ಉಷಾ ನವರತ್ನರಾಮ್ ಅವರ ಕಾದಂಬರಿಗಳಲ್ಲಿ ವೈದ್ಯಲೋಕ

Main Article Content

ಚಂದನಾ ಕೆ.ಎಸ್.

Abstract

ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯದ ಕಾಲದಿಂದಲೂ ಮಹಿಳಾ ಸಾಹಿತಿಗಳು, ಬರಹಗಾರ್ತಿಯರು ಸಮಾಜದ ಅನೇಕ ವೈವಿಧ್ಯಮಯ ಆಯಾಮಗಳನ್ನು ತಮ್ಮ ಬರಹಗಳ ಮೂಲಕ ಚಿತ್ರಿಸಿದ್ದಾರೆ. ಹಾಗೆಯೇ ಹೊಸಗನ್ನಡ ಕಾಲಘಟ್ಟದಲ್ಲಿಯೂ ಮಹಿಳೆಯರು ಅನೇಕ ಕಥೆ, ಕಾದಂಬರಿ, ಕವನ, ಸಂಶೋಧನೆ, ವಿಮರ್ಶೆ, ಪ್ರವಾಸ ಕಥನ ಮುಂತಾದ ಅನೇಕ ಪ್ರಕಾರಗಳಲ್ಲಿ ತಮ್ಮ ಬರಹಗಳನ್ನು ಬರೆದಿದ್ದಾರೆ. 1970ರ ನಂತರ ಮಹಿಳಾ ಸಾಹಿತ್ಯದ ಕಾಲಘಟ್ಟವೆಂದೇ ಹೆಸರಾದ ಕನ್ನಡ ಸಾಹಿತ್ಯದ ಒಂದು ಕವಲಿನಲ್ಲಿ, ಅನೇಕ ಹೆಣ್ಣು ಮಕ್ಕಳು ತಮ್ಮ ಜೀವನದ ಅನುಭವಗಳನ್ನು, ಸಾಮಾಜಿಕ ಸಮಸ್ಯೆಗಳನ್ನು ಮತ್ತು ಅವುಗಳಿಗೆ ಇರುವ ಪರಿಹಾರಗಳನ್ನು ಕತೆ-ಕಾದಂಬರಿಗಳ ರೂಪದಲ್ಲಿ ಬರೆಯಲಾರಂಭಿಸಿದರು.
ಕೆಲವು ಬರಹಗಾರ್ತಿಯರು ಪ್ರೀತಿ-ಪ್ರೇಮ ಇತ್ಯಾದಿ ಒಂದೇ ವಿಷಯಕ್ಕೆ ಸಂಬಂಧಿಸಿದ ಏಕತಾನತೆಯ ವಿಷಯಗಳನ್ನು ಬರೆಯಲಾರಂಭಿಸಿದರೆ, ಹಲವರು ತಮ್ಮ ಕಾದಂಬರಿಗಳ ಹರಹನ್ನು ವಸ್ತುವಿನ ಹಿನ್ನೆಲೆಯಲ್ಲಿ ವಿಸ್ತರಿಸುತ್ತಾ ಸಾಗಿದರು. ಡಾ. ಅನುಪಮಾ ನಿರಂಜನ, ಎಂ.ಕೆ. ಇಂದಿರಾ, ತ್ರಿವೇಣಿ, ಉಷಾ ನವರತ್ನರಾಮ್ ಮುಂತಾದವರು ಹೀಗೆ ವೈವಿಧ್ಯಮಯ ವಿಷಯಗಳಿಗೆ ಸಂಬಂಧಿಸಿದ ಕಾದಂಬರಿಗಳನ್ನು ಬರೆದರು.
ಉಷಾ ನವರತ್ನರಾಮ್ ಅವರನ್ನು ವಿಮರ್ಶಕರು ಜನಪ್ರಿಯ ಕಾದಂಬರಿಗಾರ್ತಿಯರ ಸಾಲಿಗೆ ಸೇರಿಸಿದರೂ, ಅವರ ವಸ್ತುಗಳ ಆಯ್ಕೆಯಲ್ಲಿನ ವೈವಿಧ್ಯತೆ ಗಮನಿಸಿದರೆ ಅವರು ಬರಿಯ ‘ಜನಪ್ರಿಯ’ ಎಂಬ ವರ್ಗಕ್ಕೆ ಒಳಪಡುವ ಸರಳ ವಸ್ತು ವಿಷಯಗಳನ್ನು ಅಥವಾ ಮನೋರಂಜನೆ ನೀಡುವ ವಿಷಯಗಳನ್ನು ಮಾತ್ರವೇ ಆಯ್ಕೆಮಾಡಿಕೊಂಡು ಬರೆದಿಲ್ಲ ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಸಾಮಾಜಿಕ ಕಳಕಳಿಯುಳ್ಳ ಅನೇಕ ಕಾದಂಬರಿಗಳನ್ನು ಅವರು ಬರೆದಿದ್ದಾರೆ. ಅವರು ಬರೆದ ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದ ‘ಬಿನ್ನಹಕೆ ಬಾಯಿಲ್ಲ’, ‘ಹೊಂಬಿಸಿಲು’, ‘ಹ್ಯಾಪಿ ಬರ್ತ್ಡೇ’ ಮತ್ತು ‘ಅಂಗೈಯಲ್ಲಿ ಅರಮನೆ’ ಎಂಬ ನಾಲ್ಕು ಕಾದಂಬರಿಗಳನ್ನು ಇಲ್ಲಿ ವಿಶ್ಲೇಷಣೆಗೆ ಒಳಪಡಿಸುವ ಪ್ರಯತ್ನ ಮಾಡಲಾಗಿದೆ.

Article Details

Section

Research Articles

Author Biography

ಚಂದನಾ ಕೆ.ಎಸ್.

ಕನ್ನಡ ಉಪನ್ಯಾಸಕರು, ಶ್ರೀ ಮಹಾವೀರ ಕಾಲೇಜು, ಕೊಡಂಗಲ್ಲು ಅಂಚೆ, ಮೂಡಬಿದಿರೆ, ದ.ಕ.ಜಿಲ್ಲೆ.

References

ಉಷಾ ನವರತ್ನರಾಮ್, (1985), ಹ್ಯಾಪಿ ಬರ್ಥ್ ಡೇ, ಬೆಂಗಳೂರು: ವರ್ಧಮಾನ ಪ್ರಕಾಶನ.

ಉಷಾ ನವರತ್ನರಾಮ್, (2014), ಹೊಂಬಿಸಿಲು, ಬೆಂಗಳೂರು: ಇಂದಿರಾ ಪ್ರಕಾಶನ.

ಉಷಾ ನವರತ್ನರಾಮ್, (1993), ಅಂಗೈಯಲ್ಲಿ ಅರಮನೆ, ಬೆಂಗಳೂರು: ಶ್ರೀಲಕ್ಷ್ಮೀ ಪ್ರಕಾಶನ.

ಉಷಾ ನವರತ್ನರಾಮ್, (2011), ಬಿನ್ನಹಕೆ ಬಾಯಿಲ್ಲ, ಬೆಂಗಳೂರು: ಸಾಹಿತ್ಯ ನಂದನ.