Aksharasurya Journal is a premier, multidisciplinary, and multilingual academic publication dedicated to disseminating high-quality research and intellectual discourse. As a peer-reviewed, open-access, and monthly journal, we are committed to bridging the gap between diverse domains of knowledge and linguistic traditions.

The name Aksharasurya symbolizes the illumination of knowledge through the written word. We serve as a vibrant platform for researchers, academicians, and practitioners worldwide to publish original research, critical reviews, and scholarly articles.

Aims and Scope

The journal aims to foster an inclusive academic ecosystem that encourages interdisciplinary collaboration. We welcome submissions from a broad spectrum of disciplines, including but not limited to:

  • Humanities & Social Sciences: Law, History, Sociology, Political Science, Philosophy, and Literature.
  • Indian Knowledge Systems (IKS): Traditional knowledge frameworks, manuscripts, and inscriptions.
  • Commerce & Management: Economics, Business Strategies, and Finance.

Journal Particular

Title

AKSHARASURYA JOURNAL

Frequency

Monthly

ISSN

2583-620X

Publisher Name

Dr. Mahesh M.

Publisher Address

Head Office:

Maddenahatti Village, G. Bhommanahalli Post, Devalapura Hobli, Nagamangala Taluk, Mandya District-571425

Reginal Office:

'Sri Kalleshwara Nilaya', No. 55, 2nd Cross, Andrahalli, Near ABBS College, Bengaluru-560 093.

Starting Year

2022

Subject

Multidisciplinary

Language

Multilingual

Publication Format

Online

E-Mail ID

editor@aksharasurya.com

Mobile Number

9008588133

 

ಲೇಖನಗಳ ಆಹ್ವಾನ: ಮುಂದಿನ ಸಂಚಿಕೆಗಾಗಿ ನಿಮ್ಮ ಸಂಶೋಧನಾ ಪ್ರಬಂಧಗಳನ್ನು ಸಲ್ಲಿಸಿ

2026-03-30

ಅಕ್ಷರಸೂರ್ಯ ಜರ್ನಲ್‌ನ ಮುಂಬರುವ ಸಂಚಿಕೆಗಾಗಿ ಬಹುಭಾಷಾ ಸಂಶೋಧನಾ ಲೇಖನಗಳನ್ನು ಆಹ್ವಾನಿಸಲಾಗುತ್ತಿದೆ. ಮುಂದಿನ ತಿಂಗಳ ಸಂಚಿಕೆಯಲ್ಲಿ ಪ್ರಕಟಗೊಳ್ಳಲು, ಈ ತಿಂಗಳ 20ನೇ ತಾರೀಖಿನೊಳಗೆ ನಿಮ್ಮ ಲೇಖನಗಳನ್ನು ಸಲ್ಲಿಸಿ. ಮಾರ್ಗಸೂಚಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Vol. 18 No. 01 (2026): ಕನ್ನಡ ಸಾಹಿತ್ಯ ಮತ್ತು ರಂಗಭೂಮಿ

Published: 2026-09-10

Table of Contents

Table of Contents

I to XIII

ಕನ್ನಡ ರಂಗಭೂಮಿ ಪರಂಪರೆ ಮತ್ತು ಆಧುನಿಕತೆ

ಡಾ. ಜ್ಯೋತಿಪ್ರಿಯಾ

01 to 07

ಕನ್ನಡ ರಂಗಭೂಮಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಒಂದು ಭಾಗ. ಕನ್ನಡ ನಾಡಿನ ಜನಪದ ಕಲೆಗಳು, ಯಕ್ಷಗಾನ, ಬಯಲಾಟ, ದೊಡ್ಡಾಟ, ಸಣ್ಣಾಟ, ತಾಳಮದ್ದಲೆ ಮುಂತಾದ ಕಲಾ ಪ್ರಕಾರಗಳು ಕನ್ನಡ ರಂಗಭೂಮಿಯ ಬೆಳವಣಿಗೆಗೆ ಭದ್ರವಾದ ಅಡಿಪಾಯವನ್ನು ನಿರ್ಮಿಸಿವೆ. ಕಾಲಕ್ರಮೇಣ ಪಾಶ್ಚಾತ್ಯ ರಂಗಭೂಮಿಯ ಪ್ರಭಾವ, ಹೊಸ ತಂತ್ರಜ್ಞಾನ, ಹೊಸ ನಾಟಕಕಾರರು ಮತ್ತು ನಿರ್ದೇಶಕರ ಪ್ರಯೋಗಗಳಿಂದ ಕನ್ನಡ ರಂಗಭೂಮಿಯ ಆಧುನಿಕ ರೂಪವನ್ನು ಪಡೆದುಕೊಂಡಿದೆ. 19ನೆಯ ಶತಮಾನದ ಕೊನೆಯ ಸುಮಾರಿಗೆ ಆಧುನಿಕ ಕನ್ನಡ ರಂಗಭೂಮಿ ಅಸ್ತಿತ್ವದಲ್ಲಿ ಬಂದರೂ ಕನ್ನಡದಲ್ಲಿ ನಾಟಕ ಸಾಹಿತ್ಯ ರಚನೆಯಾಗಿರಲಿಲ್ಲ. ಕನ್ನಡದ ಆರಂಭಕಾಲದ ನಾಟಕಗಳು ಇತರ ಭಾಷೆಗಳ ಹಾಗೂ ಕಂಪನಿಗಳ ಅನುವಾದಿತ ನಾಟಕಗಳಾಗಿದ್ದವು. ಜಾನಪದ ಪರಂಪರೆಗೆ ಅನುಗುಣವಾಗಿ ಪುರಾಣದ ವಸ್ತುಗಳನ್ನು ಒಳಗೊಂಡ ನಾಟಕಗಳು ರಚಿತವಾದವು. ಸಂಸ್ಕೃತ ಭಾಷೆಯ ಕಾಳಿದಾಸ, ಭವಭೂತಿ, ಭಟ್ಟನಾರಾಯಣ ಮೊದಲಾದ ನಾಟಕಕಾರರ ಕೃತಿಗಳು ಕನ್ನಡಕ್ಕೆ ಅನುವಾದಗೊಂಡವು. ಮೈಸೂರಿನಲ್ಲಿ ರಾಜರ ಪ್ರೋತ್ಸಾಹದಿಂದ ಸಂಸ್ಕೃತ ನಾಟಕಗಳ ಅನುವಾದದ ಜೊತೆಗೆ, ರಂಗಭೂಮಿಯ ಪ್ರದರ್ಶನಗಳು ಪ್ರಾರಂಭಗೊಂಡವು. ಸಂಸ್ಕೃತ ನಾಟಕಗಳ ಅನುವಾದಗಳಿಂದ ಆಧುನಿಕ ನಾಟಕ ಸಾಹಿತ್ಯವು ಪ್ರಾರಂಭವಾಯಿತು. ಸಂಸ್ಕೃತದ ‘ಶಾಕುಂತಲ’ ಮತ್ತು ‘ರತ್ನಾವಳಿ’ ನಾಟಕಗಳು ಕನ್ನಡಕ್ಕೆ ಅನುವಾದಗೊಂಡವು. ಚುರಮರಿ ಶೇಷಗಿರಿರಾಯರು ‘ಶಾಕುಂತಲ’ ನಾಟಕವನ್ನು, ಬಸವಪ್ಪ ಶಾಸ್ತ್ರಿಗಳು ‘ಶಾಕುಂತಲ’ ಹಾಗೂ ‘ರತ್ನಾವಳಿ’ ನಾಟಕವನ್ನು ಕನ್ನಡಕ್ಕೆ ಭಾಷಾಂತರಿಸಿದರು. ಇವು ರಂಗದ ಮೇಲೆ ಪ್ರದರ್ಶನವನ್ನು ಕಂಡವು. ಇದು ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಒಂದು ಮಹತ್ವದ ಹೆಜ್ಜೆಯಾಯಿತು. ನಂತರ ವೃತ್ತಿ ನಾಟಕ ಕಂಪನಿಗಳು ಪ್ರಾರಂಭಗೊಂಡವು. ಪೌರಾಣಿಕ ನಾಟಕಗಳು, ಸಾಮಾಜಿಕ ನಾಟಕಗಳು ರಂಗಭೂಮಿಯನ್ನು ಪ್ರವೇಶಿಸಿದವು. ವಿವಿಧ ನಾಟಕ ಕಂಪನಿಗಳು ರಂಗಭೂಮಿಯಲ್ಲಿ ಮಹತ್ವದ ಪಾತ್ರವನ್ನು ಬೀರಿದವು. ಆಧುನಿಕ ಸಂದರ್ಭದಲ್ಲಿ ವೃತ್ತಿ ರಂಗಭೂಮಿಯು ನಾಟಕಗಳ ಪ್ರದರ್ಶನದಲ್ಲಿ ಅನೇಕ ಮಾರ್ಪಾಡುಗಳನ್ನು ತಂದಿತು. ಹವ್ಯಾಸಿ ರಂಗಭೂಮಿಯು ರಂಗಭೂಮಿಗೆ ಆಧುನಿಕತೆಯ ಸ್ಪರ್ಶವನ್ನು ನೀಡಿತು. ಹೊಸ ತಂತ್ರಜ್ಞಾನ, ನಿರ್ದೇಶನದ ತಂತ್ರಗಾರಿಕೆ, ವಿನೂತನ ಶೈಲಿ, ಸಂವಹನ ಮಾಧ್ಯಮಗಳ ಬಳಕೆ ಇಂದು ರಂಗಭೂಮಿಯಲ್ಲಿ ಅನೇಕ ಮಾರ್ಪಾಡುಗಳನ್ನು ತಂದಿದೆ. ಪಾಶ್ಚಾತ್ಯ ರಂಗಭೂಮಿಯ ಪ್ರಭಾವ ಬಹಳ ಮಟ್ಟಿಗೆ ನಾಟಕ ಪ್ರದರ್ಶನದ ಜೊತೆಗೆ ರಂಗಭೂಮಿಯಲ್ಲಿ ಹೊಸ ಹೆಜ್ಜೆಯನ್ನು ಇಡುತ್ತಾ ಮುಂದೆ ಸಾಗಿದೆ.

Read More »

ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಮಾಧ್ಯಮ: ಪರಿವರ್ತನೆ, ಪ್ರಭಾವ ಮತ್ತು ಸಮ್ಮಿಲನ

ರೇಣುತಾಕ್ಷಿ

08 to 17

ಕನ್ನಡದ ಸಾಂಸ್ಕೃತಿಕ ಪರಂಪರೆಯಲ್ಲಿ ರಂಗಭೂಮಿ ಮತ್ತು ಚಲನಚಿತ್ರ ಮಾಧ್ಯಮಗಳು ಅತ್ಯಂತ ಪ್ರಭಾವಶಾಲಿ ದೃಶ್ಯ-ಶ್ರಾವ್ಯ ಮಾಧ್ಯಮಗಳಾಗಿ ಕಾರ್ಯನಿರ್ವಹಿಸಿವೆ. 19ನೇ ಶತಮಾನದ ಉತ್ತರಾರ್ಧದಲ್ಲಿ ವೃತ್ತಿ ರಂಗಭೂಮಿಯಿಂದ ಆರಂಭಗೊಂಡು ನಂತರದ ಶ್ರೇಷ್ಠ ಹವ್ಯಾಸಿ ರಂಗಭೂಮಿ ಚಳವಳಿಯವರೆಗೆ ಕನ್ನಡ ರಂಗಕ್ಷೇತ್ರವು ಸಾಮಾಜಿಕ, ರಾಜಕೀಯ ಮತ್ತು ವೈಚಾರಿಕ ಜಾಗೃತಿಗೆ ಪ್ರಮುಖ ವೇದಿಕೆಯಾಯಿತು. 1934ರ ‘ಸತಿ ಸುಲೋಚನ’ ಚಿತ್ರದೊಂದಿಗೆ ಆರಂಭವಾದ ಕನ್ನಡ ಚಿತ್ರರಂಗವು ತನ್ನ ಆರಂಭಿಕ ದಿನಗಳಲ್ಲಿ ರಂಗಭೂಮಿಯ ಕಥೆಗಳು, ನಟರು, ತಂತ್ರಜ್ಞರು ಮತ್ತು ರಂಗಶೈಲಿಯನ್ನೇ ನೆಚ್ಚಿಕೊಂಡಿತ್ತು. ಈ ಸಂಶೋಧನಾ ಪ್ರಬಂಧವು ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಮಾಧ್ಯಮಗಳ ನಡುವಿನ ಪರಸ್ಪರ ಸಂಬಂಧ, ಸಮ್ಮಿಲನ ಮತ್ತು ಅವುಗಳು ಕಾಲಘಟ್ಟಕ್ಕೆ ತಕ್ಕಂತೆ ರೂಪಿಸಿಕೊಂಡ ಸ್ವತಂತ್ರ ಮಾಧ್ಯಮ ಭಾಷೆಯನ್ನು ವಿಶ್ಲೇಷಿಸುತ್ತದೆ.
ವೃತ್ತಿ ರಂಗಭೂಮಿಯ ಗುಬ್ಬಿ ವೀರಣ್ಣ ಕಂಪನಿಯಂತಹ ಸಂಸ್ಥೆಗಳು ಸಿನಿಮಾ ಮಾಧ್ಯಮಕ್ಕೆ ನೀಡಿದ ಕೊಡುಗೆ ಅಪಾರ. ಡಾ| ರಾಜ್‌ಕುಮಾರ್, ಜಿ.ವಿ. ಅಯ್ಯರ್, ಮಾಸ್ಟರ್ ಹಿರಣ್ಣಯ್ಯ ಅವರಂತಹ ಪ್ರಮುಖ ನಟ-ನಿರ್ದೇಶಕರು ರಂಗಭೂಮಿಯಿಂದ ಬೆಳೆದು ಚಿತ್ರರಂಗವನ್ನು ಸಮೃದ್ಧಗೊಳಿಸಿದರು. 1970ರ ದಶಕದ ‘ನವ್ಯ’ ಸಾಹಿತ್ಯ ಚಳವಳಿಯ ಪ್ರಭಾವದಿಂದ ಜನ್ಮತಾಳಿದ ‘ಸಮಾಂತರ ಸಿನಿಮಾ’ (ಅಲೆಮಾರಿ/ ಪ್ರಾಯೋಗಿಕ ಚಿತ್ರಗಳು) ರಂಗಭೂಮಿ ಮತ್ತು ಸಿನಿಮಾವನ್ನು ಮತ್ತಷ್ಟು ಹತ್ತಿರಕ್ಕೆ ತಂದಿತು. ಬಿ.ವಿ.ಕಾರಂತ, ಗಿರೀಶ್ ಕಾರ್ನಾಡ್, ಯು.ಆರ್. ಅನಂತಮೂರ್ತಿ, ಕೆ.ವಿ. ಸುಬ್ಬಣ್ಣ ಅವರಂತಹ ದಿಗ್ಗಜರು ಹವ್ಯಾಸಿ ರಂಗಭೂಮಿಯ ಸೌಂದರ್ಯಮೀಮಾಂಸೆಯನ್ನು ಬೆಳ್ಳಿಪರದೆಗೆ ಯಶಸ್ವಿಯಾಗಿ ಅಳವಡಿಸಿದರು.

Read More »

ಆಧುನಿಕ ಕನ್ನಡ ನಾಟಕ ಸಾಹಿತ್ಯದಲ್ಲಿ ಸಾಮಾಜಿಕತೆ

ಡಾ. ಉಷಾ

18 to 25

ಆಧುನಿಕ ಕನ್ನಡ ನಾಟಕ ಪರಂಪರೆಯು ಪೌರಾಣಿಕ ಮತ್ತು ಐತಿಹಾಸಿಕ ಕಥಾವಸ್ತುಗಳಿಂದ ಹೊರಬಂದು, ಸಮಕಾಲೀನ ವಾಸ್ತವ ಹಾಗೂ ಮಧ್ಯಮ ವರ್ಗದ ಬದುಕನ್ನು ರಂಗಭೂಮಿಯ ಮೇಲೆ ತರುವ ಮೂಲಕ ಹೊಸ ಆಯಾಮವನ್ನು ಪಡೆದುಕೊಂಡಿತು. ಇಂಗ್ಲಿಷ್ ಪ್ರಭಾವ ಹಾಗೂ ಆರಂಭಿಕ ಪ್ರಹಸನಗಳ ನಂತರ, ಟಿ.ಪಿ. ಕೈಲಾಸಂ ಮತ್ತು ಶ್ರೀರಂಗರು ಸಾಮಾಜಿಕ ನಾಟಕಗಳಿಗೆ ಭದ್ರ ಬುನಾದಿ ಹಾಕಿದರು. ಕೈಲಾಸಂ ಅವರು ತಮ್ಮ ‘ಟೊಳ್ಳು-ಗಟ್ಟಿ’ ಹಾಗೂ ‘ತಾಳಿ ಕಟ್ಟೋಕೂಲೀನೆ’ ಮುಂತಾದ ನಾಟಕಗಳಲ್ಲಿ ಹಾಸ್ಯದ ಮೂಲಕ ವರದಕ್ಷಿಣೆ, ಸ್ತ್ರೀ ಶೋಷಣೆ ಹಾಗೂ ಪೊಳ್ಳು ಶಿಕ್ಷಣ ವ್ಯವಸ್ಥೆಯನ್ನು ಪ್ರಶ್ನಿಸಿದರು. ಮತ್ತೊಂದೆಡೆ, ಶ್ರೀರಂಗರು ‘ಹರಿಜನವಾರ’ ಮತ್ತು ‘ಸಂಧ್ಯಾಕಾಲ’ದಂತಹ ಕೃತಿಗಳ ಮೂಲಕ ಮೌಢ್ಯ, ಅಸ್ಪೃಶ್ಯತೆ ಹಾಗೂ ಸನಾತನವಾದಿ ನಂಬಿಕೆಗಳ ವಿರುದ್ಧದ ಸಂಘರ್ಷವನ್ನು ಕಟ್ಟಿಕೊಟ್ಟರು. ಕೇವಲ ಮನರಂಜನೆಯ ಸಾಧನವಾಗಿದ್ದ ನಾಟಕವು, ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಮಾನವೀಯತೆಯನ್ನು ಎಚ್ಚರಿಸುವ ಪ್ರಬಲ ಮಾಧ್ಯಮವಾಗಿ ರೂಪುಗೊಂಡ ಬಗೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

Read More »

ಕೋಟಿ ಚೆನ್ನಯ: ಎರಡು ನಾಟಕಗಳು-ಚಲನಚಿತ್ರ ಒಂದು ತುಲನಾತ್ಮಕ ಅಧ್ಯಯನ

ಪ್ರಶಾಂತಿ ಬಿ.

26 to 34

ಆಧುನಿಕ ಸೃಜನಶೀಲ ಸಾಹಿತ್ಯಗಳಾದ ಸಣ್ಣಕತೆ-ಕಾದಂಬರಿಗಳು ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟು ಪಡೆದರೂ ನಂತರ ತೊಂಬತ್ತರ ದಶಕದವರೆಗೆ ಅದು ನಿಂತ ನೀರಾಗಿತ್ತು. ಆದರೆ ತುಳು ರಂಗಭೂಮಿ ಸದಾ ಕ್ರಿಯಾಶೀಲವಾಗಿತ್ತು. ಹಲವು ನಾಟಕಕಾರರು, ಕಲಾವಿದರು ಗುರುತಿಸಿಕೊಳ್ಳತೊಡಗಿದರು. ತುಳು ನಾಟಕದ ಜನಪ್ರಿಯತೆ ತುಳು ಚಲನಚಿತ್ರಗಳನ್ನು ನಿರ್ಮಿಸಲೂ ಕಾರಣವಾಯಿತು.
ತುಳು ಜನಪದೀಯ ಕಥೆಯೊಂದನ್ನಾಧರಿಸಿ ರಚನೆಯಾಗಿ ರಂಗಪ್ರಯೋಗ ಕಂಡ ಮೊದಲ ಚಾರಿತ್ರಿಕ ನಾಟಕ ‘ಕೋಟಿ ಚೆನ್ನಯ’. ಹಾಗೆಯೇ ವಿಶುಕುಮಾರರ ನಿರ್ದೇಶನದಲ್ಲಿ ‘ಕೋಟಿ ಚೆನ್ನಯ’ ಸಿನೆಮಾ 1973ರಲ್ಲಿ ಬಿಡುಗಡೆಗೊಂಡಿತು. ಯಕ್ಷಗಾನದಲ್ಲಿ ಅದಾಗಲೇ ದೊಡ್ಡ ಮಟ್ಟದ ಕಲಾಪ್ರೇಮಿಗಳನ್ನು ಸೃಷ್ಟಿಸಿದ್ದ ಈ ಕಥೆಯು ನಾಟಕ ರಂಗ ಮತ್ತು ಚಿತ್ರರಂಗಗಳೆರಡರಲ್ಲೂ ಜಯಭೇರಿ ಕಂಡಿತು. ಜೊತೆಗೆ ಹತ್ತು ವರ್ಷಗಳ ನಂತರ ಸೀತಾನದಿ ಗಣಪಯ್ಯ ಶೆಟ್ಟಿ ಅವರಿಂದ ಇದೇ ಕಥೆ ಮತ್ತೆ ನಾಟಕ ರೂಪ ಪಡೆಯಿತು. ಇವು ಮೂರನ್ನು ತೌಲನಿಕ ಅಧ್ಯಯನಕ್ಕೆ ಒಳಪಡಿಸಿದ್ದೇನೆ.
ಜನಪದ ಸಿದ್ಧ ಕತೆಯೊಂದು ಇದ್ದರೂ ಸೃಜನಶೀಲ ಸಾಹಿತ್ಯಕ್ಕೆ ತರುವಾಗ ಅದರಲ್ಲಿನ ಒಳನೋಟಗಳು ಭಿನ್ನತೆಯನ್ನು ಪಡೆದುಕೊಳ್ಳುತ್ತವೆ. ಬರಹಗಾರನ ಬದುಕು, ಆ ಕಾಲಘಟ್ಟದ ರಾಜಕೀಯ-ಸಾಮಾಜಿಕ ಸಂಗತಿಗಳು, ಪ್ರಾದೇಶಿಕ ಅನನ್ಯತೆಗಳು ಬರಹದ ಮೇಲೆ ಬರಹಗಾರನಿಗೆ ಅರಿವಿಲ್ಲದೆಯೂ ಪ್ರಭಾವ ಬೀರಿರುತ್ತವೆ. ʼಕೋಟಿ ಚೆನ್ನಯʼ ಕಥೆಯು ತುಳುನಾಡಿನಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿರುವ ಬಿಲ್ಲವ ಸಮುದಾಯದ ಅಸ್ಮಿತೆಯ ಸಂಕೇತವಾಗಿ ಮೂಡಿ ಬಂದಿರುವಂತೆಯೇ ಹಿಂದಿನ ತುಳುನಾಡಿನಲ್ಲಿ ಆ ಸಮುದಾಯದ ಸಾಮಾಜಿಕ ಸ್ಥಿತಿಗತಿಗಳು ಬರಹಗಾರನ ಕಾಲಕ್ಕೆ-ಸಮಾಜಕ್ಕೆ ಪೂರಕವಾಗಿ ಅಭಿವ್ಯಕ್ತಗೊಳ್ಳುತ್ತಾ ಹೋಗುತ್ತವೆ. ಇದನ್ನು ಈ ಲೇಖನದಲ್ಲಿ ವಿಶ್ಲೇಷಿಸುವ ಪ್ರಯತ್ನವನ್ನು ಮಾಡಿದ್ದೇನೆ.

Read More »

ಶಿವರಾಮ ಕಾರಂತರ ಮುಕ್ತದ್ವಾರ - ಗೀತನಾಟಕ ಒಂದು ಅಧ್ಯಯನ

ಸೌಮ್ಯ ಹೊಳ್ಳ ಟಿ., ಡಾ. ರಾಜಶೇಖರ ಜಮದಂಡಿ

35 to 42

ಶಿವರಾಮ ಕಾರಂತರ ‘ಮುಕ್ತದ್ವಾರ’ ಕನ್ನಡ ಗೀತನಾಟಕ ಪರಂಪರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಕೃತಿಯಾಗಿದೆ. ಸಾಹಿತ್ಯ, ಸಂಗೀತ ಮತ್ತು ರಂಗಕಲೆಯ ಸಮನ್ವಯದಿಂದ ರೂಪುಗೊಂಡಿರುವ ಈ ಗೀತನಾಟಕವು ಮಾನವ ಜೀವನ, ಧರ್ಮ, ತತ್ವಚಿಂತನೆ ಹಾಗೂ ಮಾನವೀಯ ಮೌಲ್ಯಗಳನ್ನು ವಿಶಿಷ್ಟವಾಗಿ ನಿರೂಪಿಸುತ್ತದೆ. ಈ ಅಧ್ಯಯನವು ‘ಮುಕ್ತದ್ವಾರ’ ಗೀತನಾಟಕದ ವಸ್ತು, ರಚನಾ ವೈಶಿಷ್ಟ್ಯ, ಸಂಗೀತ ಮತ್ತು ರಂಗಪ್ರಯೋಗ, ಹಾಗೂ ಅದರಲ್ಲಿನ ತಾತ್ವಿಕ ಮತ್ತು ಸಾಮಾಜಿಕ ಆಶಯಗಳನ್ನು ವಿಶ್ಲೇಷಿಸುವ ಉದ್ದೇಶವನ್ನು ಹೊಂದಿದೆ. ಕಾರಂತರ ಗೀತನಾಟಕಗಳ ಬೆಳವಣಿಗೆಯಲ್ಲಿ ಯಕ್ಷಗಾನ, ಜನಪದ ರಂಗಭೂಮಿ, ಸಂಸ್ಕೃತ ರೂಪಕಗಳು ಮತ್ತು ಪಾಶ್ಚಾತ್ಯ ಒಪೆರಾ ಪರಂಪರೆಯ ಪ್ರಭಾವಗಳನ್ನು ಗುರುತಿಸಬಹುದಾಗಿದೆ.
ಮುಕ್ತದ್ವಾರದಲ್ಲಿ ಸೃಷ್ಟಿಪೂರ್ವದ ಶೂನ್ಯತೆಯಿಂದ ಆರಂಭಿಸಿ ವಿವಿಧ ಯುಗಗಳ ಮೂಲಕ ಮಾನವ ನಾಗರಿಕತೆಯ ಬೆಳವಣಿಗೆಯನ್ನು ಕಾಲಚಕ್ರದ ರೂಪಕದ ಮೂಲಕ ನಿರೂಪಿಸಲಾಗಿದೆ. ಉಪನಿಷತ್ ಯುಗ, ದ್ವಾಪರಯುಗ, ಬೌದ್ಧಯುಗ, ಏಸುಯುಗ ಹಾಗೂ ವಿಜ್ಞಾನಯುಗಗಳ ಸಂದರ್ಭದಲ್ಲಿ ಧರ್ಮ, ಕರ್ಮ, ಅಹಿಂಸೆ, ಪ್ರೀತಿ, ಕರುಣೆ, ಸತ್ಯ, ಶಾಂತಿ ಮತ್ತು ಮಾನವೀಯತೆಯಂತಹ ಮೌಲ್ಯಗಳನ್ನು ನಾಟಕ ಪರಿಶೀಲಿಸುತ್ತದೆ.

Read More »

ಯಕ್ಷಗಾನ ಮತ್ತು ಕನ್ನಡ ರಂಗಭೂಮಿಯ ಸಂಬಂಧ

ರಾಘವೇಂದ್ರ ತುಂಗ ಕೆ.

43 to 50

ಯಕ್ಷಗಾನ ಎಂಬ ಹೆಸರು ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ಅನೇಕ ದೇಶೀಯ ಸಾಂಪ್ರದಾಯಿಕ ರಂಗಕಲೆಗಳನ್ನು ಸೂಚಿಸುವ ಪದವಾದರೂ ನಮ್ಮ ನಾಡಿನಲ್ಲಿ, ಈಚಿನ ದಶಕಗಳಲ್ಲಿ ಯಕ್ಷಗಾನ ಎಂದರೆ ಕರಾವಳಿ ಹಾಗೂ ಮಲೆನಾಡಿನ ಪ್ರಾಂತದಲ್ಲಿ ಬೇರೂರಿ ಜನಜೀವನದಲ್ಲಿ ಹಾಸು - ಹೊಕ್ಕಾದ ‘ಪಡುವಲಪಾಯ’ ಎಂದು ಹೆಸರಾದ ರಂಗಕಲೆಯ ಪ್ರಭೇದವೆಂದೇ ಭಾವಿಸಲಾಗಿದೆ. ಇನ್ನು ‘ಮೂಡಲಪಾಯ’ ಎಂದು ಕರೆಸಿಕೊಳ್ಳುವ ಪ್ರಭೇದದಲ್ಲಿಯೂ ಬೇರೆ ಬೇರೆ ರಂಗಪ್ರಯೋಗಗಳನ್ನು ಕಾಣಲು ಸಾಧ್ಯ. ‘ಪಡುವಲಪಾಯ’ ಯಕ್ಷಗಾನ ವಲಯದಲ್ಲಿ ಅದರ ಶಾಸ್ತ್ರೀಯತೆಯ ಬಗೆಗೆ ಜಾನಪದೀಯತೆಯ ಬಗೆಗೆ ಸಾಕಷ್ಟು ಚರ್ಚೆಗಳೂ ಆಗಿವೆ. ಇದು ಸರ್ವಾಂಗ ಸಂಪನ್ನ ಶಾಸ್ತ್ರೀಯ ನಾಟ್ಯ -ನೃತ್ಯ ವಿಧಾನಗಳೆರಡರ ಪ್ರತಿನಿಧಿಯಾಗಿ ನಿಲ್ಲಲು ಬೇಕಾದ ಆಂತರಿಕ ಸಂಪನ್ಮೂಲವನ್ನು ಹೊಂದಿದ್ದು ಎಲ್ಲಾ ಸಮಸ್ಯೆಗಳ ನಡುವೆಯೂ ಸಾಕಷ್ಟು ಸತ್ವಪೂರ್ಣವಾಗಿದೆ. ನಾಡಿನ ಪ್ರಾತಿನಿಧಿಕ ಕಲೆಯಾಗಿ ನಿಲ್ಲಬಲ್ಲ ಶಕ್ತಿ ಇದಕ್ಕಿದೆ. ಪ್ರಯೋಗ ಮತ್ತು ನಾವೀನ್ಯತೆಗಳು ಎಂಥದ್ದೇ ಕಲೆಯ ಉಳಿವು ಬೆಳವುಗಳಿಗೆ ಅನಿವಾರ್ಯ “ಯಾವುದೇ ಕಲೆಯಲ್ಲಿ ಕಾಲೋಚಿತವಾಗಿ ಬದಲಾವಣೆಗಳನ್ನಾಗಲಿ, ಸುಧಾರಣೆಗಳನ್ನಾಗಲಿ, ನವೀನ ಪ್ರಯೋಗಗಳನ್ನಾಗಲಿ ತರುವುದರ ಬಗೆಗಿನ ಯುಕ್ತಾಯುಕ್ತತೆಗಳು ಆಯಾ ಕಲೆಗಳ ಪ್ರಬುದ್ಧತೆಯನ್ನು ಅವಲಂಬಿಸಿರುತ್ತವೆ. ಅಲ್ಲದೆ ಎಲ್ಲಾ ಪ್ರಬುದ್ಧ ಕಲೆಗಳಲ್ಲಿಯೂ - ಅಷ್ಟೇಕೆ, ಯಾವುದೇ ಒಂದು ದಿಟವಾದ ಕಲಾಪ್ರಕಾರದಲ್ಲೂ ಕೂಡ - ರೂಪ ಸ್ವರೂಪಗಳ (ಆಕೃತಿ - ಆಶಯಗಳ) ಏಕಭಾವ ಅಥವಾ ಐಕಾತ್ಮ್ಯವು ತುಂಬ ಉನ್ನತ ಮಟ್ಟದಲ್ಲಿರುವ ಕಾರಣ ಯಾವುದೇ ಬಗೆಯ ದುಡುಕುತನದ ‘ಸುಧಾರಣಾವಾದ’ ಅಥವಾ ‘ಪ್ರಯೋಗಶೀಲವಾದ’ ವಾಗಲಿ ಆಯಾ ಕಲಾಹೃದಯಗಳಿಗೆ ಘಾತಕವನ್ನುಂಟುಮಾಡದಿರದು” ಎಂಬ ಸೇಡಿಯಾಪು ಕೃಷ್ಣಭಟ್ಟರ ಮಾತು ಮುಖ್ಯವಾಗಿದೆ. ಯಾವುದೇ ಪ್ರಬುದ್ಧ ಕಲೆಯಲ್ಲಿ ಸುಧಾರಣೆ, ನಾವೀನ್ಯ, ಪ್ರಯೋಗಾದಿಗಳನ್ನು ಕೈಗೊಳ್ಳಬೇಕೆಂದರೆ ಸಹೃದಯರೂ, ಕಲಾವಿದರೂ ಆಯಾ ಕಲೆಯ ಆಧ್ಯಾತ್ಮ ನಿಷ್ಠೆಯನ್ನು ಗಮನಿಸಿಕೊಳ್ಳಲೇಬೇಕು. ಜೀವ-ಜಗತ್ತುಗಳ ಆಧ್ಯಾತ್ಮ ನಿಷ್ಠೆಯು ಬ್ರಹ್ಮದಲ್ಲಾದರೆ ಕಲೆಯ ಆಧ್ಯಾತ್ಮ ನಿಷ್ಠೆಯು ರಸದಲ್ಲಿದೆ. ಆದುದರಿಂದ ರಸನಿಷ್ಠೆಯಲ್ಲದ ಎಂಥ ಮುನ್ನಡೆಯೂ – ಅದನ್ನ ಯಾರೇ ಮಾಡಲಿ, ಹೇಗೋ ಮಾಡಲಿ ಅದು - ವ್ಯರ್ಥವ್ಯವಸ್ಥೆ ಆಗದೆ, ಆಯಾ ಕಲೆ ನಾಶಕ್ಕೂ ಕಾರಣವಾಗುವುದರಲ್ಲಿ ಸಂದೇಹವಿಲ್ಲ. ರಸವೆಂಬುದು ಬೋಧ-ಮೋದ ಅಖಂಡಾನುಭವ. ಏಕಕಾಲದಲ್ಲಿ ಭಾವ-ಬುದ್ಧಿಗಳ ಸಂಸ್ಕಾರ ಹಾಗೂ ಸತ್ವೋದ್ರೇಕಗಳಿಗೆ ಇಲ್ಲಿ ಪರಮಾವಕಾಶವಿದೆ. ಎನ್ನುವ ಆರ್. ಗಣೇಶ್ ಅವರ ಮಾತುಗಳು ಕೂಡ ಕಲೆ ಪರಿಷ್ಕರಣೆಗೆ ಒಳಗಾಗುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಇದು ಒಟ್ಟು ಕಲೆಯ ಪರಿಣಾಮಗಳನ್ನು ಶೋಧಿಸುವಂತಿದೆ. ಅಂತೆಯೇ ರಂಗಭೂಮಿ ಕೇವಲ ಮನರಂಜನೆಯ ಮಾಧ್ಯಮವಲ್ಲ ಅದು ಸಮಾಜದ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಶಕ್ತಿಯುತ ಮಾಧ್ಯಮವಾಗಿದೆ. ನಾಟಕ, ಬೀದಿ ನಾಟಕ, ಯಕ್ಷಗಾನ ಮುಂತಾದ ರಂಗರೂಪಗಳ ಮೂಲಕ ಸಾಮಾಜಿಕ ನ್ಯೂನತೆ ಅಸಮಾನತೆಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸಲಾಗಿದೆ.

Read More »

ಜನಪದ ರಂಗಭೂಮಿ ಮತ್ತು ಅದರ ಸಾಮಾಜಿಕ ಪ್ರಭಾವ

ಡಾ. ಸುಪ್ರಿಯಾ ಮಲಶೆಟ್ಟಿ

51 to 59

ಜನಪದ ರಂಗಭೂಮಿ ಜನಸಾಮಾನ್ಯರ ಜೀವನ, ಸಂಸ್ಕೃತಿ, ನಂಬಿಕೆ, ಆಚರಣೆ, ಸಂಪ್ರದಾಯ, ಅನುಭವ ಮತ್ತು ಸಮಸ್ಯೆಗಳನ್ನು ಆಧರಿಸಿದ ಸಾಂಪ್ರದಾಯಿಕ ಪ್ರದರ್ಶನ ಕಲೆಯಾಗಿದೆ. ಇದು ಗ್ರಾಮೀಣ ಜನಜೀವನದೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಮೌಖಿಕ ಪರಂಪರೆಯ ಮೂಲಕ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿದಿದೆ. ಕರ್ನಾಟಕದಲ್ಲಿ ಯಕ್ಷಗಾನ, ಬಯಲಾಟ, ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ಸೂತ್ರದ ಗೊಂಬೆಯಾಟ ಮತ್ತು ತೊಗಲುಗೊಂಬೆಯಾಟ ಪ್ರಮುಖ ಜನಪದ ರಂಗಕಲೆಗಳಾಗಿವೆ. ಸ್ಥಳೀಯ ಭಾಷೆ, ಸಂಗೀತ, ನೃತ್ಯ, ಹಾಸ್ಯ, ವ್ಯಂಗ್ಯ, ಸರಳ ರಂಗಸಜ್ಜಿಕೆ ಮತ್ತು ಸಾಮೂಹಿಕ ಭಾಗವಹಿಸುವಿಕೆ ಇದರ ಮುಖ್ಯ ಲಕ್ಷಣಗಳಾಗಿವೆ. 
ಕರ್ನಾಟಕದ ಜನಪದ ರಂಗಭೂಮಿಗೆ ದೀರ್ಘ ಇತಿಹಾಸವಿದ್ದು, ಇದು ಕೇವಲ ಮನರಂಜನೆಯ ಸಾಧನವಲ್ಲದೆ ಜನರ ಜೀವನದ ಪ್ರತಿಬಿಂಬವಾಗಿದೆ. ರಾಮಾಯಣ, ಮಹಾಭಾರತ, ಪುರಾಣಗಳು, ಶರಣರ ಕಥೆಗಳು ಹಾಗೂ ಸಾಮಾಜಿಕ ವಿಷಯಗಳನ್ನು ಜನರಿಗೆ ತಲುಪಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ. ಸತ್ಯ, ನ್ಯಾಯ, ಧರ್ಮ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಬೋಧಿಸುವ ಮೂಲಕ ಜನಪದ ರಂಗಭೂಮಿ ಸಾಮಾಜಿಕ ಶಿಕ್ಷಣದ ಮಾಧ್ಯಮವಾಗಿದೆ. 
ಇದು ಅನಕ್ಷರತೆ, ಮೂಢನಂಬಿಕೆ, ಜಾತಿಭೇದ, ಬಾಲ್ಯವಿವಾಹ, ವರದಕ್ಷಿಣೆ, ಶೋಷಣೆ ಮುಂತಾದ ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುತ್ತದೆ. ಮಹಿಳಾ ಸಬಲೀಕರಣ, ಪ್ರಜಾಸತ್ತಾತ್ಮಕ ಮೌಲ್ಯಗಳು, ಸಾಮಾಜಿಕ ಏಕತೆ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಸಹಕಾರ ನೀಡುತ್ತದೆ. ಸ್ಥಳೀಯ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸುತ್ತದೆ. ಆಧುನಿಕ ಕಾಲದಲ್ಲಿಯೂ ಪರಿಸರ ಸಂರಕ್ಷಣೆ, ಆರೋಗ್ಯ, ಸ್ವಚ್ಛತೆ, ಮಾದಕ ವ್ಯಸನ, ಸೈಬರ್ ಅಪರಾಧ ಮತ್ತು ಮತದಾನದಂತಹ ವಿಷಯಗಳ ಕುರಿತು ಜಾಗೃತಿ ಮೂಡಿಸಲು ಇದು ಪರಿಣಾಮಕಾರಿ ಮಾಧ್ಯಮವಾಗಿದೆ. ಆದ್ದರಿಂದ ಜನಪದ ರಂಗಭೂಮಿ ನಮ್ಮ ಸಂಸ್ಕೃತಿಯ ಸಂರಕ್ಷಕ, ಜನರ ಶಿಕ್ಷಣದ ಸಾಧನ ಮತ್ತು ಸಾಮಾಜಿಕ ಪರಿವರ್ತನೆಯ ಶಕ್ತಿಶಾಲಿ ಮಾಧ್ಯಮವಾಗಿದೆ. 

Read More »

ಕನ್ನಡ ರಂಗಭೂಮಿಗೆ - ರಸಋಷಿ ಕುವೆಂಪುರವರ ಕೊಡುಗೆ

ರೇವತಿ

60-65

ರಾಷ್ಟ್ರಕವಿ ಕುವೆಂಪು ಅವರು ರಂಗಭೂಮಿಯನ್ನು ಕೇವಲ ಮನರಂಜನಾ ಮಾಧ್ಯಮವಾಗಿ ನೋಡದೆ, ಸಮಾಜ ಸುಧಾರಣೆ ಹಾಗೂ ಮೌಲ್ಯವರ್ಧನೆಯ ಪ್ರಬಲ ಅಸ್ತ್ರವಾಗಿ ರೂಪಿಸಿದರು. ಪಾರ್ಸಿ ನಾಟಕಗಳ ಪ್ರಭಾವವಿದ್ದ ಕಾಲಘಟ್ಟದಲ್ಲಿ ‘ನಾಡ ನಾಟಕ’ ಪರಿಕಲ್ಪನೆಯನ್ನು ಹುಟ್ಟುಹಾಕಿ, ಯಕ್ಷಗಾನ ಮತ್ತು ಬಯಲಾಟದಂತಹ ದೇಶೀಯ ಕಲೆಗಳನ್ನು ಆಧುನಿಕ ರಂಗಭೂಮಿಯೊಂದಿಗೆ ಯಶಸ್ವಿಯಾಗಿ ಬೆಸೆಯುವ ಕಾರ್ಯ ಮಾಡಿದರು. ‘ಶೂದ್ರ ತಪಸ್ವಿ’, ‘ಜಲಗಾರ’, ‘ಸ್ಮಶಾನ ಕುರುಕ್ಷೇತ್ರ’ ಮುಂತಾದ ಗಂಭೀರ ನಾಟಕಗಳ ಮೂಲಕ ಜಾತಿ ವ್ಯವಸ್ಥೆ, ಮೂಢನಂಬಿಕೆ ಹಾಗೂ ಯುದ್ಧದ ನಿರರ್ಥಕತೆಯನ್ನು ತಾರ್ಕಿಕವಾಗಿ ಪ್ರಶ್ನಿಸಿದರು. ಕಾವ್ಯಾತ್ಮಕ ಭಾಷೆ, ಕನಿಷ್ಠ ರಂಗಸಜ್ಜಿಕೆ ಹಾಗೂ ವಿನೂತನ ತಂತ್ರಗಾರಿಕೆಗಳ ಮೂಲಕ ರಂಗಪ್ರಯೋಗಗಳಿಗೆ ಹೊಸ ಆಯಾಮ ನೀಡಿದರು. ಪೌರಾಣಿಕ ಕಥೆಗಳಿಗೆ ಆಧುನಿಕ ಹಾಗೂ ಮಾನವೀಯ ಸ್ಪರ್ಶ ನೀಡಿ, ‘ವಿಶ್ವಮಾನವ’ ತತ್ವವನ್ನು ವೇದಿಕೆಯ ಮೂಲಕ ಸಾರಿದ ಅವರ ರಂಗಚಿಂತನೆಯು ಇಂದಿನ ಪ್ರಾಯೋಗಿಕ ಕನ್ನಡ ರಂಗಭೂಮಿಗೆ ಸಾರ್ವಕಾಲಿಕ ಸ್ಫೂರ್ತಿಯಾಗಿದೆ.

Read More »

ರಂಗಭೂಮಿ ಮತ್ತು ಸಮಾಜ ಸುಧಾರಣೆ

ಗೀತಾ ಜೈನ್‌

66 to 71

ಮಾನವನ ಬದುಕಿನ ಏರಿಳಿತಗಳನ್ನು ಹಾಗೂ ಸಮಾಜದ ಅಂಕುಡೊಂಕುಗಳನ್ನು ಕನ್ನಡಿಯಂತೆ ಪ್ರತಿಬಿಂಬಿಸುವ ರಂಗಭೂಮಿಯು ಕೇವಲ ಮನರಂಜನೆಯ ವೇದಿಕೆಯಾಗಿರದೆ, ಪ್ರಬಲ ಲೋಕಶಿಕ್ಷಣದ ಮಾಧ್ಯಮವಾಗಿದೆ. ಪ್ರಾಚೀನ ನಾಟ್ಯಶಾಸ್ತ್ರದ ತಳಹದಿಯಿಂದ ಬೆಳೆದುಬಂದ ಯಕ್ಷಗಾನ, ಬಯಲಾಟ ಮತ್ತು ಬೀದಿನಾಟಕಗಳಂತಹ ಪ್ರಕಾರಗಳು ಕಾಲಕಾಲಕ್ಕೆ ಸಮಾಜದ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸುತ್ತಲೇ ಬಂದಿವೆ. ವಿಶೇಷವಾಗಿ ಇಂದಿನ ಯುವಜನತೆಗೆ, ಕೇವಲ ಪಠ್ಯದ ಓದಿಗಿಂತ ರಂಗಕಲೆಯ ಪ್ರಾಯೋಗಿಕ ಒಡನಾಟವು ಸಾಮಾಜಿಕ ಜವಾಬ್ದಾರಿ, ನೈತಿಕ ಮೌಲ್ಯ ಮತ್ತು ಮಾನವೀಯತೆಯನ್ನು ಅತ್ಯಂತ ಆಳವಾಗಿ ಕಲಿಸುತ್ತದೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇಂದಿನ ಪರಿಸರ ಸಂರಕ್ಷಣೆ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣದವರೆಗೆ ರಂಗಭೂಮಿಯ ಕೊಡುಗೆ ಅಪಾರ. ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿರುವ ‘ಜೆನ್-ಝೀ’ ಪೀಳಿಗೆಯು ಸುಸ್ಥಿರ ಹಾಗೂ ಸ್ವಸ್ಥ ಸಮಾಜವನ್ನು ಕಟ್ಟಲು, ಅವರಲ್ಲಿ ಆತ್ಮವಿಶ್ವಾಸ ತುಂಬಿ ಸಕಾರಾತ್ಮಕ ಬದಲಾವಣೆ ತರುವ ಅತ್ಯುತ್ತಮ ಜ್ಞಾನದ ಕೊಂಡಿಯಾಗಿ ರಂಗಭೂಮಿ ಕಾರ್ಯನಿರ್ವಹಿಸುತ್ತಿದೆ.

Read More »

ನಾಟಕ ಸಾಹಿತ್ಯ ಮತ್ತು ರಂಗಪ್ರಯೋಗ

ಮಾರುತೇಶ ಕೆ.ಟಿ., ಡಾ. ಗೀತಾವಸಂತ

72 to 80

ಭಾರತೀಯ ನಾಟ್ಯಶಾಸ್ತ್ರದ ತಳಹದಿಯ ಮೇಲೆ ಬೆಳೆದ ಕನ್ನಡ ನಾಟಕ ಪರಂಪರೆಯು ಮರಾಠಿ ಹಾಗೂ ಪಾರ್ಸಿ ಕಂಪನಿಗಳ ಪ್ರಭಾವದೊಂದಿಗೆ ವೃತ್ತಿ ರಂಗಭೂಮಿಯಾಗಿ ರೂಪುಗೊಂಡಿತು. ಶಾಂತಕವಿಗಳ ನಾಟಕ ಮಂಡಳಿ ಮತ್ತು ಗುಬ್ಬಿ ಕಂಪನಿಗಳು ಈ ಹಾದಿಯಲ್ಲಿ ಭದ್ರ ಬುನಾದಿ ಹಾಕಿದವು. ಆರಂಭಿಕ ಅನುವಾದಗಳಾಚೆಗೆ, ಕೈಲಾಸಂ, ಸಂಸ, ಶ್ರೀರಂಗ, ಕುವೆಂಪು ಮುಂತಾದವರಿಂದ ಸ್ವತಂತ್ರ ಹಾಗೂ ವೈಚಾರಿಕ ನಾಟಕಗಳು ಸೃಷ್ಟಿಯಾದವು. ನವ್ಯ ಕಾಲಘಟ್ಟದಲ್ಲಿ ಗಿರೀಶ್ ಕಾರ್ನಾಡ್, ಕಂಬಾರ ಹಾಗೂ ಲಂಕೇಶ್‌ರಂತಹ ದಿಗ್ಗಜರು ಪುರಾಣ, ಜಾನಪದ ಮತ್ತು ಚರಿತ್ರೆಗಳನ್ನು ಸಮಕಾಲೀನ ತಲ್ಲಣಗಳಿಗೆ ಮುಖಾಮುಖಿಯಾಗಿಸಿದರು. ಕೇವಲ ಸಾಹಿತ್ಯಕ ಪಠ್ಯವಾಗಿದ್ದ ನಾಟಕಗಳನ್ನು ಬಿ.ವಿ. ಕಾರಂತ, ಪ್ರಸನ್ನ, ಸಿ.ಜಿ.ಕೆ ಹಾಗೂ ಸಿ. ಬಸವಲಿಂಗಯ್ಯ ಅವರಂತಹ ನಿರ್ದೇಶಕರು ತಮ್ಮ ವಿನೂತನ ರಂಗತಂತ್ರಗಳ ಮೂಲಕ ಜೀವಂತಗೊಳಿಸಿದರು. ಕೇವಲ ಮನರಂಜನೆಯ ಸಾಧನವಾಗಿದ್ದ ರಂಗಭೂಮಿ, ದಲಿತ-ಬಂಡಾಯ ಕಾಲಘಟ್ಟದಲ್ಲಿ ಸಾಮಾಜಿಕ ಜಾಗೃತಿಯ ಪ್ರಬಲ ಅಸ್ತ್ರವಾಗಿ ವಿಕಸನಗೊಂಡ ಬಗೆ ಇಲ್ಲಿ ಅನಾವರಣಗೊಂಡಿದೆ.

Read More »

ಕುವೆಂಪು ನಾಟಕಗಳಲ್ಲಿ ಪರಂಪರೆ ಮತ್ತು ಪ್ರತಿರೋಧದ ನೆಲೆಗಳು: ಒಂದು ಅಧ್ಯಯನ

ಡಾ. ಗಿರಿಯಪ್ಪ

81 to 88

ರಾಷ್ಟ್ರಕವಿ ಕುವೆಂಪು ಅವರು ಶ್ರೇಣೀಕೃತ ಸಮಾಜದ ಪುರೋಹಿತಶಾಹಿ ಯಾಜಮಾನ್ಯವನ್ನು ಧಿಕ್ಕರಿಸಿ, ತಮ್ಮ ನಾಟಕಗಳ ಮೂಲಕ ಪ್ರಬಲವಾದ ಸಾಂಸ್ಕೃತಿಕ ಪ್ರತಿರೋಧವನ್ನು ಒಡ್ಡಿದ್ದಾರೆ. ‘ಜಲಗಾರ’, ‘ಶೂದ್ರತಪಸ್ವಿ’ ಹಾಗೂ ‘ಬೆರಳ್ಗೆ ಕೊರಳ್’ ನಾಟಕಗಳು ಕೇವಲ ಪೌರಾಣಿಕ ಮರುಸೃಷ್ಟಿಯಲ್ಲ; ಬದಲಾಗಿ ತಳಸಮುದಾಯಗಳ ಅಸ್ಮಿತೆಯ ತೀಕ್ಷ್ಣ ಅಭಿವ್ಯಕ್ತಿಗಳಾಗಿವೆ. ‘ಜಲಗಾರ’ದಲ್ಲಿ ದೇವಾಲಯ ಕೇಂದ್ರಿತ ವೈದಿಕ ಪರಂಪರೆಯನ್ನು ನಿರಾಕರಿಸಿ, ಕಾಯಕ ತತ್ವವನ್ನು ಎತ್ತಿಹಿಡಿಯಲಾಗಿದೆ. ‘ಶೂದ್ರತಪಸ್ವಿ’ಯಲ್ಲಿ ಶಂಬೂಕನ ಸಾಧನೆಯನ್ನು ಸಮರ್ಥಿಸಿ, ವರ್ಣಾಶ್ರಮದ ಕರಾಳತೆಯನ್ನು ವೈಚಾರಿಕವಾಗಿ ಪ್ರಶ್ನಿಸಲಾಗಿದೆ. ಅಂತೆಯೇ ‘ಬೆರಳ್ಗೆ ಕೊರಳ್’ ನಾಟಕದಲ್ಲಿ ಏಕಲವ್ಯನ ಕಥೆಯ ಮೂಲಕ ವಿದ್ಯೆಯ ಮೇಲಿನ ಪಟ್ಟಭದ್ರರ ಏಕಸ್ವಾಮ್ಯ ಹಾಗೂ ಶೋಷಣೆಯನ್ನು ಅನಾವರಣಗೊಳಿಸಲಾಗಿದೆ. ಒಟ್ಟಾರೆಯಾಗಿ, ಜಾತಿ ಮತ್ತು ಹುಟ್ಟಿನ ಆಧಾರಿತ ತಾರತಮ್ಯಗಳನ್ನು ಬೇರುಸಹಿತ ಕಿತ್ತೊಗೆದು, ಪ್ರತಿಭೆ, ಶ್ರದ್ಧೆ ಮತ್ತು ಮಾನವೀಯತೆಗೆ ಮನ್ನಣೆ ನೀಡುವ ‘ಸರ್ವರಿಗೂ ಸಮಬಾಳು’ ಎಂಬ ಸಮಸಮಾಜದ ಹೊಸ ದಾರ್ಶನಿಕತೆಯನ್ನು ಕುವೆಂಪು ಇಲ್ಲಿ ಅತ್ಯಂತ ಸೃಜನಶೀಲವಾಗಿ ಕಟ್ಟಿಕೊಟ್ಟಿದ್ದಾರೆ.

Read More »

ಕನ್ನಡ ಮಹಿಳಾ ನಾಟಕಗಳು: ಮಹಿಳಾ ಅಸ್ಮಿತೆ ಮತ್ತು ಶೋಷಣೆಯ ನೆಲೆಗಳು

ಡಾ. ಆಶಾಲತಾ

89 to 98

ಕನ್ನಡ ಸಾಹಿತ್ಯಕ್ಕೆ ಮಹತ್ವದ ಪರಂಪರೆಯಿದೆ. ಅದು ಬೇರೆ-ಬೇರೆ ಸಾಹಿತ್ಯ ಪ್ರಕಾರಗಳ ಮೂಲಕ ಬೆಳೆದು ಬಂದಿದೆ. ಅವುಗಳಲ್ಲಿ ನಾಟಕ ಪ್ರಕಾರವೂ ಮಹತ್ವದ್ದಾಗಿದೆ. ಕನ್ನಡ ನಾಟಕಕಾರ್ತಿಯರ ವಸ್ತುವಿಷಯಗಳ ಆಯ್ಕೆಯ ವ್ಯಾಪ್ತಿ ವಿಶಾಲವಾದದ್ದು. ಸಮಾಜದ ಬೇರೆ ಬೇರೆ ವಸ್ತು-ಸಂಗತಿ, ಸಂವೇದನೆಗಳನ್ನು ಚರಿತ್ರೆ, ಪುರಾಣ, ಜಾನಪದ ಆಧುನಿಕ ಸಮಾಜದ ತಲ್ಲಣಗಳನ್ನು ಸಹ ತಮ್ಮ ನಾಟಕಗಳ ವಸ್ತುವಾಗಿಸಿಕೊಂಡಿದ್ದಾರೆ. ವಸ್ತು ಯಾವುದೇ ಆದರೂ ಈ ಕಾಲದ ಸಂವೇದನೆಗಳಿಗೆ ಅನುಗುಣವಾಗಿ, ಅಗತ್ಯಗಳಿಗೆ ಅನುಸಾರವಾಗಿ ಅವುಗಳನ್ನು ನಿರ್ವಹಿಸಿರುವುದು ಮಹತ್ವದ್ದಾಗಿದೆ. ಸಾಹಿತ್ಯವನ್ನು ಮನರಂಜನೆಯ ಸಾಧನ ಎಂಬ ಅರಿವು ಇಲ್ಲಿನ ನಾಟಕಗಳದ್ದಲ್ಲ. ಸಮಾಜದ ಸಾಂಸ್ಕೃತಿಕ ಚಲನಶೀಲತೆಯನ್ನು ಗಂಭೀರವಾಗಿ ಮುಖಾಮುಖಿಗೊಂಡಿರುವ ನಾಟಕಕಾರ್ತಿಯರು ಅದರ ಭಾಗವಾದ ಶಿಕ್ಷಣದ ಬಿಕ್ಕಟ್ಟುಗಳು, ಕೃಷಿ ಸಮಸ್ಯೆ, ಮಾರುಕಟ್ಟೆಯ ಸರಕು ಸಂಸ್ಕೃತಿ, ಜಾತಿ ಶೋಷಣೆ, ನಿರುದ್ಯೋಗ, ಭಾಷಾ ಸಮಸ್ಯೆ, ರೈತರ ಆತ್ಮಹತ್ಯೆ, ಜಾಗತೀಕರಣ ಸೃಷ್ಟಿಸಿರುವ ಬಿಕ್ಕಟ್ಟು, ಅದರಲ್ಲೂ ಮಹಿಳಾ ಕೇಂದ್ರಿತ ಸಮಸ್ಯೆಗಳಾದ ಅತ್ಯಾಚಾರ, ಭ್ರೂಣಹತ್ಯೆ, ಬಾಲ್ಯವಿವಾಹ, ಅಂತರ್ಜಾತಿ ವಿವಾಹ, ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯಗಳಂತಹ ಅನೇಕ ವಿಚಾರಗಳ ಕುರಿತ ವೈಚಾರಿಕ ಪ್ರಜ್ಞೆ ನಾಟಕಕಾರ್ತಿಯರ ಒಟ್ಟು ನಾಟಕಗಳ ತಾತ್ವಿಕ ಸ್ವರೂಪದ ಭಾಗವಾಗಿದೆ. ಮಾತೃತ್ವ, ಪ್ರಕೃತಿ, ವೇಶ್ಯೆ, ಸಮಾಜದಲ್ಲಿನ ಯುದ್ಧ ದಾಹದ ಪರಿಣಾಮಗಳು ಮತ್ತು ಜಾಗತೀಕರಣದ ನಂತರದಲ್ಲಿ ಹೆಚ್ಚಾದ ಸರಕು ಸಂಸ್ಕೃತಿಯ ಭಾಗವಾದ ಮಹಿಳಾ ಮಾರಾಟದ ವಿಷಯಗಳನ್ನು ಸಮಾಜದ ಆರೋಗ್ಯದ ದೃಷ್ಟಿಯಿಂದ ಅನುಸಂಧಾನಗೊಂಡಿದ್ದಾರೆ. ಹೀಗೆ ನಾಟಕಕಾರ್ತಿಯರು ಬಹುವಿಷಯಕೇಂದ್ರಿತ ನೆಲೆಯಲ್ಲಿ ನಾಟಕಗಳನ್ನು ರಚಿಸಿದ್ದು ಪ್ರಸ್ತುತ ಪ್ರಬಂಧದಲ್ಲಿ ಅವುಗಳ ತಾತ್ವಿಕ ವಿಶ್ಲೇಷಣೆಗೆ ಅವಕಾಶ ಮಾಡಿಕೊಟ್ಟಿವೆ.
ಪ್ರೇಕ್ಷಕಳಾಗಿದ್ದ ಮಹಿಳೆ ನಾಟಕ ರಚನೆಯ ಹಂತಕ್ಕೆ ಬರುವುದಕ್ಕೆ ದೊಡ್ಡ ಸಮಯವೇ ಬೇಕಾಯಿತು. ಹೀಗೆ ನಾಟಕ ರಚನೆಗೆ ತೊಡಗಿದ ಮಹಿಳೆ ಸಂಸ್ಕೃತಿ, ಸಮಾಜ, ಸಾಹಿತ್ಯ, ಚರಿತ್ರೆ, ಪುರಾಣ, ಜಾನಪದಗಳಂತಹ ವಸ್ತು ಸಂಗತಿಗಳಲ್ಲಿ ಪುರುಷ ಪ್ರಧಾನ ಸಮಾಜ ಅಪೇಕ್ಷಿಸುವ ಚೌಕಟ್ಟಿನ ಅನೇಕ ಸಂಗತಿಗಳ ಬಗ್ಗೆ ಬರೆಯುತ್ತಾ, ಅವುಗಳನ್ನು ಪರಾಮರ್ಶಿಸುತ್ತಾ ಪ್ರಶ್ನೆಗೊಳಪಡಿಸಿರುವುದನ್ನು ಕಾಣಬಹುದು.

Read More »

ರಂಗಭೂಮಿಯಲ್ಲಿ ಮಹಿಳೆಯರ ಸಾಧನೆಗಳು ಮತ್ತು ಸವಾಲುಗಳ ಅಧ್ಯಯನದ ಸ್ವರೂಪಗಳು

ಸೌಮ್ಯ ಕೋಟ್ಯಾನ್

99 to 105

ಕನ್ನಡ ರಂಗಭೂಮಿಯ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರವು ಕಲಾತ್ಮಕ ಸಾಧನೆಗೆ ಮಾತ್ರ ಸೀಮಿತವಾಗದೆ, ಮಹಿಳಾ ಅಸ್ತಿತ್ವ, ಸಾಂಸ್ಕೃತಿಕ ಅಭಿವ್ಯಕ್ತಿ ಮತ್ತು ಸಾಮಾಜಿಕ ಪರಿವರ್ತನೆಯೊಂದಿಗೆ ನಿಕಟವಾಗಿ ಸಂಬಂಧ ಹೊಂದಿದೆ. ಆರಂಭಿಕ ಕಾಲಘಟ್ಟದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ನಿರ್ಬಂಧಗಳಿಂದ ಮಹಿಳೆಯರಿಗೆ ರಂಗಭೂಮಿಯಲ್ಲಿ ನೇರವಾಗಿ ಭಾಗವಹಿಸುವ ಅವಕಾಶ ಕಡಿಮೆಯಾಗಿದ್ದು, ಸ್ತ್ರೀ ಪಾತ್ರಗಳನ್ನು ಪುರುಷರೇ ನಿರ್ವಹಿಸುತ್ತಿದ್ದರು. 20ನೇ ಶತಮಾನದ ಆರಂಭದಲ್ಲಿ ಮಹಿಳೆಯರು ರಂಗಭೂಮಿಗೆ ಪ್ರವೇಶಿಸಿದ ನಂತರ ಅವರ ಅಭಿನಯ, ಸೃಜನಶೀಲತೆ ಮತ್ತು ವೃತ್ತಿಪರ ಬದ್ಧತೆಯಿಂದ ರಂಗಭೂಮಿಯ ಸ್ವರೂಪದಲ್ಲಿ ಮಹತ್ವದ ಬದಲಾವಣೆ ಉಂಟಾಯಿತು. ಕ್ರಮೇಣ ಮಹಿಳೆಯರ ಪಾತ್ರವು ಅಭಿನಯವನ್ನು ಮೀರಿ ನಿರ್ದೇಶನ, ನಾಟಕ ರಚನೆ, ಸಂಘಟನೆ, ತರಬೇತಿ, ರಂಗವಿನ್ಯಾಸ ಮತ್ತು ನೇಪಥ್ಯ ಕಾರ್ಯಗಳಿಗೂ ವಿಸ್ತರಿಸಿತು. ವೃತ್ತಿ ರಂಗಭೂಮಿಯ ಜೊತೆಗೆ ಹವ್ಯಾಸಿ ರಂಗಭೂಮಿಯು ಮಹಿಳೆಯರಿಗೆ ತಮ್ಮ ಪ್ರತಿಭೆ, ಸಾಮಾಜಿಕ ಬದ್ಧತೆ ಮತ್ತು ಸೃಜನಶೀಲತೆಯನ್ನು ಅಭಿವ್ಯಕ್ತಿಸಲು ಪರ್ಯಾಯ ವೇದಿಕೆಯನ್ನು ಒದಗಿಸಿತು. ಮಹಿಳಾ ಕೇಂದ್ರಿತ ನಾಟಕಗಳ ಮೂಲಕ ಲಿಂಗತಾರತಮ್ಯ, ಮಹಿಳಾ ಸ್ವಾತಂತ್ರ್ಯ, ದೌರ್ಜನ್ಯ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯಂತಹ ವಿಷಯಗಳು ಸಾರ್ವಜನಿಕ ಚರ್ಚೆಗೆ ಬಂದವು. ಆದಾಗ್ಯೂ, ಆರ್ಥಿಕ ಅಸುರಕ್ಷತೆ, ಸಮಾನ ಅವಕಾಶದ ಕೊರತೆ, ಸಾಮಾಜಿಕ ಪೂರ್ವಗ್ರಹ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಕುಟುಂಬ–ವೃತ್ತಿ ಸಮತೋಲನದಂತಹ ಸವಾಲುಗಳು ಮುಂದುವರಿದಿವೆ. ಆದ್ದರಿಂದ, ಕನ್ನಡ ರಂಗಭೂಮಿಯಲ್ಲಿ ಮಹಿಳೆಯರ ಸಾಧನೆಗಳು ಮತ್ತು ಸವಾಲುಗಳನ್ನು ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸೃಜನಾತ್ಮಕ ಆಯಾಮಗಳ ಮೂಲಕ ಸಮಗ್ರವಾಗಿ ಅಧ್ಯಯನ ಮಾಡುವುದು ಅಗತ್ಯವಾಗಿದೆ.

Read More »

ಕನ್ನಡದ ಪ್ರಮುಖ ನಾಟಕಕಾರರು ಮತ್ತು ಅವರ ಕೊಡುಗೆ

ವಸಂತ್

106 to 112

ಕನ್ನಡ ಸಾಹಿತ್ಯದಲ್ಲಿ ನಾಟಕವು ದೃಶ್ಯ-ಶ್ರವ್ಯ ಮಾಧ್ಯಮವಾಗಿ ಕೇವಲ ಮನರಂಜನೆಯಷ್ಟೇ ಅಲ್ಲದೆ, ಸಮಾಜಮುಖಿ ಚಿಂತನೆಗಳನ್ನು ಬಿತ್ತುವ ಪ್ರಬಲ ಅಸ್ತ್ರವಾಗಿ ಬೆಳೆದಿದೆ. ಟಿ.ಪಿ. ಕೈಲಾಸಂ ಅವರು ಹಾಸ್ಯ ಹಾಗೂ ವಿಡಂಬನೆಗಳ ಮೂಲಕ ಮಧ್ಯಮ ವರ್ಗದ ಬದುಕು ಮತ್ತು ಸ್ತ್ರೀ ಶೋಷಣೆಯನ್ನು ಅನಾವರಣಗೊಳಿಸಿದರೆ, ಶ್ರೀರಂಗರು ರಾಜಕೀಯ, ಆರ್ಥಿಕ ಹಾಗೂ ಕೌಟುಂಬಿಕ ಸಮಸ್ಯೆಗಳನ್ನು ಅತ್ಯಂತ ವಾಸ್ತವಿಕ ನೆಲೆಯಲ್ಲಿ ವಿಶ್ಲೇಷಿಸಿದರು. ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರರು ಪುರಾಣ, ಇತಿಹಾಸ ಹಾಗೂ ಜಾನಪದದ ಅಂಶಗಳನ್ನು ಸಮಕಾಲೀನ ತಲ್ಲಣಗಳಿಗೆ ಅತ್ಯದ್ಭುತವಾಗಿ ಬೆಸೆದು ಕನ್ನಡ ರಂಗಭೂಮಿಗೆ ಅಂತರರಾಷ್ಟ್ರೀಯ ಮನ್ನಣೆ ತಂದುಕೊಟ್ಟರು. ಜೊತೆಗೆ, ಕುವೆಂಪು ಹಾಗೂ ಮಾಸ್ತಿಯವರು ಪೌರಾಣಿಕ ಮತ್ತು ಚಾರಿತ್ರಿಕ ವಸ್ತುಗಳಿಗೆ ಹೊಸ ತಾತ್ವಿಕ ದರ್ಶನವನ್ನು ನೀಡಿ, ಮೌಢ್ಯ ಹಾಗೂ ಸಾಮಾಜಿಕ ಅಸಮಾನತೆಗಳನ್ನು ದಿಟ್ಟವಾಗಿ ಪ್ರಶ್ನಿಸಿದರು. ಹೀಗೆ, ಭಿನ್ನ-ವಿಭಿನ್ನ ನಾಟಕಕಾರರು ತಮ್ಮ ವಿಶಿಷ್ಟ ದೃಷ್ಟಿಕೋನ ಹಾಗೂ ಪ್ರಯೋಗಶೀಲತೆಯ ಮೂಲಕ ಸಮಗ್ರ ಕನ್ನಡ ನಾಟಕ ಪರಂಪರೆಯನ್ನು ಶ್ರೀಮಂತಗೊಳಿಸಿದ ಬಗೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ.

Read More »

ಪ್ರದರ್ಶನ ಕಲೆ ಗುಮ್ಮಟೆವಾದನ

ಡಾ. ಗೌರಮ್ಮ ಟಿ.

113 to 116

ಉತ್ತರ ಕನ್ನಡ ಜಿಲ್ಲೆಯ ವಿಶಿಷ್ಟ ವಾದ್ಯ ಗುಮ್ಮಟೆ, ಹಾಲಕ್ಕಿಗಳು, ಅಂಬಿಗರು, ಕೋಮಾರಪಂತರು, ಸಿದ್ದಿಗಳು, ಮಹಾಲೆಗಳು, ಕುಣಬಿಗಳು, ಮರಾಠಿಗರು ಹೀಗೆ ಅನೇಕ ಜನಾಂಗಗಳು ಗುಮ್ಮಟೆಯೊಂದಿಗೆ ಬದುಕಿವೆ. ಎಲ್ಲಾ ಆದಿಮಕಲೆಗಳಲ್ಲಿ ಕಂಡುಬರುವಂತೆ ಉತ್ತರ ಕನ್ನಡದಲ್ಲಿಯೂ ಸಹ ಮಣ್ಣು ಚರ್ಮದಿಂದಾದ ಗುಮ್ಮಟೆ ವಾದ್ಯವನ್ನು ಬಳಸುತ್ತಾರೆ ಆದರೆ ಇಲ್ಲಿಯ ವಿಶಿಷ್ಟ ಪ್ರಕೃತಿ ಪರಿಸರಕ್ಕೆ ಅನುಗುಣವಾಗಿ ಗುಮ್ಮಟೆಯ ಆಕಾರ ಹಾಗೂ ವಾದನಕ್ರಮದಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಇದೇ ರೀತಿ ಪ್ರದರ್ಶನ ಕ್ರಮ ಹಾಗೂ ಉದ್ದೇಶಗಳಲ್ಲಿಯೂ ವ್ಯತ್ಯಾಸಗಳಿವೆ. ಹಾಲಕ್ಕಿಗಳಿಗೆ ಹಾಗೂ ಸಿದ್ದಿಗಳಿಗೆ ಈ ವಾದ್ಯ ಮನರಂಜನೆ ಉದ್ದೇಶದ ಪ್ರದರ್ಶನಕಲೆಯಾದರೆ, ಮಹಾಲೆ ಜನಾಂಗದವರಲ್ಲಿ ಈ ವಾದ್ಯ ಚೌತಿ ಹಬ್ಬದ ಆಚರಣೆಯ ಜೊತೆ ತಳುಕು ಹಾಕಿಕೊಂಡಿದೆ. ಹಾಲಕ್ಕಿಗಳಲ್ಲಿ ಗುಮಟೆ ಸ್ವತಂತ್ರವಾದ ಖಾರ್ವಿ, ಮಹಾಲೆ, ಸಿದ್ದಿ, ಮರಾಠಿ, ಜನಾಂಗಗಳಿಗೆ ಅದು ತಾಸಮಾರ್‌ (ತಾಸ್ಮಾರ್) ಎಂಬ ವಾದ್ಯದೊಂದಿಗೆ ಸೇರಿ ನುಡಿಗೊಳ್ಳಬೇಕಾದ ವಾದ್ಯ.

Read More »

ತುಳು ನವ್ಯ ರಂಗಭೂಮಿಯ ಪ್ರವರ್ತಕ ಮನು ಇಡ್ಯಾ

ರವಿರಾಜ್ ಎಸ್.

117 to 123

ತುಳು ರಂಗಭೂಮಿಯು ಕೇವಲ ಮನರಂಜನೆ, ಹಾಸ್ಯ ಹಾಗೂ ಪೌರಾಣಿಕ ಕಥೆಗಳಿಗೆ ಸೀಮಿತವಾಗಿದ್ದ ಕಾಲದಲ್ಲಿ, ಅದಕ್ಕೆ ‘ನವ್ಯ’ ಸ್ಪರ್ಶ ನೀಡಿದ ಶ್ರೇಯಸ್ಸು ಮನು ಇಡ್ಯಾ ಅವರಿಗೆ ಸಲ್ಲುತ್ತದೆ. ಅವರು ತಮ್ಮ ‘ಮಾರಿ ಗಿಡಪ್ಪುಲೆ’, ‘ತಿರ್ಸಂಕು’, ಮತ್ತು ‘ಬಲಿ’ಯಂತಹ ನಾಟಕಗಳ ಮೂಲಕ ಸಮಾಜದ ಮೂಢನಂಬಿಕೆ, ಜಾತಿ ತಾರತಮ್ಯ ಹಾಗೂ ಶೋಷಣೆಯನ್ನು ಅತ್ಯಂತ ತೀಕ್ಷ್ಣವಾಗಿ ಪ್ರಶ್ನಿಸಿದರು. ಅದ್ದೂರಿ ರಂಗಸಜ್ಜಿಕೆಯ ಬದಲು ಬೆಳಕು-ನೆರಳಿನ ತಂತ್ರ, ಕಾವ್ಯಾತ್ಮಕ ಹಾಗೂ ಹರಿತವಾದ ಭಾಷೆ ಮತ್ತು ಪ್ರಬಲ ರೂಪಕಗಳನ್ನು ಬಳಸುವ ಮೂಲಕ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚಿದರು. ಕೇವಲ ಬಾಹ್ಯ ಸನ್ನಿವೇಶಗಳಿಗಿಂತ ಮನುಷ್ಯನ ಅಂತರಂಗದ ಸಂಘರ್ಷಗಳನ್ನು ಹಾಗೂ ಬಂಡಾಯದ ಧ್ವನಿಯನ್ನು ರಂಗದ ಮೇಲೆ ತಂದ ಇವರು, ತುಳು ನಾಟಕ ಕ್ಷೇತ್ರವನ್ನು ಸಾಂಪ್ರದಾಯಿಕತೆಯಿಂದ ಬಿಡಿಸಿ ವೈಚಾರಿಕ ಎತ್ತರಕ್ಕೆ ಕೊಂಡೊಯ್ದರು. ಈ ಅದ್ಭುತ ಪ್ರಯೋಗಶೀಲತೆಯಿಂದಾಗಿಯೇ ಅವರನ್ನು ತುಳು ನವ್ಯ ರಂಗಭೂಮಿಯ ಪ್ರವರ್ತಕರೆಂದು ಗುರುತಿಸಲಾಗುತ್ತದೆ.

Read More »

ಜನಪದ ಆರಾಧನಾ ರಂಗಭೂಮಿ ಮತ್ತು ಅದರ ಸಾಮಾಜಿಕ ಪ್ರಭಾವ

ಜಯಲಕ್ಷ್ಮಿ ಆರ್. ಶೆಟ್ಟಿ

124 to 128

ಜನಪದ ಆರಾಧನಾ ರಂಗಭೂಮಿಯು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಸಮುದಾಯದ ಸಂಸ್ಕೃತಿ, ನಂಬಿಕೆ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಕಾಯ್ದುಕೊಳ್ಳುವ ಪ್ರಭಾವಶಾಲಿ ದೇಶಿ ಮಾಧ್ಯಮವಾಗಿದೆ. ದೈವಾರಾಧನೆ, ನಾಗಾರಾಧನೆ, ಬಯಲಾಟ ಹಾಗೂ ಯಕ್ಷಗಾನದಂತಹ ಕಲಾಪ್ರಕಾರಗಳು ಪೂಜಾಸಂಕಲ್ಪ, ಕಥಾನಕ ಮತ್ತು ಅಭಿನಯಗಳ ಸಮ್ಮಿಲನದಿಂದ ಜನಪದರ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಅಗತ್ಯಗಳನ್ನು ಪೂರೈಸುತ್ತಾ ಬಂದಿದೆ. ಈ ಸಂಶೋಧನಾ ಪ್ರಬಂಧವು ಆರಾಧನಾ ರಂಗಕಲೆಯ ಸಾಂಸ್ಕೃತಿಕ ಸ್ವರೂಪ ಮತ್ತು ಅದು ಸಮಾಜದ ಮೇಲೆ ಬೀರುವ ವೈವಿಧ್ಯಮಯ ಪ್ರಭಾವಗಳನ್ನು ವಿಶ್ಲೇಷಿಸುತ್ತದೆ.
ಈ ರಂಗಭೂಮಿಯು ಸಮಾಜದಲ್ಲಿ ಧರ್ಮ, ನ್ಯಾಯ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಜೊತೆಗೆ ಸಮುದಾಯಗಳಲ್ಲಿ ಸಾಮರಸ್ಯ ಮತ್ತು ಐಕ್ಯತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರಾಧನಾ ವೇದಿಕೆಗಳಲ್ಲಿ ನಡೆಯುವ ನ್ಯಾಯತೀರ್ಮಾನಗಳು ಮತ್ತು ವಿಭಿನ್ನ ಸಮುದಾಯಗಳ ಸಕ್ರಿಯ ಭಾಗಿತ್ವವು ಸಾಮಾಜಿಕ ಸಮಾನತೆ ಹಾಗೂ ಸಹಬಾಳ್ವೆಗೆ ದಾರಿಯಾಗಿದೆ. ಅಲ್ಲದೆ ಮೌಖಿಕ ಪರಂಪರೆ, ಜನಪದ ಕಾವ್ಯ, ನೃತ್ಯ ಮತ್ತು ಸಂಗೀತವನ್ನು ತಲೆಮಾರಿನಿಂದ ತಲೆಮಾರಿಗೆ ತಲುಪಿಸುವ ಜೀವಂತ ಸೇತುವೆಯಾಗಿ ಇದು ಕಾರ್ಯನಿರ್ವಹಿಸುತ್ತದೆ.

Read More »

ಡಿಜಿಟಲ್ ಯುಗದಲ್ಲಿ ರಂಗಭೂಮಿಯ ಪ್ರಸ್ತುತತೆ ಮತ್ತು ಅದರ ಸವಾಲುಗಳು

ದೇವಿಕಾ ಟಿ.ಎಲ್.

129 to 138

ಇಂದಿನ ಆನ್‌ಲೈನ್ ಯುಗದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು ಮಾನವ ಜೀವನದ ಪ್ರತಿಯೊಂದು ಕ್ಷೇತ್ರವನ್ನು ವ್ಯಾಪಿಸಿವೆ. ಶಿಕ್ಷಣ, ಮನರಂಜನೆ, ವ್ಯಾಪಾರ, ಕಲೆ ಮತ್ತು ಸಾಹಿತ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಡಿಜಿಟಲ್ ಮಾಧ್ಯಮಗಳ ಪ್ರಭಾವ ಹೆಚ್ಚುತ್ತಿದೆ. ಈ ಬದಲಾವಣೆಯ ನಡುವೆ ರಂಗಭೂಮಿಯು ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಹೊಸ ರೂಪದಲ್ಲಿ ಬೆಳೆಯುತ್ತಿರುವುದು ಗಮನಾರ್ಹವಾಗಿದೆ. ರಂಗಭೂಮಿ ಕೇವಲ ಮನರಂಜನೆಯ ಸಾಧನವಲ್ಲ; ಅದು ಸಮಾಜದ ಪ್ರತಿಬಿಂಬ, ಸಂಸ್ಕೃತಿಯ ವಾಹಕ ಮತ್ತು ಸಾಮಾಜಿಕ ಜಾಗೃತಿಯ ಪರಿಣಾಮಕಾರಿ ಮಾಧ್ಯಮವಾಗಿದೆ. ಈ ಲೇಖನದಲ್ಲಿ ಡಿಜಿಟಲ್ ಯುಗದಲ್ಲಿ ರಂಗಭೂಮಿಯ ಪ್ರಸ್ತುತತೆ, ಎದುರಿಸುತ್ತಿರುವ ಸವಾಲುಗಳು ಹಾಗೂ ಭವಿಷ್ಯದ ಅವಕಾಶಗಳನ್ನು ವಿಶ್ಲೇಷಿಸಲಾಗಿದೆ.

Read More »

ಕನ್ನಡ ರಂಗಭೂಮಿಯಲ್ಲಿ ಮಹಿಳೆಯರ ಪಾತ್ರ : ವಿಮರ್ಶಾತ್ಮಕ ಅಧ್ಯಯನ

ಅನುರಾಧ ವಿ., ಡಾ. ಜ್ಯೋತಿಲಕ್ಷ್ಮೀ ಡಿ.ಪಿ.

139 to 147

ಈ ವಿಮರ್ಶಾತ್ಮಕ ಅಧ್ಯಯನವು ಕನ್ನಡ ರಂಗಭೂಮಿಯಲ್ಲಿ ಮಹಿಳೆಯರ ಪಾತ್ರವನ್ನು ಕುರಿತು ವಿಶ್ಲೇಷಿಸುತ್ತದೆ. ಮಹಿಳೆಯರು ರಂಗಭೂಮಿ ಕ್ಷೇತ್ರದಲ್ಲಿ ಹೇಗೆ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ ಎಂಬುದನ್ನು ಈ ಲೇಖನವು ಬೆಳಕು ಚೆಲ್ಲುತ್ತದೆ. ಭಾರತೀಯ ಕಲಾ ಪರಂಪರೆಯ ಮಹತ್ವದ ಭಾಗವಾದ ಕನ್ನಡ ರಂಗಭೂಮಿ, ಮಹಿಳೆಯರನ್ನು ಪ್ರತಿನಿಧಿಸುವ ವಿಧಾನದಲ್ಲಿ ಗಣನೀಯ ಬದಲಾವಣೆಗಳನ್ನು ಕಂಡಿದೆ. ಈ ಲೇಖನವು ಹಲವು ಆಯಾಮದ ವಿಶ್ಲೇಷಣೆಯನ್ನು ಬಳಸಿದೆ. ರಂಗಭೂಮಿಯ ವೇದಿಕೆಯ ಮೇಲೆ ಮಹಿಳೆಯರ ಚಿತ್ರಣವನ್ನು ಪ್ರಭಾವಿಸಿದ ಐತಿಹಾಸಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳನ್ನು ಚರ್ಚಿಸುತ್ತದೆ.
ಈ ಅಧ್ಯಯನವು ಚಾರಿತ್ರಿಕ ಅವಲೋಕನದೊಂದಿಗೆ ಪ್ರಾರಂಭವಾಗುತ್ತದೆ, ಸಾಂಪ್ರದಾಯಿಕ ಮತ್ತು ಆಧುನಿಕವಾಗಿ ಬದಲಾವಣೆಗೊಂಡ ಪಾತ್ರಗಳಿಂದ ನಿರೂಪಿಸಲ್ಪಟ್ಟ ಆರಂಭಿಕ ಕನ್ನಡ ರಂಗಭೂಮಿಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಪತ್ತೆಹಚ್ಚುತ್ತದೆ. ರಂಗಭೂಮಿಯಲ್ಲಿ ಹಲವಾರು ರೂಪಾಂತರಗಳು ಮುಂದುವರಿದಂತೆ, ಬದಲಾಗುತ್ತಿರುವ ಕರ್ನಾಟಕದಲ್ಲಿ ಸಾಮಾಜಿಕ ಕಟ್ಟುಪಾಡುಗಳು, ಸಂಪ್ರದಾಯಗಳನ್ನು ಮೀರಿ ಮಹಿಳೆಯರು ಪ್ರಗತಿಪಥದತ್ತ ಸಾಗುತ್ತಿರುವುದು ಗಮನಾರ್ಹ ಅಂಶವಾಗಿದೆ. ಈ ಅಧ್ಯಯನವು ವಿವಿಧ ದಶಕಗಳಲ್ಲಿ ಪ್ರಮುಖ ರಂಗಭೂಮಿಯಲ್ಲಿನ ನಿರೂಪಣೆಗಳು, ಪಾತ್ರ ಅಭಿವೃದ್ಧಿ ಮತ್ತು ಮಹಿಳೆಯರ ಚಿತ್ರಣವನ್ನು ಪರಿಶೀಲಿಸುತ್ತದೆ, ಸೂಕ್ಷ್ಮ, ಸ್ವತಂತ್ರ ಮತ್ತು ಸಬಲೀಕರಣಗೊಂಡ ಮಹಿಳಾ ಪಾತ್ರಗಳ ಹೊರಹೊಮ್ಮುವಿಕೆಯನ್ನು ವಿಶ್ಲೇಷಿಸುತ್ತದೆ.
ಇದಲ್ಲದೆ, ಕನ್ನಡ ರಂಗಭೂಮಿಯ ಭೌಗೋಳಿಕತೆಯನ್ನು ಮರುರೂಪಿಸುವಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ ಪ್ರಭಾವಿ ಮಹಿಳಾ ನಟಿಯರು, ಮತ್ತು ಬರಹಗಾರರ ಪ್ರಭಾವವನ್ನು ವಿಶ್ಲೇಷಣೆಯು ಪರಿಶೀಲಿಸುತ್ತದೆ. ಇತ್ತೀಚಿನ ಕನ್ನಡ ರಂಗಭೂಮಿಯಲ್ಲಿ ಮಹಿಳೆಯರ ಚಿತ್ರಣದ ಮೇಲೆ ಜಾಗತೀಕರಣ ಮತ್ತು ಸಮಕಾಲೀನ ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳ ಪ್ರಭಾವವನ್ನು ಸಹ ಇದು ಒಳಗೊಂಡಿದೆ.
ಕನ್ನಡ ರಂಗಭೂಮಿಯಲ್ಲಿ ಮಹಿಳಾ ಪಾತ್ರಗಳ ರೂಪಾಂತರವನ್ನು ವಿಮರ್ಶಾತ್ಮಕವಾಗಿ ನಿರ್ಣಯಿಸುವ ಮೂಲಕ, ಈ ಅಧ್ಯಯನವು ಕನ್ನಡ ರಂಗಭೂಮಿ ಸಾಮಾಜಿಕ ಮನೋಭಾವಗಳನ್ನು ಹೇಗೆ ಪ್ರತಿಬಿಂಬಿಸುತ್ತದೆ ಎಂಬುದರ ಕುರಿತು ವಿಶಾಲವಾದ ತಿಳುವಳಿಕೆಗೆ ಕೊಡುಗೆಯನ್ನು ಕೊಡುತ್ತದೆ. ಇದು ರಂಗಭೂಮಿಯಲ್ಲಿ ಮಹಿಳೆಯರ ಹೆಚ್ಚು ಅಂತರ್ಗತ ಮತ್ತು ವೈವಿಧ್ಯಮಯ ಪ್ರಾತಿನಿಧ್ಯದ ಅಗತ್ಯವನ್ನು ಒತ್ತಿ ಹೇಳುತ್ತದೆ ಅಲ್ಲದೆ ಮಹಿಳೆಯರು ರಂಗಭೂಮಿಯಲ್ಲಿ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳನ್ನು ಕುರಿತು ಬೆಳಕು ಚೆಲ್ಲುತ್ತದೆ.

Read More »

ಆಧುನಿಕ ರಂಗಭೂಮಿಯ ಸವಾಲುಗಳು ಮತ್ತು ಅವಕಾಶಗಳು

ಧರ್ಮಾವತಿ ಎಸ್. ನಾಯಕ

148 to 152

ರಂಗಭೂಮಿ ಸಾವಿರಾರು ವರ್ಷಗಳ ಇತಿಹಾಸವುಳ್ಳ ಕಲಾಪ್ರಕಾರವಾಗಿದ್ದು, ಸಮಾಜದ ಕನ್ನಡಿಯಂತೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಆದರೆ ಡಿಜಿಟಲ್ ಮಾಧ್ಯಮಗಳ ಅಬ್ಬರ, ಆರ್ಥಿಕ ಸಂಪನ್ಮೂಲಗಳ ಕೊರತೆ, ಪ್ರೇಕ್ಷಕರ ಆಸಕ್ತಿ ಕುಂದುತ್ತಿರುವುದು ಮತ್ತು ತರಬೇತಿ ಪಡೆದ ಕಲಾವಿದರ ವಲಸೆಯಂತಹ ಹಲವು ಸವಾಲುಗಳನ್ನು ಇಂದಿನ ರಂಗಭೂಮಿ ಎದುರಿಸುತ್ತಿದೆ. ಇದೇ ಸಂದರ್ಭದಲ್ಲಿ ತಂತ್ರಜ್ಞಾನದ ಬಳಕೆ, ಶಿಕ್ಷಣ ಕ್ಷೇತ್ರದೊಂದಿಗಿನ ಸಹಯೋಗ, ಸರ್ಕಾರಿ ಪ್ರೋತ್ಸಾಹ ಯೋಜನೆಗಳು ಮತ್ತು ಯುವ ಸಮುದಾಯದ ಹೆಚ್ಚುತ್ತಿರುವ ಆಸಕ್ತಿಯಂತಹ ಹೊಸ ಅವಕಾಶಗಳೂ ಮೂಡಿಬಂದಿವೆ. ಈ ಪ್ರಬಂಧವು ಆಧುನಿಕ ರಂಗಭೂಮಿ ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ವಿಶ್ಲೇಷಿಸಿ, ಅವುಗಳನ್ನು ಮೀರಲು ಲಭ್ಯವಿರುವ ಅವಕಾಶಗಳನ್ನು ಚರ್ಚಿಸುತ್ತದೆ. ಡಿಜಿಟಲ್-ರಂಗ ಸಂಯೋಜನೆ, ಸಮುದಾಯ ಆಧಾರಿತ ರಂಗ ಚಟುವಟಿಕೆಗಳು ಮತ್ತು ಸಾಂಸ್ಥಿಕ ಬೆಂಬಲದ ಅಗತ್ಯತೆಗಳ ಕುರಿತು ಸೂಕ್ಷ್ಮ ಒಳನೋಟಗಳನ್ನು ನೀಡುವ ಮೂಲಕ, ರಂಗಭೂಮಿಯ ಭವಿಷ್ಯದ ದಿಕ್ಕೂಚಿಯನ್ನು ರೂಪಿಸುವ ಪ್ರಯತ್ನ ಇಲ್ಲಿ ನಡೆದಿದೆ. 

Read More »

ತಂತ್ರಜ್ಞಾನ ಯುಗದಲ್ಲಿ ರಂಗಭೂಮಿಯ ಪ್ರಸ್ತುತತೆ

ಡಾ. ಚಿನ್ನಸ್ವಾಮಿ ಎನ್.

153 to 163

ತಂತ್ರಜ್ಞಾನದ ತ್ವರಿತ ಬೆಳವಣಿಗೆಯಿಂದಾಗಿ ರಂಗಭೂಮಿಯ ಸ್ವರೂಪ ಮತ್ತು ಪ್ರಸ್ತುತತೆ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಕೋವಿಡ್-19ರ ಸಂಕಷ್ಟದ ಕಾಲದಲ್ಲಿ ಸಾಂಪ್ರದಾಯಿಕ ರಂಗಮಂದಿರಗಳು ಮುಚ್ಚಿದಾಗ, ಕನ್ನಡ ರಂಗಭೂಮಿಯು ಡಿಜಿಟಲ್ ತಂತ್ರಜ್ಞಾನವನ್ನು ಸಮರ್ಥವಾಗಿ ಅಳವಡಿಸಿಕೊಂಡಿತು. ಮೈಸೂರು ರಂಗಾಯಣವು ಪ್ರದರ್ಶಿಸಿದ ‘ಕುಸುಮಬಾಲೆ’, ‘ಕಿಂದರಿಜೋಗಿ’ ಮತ್ತು ‘ಪರ್ವ’ ನಾಟಕಗಳು ಪ್ರಮುಖ ಸಾಹಿತ್ಯ ಕೃತಿಗಳನ್ನು ಡಿಜಿಟಲ್ ರಂಗಭೂಮಿಗೆ ಪರಿವರ್ತಿಸಿದ ಯಶಸ್ವಿ ಪ್ರಯೋಗಗಳಾಗಿವೆ. ನಟ ಮತ್ತು ಪ್ರೇಕ್ಷಕರ ನಡುವಿನ ನೇರ ಸಂಪರ್ಕವು ಸಾಂಪ್ರದಾಯಿಕ ರಂಗಭೂಮಿಯ ಜೀವಾಳವಾದರೂ, ಡಿಜಿಟಲ್ ಮಾಧ್ಯಮವು ನಾಟಕಗಳ ಶಾಶ್ವತ ದಾಖಲೀಕರಣ, ಭೌಗೋಳಿಕ ಮಿತಿಗಳ ವಿಸ್ತರಣೆ, ಯುವ ಪ್ರೇಕ್ಷಕರ ಆಕರ್ಷಣೆ ಮತ್ತು ಆರ್ಥಿಕ ಸಾಧ್ಯತೆಗಳನ್ನು ತೆರೆದಿಟ್ಟಿದೆ. ತಂತ್ರಜ್ಞಾನವು ರಂಗಭೂಮಿಯ ಅಂತ್ಯವಲ್ಲ; ಬದಲಾಗಿ ಅದು ಅಭಿವ್ಯಕ್ತಿಯನ್ನು ವಿಸ್ತರಿಸುವ ಪೂರಕ ಸಾಧನವಾಗಿದೆ. ಸಾಂಪ್ರದಾಯಿಕ ಮತ್ತು ಡಿಜಿಟಲ್ ರಂಗಭೂಮಿಗಳೆರಡರ ಸಮನ್ವಯದಿಂದ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಲು ಹಾಗೂ ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಸಾಧ್ಯವಿದೆ.

Read More »

ತುಳು ಯಕ್ಷಗಾನ ರಂಗಪಠ್ಯಗಳು: ಅವಲೋಕನ

ಡಾ. ಯೋಗೀಶ ಕೈರೋಡಿ

164 to 171

ಯಕ್ಷಗಾನ ಪ್ರದರ್ಶನಕ್ಕೆ ಆಧಾರವಾಗಿರುವ ಪಠ್ಯವನ್ನು ‘ಪ್ರಸಂಗ’ ಎಂಬುದಾಗಿ ಕರೆಯುತ್ತೇವೆ. ಕತೆಯ ಆರಂಭದಿಂದ ಮುಕ್ತಾಯದ ವರೆಗಿನ ಸನ್ನಿವೇಶಗಳು ಪ್ರಸಂಗದಲ್ಲಿ ಅಡಕವಾಗಿವೆ. ಯಕ್ಷಗಾನಕ್ಕೆ ಸಂಬಂಧಿಸಿದ ತಾಳಲಯಗಳಲ್ಲಿ ಛಂದೋಬಂಧಗಳನ್ನು ಆಧರಿಸಿ ‘ಪ್ರಸಂಗ’ ರಚನೆಯಾಗುತ್ತದೆ. ಪದ್ಯವನ್ನು ಭಾಗವತರು ಯಕ್ಷಗಾನದ್ದೇ ಆದ ಶೈಲಿಯಲ್ಲಿ ಹಾಡುತ್ತಾರೆ. ಭಾಗವತಿಕೆಯೊಂದಿಗೆ ಹಿಮ್ಮೇಳದ ಮದ್ದಳೆ, ಚಂಡೆವಾದನವಿರುತ್ತದೆ. ಮುಮ್ಮೇಳದ ಪಾತ್ರವು ನೃತ್ಯ ಮತ್ತು ಅಭಿನಯದ ಮೂಲಕ ಪ್ರಸ್ತುತಪಡಿಸುತ್ತದೆ. ಯಕ್ಷಗಾನದ ಮಾತುಗಾರಿಕೆ ನಿರ್ದಿಷ್ಟ ಪಠ್ಯದ ಕಂಠಪಾಠವಲ್ಲ. ಪಾತ್ರಧಾರಿ ತನ್ನ ಪ್ರತಿಭಾಶಕ್ತಿ ಹಾಗೂ ಜ್ಞಾನದ ಮೂಲಕ ತನ್ನದೇ ನೆಲೆಯ ಮಾತುಗಾರಿಕೆಯ ಮೂಲಕ ಪಾತ್ರ-ಪ್ರಸಂಗಕ್ಕೆ ನ್ಯಾಯಕೊಡುತ್ತಾನೆ. ಯಕ್ಷಗಾನದ ಮಾತುಗಾರಿಕೆ ಸ್ವತಂತ್ರವಾದರೂ ಅದಕ್ಕಿರುವ ಬುನಾದಿ ‘ಪ್ರಸಂಗ ಸಾಹಿತ್ಯ’. ಹಾಗೆಂದ ಮಾತ್ರಕ್ಕೆ ಪ್ರಸಂಗವೇ ಯಕ್ಷಗಾನದ ಪೂರ್ಣಪಠ್ಯವಲ್ಲ. ಕಲಾವಿದನ ವಾಚಿಕಾಭಿನಯ, ಪ್ರತ್ಯುತ್ಪನ್ನಮತಿತ್ವ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.
ಪ್ರೇಕ್ಷಕವರ್ಗ ಹಾಗೂ ಪಾತ್ರದ ಗುಣವರಿತು ಪ್ರಸಂಗ ರಚನೆಯಾಗುತ್ತದೆ. ವಿವಿಧ ರಸಭಾವಗಳು ಬರುವಂತೆ ಪ್ರಸಂಗಕರ್ತ ಪ್ರಸಂಗ ರಚನೆ ಮಾಡುತ್ತಾನೆ. ಸಾತ್ವಿಕ ಪಾತ್ರದ ಪ್ರವೇಶ ಮತ್ತು ಪೀಠಿಕೆಯಿಂದ ಕತೆ ಆರಂಭವಾಗುತ್ತದೆ. ಆರಂಭದಲ್ಲಿ ಸಂತೃಪ್ತವಾಗಿದ್ದ ಸಾತ್ವಿಕ ಪಾತ್ರವು ಬೆಳೆಯುತ್ತಾ ಹಲವು ಸಂಕಟಗಳಿಗೆ ಒಳಗಾಗುತ್ತದೆ. ಈ ಸಂಕಟಕ್ಕೆ ಇದಿರು ವೇಷದ (ಖಳ ಪಾತ್ರ) ಉಪಟಳವೇ ಕಾರಣ. ಇದಿರು ವೇಷವು ರಂಗದಲ್ಲಿ ಮೆರೆಯುವ ಪಾತ್ರ. ಅಂತಿಮವಾಗಿ ದುಷ್ಟಪಾತ್ರದ ಸೋಲು, ಶರಣಾಗತಿ ಅಥವಾ ಸಾವಿನ ಮೂಲಕ ಪ್ರಸಂಗ ಮುಕ್ತಾಯಗೊಳ್ಳುತ್ತದೆ. ಸಾತ್ವಿಕ ಪಾತ್ರವು ಅಂತಿಮವಾಗಿ ಜಯ ಪಡೆದು ಪ್ರಸಂಗ ಸುಖಾಂತ್ಯಗೊಳ್ಳುತ್ತದೆ. ಯಕ್ಷಗಾನ ಪ್ರಸಂಗವು ಒಳಿತು ಕೆಡುಕಿನ ಸಂಘರ್ಷದ ಕತೆಯಾಗಿದೆ. ಸಾಂಪ್ರದಾಯಿಕವಾಗಿ ಯಕ್ಷಗಾನ ಪ್ರಸಂಗಗಳು ರಾಮಾಯಣ, ಮಹಾಭಾರತ ಹಾಗೂ ಭಾಗವತ ಮೂಲದ ಪ್ರಸಂಗವನ್ನು ಹೊಂದಿವೆ.
ಪೌರಾಣಿಕ, ಜಾನಪದ ಹಾಗೂ ಕಾಲ್ಪನಿಕ ಪ್ರಸಂಗಗಳು ತನ್ನದೇ ಆದ ಮಹತ್ವವನ್ನು ಹೊಂದಿವೆ. ವಿವಿಧ ವರ್ಗದ ಪ್ರೇಕ್ಷಕ ವರ್ಗವನ್ನು ಮುಟ್ಟುವಲ್ಲಿ ಯಶಸ್ಸನ್ನು ಕಂಡಿವೆ. ತುಳು ಭಾಷೆ ಮತ್ತು ಸಂಸ್ಕೃತಿಯ ವಿಸ್ತರಣೆಗೆ ತುಳು ಪ್ರಸಂಗಗಳು ತನ್ನದೇ ಆದ ಕೊಡುಗೆಗಳನ್ನು ನೀಡಿವೆ. ಕೆಲವು ಕಲಾವಿದರು ತುಳು ಪ್ರಸಂಗಗಳ ಮೂಲಕವೇ ಬೆಳಕಿಗೆ ಬಂದಿರುವುದನ್ನು ಗಮನಿಸಬಹುದು. ಮಧ್ಯಮ ವರ್ಗದ ದೊಡ್ಡ ಸಂಖ್ಯೆಯ ಪ್ರೇಕ್ಷಕ ಸಮೂಹವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿದೆ. ಆದರೆ ತುಳು ಯಕ್ಷಗಾನ ಪ್ರಸಂಗಗಳು ಯಕ್ಷಗಾನದ ಮೂಲ ಸ್ವರೂಪಕ್ಕೆ ಒಗ್ಗಿಕೊಳ್ಳದ ಕಾರಣ ಕಾಲಗತಿಯಲ್ಲಿ ನೇಪಥ್ಯಕ್ಕೆ ಸರಿದಿವೆ.

Read More »

ಜನಪದ ರಂಗಭೂಮಿ ಮತ್ತು ಅದರ ಸಾಮಾಜಿಕ ಪ್ರಭಾವ

ಸುಮಿತ್ರ ಕುಮಾರಿ ಎ.

172 to 177

ಜನಪದ ರಂಗಭೂಮಿಯು ಗ್ರಾಮೀಣ ಜನರ ಬದುಕು, ಆಚರಣೆ, ಸಂಪ್ರದಾಯ ಹಾಗೂ ನಂಬಿಕೆಗಳ ಅಭಿವ್ಯಕ್ತಿಯಾಗಿ ರೂಪುಗೊಂಡ ವಿಶಿಷ್ಟ ಕಲಾಮಾಧ್ಯಮವಾಗಿದೆ. ನಿಸರ್ಗದ ಆರಾಧನೆಯಿಂದ ವಿಕಾಸಗೊಂಡು ಯಕ್ಷಗಾನ, ಮೂಡಲಪಾಯ (ದೊಡ್ಡಾಟ), ಪಡುವಲಪಾಯ, ಸಣ್ಣಾಟ ಹಾಗೂ ಗೊಂಬೆಯಾಟಗಳಂತಹ ವೈವಿಧ್ಯಮಯ ಕಲಾಪ್ರಕಾರಗಳಾಗಿ ಇದು ಬೆಳೆದಿದೆ. ಕೇವಲ ಮನರಂಜನೆಯಷ್ಟೇ ಅಲ್ಲದೆ, ಸಾಮಾಜಿಕ, ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಸ್ಥಳೀಯ ಭಾಷೆಯ ಬಳಕೆ, ಸಮುದಾಯಗಳ ಒಗ್ಗೂಡುವಿಕೆ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಇದರ ಕೊಡುಗೆ ಅಪಾರವಾಗಿದೆ. ಆಧುನಿಕ ಮನರಂಜನಾ ಮಾಧ್ಯಮಗಳ ನಡುವೆಯೂ ಜನಪದ ರಂಗಭೂಮಿಯು ಸಾಮಾಜಿಕ ಸಾಮರಸ್ಯ, ಶಿಕ್ಷಣ ಮತ್ತು ಪರಿವರ್ತನೆಯ ಪ್ರಬಲ ಸಾಧನವಾಗಿ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ.

Read More »

ಯಕ್ಷಗಾನ ಮತ್ತು ಕನ್ನಡ ರಂಗಭೂಮಿ ಸಂಬಂಧ

ಶರಣಮ್ಮ

178 to 182

ಕರ್ನಾಟಕದ ಸಾಂಸ್ಕೃತಿಕ ಹೆಮ್ಮೆಯಾದ ಯಕ್ಷಗಾನವು ಆಧುನಿಕ ಕನ್ನಡ ರಂಗಭೂಮಿಯ ಬೆಳವಣಿಗೆಗೆ ಭದ್ರ ಬುನಾದಿಯಾಗಿದೆ. ನೃತ್ಯ, ಸಂಗೀತ, ವಿಶಿಷ್ಟ ವೇಷಭೂಷಣ ಮತ್ತು ಅರ್ಥಪೂರ್ಣ ಸಂಭಾಷಣೆಗಳ ಅಪರೂಪದ ಸಂಗಮವಾಗಿರುವ ಈ ದೇಸಿ ಕಲೆಯು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವಿಶಿಷ್ಟವಾಗಿ ಬೆಳೆದಿದೆ. ತೆಂಕುತಿಟ್ಟು ಮತ್ತು ಬಡಗುತಿಟ್ಟು ಎಂಬ ಎರಡು ಪ್ರಮುಖ ಶೈಲಿಗಳನ್ನು ಹೊಂದಿರುವ ಯಕ್ಷಗಾನವು, ಪೌರಾಣಿಕ ಕಥೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಡಾ. ಶಿವರಾಮ ಕಾರಂತ ಮತ್ತು ಡಾ. ಚಂದ್ರಶೇಖರ ಕಂಬಾರರಂತಹ ದಿಗ್ಗಜರು ಈ ಸಾಂಪ್ರದಾಯಿಕ ಕಲೆಗೆ ಆಧುನಿಕ ರಂಗಭೂಮಿಯ ಸ್ಪರ್ಶ ನೀಡುವ ಮೂಲಕ ಹೊಸ ಆಯಾಮ ಒದಗಿಸಿದ್ದಾರೆ. ರಾತ್ರಿಯಿಡೀ ನಡೆಯುತ್ತಿದ್ದ ಬಯಲಾಟಗಳು ಇಂದು ಕಾಲಘಟ್ಟಕ್ಕೆ ತಕ್ಕಂತೆ ಸಂಕ್ಷಿಪ್ತಗೊಂಡು ಆಧುನಿಕ ರಂಗಮಂದಿರಗಳಿಗೂ ವಿಸ್ತಾರಗೊಂಡಿದ್ದು, ಜನಪದ ಕಲೆ ಮತ್ತು ಕನ್ನಡ ರಂಗಭೂಮಿಯ ನಡುವಿನ ಅವಿನಾಭಾವ ಸಂಬಂಧವನ್ನು ಸಾಬೀತುಪಡಿಸುತ್ತವೆ.

Read More »
View All Issues