ಚಂದ್ರಶೇಖರ ಕಂಬಾರರ ಜೋಕುಮಾರಸ್ವಾಮಿ, ನಾಯೀಕತೆ, ಜೈಸಿದ ನಾಯಕ ನಾಟಕಗಳಲ್ಲಿ ಸ್ತ್ರೀ ಸಂವೇದನೆ

Main Article Content

ರುದ್ರಮುನಿ ಹೆಚ್.

Abstract

ಆಧುನಿಕ ಕಾಲಘಟ್ಟದ ಪ್ರಮುಖ ನಾಟಕಕಾರರಲ್ಲಿ ಡಾ. ಚಂದ್ರಶೇಖರ ಕಂಬಾರರು ಒಬ್ಬರು. ಪುರಾಣ ಮತ್ತು ಜಾನಪದ ವಸ್ತುಗಳನ್ನು ಹಿನ್ನೆಲೆಯಾಗಿಸಿಕೊಂಡು, ವಾಸ್ತವತೆಗೆ ಮುಖಾಮುಖಿಯಾಗುವಂತಹ ಅಪರೂಪದ ಬರಹಗಾರರಿವರು. ನವ್ಯ ಕಾಲಘಟ್ಟದ ಸಂದರ್ಭದಲ್ಲಿ ನಾಟಕ ಪರಂಪರೆಗೆ ಬಹುಮುಖ್ಯ ಕೊಡುಗೆ ನೀಡಿದ ಕೀರ್ತಿ ಕಂಬಾರರಿಗೂ ಸಲ್ಲುತ್ತದೆ. ಇವರ ನಾಟಕಗಳು ರಂಗಭೂಮಿಗೂ ಕಾಲಿಟ್ಟು, ಜನಪ್ರಿಯತೆಯನ್ನು ಪಡೆದಿದ್ದವು. ಇದಕ್ಕೆ ಪ್ರಮುಖ ಸಾಕ್ಷಿ ಜೋಕುಮಾರಸ್ವಾಮಿ ನಾಟಕ. ಎಂಬತ್ತರ ದಶಕದಲ್ಲಿ ಬಿ.ವಿ. ಕಾರಂತರ ನಿರ್ದೇಶನದಲ್ಲಿ ರಂಗದ ಮೇಲೆ ಈ ನಾಟಕವು ಬೆಳಕು ಚೆಲ್ಲಿ ಜನಪ್ರಿಯಗೊಂಡಿತ್ತು. ನಾಟಕವು ಏಕಕಾಲದಲ್ಲಿ ದೃಶ್ಯಮಾಧ್ಯಮವೂ ಹೌದು ಮತ್ತು ಶ್ರವ್ಯಮಾಧ್ಯಮವೂ ಹೌದು. ಆದ್ದರಿಂದಲೇ ನಾಟಕವು ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸಿ ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಕಂಬಾರರ ನಾಟಕಗಳಲ್ಲಿ ನಮಗೆ ವಿಶೇಷವಾಗಿ ಕಾಣಸಿಗುವುದು ಜನಪದದ ನೆಲೆಗಳು, ದೇಸೀತನದ ಹುಡುಕಾಟ, ಊಳಿಗಮಾನ್ಯ ವ್ಯವಸ್ಥೆಯಂತಹ ಸಮಾಜ ವಿರೋಧಿ ವ್ಯವಸ್ಥೆಗಳ ಕರಾಳ ರೂಪ ಮತ್ತು ಇವುಗಳ ಜೊತೆಗೆ ಬಹಳ ಮುಖ್ಯವಾದುದು ಸ್ತ್ರೀ ಸಂವೇದನೆಗಳು. ನಮ್ಮ ಈ ಲೇಖನವು ಕಂಬಾರರ ನಾಟಕಗಳಾದ ಜೋಕುಮಾರಸ್ವಾಮಿ, ನಾಯೀಕತೆ ಮತ್ತು ಜೈಸಿದ ನಾಯಕ ನಾಟಕಗಳಲ್ಲಿನ ಸ್ತ್ರೀ ಸಂವೇದನೆಗಳ ಕುರಿತು ಅಧ್ಯಯನ ಮಾಡುವುದಾಗಿದೆ. ನಮ್ಮ ಸಮಾಜದಲ್ಲಿರುವ ಕೆಟ್ಟ ರಾಜಕಾರಣಗಳಲ್ಲಿ ಲಿಂಗ ರಾಜಕಾರಣವೂ ಒಂದು. ತಲತಲಾಂತರಗಳಿಂದ ಅನೇಕ ಕಾರಣಗಳಿಂದಾಗಿ ಪುರುಷನು ಸ್ತ್ರೀಯನ್ನು ಶೋಷಿಸುತ್ತಲೇ ಬಂದಿರುವುದು ವಿಷಾದನೀಯ ಸಂಗತಿಯಾಗಿದೆ. ತನ್ನ ಅಧಿಕಾರ ಮತ್ತು ಬಲದಿಂದ ಹೆಣ್ಣಿನ ಮೇಲೆ ತನ್ನ ಹಿಡಿತವನ್ನು ಸಾಧಿಸುವ ವಿಫಲ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾನೆ. ಆದರೆ ದೌರ್ಜನ್ಯದ ಬೇಗೆಯಲ್ಲಿ ಬೆಂದವಳು ಮಾತ್ರ ಹೆಣ್ಣು.

Article Details

Section

Research Articles

Author Biography

ರುದ್ರಮುನಿ ಹೆಚ್.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳೆಹೊನ್ನೂರು.

References

ಕಂಬಾರ ಚಂದ್ರಶೇಖರ, (1972), ಜೋಕುಮಾರಸ್ವಾಮಿ, ಬೆಂಗಳೂರು: ಅಂಕಿತ ಪುಸ್ತಕ.

ಕಂಬಾರ ಚಂದ್ರಶೇಖರ, (1980), ನಾಯೀಕತೆ, ಬೆಂಗಳೂರು: ಅಂಕಿತ ಪುಸ್ತಕ.

ಕಂಬಾರ ಚಂದ್ರಶೇಖರ, (1975), ಜೈಸಿದ ನಾಯಕ, ಬೆಂಗಳೂರು: ಅಂಕಿತ ಪುಸ್ತಕ.

ಕುರ್ತಕೋಟಿ ಕೀರ್ತಿನಾಥ, (2012), ಚಂದ್ರಶೇಖರ ಕಂಬಾರರ ಕಾವ್ಯ ಮತ್ತು ನಾಟಕಗಳು, ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನ.

ಪಾನಬುಡೆ ಸುಖದೇವ ಎಂ., (2007), ಡಾ. ಚಂದ್ರಶೇಖರ ಕಂಬಾರರ ನಾಟಕಗಳು, ಧಾರವಾಡ: ಸೋನಾತಾಯಿ ಪ್ರಕಾಶನ.

ಮಲಶೆಟ್ಟಿ ಬಸವರಾಜ, (2006), ಡಾ. ಚಂದ್ರಶೇಖರ ಕಂಬಾರರು, ಬೆಂಗಳೂರು: ನವಕರ್ನಾಟಕ ಪಬ್ಲಿಕೇಷನ್.

ಕಲ್ಗುಡಿ ಬಸವರಾಜ (ಸಂ), (2012), ಕಂಬಾರರ ಸಾಹಿತ್ಯದ ನೆಲೆ ಬೆಲೆ, ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನ.