ಜನ ಸಮುದಾಯವನ್ನು ಸೆಳೆಯುವಲ್ಲಿ ರಂಗಭೂಮಿ ನಡೆದು ಬಂದ ದಾರಿ

Main Article Content

ಶ್ರೀಲತಾ ಎ.

Abstract

ನಾಟಕ ಆಧುನಿಕ ಸಾಹಿತ್ಯದ ಒಂದು ಪ್ರಕಾರವಾಗಿದೆ. ಕವಿರತ್ನ ಕಾಳಿದಾಸನ ಪ್ರಕಾರ ಕಾವ್ಯಕ್ಕೆ ನಾಟಕದ ಗುಣವೂ ಇದೆ. ನಾಟಕವು ಭಿನ್ನ ಭಾವನೆಗಳನ್ನು ಮೂಡಿಸಿ ಏಕ ಕಾಲಕ್ಕೆ ವಿಭಿನ್ನ ಅಭಿರುಚಿಗಳ ಜನರನ್ನು ಆಕರ್ಷಿಸಲು ಶಕ್ತವಾಗಿದೆ. ಉತ್ತಮ ನಟನೆಯು ಖಂಡಿತವಾಗಿ ಜನರನ್ನು ಆಕರ್ಷಿಸುತ್ತದೆ. ಹಾಗಾದರೆ ನಟನೆ ಎಂದರೇನು? ಭರತನು ತನ್ನ ನಾಟ್ಯಶಾಸ್ತ್ರದಲ್ಲಿ “ನಾಟಕ ಎಂದರೆ ಲೋಕವ್ಯವಹಾರದ ಅನುಕರಣೆ” ಎಂದಿದ್ದಾನೆ. ಮೂಲದಲ್ಲಿ ಅದು ಅನುಕರಣೆ ಇದ್ದಿರಬಹುದು. ಆದರೆ ಕ್ರಮೇಣ ಅನುಕರಿಸುವವನ ಕಲ್ಪನಾ ಶಕ್ತಿ, ಬುದ್ಧಿವಂತಿಕೆ, ತೋರಿಕೆಯ ಸಹಜತೆ ಇವುಗಳಿಂದ ಅನುಕರಣೆಯೇ ಒಂದು ಕಲೆಯಾಗಿ ಬೆಳೆಯಿತು. ಅನುಕರಣ ಪ್ರವೃತ್ತಿ ಎಲ್ಲರಲ್ಲಿ ಇದ್ದರೂ ಅವರು ನಟರಾಗುವುದಿಲ್ಲ. ನಟನಾ ಪ್ರವೃತ್ತಿಯು ಒಂದು ವಿಶೇಷ ಶಕ್ತಿಯಾಗಿರುತ್ತದೆ.
ನಟನೆಗೆ ಸೂಕ್ತ ವೇಷಭೂಷಣಗಳಲ್ಲದೆ ಸಂಭಾಷಣಾ ಚಾಕಚಕ್ಯತೆ ಇರಲೇಬೇಕು. ನಟನಾದವನು ಲೋಕಾನುಭವ, ಭಾವಾನುಕರಣೆ ಎರಡನ್ನೂ ಹೊಂದಿರಬೇಕು. ಇದನ್ನೇ ಭರತ ‘ಆಂಗಿಕ’ ಎಂದಿದ್ದಾನೆ. ರಂಗಭೂಮಿಯು ಜನರ ಸಂಸ್ಕೃತಿಯೊಂದಿಗೆ ಆಳವಾಗಿ ಬೆಸೆದುಕೊಂಡಿದೆ. ಸಾಮಾಜಿಕ ಮೌಲ್ಯಗಳು, ನಂಬಿಕೆಗಳು ಮತ್ತು ನಂಬಿಕೆಗಳನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದೆ. ಹಾಗಾಗಿ ನಮ್ಮ ಸುತ್ತಣ ಜಗತ್ತಿನ ಬದುಕು ಹಾಗೂ ಕ್ರಿಯೆಗಳ ಕಲಾತ್ಮಕ ಅನುಕರಣೆಯೇ ನಾಟಕ ಎನ್ನಬಹುದು. ಆಂತರಿಕ ಹಾಗೂ ಬಾಹ್ಯ ಜಗತ್ತಿನ ಒಳಗಡೆ ನಡೆಯುವ ಸಂಘರ್ಷಗಳು ನಾಟಕದ ವಿಶೇಷವಾಗಿರುತ್ತದೆ.
ಆಧುನಿಕ ನಾಟಕ ಪರಂಪರೆಗೆ ನೂರು ವರ್ಷಗಳ ಇತಿಹಾಸವಿದೆ. ಕನ್ನಡ ನಾಟಕ ಪರಂಪರೆಯಲ್ಲಿ ನವೋದಯ ಸಂದರ್ಭದ ಸಾಹಿತಿಗಳು ಇಂಗ್ಲಿಷಿನಿಂದ ಅನುವಾದ, ರೂಪಾಂತರಗಳನ್ನು ಮಾಡಿದರು. ಇದರಿಂದಾಗಿ ಇಂಗ್ಲಿಷ್ ಜನಜೀವನ, ರಾಜಕೀಯ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಪ್ರೇರಣೆಗಳು ಕನ್ನಡದ ಮೇಲೆ ಉಂಟಾಯಿತು. ಇದರಿಂದ ಕನ್ನಡ ಸಾಹಿತ್ಯ ನೂತನ ರೂಪರೇಷೆಗಳನ್ನು ತಳೆಯಲು ಪಾಶ್ಚಾತ್ಯ ದೇಶಗಳು ಪ್ರಮುಖ ಶಕ್ತಿಯಾದವು. ಟಿ.ಪಿ. ಕೈಲಾಸಂ ಮತ್ತು ಶ್ರೀರಂಗರು ಮಧ್ಯಮ ವರ್ಗದ ಸಮಸ್ಯೆಗಳ ಕುರಿತು ರಂಗ ಚಿತ್ರಗಳನ್ನು ನಿರ್ಮಿಸಿ ಸಮಾಜದ ನಿಜ ಸ್ವರೂಪವನ್ನು ತಮ್ಮ ತೀಕ್ಷ್ಣ ನಾಟಕೀಯ ದೃಷ್ಟಿಯಿಂದ ಬಯಲಿಗೆಳೆದರು. ಒಟ್ಟಿನಲ್ಲಿ ಆಧುನಿಕ ನಾಟಕದ ಉಗಮದಿಂದಾಗಿ ಪೌರಾಣಿಕ ವಸ್ತು ವಿಷಯಗಳಿಗೆ ಮಾತ್ರ ಆದ್ಯತೆಯಿದ್ದ ಕಾಲದಲ್ಲಿ ಸಾಮಾಜಿಕ ವಸ್ತುವಿನಂತ ಸಾರ್ವಕಾಲಿಕ ವಿಷಯಗಳತ್ತ ನಾಟಕಕಾರರ ಗಮನ ಹರಿದಿದ್ದು ಅತ್ಯಂತ ಮಹತ್ವದ ವಿಚಾರವಾಗಿದೆ.
ರಂಗಭೂಮಿಯು ಕೇವಲ ಲಲಿತ ಕಲೆಗಳ ಬೆಳವಣಿಗೆ ಅಷ್ಟೇ ಅಲ್ಲ. ಲೋಕ ವ್ಯವಹಾರಗಳಲ್ಲಿ ಬರುವುದೆಲ್ಲವೂ ರಂಗಭೂಮಿಯ ಪರಿಕರಗಳಾಗಬಲ್ಲವು ಎಂಬುದನ್ನು ಮರೆಯಲಾಗದು. ರಂಗಭೂಮಿಯು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಆಧುನಿಕ ಕನ್ನಡ ರಂಗಭೂಮಿಯಲ್ಲಿ ಹೊಸ ಅಲೆಯನ್ನು ಎಬ್ಬಿಸಿದವರು ರಂಗಕರ್ಮಿ ಬಿ.ವಿ. ಕಾರಂತರು. ಅವರು ರಂಗಭೂಮಿಯ ಪುನರುಜ್ಜೀವನಕ್ಕೆ ಕಾರಣರಾದರು. ನಾಟಕವನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ನೋಡುವುದು, ವೇದಿಕೆಯನ್ನು ಹೊಸ ರೀತಿಯಲ್ಲಿ ರಚಿಸಿ ಬಣ್ಣ ಬಣ್ಣದ ಪರದೆಗಳನ್ನು ಕಿತ್ತು ಸಾಂಕೇತಿಕತೆಯನ್ನು ಅಳವಡಿಸಿದರು. ವೃತ್ತಿ ರಂಗಭೂಮಿ, ಜನಪದ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಗಳ ಸಮ್ಮಿಶ್ರ ಮಾದರಿಯ ನೂತನ ಸಂಪ್ರದಾಯವನ್ನು ಕಾರಂತರು ಪರಿಚಯಿಸಿ ನಾಟಕವು ಪ್ರಧಾನವಾಗಿ ಪ್ರದರ್ಶನ ಕಲೆ ಎಂಬುದನ್ನು ಎತ್ತಿ ಹಿಡಿದರು.

Article Details

Section

Research Articles

Author Biography

ಶ್ರೀಲತಾ ಎ.

ಕನ್ನಡ ವಿಭಾಗ, ನಾಗಾರ್ಜುನ ಪದವಿ ಕಾಲೇಜು, ಬೆಂಗಳೂರು.

References

ಮರುಳಸಿದ್ದಪ್ಪ ಕೆ., (2002), ಆಧುನಿಕ ಕನ್ನಡ ನಾಟಕ, ಬೆಂಗಳೂರು: ಅಂಕಿತ ಪುಸ್ತಕ.

ಪ್ರಸನ್ನ, (1985), ನಾಟಕ ರಂಗಕೃತಿ, ಸಾಗರ: ಅಕ್ಷರ ಪ್ರಕಾಶನ.