ಕನ್ನಡ ರಂಗಭೂಮಿಗೆ ನಾಟ್ಯ ಕಲಾಪ್ರಪೂರ್ಣ 'ಬಳ್ಳಾರಿ ರಾಘವ'ರ ಕೊಡುಗೆ
Main Article Content
Abstract
ಬಳ್ಳಾರಿಯ ರಾಘವರು ಈ ನಾಡು ನುಡಿ ಕಂಡ ಅದ್ಭುತವಾದ ಪ್ರತಿಭೆ. ಅವರು ಎರಡು ರಾಜ್ಯಗಳ ಸಾಂಸ್ಕೃತಿಕ ಲೋಕದ ಸಂಪತ್ತು ಎನಿಸಿದ್ದಾರೆ. ಕೇವಲ ತಮ್ಮ ಅಭೂತಪೂರ್ವ ಅಭಿನಯ ಚಾತುರ್ಯದ ಮೂಲಕವೇ ಇಡೀ ವಿಶ್ವದ ಗಮನ ಸೆಳೆದ ಧೀಮಂತ ಕಲಾ ಚೇತನ. ಇಂತಹ ಅಗಮ್ಯ ಚೇತನವೊಂದು ನಮ್ಮ ಈ ಗಡಿ ಭಾಗದಲ್ಲಿ ಆಗು ಹೋಗಿರುವುದು ನಮ್ಮೆಲ್ಲರ ಸುದೈವವೇ ಸರಿ. ಹುಟ್ಟಿದ್ದು ಅನಂತಪುರ ಜಿಲ್ಲೆಯ ತಾಡಪತ್ರಿಯಲ್ಲಾದರೂ ತಮ್ಮ ಬೆಳವಣಿಗೆಯನ್ನು ಕಂಡು ಕೊಂಡಿದ್ದೆಲ್ಲಾ ಬಳ್ಳಾರಿಯ ತಮ್ಮ ಮಾವನಾವರಾದ ಖ್ಯಾತ ವಕೀಲ, ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಾಮಾಚಾರ್ಯರ ಒಡನಾಟದಲ್ಲಿಯೇ ಸಾಗಿತು. ಮೊದ ಮೊದಲು ವಕೀಲ ವೃತ್ತಿಯಲ್ಲಿ ಪಾಂಡಿತ್ಯಗಳಿಸಲು ಬಳ್ಳಾರಿಗೆ ಬಂದು ನಾಟಕ ಕಲೆಯಲ್ಲಿ ನೈಪುಣ್ಯತೆಯನ್ನು ಗಳಸಿದರು. ಇದಕ್ಕೆ ಮೂಲ ಪ್ರೇರಣೆ ಮಾವನವರಾದ ಧರ್ಮಾವರಂ ರಾಮಕೃಷ್ಣಮಾಚಾರ್ಯರು ಹಾಗೂ ಆಂಧ್ರ ಚಾರಿತ್ರಿಕ ನಾಟಕ ಪಿತಾಮಹ ಕೋಲಾಚಲಂ ಶ್ರೀನಿವಾಸ ರಾಯರಾಗಿದ್ದಾರೆ. ಒಂದಾನೊಂದು ಸಿರಿ ಸಂಪತ್ತಿನ ತವರೂರಾಗಿದ್ದ ಬಳ್ಳಾರಿ ಕಾಲಕ್ರಮೇಣ ಗಡಿನಾಡಿನ ಮೂಲೆಗುಂಪಾದ ಊರಾಯಿತು. ಇಂತಹ ನಾಡಿನಿಂದ ಉದಯವಾದ ರಂಗ ಪ್ರಭೆ ಬೆಂಗಳೂರು, ಮೈಸೂರು, ದೆಹಲಿ, ಮುಂಬೈ, ಲಂಡನ್, ಪ್ರಾನ್ಸ್, ಜರ್ಮನಿ ಹೀಗೆ ಊರಿನಿಂದ ನಾಡು, ನಾಡಿನಿಂದ ದೇಶ, ದೇಶದಿಂದ ವಿದೇಶದವರೆಗೆ ಅತೀವ ಆಕರ್ಷಕ ಗುಣ ಹೊಂದಿದ ನಟನಾ ಗುಣದಿಂದಲೇ ಹೆಸರಾಗಿ ಬಳ್ಳಾರಿಗೆ ಕೀರ್ತಿ ಕಳಸವಾದರು. ರಾಘವರು ಯಾವುದೇ ಭಾಷೆ, ಸ್ಥಳ, ಮತ ಹೀಗೆ ಬೇಧವಿಲ್ಲದೆ ಕನ್ನಡ, ತೆಲುಗು, ಇಂಗ್ಲೀಷ್ ಭಾಷೆಗಳನ್ನು ಮಾತಾನಾಡುತ್ತಲೇ ಆ ಭಾಷೆಗಳಲ್ಲಿ ನೂರಾರು ನಾಟಕಗಳನ್ನು ಮಾಡಿ ಮಹಾತ್ಮ ಗಾಂಧೀಜಿ, ಬರ್ನಾಡ್ ಷಾ, ರಾಧಕೃಷ್ಣನ್, ರವೀಂದ್ರನಾಥ್ ಠಾಗೋರ್ ಮುಂತಾದ ಗಣ್ಯರಿಂದ ಶಹಬ್ಬಾಷ್ ಗಿರಿಯನ್ನು ಪಡೆದಿದ್ದಾರೆ. ಬೆಂಗಳೂರು ನಗರದ ಮಧ್ಯದಲ್ಲಿ 'ಅಮೇಚೂರ್ ಡ್ರಾಮಾಟಿಕ್ ಅಸೋಸಿಯೇಷನ್' (ಎ.ಡಿ.ಎ) ಎಂಬ ರಂಗ ಸಂಸ್ಥೆ ಮತ್ತು ರಂಗ ಮಂದಿರ ನಿರ್ಮಾಣದ ಕಾರ್ಯದಲ್ಲಿ ಮುಂದಾಳತ್ವ ವಹಿಸಿ ಕನ್ನಡ ರಂಗಭೂಮಿಗೆ ಹೊಸದೊಂದು ಹವ್ಯಾಸಿ ರಂಗಭೂಮಿಯನ್ನು ಸೃಷ್ಟಿಸಲು ಕಾರಣೀಭೂತರಾದರು. ತಂಡದ ಮುಖೇನ ಅಧ್ಯಾಪಕರು, ವಿದ್ಯಾರ್ಥಿಗಳು, ಕೆಲಸಗಾರರು, ರಂಗಾಸಕ್ತರು, ರಂಗಕರ್ಮಿಗಳೆಲ್ಲರೂ ಸೇರಿ ದೇಶದಾದ್ಯಂತ ಹ್ಯಾಮ್ಮೆಟ್, ಒಥೆಲ್ಲೋ, ಕಿಂಗ್ ಲಿಯರ್, ಪೈಲಾಕ್ ನಂತಹ ಇಂಗ್ಲೀಷ್ ನಾಟಕಗಳನ್ನು ಸತ್ಯ ಹರಿಶ್ಚಂದ್ರ, ರೋಷನಾರಾ ಶಿವಾಜಿ, ವಿಷಾದ ಸಾರಂಗದರಮು, ಭಕ್ತ ಪ್ರಹ್ಲಾದ ಹೀಗೆ ಕನ್ನಡ ತೆಲುಗು ಭಾಷೆಯ ನಾಟಕಗಳ ಮೂಲಕ ಇಡೀ ದಕ್ಷಿಣ ಭಾರತದ ನಟ ಚಕ್ರವರ್ತಿ ಎನಿಸಿದ್ದಾರೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ದಿವಾಕರ ವೆಂಕವಧಾನಿ. (1972), ಆಂಧ್ರ ನಾಟಕ ಪಿತಾಮಹುಡು. ಪ್ರಸಾರಾಂಗ, ಆಂಧ್ರ ವಿಶ್ವವಿದ್ಯಾಲಯ, ಹೈದ್ರಾಬಾದ್.
ಪ್ರಭಾಕರ್ ಆರ್. (2006), ರಾಯಲಸೀಮಾ ನಟನಾರತ್ನಂ ಹನುಮಂತರಾವು. ಕಿನ್ನರ ಪಬ್ಲಿಕೇಷನ್ಸ್. ಹೈದ್ರಾಬಾದ್.
ಜಾನಮದ್ದಿ ಹನುಮಶಾಸ್ತ್ರಿ. (1976). ನಾಟ್ಯ ಕಳಾಪ್ರಪೂರ್ಣ ಬಳ್ಳಾರಿ ರಾಘವ. ವಿಶಾಲಾಂಧ್ರ ಪಬ್ಲಿಷಿಂಗ್ ಹೌಸ್. ಹೈದ್ರಾಬಾದ್.
ಅಚಾರ್ ಗಂಗಪ್ಪ ಎಸ್. (2001). ಕೋಲಾಚಲಂ ವೆಂಕಟ ರಾವ್ ಸ್ವಿಯ ಚರಿತ್ರ. ಶ್ರೀ ಕೋಲಾಚಲಂ ಬಾಲಕೃಷ್ಣ, ಬಳ್ಳಾರಿ.
ಪೋಣಂಗಿ ಶ್ರೀರಾಮ ಅಪ್ಪಾರಾವ್. (1989). ಧರ್ಮಾವರಂ ರಾಮಕೃಷ್ಣಮಾಚಾಯುಲು. ಕೇಂದ್ರ ಸಾಹಿತ್ಯ ಅಕಾಡೆಮಿ. ನ್ಯೂಡೆಲ್ಲಿ.
ವೆಲ್ಲೂರು ಶಿವಪ್ರಸಾದ್. (2016), ನಾಟಕರಂಗ ಪ್ರಮುಖುಲು. ಅರವಿಂದ ಆರ್. ತಾಡಪಲ್ಲಿ.
ಪೆನುಗೊಂಡ ಲಕ್ಷ್ಮೀನಾರಾಯಣ. (2011), ರೂಪಿಕ ನಾಟಕರಂಗ ವಿಶೇಷ ಸಂಚಿಕೆ. ಅರವಿಂದ ಆರ್. ತಾಡಪಲ್ಲಿ.