ಬಾಚಿಕಾಯಕದ ಕಾಳವ್ವೆಯ ವಚನದಲ್ಲಿ ಕಾಯಕ, ಮಾತು ಮತ್ತು ವ್ರತ ಪ್ರಜ್ಞೆ

Main Article Content

ಲಕ್ಷ್ಮಿದೇವಿ ಎನ್‌.

Abstract

ವಚನಗಳಲ್ಲಿ ನಾವು ವಿಚಾರ ಸ್ವಾತಂತ್ರ್ಯದ ಪರಾಕಾಷ್ಟೆಯನ್ನು ಕಾಣುತ್ತೇವೆ. “ಉದರ ನಿಮಿತ್ತಂ ಬಹುಕೃತ ವೇಷಂ” ಎಂಬ ಮಾತೊಂದಿದೆ. ಹೊಟ್ಟೆ ಹೊರೆಯುವುದಕ್ಕಾಗಿ ಮಾನವ ಅನೇಕ ವೇಷಗಳನ್ನು ಕೈಗೊಳ್ಳುತ್ತಾನೆ. ಆದರೆ ಶರಣರು ಹೊಟ್ಟೆ ಹೊರೆಯುವ ಕಾಯಕದ ಮೂಲಕ ದಾಸೋಹ ಸಿದ್ಧಾಂತವನ್ನು ಅನುಭಾವದ ಮೂಲಕ ಸಮಾಜಕ್ಕೆ ಸಾರಿದವರು. ಅಸಮಾನತೆಯ ಸಮಾಜದಲ್ಲಿ ಶೂದ್ರರಿಗೆ, ಅಸ್ಪೃಶ್ಯರಿಗೆ, ಹೆಣ್ಣಿಗೆ ಸಮಾನ ಸ್ಥಾನಮಾನವನ್ನು ತಂದುಕೊಟ್ಟ ಕೀರ್ತಿ ಬಸವಣ್ಣನರಿಗೆ ಸಲ್ಲುತ್ತದೆ. ೧೨ನೇ ಶತಮಾನದ ಸಮಾಜದಲ್ಲಿ ಅಕ್ಷರ ಕ್ರಾಂತಿಯ ಮೂಲಕ ಸ್ತ್ರೀ-ಪುರುಷ ಸಮಾನತೆಯನ್ನು ಪಡೆದದ್ದು ಪವಾಡವೇ ಸರಿ. ಅದರಲ್ಲೂ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಮಹಿಳೆ ಅನುಭವ ಮಂಟಪದ ಗೋಷ್ಠಿಯಲ್ಲಿ ಪುರುಷನಷ್ಟೇ ಸಮಾನತೆಯನ್ನು ಕೈಗೊಂಡಿದ್ದು ಸಮಾಜಿಕ ಕ್ರಾಂತಿ ಎನ್ನಬಹುದು. ಅವರಲ್ಲಿ ಒಬ್ಬರು ಬಾಚಿ ಕಾಯಕದ ಬಸವಯ್ಯಗಳವರ ಪುಣ್ಯಸ್ತ್ರೀ ಕಾಳವ್ವೆ. ಈಕೆಯ ಎರಡು ವಚನಗಳು ಮಾತ್ರ ನಮಗೆ ದೊರೆತ್ತಿದ್ದು, ಈಕೆಯ ಕಾಲ ೧೧೬೦ ಬಸವಣ್ಣನವರ ಸಮಕಾಲೀನರಾದ ಈಕೆಯ ಎರಡೂ ವಚನಗಳು ಕಾಯಕ, ವ್ರತ ಹಾಗೂ ಮಾತಿನ ಮಹತ್ವವನ್ನು ಸಮಾಜಕ್ಕೆ ಸಾರುತ್ತದೆ. ಈಕೆಯ ಅಂಕಿತನಾಮ ಕರ್ಮಹರ ಕಾಳೇಶ್ವರ. ಪ್ರತಿಯೊಬ್ಬ ಮನುಷ್ಯ ಸಮಾಜದಲ್ಲಿ ಜೀವನ ನಡೆಸಬೇಕಾದರೆ ಯಾವುದಾದರೂ ಒಂದು ಕಾಯಕದಲ್ಲಿ ತೊಡಗಿರಲೇ ಬೇಕು. ಕಾಯಕದಲ್ಲಿ ಮೇಲಿಲ್ಲ-ಕೀಳಿಲ್ಲ. ಆದರೆ ಮಾಡುವ ಕಾಯಕ ಮಾತ್ರ ಶಿವನಿಗೆ ಮೆಚ್ಚುವಂತಿರಬೇಕು. ಅಷ್ಟೇ ಅಲ್ಲ ವ್ರತವೆಂದರೆ ಪೂಜೆಯಲ್ಲ, ನಮ್ಮ ನಡತೆ, ಆಚರಣೆ, ಭಕ್ತಿ, ಪ್ರತಿಜ್ಞೆ ಹಾಗೂ ಪಾಪಕರ್ಮಗಳಿಂದ ದೂರವಿರುವುದು ವ್ರತವನ್ನು. ಆಚರಿಸಬೇಕೆಂದರೆ ನಮ್ಮ ಮನಸ್ಸು ಶದ್ಧವಾಗಿದ್ದರೆ ಮಾತ್ರ ಸಾಧ್ಯವಾಗುವುದು. ಕಾಯಕ ತಪ್ಪಿದಡೆ ಸೈರಿಸಬಾರದು. ವ್ರತ ತಪ್ಪಲೆಂತೂ ಸೈರಿಸಬಾರದು. ಕಾಳವ್ವೆಯ ಈ ವಚನದಂತೆ ಕಾಯಕವೆಷ್ಟು ಮಹತ್ವವೋ ಅದಕ್ಕಿಂತಲೂ ಹೆಚ್ಚು ಮಹತ್ವದ್ದು ವ್ರತ. ಆದ್ದರಿಂದಲೆ, ವ್ರತವನ್ನು ಆಚರಿಸುವುದು ಅಷ್ಟು ಸುಲಭವಲ್ಲ. ಮಾತು ಮನುಷ್ಯನ ಗೌರವವನ್ನು ಸೂಚಿಸುತ್ತದೆ. ಆದ್ದರಿಂದಲೇ ಜನಪದರ ನಾಣ್ಣುಡಿಯಂತೆ ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎನ್ನುತ್ತಾರೆ. ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ ಎನ್ನುವ ಕಾಳವ್ವೆಯ ಈ ವಚನ ಮಾತೇ ಮುತ್ತು ಮಾತೇ ಮೃತ್ಯು ಎನ್ನುವಂತಿದೆ. ಮನುಷ್ಯನ ಅಂದವನ್ನು ಹೆಚ್ಚಿಸುವ ಸಾಧನಗಳಲ್ಲಿ ಮಾತಿಗೆ ಮೊದಲ ಸ್ಥಾನವಿದೆ. ಬಾಚಿಕಾಯಕದ ಕಾಳವ್ವೆಯ ವಚನಗಳು ಎರಡೇ ಆದರೂ, ಮನುಷ್ಯನ ಮಾತಿನಿಂದ ಪ್ರಾರಂಭವಾಗಿ, ಕಾಯಕದ ಮಹತ್ವವನ್ನು ತಿಳಿಸಿ, ಕಾಯಕಕ್ಕಿಂತಲೂ ವ್ರತದ ಶ್ರೇಷ್ಠತೆನ್ನು ತಿಳಿಸುವಲ್ಲಿ ಮುಕ್ತಾಯವಾಗುತ್ತದೆ.

Article Details

Section

Essay

Author Biography

ಲಕ್ಷ್ಮಿದೇವಿ ಎನ್‌.

ಸಂಶೋಧನಾ ವಿದ್ಯಾರ್ಥಿ, ಸಿ.ಎಂ.ಆರ್‌. ವಿಶ್ವವಿದ್ಯಾಲಯ, ಬೆಂಗಳೂರು.

References

ಜಯಶ್ರೀ ದಂಡೆ. (2017). ಬಾಚಿಕಾಯಕದ ಬಸವಣ್ಣ. ಸ್ನೇಹಾ ಪ್ರಿಂಟರ್ಸ್. ಬೆಂಗಳೂರು.

ವೀರಣ್ಣ ದಂಡೆ. (2007). ವಚನಸಾಹಿತ್ಯ ಮೀಮಾಂಸೆ. ಬಸವ ಸಮಿತಿ. ಬೆಂಗಳೂರು.

ವಿರೂಪಾಕ್ಷ ಬಿ. (1993). ಶರಣತತ್ವ ವಿವೇಚನೆ. ಬಸವ ಸಮಿತಿ. ಬೆಂಗಳೂರು.

ಲಿಂಗಪ್ಪ ಟಿ. ಹೆಚ್‌. (2022). ಬುದ್ಧಪ್ರಜ್ಞೆಯ ಕಾಯಕ ಜೀವಿಗಳು. ತೇಜಸ್‌ ಇಂಡಿಯಾ ಬುಕ್ ಹೌಸ್‌. ಬೆಂಗಳೂರು.

ಸಿದ್ಧಯ್ಯ ಪುರಾಣಿಕ. (2022).ಶರಣ ಚರಿತಾಮೃತ. ಸ್ವಪ್ನ ಬುಕ್‌ ಹೌಸ್‌. ಬೆಂಗಳೂರು.

ಸಿದ್ಧಣ್ಣ ಲಂಗೋಟಿ. (2022). ಮಹಾನ್‌ ದಾರ್ಶನಿಕ ಬಸವಣ್ಣ. ಬಸವ ಸಮಿತಿ. ಬೆಂಗಳೂರು.