ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಪಾಶುಪತ-ಕಾಳಾಮುಖ ಸಾಧನ ಪಂಥ

Main Article Content

ಶೋಭಾರಾಣಿ ಎನ್.

Abstract

ಭಾರತೀಯ ಮತ್ತು ವಿಶೇಷವಾಗಿ ಕರ್ನಾಟಕದ ಆಧ್ಯಾತ್ಮಿಕ ಆರಾಧನಾ ಪಂಥ ಗಳಲ್ಲಿ ಪಾಶುಪತ-ಕಾಳಾಮುಖ ಪಂಥವು ಬಹು ಮುಖ್ಯವಾದುದು. ಆಧ್ಯಾತ್ಮಿಕ ಪರಂಪರೆಯ ಹಿನ್ನೆಲೆಯಲ್ಲಿ ಮಾತ್ರವಲ್ಲದೇ, ದೇವಾಲಯ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೂಡ ಈ ಸಾಧನಾ ಪಂಥದ ಸಾಧಕರು ನೀಡಿರುವ ಕೊಡುಗೆ ಅಪಾರವಾದುದು. ಕರ್ನಾಟಕದ ಬಹುತೇಕ ದೇವಾಲಯಗಳು ಪಾಶುಪತ-ಕಾಳಾಮುಖರಿಂದ ನಿರ್ಮಾಣಗೊಂಡಿವೆ. ಒಂದು ಕಾಲದಲ್ಲಿ ಅಂದರೆ ಕ್ರಿ.ಶ. 12ನೇ ಶತಮಾನಕ್ಕಿಂತ ಸಾಕಷ್ಟು ಪೂರ್ವದಲ್ಲೆ ಈ ಮಾರ್ಗವು ಕರ್ನಾಟಕದಲ್ಲಿ ಪ್ರಮುಖ ಆಧ್ಯಾತ್ಮಿಕ ಮಾರ್ಗವಾಗಿ ಪ್ರಭಾವಶಾಲಿಯಾಗಿತ್ತು. ಹಲವು ರಾಜರುಗಳು ಈ ಮಾರ್ಗಕ್ಕೆ ಪ್ರೋತ್ಸಾಹ ಮತ್ತು ಆಶ್ರಯವನ್ನು ನೀಡಿದ್ದಲ್ಲದೆ, ಸ್ವತಃ ಇದರ ಅನುಯಾಯಿಗಳೂ ಆಗಿದ್ದ ಉದಾಹರಣೆಗಳಿವೆ. ಲಾಕುಳೀಶ, ಕಾಳಾಮುಖ, ಪಾಶುಪತ, ಕಾಪಾಲಿಕ ಮೊದಲಾದ ದಕ್ಷಿಣಾಚಾರದ ಪಂಥಗಳೆಲ್ಲ ಒಂದೆಯೇ ಅಥವಾ ಬೇರೆ ಬೇರೆಯೇ, ಒಂದೇ ಪಂಥದ ವಿಭಿನ್ನ ಶಾಖೆಗಳೇ ಎಂಬುದರ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಡಾ. ಭಂಡಾರ್ಕರ್, ಕಪಟರಾಳ ಕೃಷ್ಣರಾವ್ ಮೊದಲಾದ ದೇಶೀ ವಿದ್ವಾಂಸರೂ, ಡಾ. ಲಾರೆನ್ ಝನ್ ರಂತಹ ವಿದೇಶೀ ವಿದ್ವಾಂಸರು, ಮತ್ತು ಈಚೆಗೆ ಡಾ. ವಸುಂಧರ ಫಿಯೋಜಾರಂತಹ ಆಧುನಿಕ ವಿದ್ವಾಂಸರೂ ಶೈವ ಸಾಧನಾ ಪಂಥ ಗಳನ್ನು ಕುರಿತು ಸಂಶೋಧನೆ ನಡೆಸಿದ್ದಾರಾದರೂ ಸಾಕಷ್ಟು ಅಗತ್ಯ ದಾಖಲೆಗಳ ಅಭಾವದಿಂದ ಈ ಶೈವಪಂಥಗಳನ್ನು ಕುರಿತು ಹೆಚ್ಚಿನ ಸಂಶೋಧನೆಗಳು ನಡೆದಿಲ್ಲ. ಲಾಕುಳೀಶರು ಕರ್ನಾಟಕದಲ್ಲಿ ನೆಲೆನಿಂತದ್ದು ಸರಿಸುಮಾರು ಬಾದಾಮಿ ಚಾಲುಕ್ಯರ ಕಾಲದಲ್ಲಾದರೂ ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಈ ಪಂಥ ದ ಮಹತ್ವ ಉತ್ಕರ್ಷಕ್ಕೇರಿದ್ದು ಕ್ರಿ.ಶ.12ನೇ ಶತಮಾನದಲ್ಲಿ, ಕಲ್ಯಾಣಿ ಚಾಲುಕ್ಯರ ಆಡಳಿತದ ಅವಧಿಯಲ್ಲಿ. ಈ ಕಾಲದಲ್ಲಿ ಕಾಳಾಮುಖರು ಕರ್ನಾಟಕದ ರಾಜ ಕೀಯದಲ್ಲೂ ಪ್ರಭಾವಿಗಳಾಗಿದ್ದುದಾಗಿ ಅರಸೀಕೆರೆಯ ಸೋಮೇಶ್ವರನ ಶಾಸನ ಮೊದಲಾದವುಗಳಿಂದ ತಿಳಿದುಬರುತ್ತದೆ. ಈ ಮಾರ್ಗದ ಪ್ರಭಾವ ಕರ್ನಾಟಕದ ವಚನ ಚಳುವಳಿಯ ಮೇಲೂ ಸಾಕಷ್ಟು ಆಗಿದ್ದು, ಬಹಳಷ್ಟು ವಚನಕಾರರ ಸಾಧನೆ ಮತ್ತು ವೈಚಾರಿಕತೆಯನ್ನು ಈ ಪಂಥ ಪ್ರಭಾವಿಸಿದೆ. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಇಷ್ಟು ಮಹತ್ವದ್ದಾಗಿದ್ದ ಆಧ್ಯಾತ್ಮಿಕ ಪಂಥವು ಇಂದು ಮುಖ್ಯವಾಹಿನಿಯಿಂದ ದೂರವಾಗಿದೆ. ಇದನ್ನು ಮತ್ತೆ ಶೋಧಿಸಿಕೊಳ್ಳಬೇಕಾದ ಅಗತ್ಯವನ್ನು ವಿವರಿಸಿಕೊಳ್ಳುವುದು ಮತ್ತು ಕಂಡುಕೊಳ್ಳುವುದು ಇಲ್ಲಿನ ಉದ್ದೇಶವಾಗಿದೆ.

Article Details

Section

Research Articles

Author Biography

ಶೋಭಾರಾಣಿ ಎನ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಂಗಳೂರು.

References

ಅಬ್ದುಲ್ ಹಮೀದ್. (1998), ಸೂಫಿಪಥ ಮತ್ತು ಶರಣಪಥಗಳ ತೌಲನಿಕ ಅಧ್ಯಯನ. ಪ್ರಿಯದರ್ಶಿನಿ ಪ್ರಕಾಶನ, ಮೈಸೂರು.

ಗೌರಮ್ಮ ವೈ. ಎಸ್. (2001). ಭಾರತೀಯ ತತ್ತ್ವಲಹರಿ ಸಂಕೇತ ಪ್ರಕಾಶನ. ಬೆಂಗಳೂರು.

ಶ್ರೀಕಂಠಶಾಸ್ತ್ರೀ ಎಸ್. (2006), ಭಾರತೀಯ ಸಂಸ್ಕೃತಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೆಂಗಳೂರು.

ಅನಂತನಾಗೇಂದ್ರಭಟ್ಟ. (2006). ಭಾರತೀಯ ತತ್ತ್ವಶಾಸ್ತ್ರ. ತಳಗವಾದಿ ಪ್ರಕಾಶನ. ಮೈಸೂರು.

ಸಿದ್ದಯ್ಯ ಮಠದ. (2006). ವೀರಶೈವ-ಕಾಶ್ಮೀರಿಶೈವ: ಒಂದು ತೌಲನಿಕ ಅಧ್ಯಯನ. ದರ್ಶನ ಪ್ರಕಾಶನ, ಬೆಂಗಳೂರು.

ಕುಮಾರ್ ಜೆ. (2008). ನೂರೊಂದು ವಿರಕ್ತರು-ಒಂದು ಅಧ್ಯಯನ. ಸಪ್ನ ಬುಕ್ ಹೌಸ್. ಬೆಂಗಳೂರು.

ವಸುಂಧರಾ ಫಿಲಿಯೋಜಾ. ಹನುಮಾಕ್ಷಿ ಗೋಗಿ (ಅನು) (2007). ಧಾರವಾಡ ಜಿಲ್ಲೆಯ ಕಾಳಾಮುಖ ಮತ್ತು ಪಾಶುಪತ ದೇವಾಲಯಗಳು, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಚಿದಾನಂದಮೂರ್ತಿ ಎಂ. (2015). ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ. ಸಪ್ನ ಬುಕ್ ಹೌಸ್ ಬೆಂಗಳೂರು.