ಶಾಂತಕವಿಗಳು ಮತ್ತು ಕನ್ನಡ ನಾಡು-ನುಡಿ ಚಿಂತನೆ
Main Article Content
Abstract
ಪ್ರಾಚೀನ ಕಾಲದಲ್ಲಿ ಅಖಂಡ ಭಾರತೀಯ ಸಂಸ್ಕೃತಿ ಹೊಂದಿದ ಭಾರತೀಯರಿದ್ದರೇ ಹೊರತು ರಾಜಕೀಯವಾಗಿ, ಆಡಳಿತಾತ್ಮಕವಾಗಿ ಭಾರತ ಒಂದು ದೇಶವಾಗಿ ಅಸ್ತಿತ್ವವಿದ್ದಿರಲಿಲ್ಲ. ಅಂದಿನ ಕನ್ನಡನಾಡಿನ ರಾಜ್ಯ-ಸಾಮ್ರಾಜ್ಯಗಳು ಸ್ವತಂತ್ರ ದೇಶಗಳಾಗಿ, ಸಾರ್ವಭೌಮತ್ವ ಹೊಂದಿದ್ದವು. ಇಂದಿನಂತೆ ಒಕ್ಕೂಟ ವ್ಯವಸ್ಥೆಯಲ್ಲಿರುವ ರಾಜ್ಯಗಳಂತೆ ರಾಷ್ಟ್ರೀಯತೆ ಮತ್ತು ಪ್ರಾಂತಿಯತೆಗಳ ದ್ವಂದ್ವವಿದ್ದಿರಲಿಲ್ಲ. ಅಂದು ಇವೆರಡೂ ಅಲ್ಲದ ‘ರಾಜಭಕ್ತಿ’ ಇತ್ತು. ಪ್ರಾಚೀನ ಕನ್ನಡ ಕವಿಗಳು ತಮ್ಮನ್ನಾಳ್ವ ರಾಜರಿಗೆ, ರಾಜ್ಯಕ್ಕೆ, ಸಾಮ್ರಾಜ್ಯಕ್ಕೆ, ರಾಜಭಕ್ತಿ-ರಾಜನಿಷ್ಠೆಯನ್ನು ತೋರಿಸುವದರ, ಮೂಲಕ, ನಾಡು-ನುಡಿಯ ಅಭಿಮಾನ ಪ್ರೇಮವನ್ನು ಹೊಂದಿದ್ದರು. ಇದನ್ನು ನಾವು ಕನ್ನಡದ ಮೊದಲ ಕೃತಿಯಾದ ಕವಿರಾಜಮಾರ್ಗದಲ್ಲಿ “ಕಾವೇರಿಯಿಂದ ಮಾ ಗೋದಾವರಿ ವರಮಿರ್ದ ನಾಡದಾ ಕನ್ನಡದೊಳ್’’ ಎನ್ನುವಲ್ಲಿ ತನ್ನ ಕಾಲದ ಕನ್ನಡ ನಾಡಿನ ಮೇರೆಗಳನ್ನು ಹೇಳಿದ್ದಾನೆಯೇ ಹೊರತು ಇಡೀ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಿಲ್ಲಾ. ಕನ್ನಡ ನಾಡಿನ ಅರಸರು, ಉತ್ತರದಲ್ಲಿ ಹಿಮಾಲಯದವರೆಗೂ, ಪಶ್ಚಿಮದ ಸಮುದ್ರದವರೆಗೂ ದಿಗ್ವಿಜಯ ಬಿಸಿರುವದನ್ನು ಅಥವಾ ರಾಜ್ಯದ ಗಡಿ ವಿಸ್ತರಿಸಿರುವದನ್ನು ಕನ್ನಡಿಗರ ಸಾಹಸ, ಶೌರ್ಯ, ಹಿರಿಮೆ, ಎಂದೊ, ಕನ್ನಡ ನಾಡಿನ ಮೇರೆಗಳೆಂದೂ ವರ್ಣಿಸಿರುದುಂಟು. ಕನ್ನಡ ಕವಿಗಳು ಅಖಂಡ ಭಾರತೀಯ ಸಂಸ್ಕೃತಿಯ ಪರಂಪರೆಗೆ ಸೇರಿದ ಪೌರಾಣಿಕ ವಸ್ತುವನ್ನು ತಮ್ಮನ್ನಾಳುವ ರಾಜರು, ಸಾಮಂತರಿರಲಿ, ಚಕ್ರವರ್ತಿಗಳಿರಲಿ, ಅವರಿಗೆ ಆ ರಾಜ್ಯಕ್ಕೆ ಸಮಿಕರಿಸಿಯೊ, ಆರೋಪಿಯಿಸೋ ರೂಪಾಂತರಿಸಿಯೋ ಕಾವ್ಯ ರಚಿಸಿರುವುದುಂಟು. ಮೂಲವಸ್ತುವಿನಲ್ಲಿಯ ಉತ್ತರ ಭಾರತದ ನದಿಯಯನ್ನೊ, ಪ್ರದೇಶವನ್ನೊ, ಕನ್ನಡ ನಾಡಿನ ಪ್ರದೇಶಕ್ಕೊ, ನದಿಗೋ ಆರೋಪಿಸಿ ವರ್ಣಿಸಿರುವರು. ಆ ಪಾತ್ರ, ಆ ಸನ್ನಿವೇಶವನ್ನು ಕನ್ನಡ ನಾಡಿನ ಇಂತಹ ನದಿಗೆ, ಇಂತಹ ಪ್ರದೇಶಕ್ಕೆ ಬಂದಿತ್ತೆಂದು ವರ್ಣಿಸಿರುವುದುಂಟು. ಹೀಗೆ ಮೂಲವಸ್ತುವನ್ನು ಸ್ವೀಕರಿಸುವುದರ ಮೂಲಕ ಸಂಸ್ಕೃತಿಕವಾಗಿ ಭಾರತೀಯತ್ವವನ್ನು ಒಪ್ಪಿಕೊಂಡು ಅದನ್ನು ತಮ್ಮ ನಾಡಿಗೆ, ಪ್ರದೇಶಕ್ಕೆ, ಭಾಷೆಗೆ ರೂಪಾಂತರಿಸಿ ಸೀಮಿತಗೊಳಿಸಿಕೊಳ್ಳುವಲ್ಲಿ ತಮ್ಮ ನಾಡು-ನುಡಿಯ ಪ್ರೇಮವನ್ನು ಮೆರೆದಿರುವರು. ಈ ರೀತಿಯ ಕನ್ನಡದ ಆದಿ ಕವಿ ಪಂಪನು ಮಹಾಭಾರತದ ವಸ್ತುವನ್ನು ಕನ್ನಡ ನಾಡಿನ ತನ್ನ ಆಶ್ರಯದಾತ ಅರಸನಾದ ಅರಿಕೇಸರಿಗೆ ಸಮೀಕರಿಸಿ ‘ವಿಕ್ರಮಾರ್ಜುನ ವಿಜಯ’ವನ್ನು ರಚಿಸಿರುವನು. ಇದೇ ರೀತಿ ಮುಂದೆ ಬಂದ ಕನ್ನಡ ಕವಿಗಳ ಕಾವ್ಯ ಪರಂಪರೆಯಲ್ಲಿ ನಾಡು-ನುಡಿಯ ಬಗೆಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿರುವುದನ್ನು ಕಾಣುತ್ತೇವೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಅನಂತನಾರಾಯಣ ಎಸ್., (2011), ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ, ಡಿವಿಕೆ ಮೂರ್ತಿ ಪ್ರಕಾಶನ, ಮೈಸೂರು.
ಧಾರವಾಡಕರ ರಾ.ಯ., (2013), ಹೊಸಗನ್ನಡ ಸಾಹಿತ್ಯದ ಉದಯಕಾಲ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ತಿಪ್ಪೇರುದ್ರಸ್ವಾಮಿ ಎಚ್., (2018), ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಡಿ.ವಿ.ಕೆ.ಮೂರ್ತಿ ಪ್ರಕಾಶನ, ಮೈಸೂರು.
ನಾಗರಾಜ ಡಿ.ಆರ್., (1987), ಶಕ್ತಿ ಶಾರದೆಯ ಮೇಳ, ಅಕ್ಷರ ಪ್ರಕಾಶನ, ಸಾಗರ.
ನಾಗರಾಜ ಡಿ.ಆರ್., (1996), ಸಾಹಿತ್ಯ ಕಥನ, ಅಕ್ಷರ ಪ್ರಕಾಶನ, ಸಾಗರ.
ಬಂಜಗೆರೆ ಜಯಪ್ರಕಾಶ, (2000), ಕನ್ನಡ ರಾಷ್ಟ್ರೀಯತೆ, ಕ್ರಾಂತಿಸಿರಿ ಪ್ರಕಾಶನ, ಬೆಂಗಳೂರು.
ಶ್ರೀಕಂಠಯ್ಯ ಬಿ.ಎಂ. (ಸಂ.), (2011), ಕನ್ನಡ ಬಾವುಟ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಶಿವರುದ್ರಪ್ಪ ಜಿ.ಎಸ್. (ಸಂ), (1988), ರಾಷ್ಟ್ರೀಯತೆ ಮತ್ತು ಆಧುನಿಕ ಕನ್ನಡ ಸಾಹಿತ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.