ಸಿದ್ಧಲಿಂಗಯ್ಯನವರ ಕಾವ್ಯ: ಸಾಮಾಜಿಕ ಕ್ರೋಧದ ನೆಲೆಯಿಂದ ಆಧ್ಯಾತ್ಮಿಕ ಅನ್ವೇಷಣೆಯ ಕಡೆಗೆ
Main Article Content
Abstract
ಕವಿ ಸಿದ್ಧಲಿಂಗಯ್ಯನವರ ಮೊದಲ ʼಹೊಲೆಮಾದಿಗರ ಹಾಡುʼ ಕವನ ಸಂಕಲನದಿಂದ ಅವರ ಕಡೆಯ ʼಬೋಧಿವೃಕ್ಷದ ಕೆಳಗೆʼ ಸಮಗ್ರ ಕಾವ್ಯದ ಶೀರ್ಷಿಕೆಗಳನ್ನು ರೂಪಕದಂತೆ ಪರಿಭಾವಿಸುವುದಾದರೆ, ಸಮಾಜದಲ್ಲಿನ ಶೋಷಣೆ, ತಾರತಮ್ಯ, ಅಸಮಾನತೆಯಿಂದ ಕನಲಿ ಸಂಘರ್ಷದ ಪ್ರತಿಕ್ರಿಯೆ ಹಾಗೂ ಕೀಳರಿಮೆಯಿಂದ ನರಳುತ್ತಿದ್ದ ವಿಸರ್ಜಿತ ಲೋಕದಿಂದ ಹುಟ್ಟಿದ ಬಂಡಾಯದಂತೆ ಸ್ಫೋಟಿಸಿದ ಅವರ ಕವಿತೆಗಳು ಸಮ ಸಮಾಜದ ಹಂಬಲವಾದ ಸಾಮರಸ್ಯದ ಕಡೆಗೆ ಸಾಗಿರುವ ಸೃಜನಶೀಲ ಪಯಣದ ವಿಕಾಸ ಎಂದು ವ್ಯಾಖ್ಯಾನಿಸಬಹುದು. ಇಲ್ಲಿ ಆತ್ಯಂತಿಕ ತೀವ್ರತೆಯಿಂದ ಹುಟ್ಟಿದ ಬಂಡಾಯ ಸಮುದಾಯದಲ್ಲಿ ಸ್ವಾಭಿಮಾನ ಹಾಗೂ ಮಾನವ ಘನತೆಯನ್ನು ಮೂಡಿಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಸಮಷ್ಟಿ ಬದುಕನ್ನು ಕುರಿತ ಗಾಢ ವಿಷಾದ ಈ ಅನ್ಯಾಯದ ವ್ಯವಸ್ಥೆ ಬದಲಾಗಬೇಕೆಂಬ ಹಂಬಲ ಇಲ್ಲಿನ ಕವಿತೆಗಳು ಪ್ರತಿಪಾದಿಸುವ ನಿಲುವು.
ಸಿದ್ಧಲಿಂಗಯ್ಯನವರ ಕವಿತೆಗಳಿಗೆ ಮುಖಾಮುಖಿಯಾಗುವುದು ಎಂದರೆ, 1970 ರ ದಶಕದ ಜನಪರ ಚಳವಳಿಗಳು, ಹೋರಾಟಗಳೊಂದಿಗೆ ಮುಖಾಮುಖಿಯಾಗುವುದು ಎಂದರ್ಥ. ಈ ನೆಲದ ಅಸ್ಪೃಶ್ಯರ, ದಮನಿತರ, ಶ್ರಮಿಕರ, ನೊಂದವರ ನಿಟ್ಟುಸಿರು ಅಕ್ಷರದ ಮೂಲಕ ಜೀವತಳೆದಿರುವ ಆದಿಮ ಪರಂಪರೆಯೊಂದಿಗೆ ಅನುಸಂಧಾನ ಮಾಡುವುದು ಎಂದರ್ಥ. ಸಿದ್ಧಲಿಂಗಯ್ಯನವರು ಕನ್ನಡದ ಪ್ರಥಮ ದಲಿತ ಕವಿಯೇ ಅಲ್ಲವೇ ಎನ್ನುವುದು ಚರ್ಚಾಸ್ಪದವಾಗಿರಬಹುದು. ಆದರೆ ದಲಿತ-ಬಂಡಾಯ ಸಾಹಿತ್ಯ ಹಾಗೂ ಚಳವಳಿಗೆ ತಮ್ಮ ಹೋರಾಟದ ಹಾಡುಗಳ ಮೂಲಕ ಸ್ಥಾಪಿತ ಮೌಲ್ಯಗಳು ಹಾಗೂ ಯಾಜಮಾನ್ಯ ಸಂಸ್ಕೃತಿಗೆ ಪ್ರತಿರೋಧವಾಗಿ ಅಲಕ್ಷಿತರ ಸಮಷ್ಟಿ ಪ್ರಜ್ಞೆಯನ್ನು ಹಕ್ಕೊತ್ತಾಯದ ಧಾಟಿಯಲ್ಲಿ ಅಭಿವ್ಯಕ್ತಿಸಿದವರಲ್ಲೊಬ್ಬರು ಎಂಬುದು ನಿರ್ವಿವಾದ. ಪ್ರಸ್ತುತ ಲೇಖನದಲ್ಲಿ ʼಹೊಲೆಮಾದಿಗರ ಕೇರಿಯಿಂದ ಬುದ್ಧನೆಡೆಗೆʼ ಸಾಗಿರುವ ಕವಿ ಸಿದ್ಧಲಿಂಗಯ್ಯನವರ ಸೃಜನಶೀಲ ಕಾವ್ಯಯಾನವನ್ನು ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಸಿದ್ಧಲಿಂಗಯ್ಯ, (2021), ಬೋಧಿವೃಕ್ಷದ ಕೆಳಗೆ (ಸಮಗ್ರ ಕಾವ್ಯ), ಕಿರಂ. ಪ್ರಕಾಶನ, ಬೆಂಗಳೂರು.
ಸಿದ್ಧಲಿಂಗಯ್ಯ, (2009), ಉರಿಕಂಡಾಯ (ಸಾಂಸ್ಕೃತಿಕ ಸಂವೇದನೆಯ ತಲ್ಲಣ): ಅಂಕಿತ ಪುಸ್ತಕ, ಬೆಂಗಳೂರು.
ಸಿದ್ಧಲಿಂಗಯ್ಯ, (2007), ಜನಸಂಸ್ಕೃತಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಆಶಾದೇವಿ ಎಂ.ಎಸ್., (2002), ಉರಿ ಚಮ್ಮಾಳಿಗೆ: ದಲಿತ ಚಳವಳಿಯ ಅಧ್ಯಯನ (ಡಿ.ಆರ್. ನಾಗರಾಜ್ ಅವರ ʼದಿ ಫ್ಲೇಮಿಂಗ್ ಫೀಟ್ʼ ಕೃತಿಯ ಅನುವಾದ), ವಸಂತ ಪ್ರಕಾಶನ, ಬೆಂಗಳೂರು.