ಡಾ. ರಾಜಕುಮಾರ್ ಅವರ ಕನ್ನಡ ನಾಡು-ನುಡಿ ಸೇವೆ
Main Article Content
Abstract
ತುಂಬಿದ ಕೊಡ ತುಳುಕುವುದಿಲ್ಲ’ ಎಂಬ ಗಾದೆ ಮಾತಿಗೆ ಡಾ. ರಾಜಕುಮಾರ್ ಅವರು ಸೂಕ್ತ ನಿದರ್ಶನವಾಗಿದ್ದಾರೆ. ಕನ್ನಡ ನಾಡು ಕಂಡ ಉಜ್ವಲ ಕನ್ನಡ ಪ್ರೇಮಿಗಳಲ್ಲಿ ಡಾ. ರಾಜಕುಮಾರ್ ಅವರು ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಇವರು ಕನ್ನಡ ನಾಡು-ನುಡಿ, ಸಂಸ್ಕೃತಿ ಮೊದಲಾದವುಗಳಿಗೆ ತಮ್ಮ ವಿಶಿಷ್ಟ ವ್ಯಕ್ತಿತ್ವ, ಪ್ರತಿಭೆ ಹಾಗೂ ಐತಿಹಾಸಿಕ ಪಾತ್ರಗಳ ಮೂಲಕ ಸುವರ್ಣ ಅಂಚನ್ನು ಹೊದಿಸಿದ್ದಾರೆ. ರಾಜಕುಮಾರ್ ರವರು ಕೇವಲ ಶ್ರೇಷ್ಠ ನಟರಾಗಿರದೆ, ಕನ್ನಡ ನಾಡಿನ ಅಘೋಷಿತ ಸಾಂಸ್ಕೃತಿಕ ರಾಯಭಾರಿಯಾಗಿದ್ದು, ನೆಲ, ಜಲ, ಭಾಷೆಗೆ ಜನದನಿಯಾಗಿ ನಿಂತವರು. ಕನ್ನಡ ನಾಡು ಹಾಗೂ ಹೊರ ರಾಜ್ಯಗಳಲ್ಲಿನ ಹಲವಾರು ಸಾಮಾಜಿಕ ಅವಘಡಗಳು ನಡೆದಾಗ ರಾಜಕುಮಾರ್ ರವರು ಪಾದಯಾತ್ರೆ ಮಾಡಿ ನಿಧಿ ಸಂಗ್ರಹಿಸಿದರು.
ರಾಜಕುಮಾರ್ ರವರು ಸರ್ಕಾರಿ ನೌಕರರಿಗೆ ಕಡ್ಡಾಯ ಕನ್ನಡ ಮಾಡಬೇಕೆಂದು ಹೋರಾಟ ಮಾಡಿ ಅದು ಕಾರ್ಯರೂಪಕ್ಕೆ ಬರುವಲ್ಲಿ ಪ್ರಮುಖ ಪಾತ್ರವಹಿಸಿದರು. ಹಾಗೆಯೇ ಕಾವೇರಿ ನದಿಯ ಜಲವಿವಾದದ ಹೋರಾಟದಲ್ಲಿ ರಾಜಕುಮಾರ್ ರವರು ತೊಡಗಿಕೊಂಡಿದ್ದು ಕನ್ನಡಿಗರಿಗೆ ಹೊಸ ಹುರುಪನ್ನು ತುಂಬಿದಂತಾಯಿತು. ಮತ್ತೆ ಬೆಂಗಳೂರು ದೂರದರ್ಶನ ಕೇಂದ್ರದಿಂದ ಉರ್ದು ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ವಾರ್ತೆಗಳನ್ನು ನಿಲ್ಲಿಸುವಲ್ಲಿ ಬಹುಮುಖ್ಯರಾಗಿದ್ದಾರೆ.
ರಾಜಕುಮಾರ್ ರವರು ಚಿತ್ರರಂಗ ಕ್ಷೇತ್ರದಲ್ಲಿ 50 ವರ್ಷಗಳ ಕಾಲ ನಟರಾಗಿ ಜನಮನದಲ್ಲಿ ನೆಲೆಸಿದ್ದಾರೆ. ಚಿತ್ರರಂಗದಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸುವುದರ ಮೂಲಕ ನಾಡಿನ ಸಂಸ್ಕೃತಿ ಉಳಿಸುವಲ್ಲಿ ಪ್ರಮುಖರಾಗಿದ್ದಾರೆ. ಇವರಿಗೆ ಪರಭಾಷೆಗಳಿಂದ ಬಹಳಷ್ಟು ಅವಕಾಶಗಳು ಬಂದರೂ ತನ್ನ ತಾಯಿ ನುಡಿಯನ್ನು ನೆಚ್ಚಿಕೊಂಡು ಬದುಕಿದವರು. ಇವರು ಕೇವಲ ಚಲನಚಿತ್ರಗಳಲ್ಲಿ ನಟಿಸುವುದು ಮಾತ್ರವಲ್ಲದೆ ತಾನು ಮತ್ತು ಬೇರೆಯವರು ಅಭಿನಯಿಸಿದ ಎಷ್ಟೋ ಚಲನಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ. ತಾವು ಅಭಿನಯಿಸಿದ ಪಾತ್ರಗಳ ಮೂಲಕ ಕನ್ನಡ ನಾಡು-ನುಡಿಯ ಪ್ರಜ್ಞೆಯನ್ನು ತುಂಬಿದ್ದಾರೆ. ರಾಜಕುಮಾರ್ ರವರಿಗೆ ರಾಜಕೀಯ ಅವಕಾಶಗಳು ಸಾಕಷ್ಟಿದ್ದರೂ ಕೇವಲ ಒಬ್ಬ ನಟನಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ರಾಯಭಾರಿಯಂತೆ ಕೊನೆಯವರೆಗೂ ಉಳಿದದ್ದು ಅಚ್ಚರಿಯೆನಿಸುತ್ತದೆ. ಆದ್ದರಿಂದಾಗಿಯೇ ಕನ್ನಡ ನಾಡು, ಕನ್ನಡ ಜನತೆ ತನ್ನಿಂದ ತಾನೇ ರಾಜಕುಮಾರ್ ಅವರನ್ನು ಕನ್ನಡ ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಸಂಕೇತವಾಗಿ ಒಪ್ಪಿಕೊಂಡಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ.
80ರ ದಶಕದಲ್ಲಿ ನಡೆದ ಗೋಕಾಕ್ ಚಳುವಳಿಯಲ್ಲಿ ದೊಡ್ಡ ದೊಡ್ಡ ಕವಿಗಳು ಕೈ ಜೋಡಿಸಲು ಹಿಂದೇಟಾಕಿದರು. ಆದರೆ ರಾಜಕುಮಾರ್ ರವರು ‘ಕನ್ನಡ ನಾಡು-ನುಡಿಗಾಗಿ ಯಾವ ತ್ಯಾಗಕ್ಕೂ ಸಿದ್ಧ, ಕನ್ನಡಕ್ಕೆ ಕುತ್ತು ಬಂದಿತೆಂದರೆ ಯಾವುದಕ್ಕೂ ಹಿಂದೆ ಸರಿಯುವುದಿಲ್ಲ’ ವೆಂಬಂತೆ ಚಳುವಳಿಯಲ್ಲಿ ಕೈ ಜೋಡಿಸಿದ್ದು ಕನ್ನಡ ಪ್ರೇಮಿಗಳಲ್ಲಿ ಒಂದು ರೀತಿಯಲ್ಲಿ ಆನೆ ಬಲವೇ ಬಂದಂತಾಯಿತು.
ರಾಜಕುಮಾರ್ ರವರು ಸಾಮಾನ್ಯರ ಆಶೋತ್ತರಗಳಿಗಾಗಿ, ರೈತರಿಗಾಗಿ, ನಾಡು-ನುಡಿಗಾಗಿ ಟೊಂಕಕಟ್ಟಿ ನಿಂತವರು. ಕನ್ನಡ ಭಾಷೆಯನ್ನು ಅಚ್ಚ ಸೊಗಡಿನಿಂದ, ಸ್ವಚ್ಚವಾಗಿ, ಸ್ಪುಟವಾಗಿ, ಸುಂದರವಾಗಿ ಮಾತನಾಡುವ ಮತ್ತೊಬ್ಬ ನಟ ಸಿಗುವುದು ವಿರಳ ಎಂದೇ ಹೇಳಬೇಕು. ಅದ್ದರಿಂದಾಗಿಯೇ ಕನ್ನಡದ ಅಣ್ಣನ ಸ್ಥಾನ ಇಂದಿಗೂ ಎಂದಿಗೂ ಅವರಿಗೇನೇ ಮೀಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ರಮೇಶ ಎನ್. ತೇವರಿ. (2013). ಕನ್ನಡ ನಾಡು-ನುಡಿಗೆ ಡಾ. ರಾಜಕುಮಾರ್ ಅವರ ಕೊಡುಗೆ. ರಾಣಿಚನ್ನಮ್ಮ ವಿಶ್ವವಿದ್ಯಾಲಯ. ಬೆಳಗಾವಿ.
ಮಮತ ಎಚ್. ಆರ್. (2021). ಕಾದಂಬರಿ ಆಧಾರಿತ ಡಾ. ರಾಜಕುಮಾರ್ ಚಲನಚಿತ್ರಗಳು. ಮೈಸೂರು ವಿಶ್ವವಿದ್ಯಾಲಯ. ಮೈಸೂರು.
ಪೂಜಾರ ವಿ. ಜಿ. (1982). ಶಬ್ದಮಣಿದರ್ಪಣ ಸಂಗ್ರಹ. ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ. ಗುಲಬರ್ಗಾ.
ಬರಗೂರು ರಾಮಚಂದ್ರಪ್ಪ. (2018). ಜನಪದ ನಾಯಕ ರಾಜಕುಮಾರ. ಜನ ಪ್ರಕಾಶನ. ಬೆಂಗಳೂರು.
ಪಾಟೀಲ ಪುಟ್ಟಪ್ಪ. (2001). ನಾಡು-ನುಡಿ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.