ಹುಲಿಗಿಯ ಹುಲಿಗೆಮ್ಮ ದೇವಿ: ಒಂದು ಸಾಂಸ್ಕೃತಿಕ ನಂಬಿಕೆ
Main Article Content
Abstract
ತುಂಗಾಭದ್ರ ನದಿಯ ಎಡದಂಡೆಯ ಮೇಲಿರುವ ಕೊಪ್ಪಳ ಜಿಲ್ಲೆಯ, ಕೊಪ್ಪಳ ತಾಲೂಕಿನ ಹಿಟ್ನಾಳ ಹೋಬಳಿಗೆ ಸೇರಿದ ಹುಲಿಗಿ ಗ್ರಾಮವು ಚಿಕ್ಕದಾದರೂ ಸಹ ಅದರ ಹೆಸರು ನೆರೆಯ ರಾಜ್ಯಗಳಿಗೂ ಹರಡಿಕೊಂಡಿದೆ. ಈ ಪ್ರದೇಶದಲ್ಲಿ ತುಂಗಾಭದ್ರ ನದಿ ಇರುವುದರಿಂದ ನೀರಾವರಿ ಸೌಲಭ್ಯದಿಂದಾಗಿ ಸದಾ ಭತ್ತ, ಕಬ್ಬುಗಳನ್ನು ಬೆಳೆಯುತ್ತಾ ಹಸಿರು ಸೀರೆಯುಟ್ಟಂತೆ ಕಂಗೊಳಿಸುತ್ತದೆ. ಹುಲಿಗಿ ಗ್ರಾಮದ ಜನಪದ ಸಂಸ್ಕೃತಿ ಇತಿಹಾಸವು ಕೊಪ್ಪಳ ಜಿಲ್ಲೆಯಿಂದ ಹೊರತಾಗಿರಲಿಲ್ಲ. ಜಿಲ್ಲೆಯ ಒಂದು ಭಾಗವಾಗಿರುವ ಹುಲಿಗಿ ಗ್ರಾಮವು ಅದರೊಂದಿಗೆ ತನ್ನ ಜನಪದ ಸಂಸ್ಕೃತಿ ಇತಿಹಾಸವನ್ನು ರೂಪಿಸಿಕೊಂಡಿದೆ.
ಈ ಪ್ರದೇಶದಲ್ಲಿ ಎಲ್ಲಾ ಧರ್ಮಗಳು ಕಂಡುಬರುತ್ತವೆ. ಶೈವ, ಜೈನ, ವೈಷ್ಣವ, ಶಕ್ತ ಪಂಥಗಳು ಈ ಗ್ರಾಮದಲ್ಲಿರುವುದನ್ನು ಅಲ್ಲಿರುವ ದೇವಾಲಯಗಳಲ್ಲಿ ಅವುಗಳನ್ನು ಆರಾಧಿಸುವುದರಿಂದ ಕಾಣಬಹುದು. ಹುಲಿಗಿ ಗ್ರಾಮದಲ್ಲಿ ಸೋಮೇಶ್ವರ, ಪಾರ್ಶ್ವನಾಥ, ರಾಮ, ಹನುಮಂತ ಹಾಗೂ ಊರಮ್ಮ ದೇವಿಯ ದೇವಾಲಯಗಳು ಇವೆ. ಈ ಗ್ರಾಮದ ಅತ್ಯಂತ ಪ್ರಾಚೀನವಾದ ದೇವಾಲಯವೆಂದರೆ ಪಂಚಲಿಂಗೇಶ್ವರ ದೇವಾಲಯ. ಈ ದೇವಾಲಯದಲ್ಲಿರುವ ಐದು ದೇಗುಲಗಳೊಂದಿಗೆ ಸೋಮೇಶ್ವರ ದೇವಾಲಯವು ಕ್ರಿ.ಶ. 1088 ರಲ್ಲಿ ಸೋಮನಾಥನೆಂಬುವನಿಂದ ನಿರ್ಮಿತನಾಗಿದೆ. ಈ ದೇವಾಲಯದ ಪಕ್ಕದಲ್ಲಿಯೇ ಎರಡು ಈಶ್ವರ ದೇವಾಲಯ, ದಕ್ಷಿಣದಲ್ಲಿ ಮತ್ತೆರಡು ಈಶ್ವರ ದೇವಾಲಯಗಳನ್ನು ಹೊಂದಿ ಇದಕ್ಕೆ ಪಂಚಲಿಂಗೇಶ್ವರ ದೇವಾಲಯವೆಂದು ಕರೆದಿರುವರು. ಇದರ ಗರ್ಭಗೃಹದಲ್ಲಿ ಶಿವಲಿಂಗವಿದ್ದು, ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ನಿರ್ಮಿತಿಯಾಗಿದೆ. ಪಂಚಲಿಂಗೇಶ್ವರ ದೇವಾಲಯದ ನಿರ್ಮಾಣದ ಸಮಯದಲ್ಲಿಯೇ ಪಾರ್ಶ್ವನಾಥ ಬಸದಿಯನ್ನೂ ಸಹ ಈ ಗ್ರಾಮದಲ್ಲಿ ನಿರ್ಮಿಸಲಾಯಿತು.
ಈ ಗ್ರಾಮವು ಪ್ರಸಿದ್ದಿಗೆ ಬಂದಿದ್ದು ಅಲ್ಲಿರುವ ಹುಲಿಗೆಮ್ಮ ದೇವಿಯ ದೇವಾಲಯದಿಂದ. ಹುಲಿಗೆಮ್ಮಳು ಎಲ್ಲಮ್ಮನ ಪರಮಾವತಾರವೆಂದು ಈ ಪ್ರದೇಶದ ಜನರ ನಂಬಿಕೆ. ಶಕ್ತಿ ದೇವತೆಯಾದ ಈ ಹುಲಿಗೆಮ್ಮಳು ಇಲ್ಲಿನ ಗ್ರಾಮದೇವತೆಯೂ ಆಗಿದ್ದಾಳೆ. ಉಗ್ರ ಸ್ವರೂಪಿಯಾಗಿರುವ ಈ ಮೂರ್ತಿಯನ್ನು ಶಾಂತಗೊಳಿಸುವ ಸಲುವಾಗಿ ಮೇಲಿಂದ ಮೇಲೆ ವಿಶೇಷ ಪೂಜೆ, ಪುನಸ್ಕಾರಗಳನ್ನು ಸಲ್ಲಿಸಲಾಗುತ್ತದೆ. ಎಲ್ಲಮ್ಮ ಹುಲಿಯ ಸವಾರಿ ಮಾಡಿದ್ದದರಿಂದ ಆಕೆಗೆ ಹುಲಿಗೆಮ್ಮ ಎಂಬ ಹೆಸರು ಬಂದಿತೆಂದು ಕೆಲವರ ನಂಬಿಕೆ. ಈ ದೇವಾಲಯವು 800 ವರ್ಷಗಳ ಹಿಂದೆ ನಿರ್ಮಾಣವಾಯಿತೆಂದು ಹೇಳಲಾಗುತ್ತದೆ. ಈ ದೇವಸ್ಥಾನದಲ್ಲಿ ಪ್ರತಿ ದಿನವೂ ಪೂಜಾಕಾರ್ಯಕ್ರಮಗಳಾದ ಕಂಕಣಧಾರಣೆ, ಬೋಳ ಹುಚ್ಚಯ್ಯನ ತೇರು ಮತ್ತು ಅಕ್ಕಿ ಪಡಿ ರಥೋತ್ಸವಗಳು ಸಾಮಾನ್ಯವಾಗಿ ಕಂಡುಬರುವಂತಹ ನಂಬಿಕೆ ಉತ್ಸವಗಳಾಗಿದ್ದರೆ, ಇಲ್ಲಿ ಕೊನೆಗೆ ನಡೆಯುವ ಬಾಳೆದಿಂಡಿನ ಉತ್ಸವ, ಪಾಯಸ ಮತ್ತು ಕೊಂಡದ ಉತ್ಸವ ಇವುಗಳು ಇಲ್ಲಿಯ ಜನರ ನಂಬಿಕೆ ಮತ್ತು ಪವಾಡ ಮತ್ತು ಸಾಂಸ್ಕೃತಿಕ ಆಚರಣೆಗಳಾಗಿ ಕಂಡುಬರುತ್ತವೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಕಲಬುರ್ಗಿ ಎಂ. ಎಂ. (1987). ಜಾನಪದ ಸಾಹಿತ್ಯ ದರ್ಶನ: ಭಾಗ-2. ಕರ್ನಾಟಕ ವಿಶ್ವವಿದ್ಯಾಲಯ. ಧಾರವಾಡ.
ಕಡೇತೋಟದ ಎನ್. ಕೆ. (1983). ಎಲ್ಲಮ್ಮನ ಜೋಗತಿಯರು ಹಾಗೂ ದೇವದಾಸಿ ಪದ್ಧತಿ. ಪ್ರಸಾರಂಗ, ಕರ್ನಾಟಕ ವಿಶ್ವವಿದ್ಯಾಲಯ. ಧಾರವಾಡ.
ಕೃಷ್ಣಕುಮಾರ ಸಿ. ಪಿ. (2016), ಶಾಸನಶಾಸ್ತ್ರ ಪೀಠಿಕೆ. ಮಾನಸ ಬುಕ್ಹೌಸ್. ಮೈಸೂರು.
ಚನ್ನಕ್ಕ ಎಲಿಗಾರ. (1990). ಶಾಸನಗಳಲ್ಲಿ ಕರ್ನಾಟಕದ ಸ್ತ್ರೀ ಸಮಾಜ. ಪ್ರಸಾರಂಗ, ಕರ್ನಾಟಕ ವಿಶ್ವವಿದ್ಯಾಲಯ. ಧಾರವಾಡ.
ಚೆನ್ನಪ್ಪ ಗೌಡ ಕೆ. (1990). ಭೂತಾರಾಧನೆ ಜಾನಪದೀಯ ಅಧ್ಯಯನ. ಮದಿಪು ಪ್ರಕಾಶನ. ಮಂಗಳೂರು.
ಚಿದಾನಂದಮೂರ್ತಿ ಎಂ. (1979). ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ (ಕ್ರಿ.ಶ.450-1150). ಮೈಸೂರು ವಿಶ್ವವಿದ್ಯಾಲಯ. ಮೈಸೂರು.
ದೇವರಕೊಂಡಾರೆಡ್ಡಿ (ಸಂ). (1999). ಕನ್ನಡ ವಿಶ್ವವಿದ್ಯಾಲಯ: ಶಾಸನ ಸಂಪುಟ-2 (ಕೊಪ್ಪಳ ಜಿಲ್ಲೆ). ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ಪುರುಷೋತ್ತಮ ಬಿಳಿಮಲೆ. (1999). ಹುಲಿಗೆಮ್ಮ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ಪುರುಷೋತ್ತಮ ಬಿಳಿಮಲೆ. (1995). ಹಂಪಿ ಜಾನಪದ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ಬಸವರಾಧ್ಯ ಎನ್. (ಪ್ರ.ಸಂ.). (2010). ಕನ್ನಡ-ಕನ್ನಡ ನಿಘಂಟು. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.