೆ ಬದುಕಿನಲ್ಲಿ ಘಟಿಸುತ್ತಿವೆ. ಇದಕ್ಕೆ ಸಾಮಾಜಿಕ ಮಾಧ್ಯಮಗಳ ಕೊಡುಗೆ ಮತ್ತು ಹೊಣೆಗಾರಿಕೆ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅಬಾಲ-ವೃದ್ಧರಾದಿಯಾಗಿ ಹದಿಹರೆಯದವರು, ಶಿಕ್ಷಣ, ಉದ್ಯಮ-ಉದ್ಯೋಗ, ಕ್ರೀಡಾ, ಮನರಂಜನಾ ಕ್ಷೇತ್ರದಲ್ಲಿ ಗುರುತಿಸಿಕೊಂಡವರು ಮತ್ತು ಆಡಳಿತಾತ್ಮಕ ವರ್ಗದ ನೀತಿ-ನಿರೂಪಕರು ಸಾಮಾಜಿಕ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗುತ್ತಿರುವ ಕಾರಣ ನಮ್ಮ ಚಿಂತನೆ ಮತ್ತು ಭಾಷಾ ರಚನೆಯಲ್ಲೂ ಮಹತ್ತರವಾದ ಪಲ್ಲಟಗಳು ಘಟಿಸುತ್ತಿವೆ.
ಹಾಗಾಗಿ ಇಂತಹ ವಾತಾವರಣದಿಂದಾಗಿ ಭಾಷಾ ವಲಯಕ್ಕೆ ಇನ್ನಿಲ್ಲದ ಅವಕಾಶಗಳ ಲಭ್ಯತೆ ಮತ್ತು ವಂಚನೆಗಳೂ ಹೆಚ್ಚುತ್ತಿವೆ. ಅದರಲ್ಲೂ ಅನೇಕ ಭಾಷಾ ಪ್ರಭೇದಗಳು ಅತ್ಯಂತ ಸ್ಪರ್ಧಾತ್ಮಕ, ಸವಾಲಿನ ಸಂದರ್ಭಗಳನ್ನು ಎದುರಿಸುತ್ತಿದ್ದರೆ; ಇನ್ನು ಕೆಲವು ಪ್ರಭೇದಗಳು ಸಕಾರಾತ್ಮಕ ಬೆಳವಣಿಗೆಯನ್ನು ಕಂಡುಕೊಳ್ಳುತ್ತಿವೆ. ಸಾಂಪ್ರದಾಯಿಕ ಭಾಷಾ ಪ್ರಯೋಗಗಳು, ವ್ಯಾಕರಣ, ಛಂದಸ್ಸು, ಅಲಂಕಾರಗಳಲ್ಲಿ ಪಲ್ಲಟವಾಗುತ್ತಿದೆ. ಇದರ ಪರಿಣಾಮವಾಗಿ ಸಾಮಾಜಿಕ ಜನ-ಜೀವನದ ವಿಧಾನದ ಮೇಲೂ ತೀವ್ರತರನಾದ ತಿರುವುಗಳಾಗುತ್ತಿವೆ. ಇದರಿಂದಾಗಿ ಬಲಿಷ್ಠ ಭಾಷೆಗಳು, ಸಾಂಸ್ಕೃತಿಕ ಸಂಪ್ರದಾಯಗಳು ಸಹ ವೈರುಧ್ಯತೆಗಳಿಗೆ ತೆರೆದುಕೊಳ್ಳುವುದು ಅನಿವಾರ್ಯವೆಂಬಂತಾಗಿದೆ. ಇದು ಜಾಗತಿಕ ವಲಯದ ಆಗು-ಹೋಗುಗಳು ತೀವ್ರತರನಾದ ಪ್ರತಿರೋಧವನ್ನು ಎದುರಿಸುತ್ತಿವೆ. ಈ ಎಲ್ಲ ಸಂಗತಿಗಳನ್ನು ಅನುಲಕ್ಷಿಸಿ ವಿಶ್ಲೇಷಿಸುವ ಹಾಗೂ ಪ್ರಕಟಿತ ಮತ್ತು ಜನಮಾನಸದ ಆಲೋಚನಾಕ್ರಮಗಳನ್ನು ಗ್ರಹಿಸುವ ಉದ್ದೇಶವನ್ನು ಈ ಲೇಖನ ಹೊಂದಿದೆ.

Read More »

ಸ್ತ್ರೀ ಸಂವೇದನೆಯ ಹಿನ್ನೆಲೆಯಲ್ಲಿ ʼಚಪ್ಪಲಿಗಳು ಕಥೆʼ

ಅನುಷ

118 to 126

ಮಹಿಳಾ ಸಬಲೀಕರಣ ಹಾಗೂ ಸ್ತ್ರೀ ಸಂವೇದನೆಯ ನೆಲೆಯಲ್ಲಿ ಡಾ. ಸಾರಾ ಅಬೂಬಕ್ಕರ್ ಅವರ ‘ಚಪ್ಪಲಿಗಳು’ ಕಥೆಯು ಪಿತೃಪ್ರಧಾನ ವ್ಯವಸ್ಥೆಯ ಕಟು ವಾಸ್ತವವನ್ನು ತೆರೆದಿಡುತ್ತದೆ. ಸಮೀರಾಳ ಪಾತ್ರದ ಮೂಲಕ, ಹೆಣ್ಣನ್ನು ಕೇವಲ ಬಳಸಿ ಬಿಸಾಡುವ ‘ಚಪ್ಪಲಿ’ಯಂತೆ ಕಾಣುವ ಪುರುಷ ಅಹಂಕಾರ ಮತ್ತು ಅದರಿಂದಾಗಿ ಆಕೆ ಅನುಭವಿಸುವ ಮಾನಸಿಕ ಖಿನ್ನತೆಯನ್ನು ಇಲ್ಲಿ ಚರ್ಚಿಸಲಾಗಿದೆ. ಇದಕ್ಕೆ ಪೂರಕವಾಗಿ ಡಾ. ವೀಣಾ ಶಾಂತೇಶ್ವರ ಅವರ ‘ತಿರುಗಿ ಹೋದವಳು’ ಕಥೆಯ ಹಮೀದಾ ಮತ್ತು ಲಕ್ಷ್ಮಿಯರ ದಾಂಪತ್ಯದ ಸಂಘರ್ಷಗಳನ್ನು ಹಾಗೂ ಸಮಕಾಲೀನ ವಾಸ್ತವ ಘಟನೆಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಲಾಗಿದೆ. ಧರ್ಮ ಮತ್ತು ಸಂಪ್ರದಾಯದ ಹೆಸರಿನಲ್ಲಿ ಹೆಣ್ಣಿನ ಶಿಕ್ಷಣ ಹಾಗೂ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಾಮಾಜಿಕ ಧೋರಣೆಯನ್ನು ಪ್ರಶ್ನಿಸುತ್ತಾ, ಸ್ತ್ರೀಯರ ಆತ್ಮಗೌರವ ಮತ್ತು ಸ್ವಾಯತ್ತತೆಯ ಅಗತ್ಯವನ್ನು ಲೇಖನವು ಪ್ರತಿಪಾದಿಸುತ್ತದೆ.

Read More »

ಭಾಷಾ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ

ಗೀತಾಲಕ್ಷ್ಮಿ ಎಸ್.ಎನ್.

127 to 131

ಭಾಷೆ ಮಾನವ ಬೌದ್ಧಿಕತೆಯ ಮೂಲಾಧಾರವಾಗಿದ್ದು, ಜ್ಞಾನಸೃಷ್ಟಿ, ಸಂಸ್ಕೃತಿ ಸಂರಕ್ಷಣೆ ಮತ್ತು ಸಾಮಾಜಿಕ ಸಂವಹನದ ಪ್ರಮುಖ ಸಾಧನವಾಗಿದೆ. ಸಮಕಾಲೀನ ತಾಂತ್ರಿಕ ಯುಗದಲ್ಲಿ ಭಾಷೆಯು ಕೃತಕ ಬುದ್ಧಿಮತ್ತೆಯೊಂದಿಗೆ ಸಂಯೋಜಿತವಾಗಿ ಹೊಸ ಬೌದ್ಧಿಕ ಹಾಗೂ ತಾಂತ್ರಿಕ ಸಾಧ್ಯತೆಗಳನ್ನು ತೆರೆದಿದೆ. ಭಾಷಾ ತಂತ್ರಜ್ಞಾನವು ಮಾನವ ಭಾಷೆಯ ಧ್ವನಿ, ಪದ, ವಾಕ್ಯ ಮತ್ತು ಅರ್ಥಮಟ್ಟಗಳನ್ನು ಯಾಂತ್ರಿಕವಾಗಿ ಸಂಸ್ಕರಿಸುವ ಪ್ರಕ್ರಿಯೆಯಾಗಿದ್ದು, ಕೃತಕ ಬುದ್ಧಿಮತ್ತೆಯ ಕಲಿಕೆ, ವಿಶ್ಲೇಷಣೆ ಮತ್ತು ತೀರ್ಮಾನಾತ್ಮಕ ಸಾಮರ್ಥ್ಯಗಳು ಇದಕ್ಕೆ ಶಕ್ತಿಯನ್ನು ನೀಡುತ್ತವೆ. ಇದರ ಪರಿಣಾಮವಾಗಿ ಮಾನವ–ಯಂತ್ರ ಸಂವಹನವು ಹೆಚ್ಚು ಸಹಜ, ಅರ್ಥಪೂರ್ಣ ಮತ್ತು ಜನಸ್ನೇಹಿಯಾಗುತ್ತಿದೆ. ಶಿಕ್ಷಣ, ಆಡಳಿತ, ಮಾಹಿತಿ ವಿತರಣೆ, ಸಂಸ್ಕೃತಿ ಸಂರಕ್ಷಣೆ ಮತ್ತು ಜ್ಞಾನವಿಸ್ತರಣೆಯಂತಹ ಕ್ಷೇತ್ರಗಳಲ್ಲಿ ಇದರ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಭಾಷೆಯ ಸಾಂಸ್ಕೃತಿಕ ಸೂಕ್ಷ್ಮತೆ, ವೈವಿಧ್ಯತೆ ಮತ್ತು ಮಾನವೀಯ ಮೌಲ್ಯಗಳನ್ನು ಯಾಂತ್ರೀಕರಣಗೊಳಿಸುವ ಸಂದರ್ಭದಲ್ಲಿ ನೈತಿಕ ಹಾಗೂ ಸಾಮಾಜಿಕ ಸವಾಲುಗಳು ಉದ್ಭವಿಸುತ್ತವೆ. ಆದ್ದರಿಂದ ಭಾಷಾ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯು ತಾಂತ್ರಿಕ ಪ್ರಗತಿಯ ಜೊತೆಗೆ ಮಾನವೀಯ ಜವಾಬ್ದಾರಿ ಮತ್ತು ಸಾಂಸ್ಕೃತಿಕ ಸಮತೋಲನವನ್ನು ಸಮನ್ವಯಗೊಳಿಸಬೇಕಾದ ಅಗತ್ಯವನ್ನು ಈ ಅಧ್ಯಯನ ಒತ್ತಿಹೇಳುತ್ತದೆ.

Read More »

ಕನ್ನಡ ಮಹಿಳಾ ಕಾವ್ಯದಲ್ಲಿ ಗಾಂಧಿ ಮತ್ತು ಅಂಬೇಡ್ಕರ್

ಕುಮಾರ ಇಂದ್ರಬೆಟ್ಟ

132 to 141

ಪ್ರಸ್ತುತ ಪ್ರಬಂಧವು ಕನ್ನಡದ ಹೊಸ ತಲೆಮಾರಿನ ಮಹಿಳಾ ಕವಯಿತ್ರಿಯರು ಚಾರಿತ್ರಿಕ ಪುರುಷರಾದ ಗಾಂಧಿ ಮತ್ತು ಅಂಬೇಡ್ಕರ್ ಅವರ ವ್ಯಕ್ತಿತ್ವಗಳನ್ನು ಕಾವ್ಯದ ಮೂಲಕ ಗ್ರಹಿಸಿರುವ ಭಿನ್ನ ದೃಷ್ಟಿಕೋನಗಳನ್ನು ಚರ್ಚಿಸುತ್ತದೆ. ಸಾಂಪ್ರದಾಯಿಕ ಇತಿಹಾಸವು ಈ ಮಹನೀಯರನ್ನು ಕೇವಲ ‘ಮಹಾತ್ಮ’ ಅಥವಾ ‘ದೇವ ಸಮಾನ’ ವ್ಯಕ್ತಿಗಳಾಗಿ ಚಿತ್ರಿಸಿದರೆ, ಮಹಿಳಾ ಕಾವ್ಯವು ಅವರ ತತ್ವಗಳನ್ನು ವರ್ತಮಾನದ ಬಿಕ್ಕಟ್ಟುಗಳಿಗೆ ಮುಖಾಮುಖಿಯಾಗಿಸುತ್ತದೆ. ಗಾಂಧೀಜಿಯ ಅಹಿಂಸೆಯ ತತ್ವವು ಇಂದಿನ ಹಿಂಸಾತ್ಮಕ ಜಗತ್ತಿನಲ್ಲಿ ಪ್ರತಿಮೆಯಾಗಿ ಸೀಮಿತಗೊಳ್ಳುತ್ತಿರುವುದನ್ನು ವ್ಯಂಗ್ಯವಾಡುವುದು ಮತ್ತು ಅಂಬೇಡ್ಕರ್ ಅವರ ಸಾಂವಿಧಾನಿಕ ಆಶಯಗಳು ಕೇವಲ ದಲಿತರಿಗೆ ಮಾತ್ರವಲ್ಲದೆ ಇಡೀ ಮಹಿಳಾ ಕುಲಕ್ಕೆ ಬಿಡುಗಡೆಯ ಹಾದಿಯಾಗಿದೆ ಎಂದು ಈ ಕಾವ್ಯಗಳು ಧ್ವನಿಸುತ್ತವೆ. ಇತಿಹಾಸವನ್ನು ಮರುಚಿಂತನೆಗೆ ಒಳಪಡಿಸುವ ಈ ಕ್ರಮವು ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ಆಯಾಮವನ್ನು ನೀಡಿದೆ.

Read More »

ವಿಚಾರ ಸಾಹಿತ್ಯ: ಮತ, ಧರ್ಮದ ಪರಿಧಿಯಲ್ಲಿ ಸ್ತ್ರೀ

ಸುಮಾ ವ ಸಾವಂತ

142 to 153

ಕನ್ನಡ ಸಾಹಿತ್ಯ ಪರಂಪರೆಯು ಆದಿಕಾಲದಿಂದಲೂ ವೈಚಾರಿಕತೆಯನ್ನು ತನ್ನೊಳಗೆ ಮಿಳಿತಗೊಳಿಸಿಕೊಂಡೇ ಬಂದಿದೆ. ವಿಚಾರ ಸಾಹಿತ್ಯ ಒಂದು ಪ್ರಕಾರವಾಗಿ ಪ್ರತ್ಯೇಕತೆಯನ್ನು ಪಡೆದುಕೊಂಡಿರುವುದು ಸುಮಾರು 20ನೆಯ ಶತಮಾನದಲ್ಲಿ. ಅಲ್ಲಿಯವರೆಗೂ ಸೃಜನಶೀಲ ಸಾಹಿತ್ಯದ ಮೂಲಕವೇ ವೈಚಾರಿಕ ಸಾಹಿತ್ಯವನ್ನು ಕಾಣಬಹುದು. ವಿಚಾರ ಸಾಹಿತ್ಯವು ಸಮಾಜದಲ್ಲಿ ನಡೆದ ಮತ್ತು ನಡೆಯುತ್ತಿರುವಂತಹ ವಿಷಯಗಳನ್ನೊಳಗೊಂಡು ಅದಕ್ಕೆ ಪ್ರತಿಕ್ರಿಯೆಯನ್ನು ನೀಡುತ್ತಲೇ ಸಾಗಿದೆ.
ಎಪ್ಪತ್ತರ ದಶಕದ ಕಾಲಘಟ್ಟದ ಸಂದರ್ಭದಲ್ಲಿ ನಡೆದ ಹಲವಾರು ಹೋರಾಟಗಳು, ಚಳುವಳಿಯ ಮೂಲಕ ಅನೇಕ ಚಿಂತಕರು ಸಮಾಜದಲ್ಲಿನ ಅಸಮಾನತೆ, ಶೋಷಣೆಗಳ ವಿರುದ್ಧ ಪ್ರತಿಭಟಿಸಿರುವುದನ್ನು ಕಾಣುತ್ತೇವೆ. ಅದೇ ಕಾಲಕ್ಕೆ ಮಹಿಳಾ ಚಳುವಳಿಯು ತನ್ನ ಅಸ್ತಿತ್ವವನ್ನು ಆರಂಭ ಮಾಡಿದ್ದನ್ನೂ ಸಹ ಕಾಣಬಹುದು. ಸ್ತ್ರೀವಾದಿ ಚಿಂತಕಿಯರು ಎಪ್ಪತ್ತರ ದಶಕದಲ್ಲಿ ಮಹಿಳಾ ವಿಮೋಚನೆಗಾಗಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು. ಸ್ತ್ರೀವಾದಿ ಸಾಹಿತ್ಯವು ಪುರುಷ ಪ್ರಧಾನ ಸಮಾಜವು ಮಹಿಳೆಯರ ಮೇಲೆ ನಡೆಸುತ್ತಿದ್ದ ಶೋಷಣೆ, ಲೈಂಗಿಕ ದೌರ್ಜನ್ಯ, ಲಿಂಗ ತಾರತಮ್ಯ ಇವುಗಳನ್ನು ಪ್ರತಿಭಟಿಸುವ ಸಲುವಾಗಿಯೇ ರಚನೆಯಾದವು. ಇದೇ ಸಂದರ್ಭದಲ್ಲಿ ಸೃಜನಶೀಲ ಸಾಹಿತ್ಯವಾದ ಕಥೆ, ಕಾದಂಬರಿ, ನಾಟಕ ಇವುಗಳ ಮೂಲಕ ಯಜಮಾನ್ಯ ಸಂಸ್ಕೃತಿಯ ವಿರುದ್ಧ ಪ್ರತಿರೋಧವನ್ನು ಅಭಿವ್ಯಕ್ತಿಸಿರುವುದು ಕಾಣಬಹುದು. ಬಹುಮುಖ್ಯವಾಗಿ ಮಹಿಳೆಯರ ಸಮಸ್ಯೆಗಳನ್ನು ಮತ್ತು ಅವುಗಳನ್ನು ಮಹಿಳೆ ಹೇಗೆ ಧಿಕ್ಕರಿಸಿ ಪುರುಷ ಪ್ರಧಾನ ಸಮಾಜದ ಸಾರ್ವತ್ರಿಕ ಕಟ್ಟಳೆಗಳಾದ ದೇವರು, ಧರ್ಮ, ಸಂಪ್ರದಾಯ ಆಚರಣೆಗಳನ್ನು ಮುರಿಯುವ ಪ್ರಯತ್ನವನ್ನು ಅಲ್ಲಿಯ ಮುಖ್ಯ ಪಾತ್ರಗಳ ಮೂಲಕ ಚಿತ್ರಿಸಲಾಗಿದೆ. ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಿಂದ ಪುರುಷ ಪ್ರಧಾನ ಕುಟುಂಬ ವ್ಯವಸ್ಥೆಗೆ ಬದಲಾದಾಗಿನಿಂದ ಮಹಿಳೆಯನ್ನು ಭೋಗದ ವಸ್ತು, ಪುರುಷನ ಸೇವೆಗೆ ಮಾತ್ರ ಸೀಮಿತವಾದವಳು ಎನ್ನುವಂತಹ ಅಧೀನ ನೆಲೆಯಲ್ಲಿಯೇ ಮಹಿಳೆಯನ್ನು ನೋಡಲಾಗಿದೆ. ಮನುಧರ್ಮಶಾಸ್ತ್ರವು ಹೇಳಿರುವಂತೆ ಸ್ತ್ರೀ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂಬುದನ್ನು ಚಾಚೂ ತಪ್ಪದೆ ಈ ಸಮಾಜವು ಪಾಲಿಸಿಕೊಂಡೇ ಬಂದಿದೆ. ಹೀಗಾಗಿ ಹಿಂದಿನಿಂದಲೂ ಮಹಿಳೆಯನ್ನು ಶಿಕ್ಷಣದಿಂದ ವಂಚಿತಳನ್ನಾಗಿ ಮಾಡಲಾಯಿತು. ಎಲ್ಲದರ ವಿರುದ್ಧ ಮಹಿಳಾ ವಿಚಾರ ಸಾಹಿತ್ಯವು ಪ್ರತಿಭಟಿಸುತ್ತಾ ಪರ್ಯಾಯ ಮಾರ್ಗವನ್ನು ಹುಡುಕಿಕೊಳ್ಳುವ ಮತ್ತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡಿದೆ.
ಸಮಕಾಲೀನ ಸಂದರ್ಭದಲ್ಲಿ ಕೋಮುವಾದ ಮತ್ತು ಮೂಲಭೂತವಾದವು ಉತ್ತುಂಗದ ಸ್ಥಿತಿಯನ್ನು ತಲುಪುತ್ತಿದೆ. ಇದರ ಭಾಗವಾಗಿ ಮಂದಿರ, ಮಸೀದಿ, ಚರ್ಚುಗಳ ಮೇಲೆ ಧ್ವಂಸ ಕೃತ್ಯಗಳನ್ನು ನಡೆಸುವ ಮಾದರಿಗಳು ನಮ್ಮ ಮುಂದಿವೆ. ಧರ್ಮ ಮತ್ತು ಧಾರ್ಮಿಕತೆಯ ನೆಪವೊಡ್ಡಿ ದಲಿತರು, ಮಹಿಳೆಯರು ಮತ್ತು ದಮನಿತರ ಬದುಕಿನ ಮೇಲೆ ಆಕ್ರಮಣಗಳು ನಡೆಯುತ್ತಿವೆ. ಈ ಎಲ್ಲಾ ಕುತಂತ್ರಗಳ ಹಿಂದೆ ವೈದಿಕಶಾಹಿಯ ಪ್ರಭಾವವಿರುವುದು ಸ್ಪಷ್ಟವಾಗುತ್ತದೆ.

Read More »

ಸಾಮಾಜಿಕ ಮಾಧ್ಯಮಗಳಲ್ಲಿ ಮಂಗಳೂರು ಕನ್ನಡ, ಅರೆಭಾಷೆ ಮತ್ತು ಹವ್ಯಕ ಭಾಷೆಯ ಅಸ್ಮಿತೆ: ಸಮಾಜೋಭಾಷಿಕ ಅಧ್ಯಯನ

ಲಾವಣ್ಯ ಸಿ.ಪಿ.

154 to 165

ಕನ್ನಡದ ಪ್ರಾದೇಶಿಕ ವೈವಿಧ್ಯತೆಯನ್ನು ಸಾರುವ ಮಂಗಳೂರು ಕನ್ನಡ, ಅರೆಭಾಷೆ ಮತ್ತು ಹವ್ಯಕ ಭಾಷೆಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗತಿಕ ಮನ್ನಣೆ ಪಡೆಯುತ್ತಿವೆ. ಹಿಂದೆ ಕೇವಲ ಮನೆಮಾತಿಗೆ ಸೀಮಿತವಾಗಿದ್ದ ಈ ಉಪಭಾಷೆಗಳು, ಇಂದಿನ ಡಿಜಿಟಲ್ ಯುಗದಲ್ಲಿ ರೀಲ್ಸ್, ವ್ಲಾಗ್ ಮತ್ತು ಹಾಸ್ಯ ವೀಡಿಯೋಗಳ ಮೂಲಕ ಹೊಸ ಅಸ್ಮಿತೆಯನ್ನು ಕಂಡುಕೊಂಡಿವೆ. ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗಳಂತಹ ವೇದಿಕೆಗಳು ಯುವಜನತೆಯಲ್ಲಿ ಭಾಷಾಭಿಮಾನವನ್ನು ಹೆಚ್ಚಿಸಿ, ಕೀಳರಿಮೆಯನ್ನು ಹೋಗಲಾಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ತಂತ್ರಜ್ಞಾನವು ಕೇವಲ ಮನರಂಜನೆಗೆ ಮಾತ್ರವಲ್ಲದೆ, ದೇಸೀ ಸಂಸ್ಕೃತಿ ಮತ್ತು ಭಾಷಾ ಸಂರಕ್ಷಣೆಗೆ ಹೇಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಇಲ್ಲಿ ಸಮಾಜೋಭಾಷಿಕ ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ಆಧುನಿಕ ಮಾಧ್ಯಮಗಳು ಪ್ರಾದೇಶಿಕ ಭಾಷೆಗಳ ಉಳಿವಿಗೆ ಮತ್ತು ಜಾಗತೀಕರಣಕ್ಕೆ ನೀಡುತ್ತಿರುವ ಕೊಡುಗೆಯನ್ನು ಈ ಅಧ್ಯಯನವು ಗುರುತಿಸುತ್ತದೆ.

Read More »

ಭಟ್ಟನ ಕನಸು ಮತ್ತು ಇತರ ಕಥೆಗಳು ಎಂಬ ಕಥಾ ಸಂಕಲನದಲ್ಲಿ ಮೂಡಿಬಂದ ನೈತಿಕ ಮೌಲ್ಯಗಳು

ಪೂರ್ಣಿಮಾ ನಾಗನಾಥರಾವ್

166 to 172

‘ಭಟ್ಟನ ಕನಸು ಮತ್ತು ಇತರ ಕಥೆಗಳು’ ಎಂಬ ಬಿ. ಟಿ. ಲಲಿತಾ ನಾಯಕ ಅವರ ಕಥಾ ಸಂಕಲನವು ನೈತಿಕ ಮೌಲ್ಯಗಳು, ಮಾನವೀಯ ಬದ್ಧತೆ, ಸನ್ಮೂಲ್ಯಗಳ ಸಂರಕ್ಷಣೆ ಹಾಗೂ ಸಮಾಜಮುಖಿ ಜಾಗೃತಿಯನ್ನು ಕೇಂದ್ರಬಿಂದುವಾಗಿಟ್ಟುಕೊಂಡಿದೆ. ಈ ಸಂಕಲನದಲ್ಲಿನ ಕಥೆಗಳು ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರಿಗೂ ಹತ್ತಿರವಾಗುವಂತೆ ಸರಳ ನಿರೂಪಣಾಶೈಲಿ, ಸ್ಪಷ್ಟ ಚಿತ್ರಣ, ಸಂವೇದನಾತ್ಮಕ ಅನುಭವ ಹಾಗೂ ಬಾಳಿನ ನೈಜ ಸಂದರ್ಭಗಳನ್ನು ಒಳಗೊಂಡಿವೆ. ವಿಶೇಷವಾಗಿ ಮಕ್ಕಳ ಕಥೆಗಳ ಮೂಲಕ ಲೇಖಕಿ ಸಮಾಜದಲ್ಲಿನ ಭೇದ–ಭಾವ, ಅಹಂಕಾರ, ಆಸೆ, ವಂಚನೆ, ಹೊಟ್ಟೆಕಿಚ್ಚು, ದುರಾಸೆ ಮುಂತಾದ ಮಾನವೀಯ ದುರ್ಗುಣಗಳನ್ನು ಪ್ರಾಣಿಗಳು, ಪಕ್ಷಿಗಳು, ರಾಜಕುಮಾರರು–ಕುಮಾರಿಯರು ಮತ್ತು ಸಾಮಾನ್ಯ ಜನರ ಜೀವನದ ಮೂಲಕ ಕಲಾತ್ಮಕವಾಗಿ ನಿರೂಪಿಸಿದ್ದಾರೆ.
‘ವಂಚನೆಯ ಫಲ’, ‘ಮಾತನಾಡುವ ಕೋಣ’, ‘ಭಟ್ಟನ ಕನಸು’, ‘ನರಿ ಮತ್ತು ಪಾರಿವಾಳ’, ‘ಕಟಪ ನರಿ’, ‘ಕಾಗೆಯ ಸಬೂಬ’, ‘ಉಪಕಾರದ ಫಲ’, ‘ರಂಗನ ಸುಳ್ಳು ಸಿಂಗನ ಸಮರ್ಥನೆ’, ‘ಹೋಳಿಗೆ ತುಪ್ಪ’ ಮುಂತಾದ ಕಥೆಗಳ ಮೂಲಕ ಮನುಷ್ಯನ ಅಹಂಕಾರ, ದುರಾಸೆ, ಜಿಪುಣತನ, ಸ್ವಾರ್ಥ, ಜಾತಿ–ಭೇದ, ದ್ರೋಹ ಮತ್ತಿತರ ದುರ್ಬಲತೆಗಳು ಅಂತಿಮವಾಗಿ ಅಪಮಾನ, ಅಪಾಯ ಅಥವಾ ನಾಶಕ್ಕೆ ಕಾರಣವಾಗುತ್ತವೆ ಎಂಬ ನೈತಿಕ ಪಾಠವನ್ನು ಲೇಖಕಿ ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ. ಜೊತೆಗೆ ಕಾರ್ಮಿಕರು, ರೈತರು, ಸ್ತ್ರೀಯರು ಮತ್ತು ಸಾಮಾನ್ಯ ಜನರ ಬದುಕಿನ ನೋವು, ಹೋರಾಟ, ಕನಸು ಮತ್ತು ಬದ್ಧತೆಯನ್ನು ಆಳವಾಗಿ ವ್ಯಕ್ತಪಡಿಸಿದ್ದಾರೆ.
ಈ ಸಂಕಲನದ ಮೂಲಕ ಬೆಳೆಯುತ್ತಿರುವ ಮಕ್ಕಳಲ್ಲಿ ಸಹಾನುಭೂತಿ, ಮನುಷ್ಯಪ್ರೇಮ, ಕೃತಜ್ಞತೆ, ಪ್ರಾಮಾಣಿಕತೆ, ಜವಾಬ್ದಾರಿ ಹಾಗೂ ಸಮಾಜಮುಖಿ ಬದುಕೆಂಬ ಮೌಲ್ಯಗಳನ್ನು ಬೆಳೆಸುವ ಉದ್ದೇಶ ಸ್ಪಷ್ಟವಾಗಿ ಗೋಚರಿಸುತ್ತದೆ. ಇದರಿಂದಲೇ ಕಥೆಗಳು ಮನರಂಜನೆಯ ಮಾಧ್ಯಮವಾಗಿರುವುದರ ಜೊತೆಗೆ ಬಾಲಮನದಲ್ಲಿ ನೈತಿಕ ಸಿದ್ಧಾಂತ ಮತ್ತು ಶಿಸ್ತನ್ನು ಬಿತ್ತುವ ಪರಿಣಾಮಕಾರಿ ಶೈಕ್ಷಣಿಕ ಸಂಪನ್ಮೂಲವಾಗುತ್ತವೆ. ಆದ್ದರಿಂದ ಈ ಕಥಾ ಸಂಕಲನವು ಲಲಿತಾ ನಾಯಕರ ಸಮಾಜಪರ ದೃಷ್ಟಿಕೋನವನ್ನು ಪ್ರತಿಬಿಂಬಿಸುವುದರೊಂದಿಗೆ ಕನ್ನಡ ಮಕ್ಕಳ ಸಾಹಿತ್ಯಕ್ಕೆ ಸಮೃದ್ಧ ಕೊಡುಗೆಯಾಗಿದೆ ಎಂದು ಹೇಳಬಹುದು.

 

Read More »

ಕಾದಂಬರಿ ಆಧಾರಿತ ಕನ್ನಡ ಸಿನಿಮಾಗಳ ಪ್ರಸ್ತುತತೆ

ಮಮತ ಎಂ.

173 to 179

ಕನ್ನಡ ಸಾಹಿತ್ಯ ಮತ್ತು ಕನ್ನಡ ಚಿತ್ರರಂಗದ ನಡುವಿನ ಸಂಬಂಧವು ಅತ್ಯಂತ ದೀರ್ಘ ಇತಿಹಾಸವನ್ನು ಹೊಂದಿದೆ. ವಿಶೇಷವಾಗಿ ಕಾದಂಬರಿಗಳನ್ನು ಆಧಾರವಾಗಿ ತೆಗೆದುಕೊಂಡು ನಿರ್ಮಿಸಲಾದ ಸಿನಿಮಾಗಳು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಮೌಲ್ಯಗಳನ್ನು ಜನಸಾಮಾನ್ಯರ ಬಳಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸಿವೆ. ಈ ಲೇಖನವು ಕಾದಂಬರಿ ಆಧಾರಿತ ಕನ್ನಡ ಸಿನಿಮಾಗಳ ಉದಯ, ಬೆಳವಣಿಗೆ ಹಾಗೂ ಇಂದಿನ ಪ್ರಸ್ತುತತೆಯನ್ನು ವಿಶ್ಲೇಷಿಸುವ ಪ್ರಯತ್ನವಾಗಿದೆ. ಆರಂಭದ ಕಾಲಘಟ್ಟದಿಂದ ಇಂದಿನ ಸಮಕಾಲೀನ ಚಿತ್ರರಂಗದವರೆಗೆ ಕಾದಂಬರಿ ಆಧಾರಿತ ಸಿನಿಮಾಗಳು ಹೇಗೆ ಸಾಮಾಜಿಕ ಬದಲಾವಣೆಯ ಸಾಧನಗಳಾಗಿ ರೂಪುಗೊಂಡಿವೆ ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.

Read More »