ಬಯಲಾಟದಲ್ಲಿನ ಪ್ರಸ್ತುತ ಮಾರ್ಪಾಡುಗಳು

Main Article Content

ಹುಲುಗಯ್ಯ ನಾಯಕರ್
ಕೆ. ರಾಮಕೃಷ್ಣಯ್ಯ

Abstract

ನಮ್ಮ ಕನಾರ್ಟಕದ ಜನಪದ ರಂಗಭೂಮಿಯಲ್ಲಿ ಬಯಲಾಟಕ್ಕೆ ಅತ್ಯಂತ ಪ್ರಮುಖವಾದ ಸ್ಥಾನವಿದೆ. ಬಯಲಾಟದ ರಂಗಸಜ್ಜಿಕೆಯನ್ನು ನೋಡುವುದಾದರೆ ಇದಕ್ಕೆ ಭವ್ಯವಾದ ರಂಗಮಂಟಪ ನಿರ್ಮಿಸುತ್ತಾರೆ. ರಂಗ ಮಂಟಪವನ್ನು ಅಟ್ಟದಂತೆ ನಿರ್ಮಿಸಿ ಮರದ ಹಲಗೆಗಳನ್ನು ಹಾಕುತ್ತಾರೆ. ಅದಕ್ಕಾಗಿಯೇ ಬಯಲಾಟವನ್ನು ಅಟ್ಟದಾಟವೆಂತಲೂ, ದೊಡ್ಡಾಟವೆಂತಲೂ ಕರೆಯುತ್ತಾರೆ. ರಂಗಮಂಟಪಕ್ಕೆ ಅಟ್ಟ, ಚಪ್ಪರ, ಹಂದರ ಎಂದು ಕರೆಯುತ್ತಾರೆ. ದೇವಸ್ಥಾನಗಳ ಮುಂದಿನ ವಿಶಾಲ ಸ್ಥಳದಲ್ಲಿ ಅಟ್ಟದ ನಿರ್ಮಾಣವಾಗುತ್ತದೆ. ಆಟಕ್ಕಿಂತ ಎರಡು ದಿನ ಮೊದಲು ಮಂಟಪ ನಿರ್ಮಾಣ ಕಾರ್ಯ ಪ್ರಾರಂಭವಾಗುತ್ತದೆ. ಬಯಲಾಟದ ಮೂಲವನ್ನು ಹುಡುಕುತ್ತಾ ಹೋದಾಗ ಅವು ಮೊದಲು ದೇವಸ್ಥಾನದ ಆಶ್ರಯದಲ್ಲಿ ಬೆಳೆದು ನಂತರ ಬೀದಿಗೆ ಬಂದು ಜನಸಾಮಾನ್ಯರ ಮತ್ತು ಊರಿನ ಹಿರಿಯರ ಆಶ್ರಯದಲ್ಲಿ ಬೆಳೆದು ಬಂದಿರುವುದನ್ನು ಅನೇಕ ವಿದ್ವಾಂಸರು ತಮ್ಮ ಸಂಶೋಧನೆಯ ಮೂಲಕ ಕಂಡುಕೊಂಡಿರುವುದನ್ನು ನೋಡಬಹುದಾಗಿದೆ. ದೇವಸ್ಥಾನದ ಆಶ್ರಯದಲ್ಲಿ ಬೆಳೆದ ಮಾತ್ರಕ್ಕೆ ಆ ಕಲೆಯು ಧಾರ್ಮಿಕವಾದುದ್ದಾಗಿರುತ್ತದೆ ಎಂಬುದನ್ನು ಸಂಶೋಧಕರು ಅಲ್ಲಗಳೆಯುತ್ತಾರೆ. ಹಿಂದಿನ ಕಾಲದಲ್ಲಿ ಸಮಾಜದ ಯಾವುದೇ ಚಟುವಟಿಕೆಗಳು ದೇವಸ್ಥಾನಗಳಲ್ಲಿ ಮೊದಲು ಪ್ರಾರಂಭವಾಗುತ್ತಿದ್ದವು. ಹಾಗೆ ಪ್ರಾರಂಭವಾದ ಪ್ರತಿ ಕಲೆಯು ಒಂದು ಧಾರ್ಮಿಕ ಶಿಸ್ತಿಗೆ ಒಳಪಟ್ಟು ಅಚ್ಚುಕಟ್ಟಾಗಿ ಬೆಳೆಸುವ ಧಾರ್ಮಿಕ ಶ್ರದ್ದೆಯು ಜನರಲ್ಲಿ ಮೂಡುತ್ತಿತ್ತು. ನಮ್ಮ ಬಹಳಷ್ಟು ಬಯಲಾಟಗಳಿಗೆ ವಸ್ತುವಿನ ಆಯ್ಕೆ ನಡೆದಿದ್ದು ಪುರಾಣಗಳಿಂದ, ರಾಮಾಯಣ, ಮಹಾಭಾರತ, ಭಾಗವತ ಮುಂತಾಗಿ ಇಲ್ಲಿಯೂ ಯಾವುದೋ ಒಂದು ಗಂಭೀರ ತತ್ವದ ಪ್ರತಿಪಾದನೆಗಾಗಿ ಕೃತಿಕಾರ ವಸ್ತುವನ್ನು ಅಥವಾ ಕಥೆಯನ್ನು ಎತ್ತಿಕೊಳ್ಳುವುದಿಲ್ಲ. ಒಂದು ರೋಚಕ ಕಥೆಯ ನಿರೂಪಣೆ ಅಥವಾ ಒಂದು ಸರಳ ನೀತಿಯ ಪ್ರತಿಪಾದನೆ ಮಾತ್ರ ಇವನ ದೃಷ್ಟಿಯಲ್ಲಿ ಉಳಿಯುತ್ತದೆ. ಇಂದಿಗೂ ಯಕ್ಷಗಾನದ ಅನೇಕ ತಂಡಗಳು ತಮ್ಮ ಪೂರ್ವ ಪದ್ಧತಿಯಾದ ಧಾರ್ಮಿಕ ನೆಲೆಯ ಸಂಬಂಧವನ್ನು ಉಳಿಸಿಕೊಂಡು ಅದೇ ಮಾರ್ಗದಲ್ಲಿ ಬೆಳೆಸಿಕೊಂಡು ಬಂದಿರುವುದನ್ನು ನೋಡಬಹುದಾಗಿದೆ. ಮೂಡಲಪಾಯದ ಬಯಲಾಟ ಪ್ರಭೇದಗಳು ಎರಡು ಕಾರಣದಿಂದ ದೇವಸ್ಥಾನದ ನೆಲೆಯನ್ನು ಕಳೆದುಕೊಂಡವು ಎಂಬುದಾಗಿ ವಿದ್ವಾಂಸರು ತಿಳಿಸುತ್ತಾರೆ. ಒಂದನೆಯದಾಗಿ ಉತ್ತರ ಕರ್ನಾಟಕದ ಕಡೆಗೆ ಬೀಸಿದ ಕಂಪನಿ ನಾಟಕಗಳ ಪ್ರಭಾವ. ಎರಡನೆಯದಾಗಿ ಬೆಂಗಳೂರು ಆಧುನಿಕ ವಿಜ್ಞಾನ ಸಾಂಸ್ಕೃತಿಕ ಮೂಲ ಮುಖ್ಯ ಪ್ರಸರಣ ಕೇಂದ್ರವಾಗಿ ರೂಪಗೊಂಡದ್ದು. ಬಯಲಾಟದ ಇತಿಹಾಸವು 150 ವರ್ಷಗಳಿಗಿಂತ ಹಿಂದೆ ಹೋಗುವುದಿಲ್ಲ. ಪ್ರಾರಂಭದಲ್ಲಿ ಪ್ರಚಲಿತವಿದ್ದ ಆಟಗಳಲ್ಲಿ ಹಾಡು ಮತ್ತು ಕುಣಿತಗಳ ಪ್ರಧಾನವಾಗಿದ್ದವು ಎಂದು ಕಂಡುಬರುತ್ತದೆ. ಬೈಲಹೊಂಗಲದ ದುರುದುಂಡೇಶ ಕವಿ ರಚಿಸಿದ 'ಪ್ರಭುದೇವ' ಹಾಗೂ 'ಕೃಷ್ಣಹರಣ' ಯಕ್ಷಗಾನ ಕೃತಿಗಳಲ್ಲಿ ನಡುನಡುವೆ ಲಿಖಿತ ಸಂಭಾಷಣೆಯಿದ್ದು ನಾಟಕೀಯ ರೂಪ ಎದ್ದು ಕಾಣುತ್ತದೆ. ಈಗ ಲಭ್ಯವಿರುವ ದೊಡ್ಡಾಟಗಳ ಕೃತಿಗಳಲ್ಲಿ 'ಕುಮಾರರಾಮ' ಪ್ರಾಚೀನವಾದ ದೊಡ್ಡಟದ ಕೃತಿಯಾಗಿದೆ. ಬಳ್ಳಾರಿಯಲ್ಲಿ 1900 ಸುಮಾರಿಗೆ ಪ್ರಕಟಗೊಂಡ ದೊಡ್ಡಾಟ ಕೃತಿಗಳು ಅಲ್ಲಲ್ಲಿ ಕಾಣಸಿಗುತ್ತವೆ. ದೊಡ್ಡಾಟಗಳು 19ನೇ ಶತಮಾನದ ಉತ್ತರಾರ್ಧದಲ್ಲಿ ಹೆಚ್ಚು ಜನಪ್ರಾಯವಾಗಿದ್ದವು ಎಂಬುದಕ್ಕೆ ಈ ಕೃತಿಗಳು ಕಾರಣವಾಗುತ್ತವೆ. ಈ ಪ್ರಕಟಣೆಯ ನಂತರ ಅನೇಕ ಕವಿಗಳು ದೊಡ್ಡಾಟವನ್ನು ರಚಿಸಿ ಮತ್ತಷ್ಟು ಜನಪ್ರಿಯಗೊಳಿಸಿದರು. ಹಸ್ತಪ್ರತಿಗಳು ಊರಿಂದ ಊರಿಗೆ ಸಂಚರಿಸಿದ್ದುರಿಂದ ಕವಿಯ ಹೆಸರನ್ನು ಗುರುತಿಸುವುದು ಕಷ್ಟದ ಕೆಲಸವಾಗಿದೆ ಎಂಬುದನ್ನು ವಿದ್ವಾಂಸರಿಲ್ಲಿ ವ್ಯಕ್ತಪಡಿಸುತ್ತಾರೆ. ಜನಪದ ರಂಗಭೂಮಿಯಲ್ಲಿ ಪ್ರಸಿದ್ದಿ ಪಡೆದಿರುವಂತಹ ಈ ಬಯಲಾಟವು ಈಗ ಅತ್ಯಂತ ಕ್ಷೀಣವಾದ ಸ್ಥಿತಿಯಲ್ಲಿದೆ.

Article Details

Section

Research Articles

Author Biographies

ಹುಲುಗಯ್ಯ ನಾಯಕರ್

ಸಂಶೋಧನಾ ವಿದ್ಯಾರ್ಥಿ, ಪ್ರದರ್ಶನ ಕಲಾ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ಕೆ. ರಾಮಕೃಷ್ಣಯ್ಯ

ಪ್ರಾಧ್ಯಾಪಕರು, ಪ್ರದರ್ಶನ ಕಲಾ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

References

ರಾಮಚಂದ್ರೇಗೌಡ ಹಿ. ಶಿ. (1998), ಜಾನಪದ: ಸಾಂಸ್ಕೃತಿಕ ಆಯಾಮಗಳು. ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಆರಡಿಮಲ್ಲಯ್ಯ ಕಟ್ಟೇರ. (2021). ಸೈಂಧವ ಸಂಕಥನ. ಪಲ್ಲವ ಪ್ರಕಾಶನ. ಬಳ್ಳಾರಿ.

ಶಿವರಾಮ ಕಾರಂತ ಕೆ. (2007). ಯಕ್ಷಗಾನ ಬಯಲಾಟ. ರವೀಂದ್ರ ಪುಸ್ತಕಾಲಯ. ಬೆಂಗಳೂರು.

ಚಕ್ಕೆರೆ ಶಿವಶಂಕರ್. (2018). ಕರ್ನಾಟಕ ಜನಪದ ರಂಗಭೂಮಿ. ಕರ್ನಾಟಕ ಜಾನಪದ ಪರಿಷತ್ತು. ಬೆಂಗಳೂರು.

ಬೋರಲಿಂಗಯ್ಯ ಹಿ. ಚಿ. (2002). ಕರ್ನಾಟಕದ ಜನಪದ ಕಲೆಗಳ ಕೋಶ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಶ್ರೀರಾಮ ಇಟ್ಟಣ್ಣವರ. (2019). ಬಯಲಾಟದ ಲೇಖನಗಳು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.