ಕುಲಕ್ಕೆ ತಿಲಕ ನಮ್ಮ ಮಾದರ ಚೆನ್ನಯ್ಯ
Main Article Content
Abstract
ಮಾದರ ಚೆನ್ನಯ್ಯ 12ನೇ ಶತಮಾನಕ್ಕಿಂತಲೂ ಹಿಂದೆ ಜೀವಿಸಿದ್ದವನು. ಮಾದರ ಚೆನ್ನಯ್ಯನು ಹಲವಾರು ವಚನಗಳನ್ನು ರಚಿಸಿದ್ದಿರಬಹುದು ಆದರೆ ಚೆನ್ನಯ್ಯನು ಬರೆದ ವಚನಗಳಲ್ಲಿ ಸದ್ಯಕ್ಕೆ 10 ವಚನಗಳು ದೊರೆತಿರುತ್ತವೆ. “ಕೈಯುಳಿ ಕತ್ತಿ ಅಡಿಗೂಟಕ್ಕಡಿಯಾಗಬೇಡ” ಎಂಬುದು ಚೆನ್ನಯ್ಯನ ವಚನಗಳ ಅಂಕಿತವಾಗಿದೆ. ಚೆನ್ನಯ್ಯನು ಚೋಳ ರಾಜನ ಆಸ್ಥಾನದಲ್ಲಿ ಲಾಯದ ಕುದುರೆಗಳಿಗೆ ಹುಲ್ಲು ತರುವ ಕೆಲಸ ಮಾಡುತ್ತಿದ್ದನು. ಚೆನ್ನಯ್ಯ ಗುಪ್ತ ಶಿವಭಕ್ತನಾಗಿದ್ದನು. ಅದೇ ರೀತಿ ಚೋಳರಾಜನು ಮಹಾಶಿವ ಭಕ್ತನಾಗಿದ್ದನು. ಪ್ರತಿದಿನ ಚೋಳ ರಾಜನ ಮನೆಯಲ್ಲಿ ದಿವ್ಯವಾದ ಅನ್ನವನ್ನು ಶಿವನುಂಡು ತೃಪ್ತ ನಾಗುವವರೆಗೂ ಕಾದಿರುತ್ತಿದ್ದನು. ಒಮ್ಮೆ ಚೋಳನ ಮನೆಗೆ ಶಿವನು ಊಟ ಸವಿಯಲು ಬಂದಿರುವುದಿಲ್ಲ. ಅಂದು ಶಿವನು ಚೆನ್ನಯ್ಯನ ಮನೆಯಲ್ಲಿ ಅಂಬಲಿ ರುಚಿಸವಿದು ಸಂತೃಪ್ತನಾಗಿರುತ್ತಾನೆ. ಚೋಳ ರಾಜನ ಮನೆಗೆ ಶಿವನು ಬರದ ಕಾರಣ ತನ್ನ ಭಕ್ತಿಯಲ್ಲಿ ಲೋಪವಾಗಿದೆ ಎಂದುಕೊಂಡು ತನ್ನ ಕತ್ತಿಯಿಂದ ತಲೆ ಕತ್ತರಿಸಿಕೊಳ್ಳಲು ಮುಂದಾಗುವನು. ಆಗ ಶಿವನು ಪ್ರತ್ಯಕ್ಷನಾಗಿ ನಡೆದ ವಿಚಾರಗಳನ್ನು ತಿಳಿಸುವನು. ಚೋಳರಾಜ ಆಗ ನನಗಿಂತಲೂ ಅಪ್ರತಿಮ ಶಿವಭಕ್ತನಿದ್ದಾನೆಂದು ತಿಳಿದುಕೊಂಡು ಶಿವನನ್ನು ಅಂಬಲಿಗೆ ಒಲಿಸಿದ ಶಿವ ಭಕ್ತನಾದ ಚೆನ್ನಯ್ಯನ ಮನೆ ಬಾಗಿಲಿಗೆ ಬರುತ್ತಾನೆ. ಚೋಳ ರಾಜ ಚೆನ್ನಯ್ಯನನ್ನು ಕಂಡು ಆತನ ಕಾಲಿಡಿದು ನಿಮ್ಮ ಕೆರ ನನ್ನ ಶಿರಕ್ಕೆ ಸಮಾನವೆಂದು ನುಡಿದು ಶಿವನೊಲಿಸಿದ ನಿನ್ನ ಕುಲ ಸತ್ಕುಲ ವೆಂದು ನುಡಿಯುತ್ತಾನೆ. ಚೆನ್ನಯ್ಯನ ಗುಪ್ತ ಭಕ್ತಿಯನ್ನು ಚೋಳ ರಾಜನು ಇಡೀ ಜಗತ್ತಿಗೆ ಪರಿಚಯಿಸುತ್ತಾನೆ. ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ಮಾದರ ಚೆನ್ನಯ್ಯನವರನ್ನು ಉಲ್ಲೇಖಿಸಿದ್ದಾರೆ. “ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ”, “ಅಪ್ಪನು ನಮ್ಮ ಮಾದಾರ ಚೆನ್ನಯ್ಯ”, “ಚೆನ್ನಯ್ಯನ ಮನೆಯ ದಾಸನ ಮಗನು” ಎಂದು ಚೆನ್ನಯ್ಯನವರನ್ನು ಉಲ್ಲೇಖಿಸಿದ್ದಾರೆ. ಆ ಮೂಲಕ 12ನೇ ಶತಮಾನಕ್ಕಿಂತಲೂ ಹಿಂದೆಯೇ ಚೆನ್ನಯ್ಯನವರು ಜೀವಿಸಿದ್ದರು ಎಂದು ತಿಳಿಯುತ್ತದೆ. ಅಲ್ಲದೆ ಚೆನ್ನಯ್ಯನವರು ಬಸವಣ್ಣನವರಿಗಿಂತಲೂ ಹಿರಿಯ ವಚನಕಾರರು ಎಂದು ಈ ಲೇಖನದಲ್ಲಿ ಅರಿತುಕೊಳ್ಳಬಹುದಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಶಿವಾನಂದ ಕೆಳಗಿನಮನಿ. (2006). ಮಾದಾರ ಚೆನ್ನಯ್ಯ ಬಹುಮುಖಿ ಅಧ್ಯಯನ. ಸಿ.ವಿ.ಜಿ. ಪಬ್ಲಿಕೇಷನ್. ಬೆಂಗಳೂರು.
ಮೈಲಹಳ್ಳಿ ರೇವಣ್ಣ. (2012). ದಲಿತ ಸಂತರು. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.
ಶ್ರೀನಿವಾಸಮೂರ್ತಿ ಎಂ. ಆರ್. (2013). ವಚನ ಧರ್ಮಸಾರ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.
ಕುಪೇಂದ್ರ ಪಾಟೀಲ. (2016). ಅಪ್ಪನು ನಮ್ಮ ಮಾದಾರ ಚೆನ್ನಯ್ಯ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು. ಮೈಸೂರು.