ಯೋಗ ಶಿಕ್ಷಣದಲ್ಲಿ ಸಂಸ್ಕೃತ ಭಾಷೆಯ ಮಹತ್ವ
Main Article Content
Abstract
ನಮ್ಮ ಪ್ರಾಚೀನ ವಾಙ್ಮಯವೆಲ್ಲ ಸಂಸ್ಕೃತ ಭಾಷೆಯನ್ನು ಆಧರಿಸಿದೆ. ವೈದಿಕ ವಾಙ್ಮಯವೇ ಆಗಲಿ, ರಾಮಾಯಣ, ಮಹಾಭಾರತ, ಸ್ಮೃತಿಗ್ರಂಥಗಳು, ದರ್ಶನಗಳು, ಧರ್ಮಗ್ರಂಥಗಳು, ಮಹಾಕಾವ್ಯ, ಲಘುಕಾವ್ಯಗಳು, ನಾಟಕಗಳು, ಗದ್ಯಕಾವ್ಯ, ಗೀತಕಾವ್ಯ, ನೀತಿಗ್ರಂಥಗಳು ಹೀಗೆ ಸಾವಿರಾರು ಗ್ರಂಥ ಪ್ರಕಾರಗಳು ಸಂಸ್ಕೃತ ಭಾಷೆಯಲ್ಲಿ ಮಾತ್ರ ಸಿಗುತ್ತವೆ. ಇದಲ್ಲದೇ ವ್ಯಾಕರಣ, ಗಣಿತ, ಜ್ಯೋತಿಷ್ಯ, ವಾಸ್ತುಕಲೆ, ಅರ್ಥಶಾಸ್ತ್ರ, ರಾಜನೀತಿ, ಛಂದಸ್, ಅಲಂಕಾರ ಮೊದಲಾದ ಶಾಸ್ತ್ರಗಳೆಲ್ಲ ಸಂಸ್ಕೃತದಲ್ಲಿವೆ. ಹಾಗಾಗಿ, ವಾಙ್ಮಯವು ವಿಪುಲವಾದದ್ದು, ಅಪಾರವಾದದ್ದು. ಪ್ರಾಚೀನ ಕಾಲದಲ್ಲಿ ಇದು ಕೇವಲ ವಿದ್ವಾಂಸರ ಭಾಷೆಯಾಗಿರದೇ ಜನಸಾಮಾನ್ಯರ ಲೌಕಿಕ ವ್ಯವಹಾರದಲ್ಲಿ ಆಡು ಭಾಷೆಯೂ ಆಗಿತ್ತು. ಎಲ್ಲ ಶಾಸ್ತ್ರಗಳ ಪ್ರಾಚೀನ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿವೆ. ಇದಕ್ಕೆ ಯೋಗಶಾಸ್ತ್ರ ಸಹ ಹೊರತಲ್ಲ.
ಯೋಗವು ಪ್ರಾಚೀನ ಭಾರತದ ಒಂದು ಅತ್ಯಮೂಲ್ಯ ಕೊಡುಗೆಯಾಗಿದೆ. ಭಾರತದ ವೈಜ್ಞಾನಿಕ ಪ್ರತಿಭೆಯ ಒಂದು ಭಾಗವೂ ಹೌದು. ಯೋಗಕ್ಕೆ ಸುಮಾರು ಐದು ಸಾವಿರ ವರ್ಷಗಳಷ್ಟು ಹಳೆಯ ಇತಿಹಾಸವಿದೆ. ಯೋಗ ಶಾಸ್ತ್ರವು ಸಾಕ್ಷಾತ್ ಆದಿನಾಥ ಶಿವನಿಂದ ಉಪದೇಶಿಸಲ್ಪಟ್ಟಿದೆ ಎಂದು ಹೇಳಲಾಗಿದೆ. ಯೋಗದ ಉಲ್ಲೇಖವು ವೇದಗಳು, ಉಪನಿಷತ್ತುಗಳು, ಭಗವದ್ಗೀತೆ, ಪುರಾಣಗಳಲ್ಲಿ ಕಂಡುಬರುತ್ತದೆ. ಯೋಗದ ಪ್ರಥಮ ಉಲ್ಲೇಖವು ಋಗ್ವೇದದಲ್ಲಿ ಕಂಡುಬಂದಿದೆ ಎಂದು ಹೇಳಲಾಗುತ್ತದೆ. ಅನೇಕ ಋಷಿಮುನಿಗಳು, ಯೋಗಿಗಳು, ಸಿದ್ಧಸಾಧಕರು ಯೋಗ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಅವರು ಅನೇಕ ಯೋಗ ಗ್ರಂಥಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಸ್ವಾತ್ಮಾರಾಮ ವಿರಚಿತ ಹಠಯೋಗ ಪ್ರದೀಪಿಕಾ, ಮಹರ್ಷಿ ಘರಂಡರು ವಿರಚಿಸಿದ ಘೇರಂಡ ಸಂಹಿತಾ (ಘಟಸ್ಥ ಯೋಗ), ಹರಗೌರಿ ಸಂವಾದವಾದ ಶಿವಸಂಹಿತಾ, ಮಹರ್ಷಿ ಶ್ರೀನಿವಾಸ ಭಟ್ಟರು ರಚಿಸಿದ ಹಠರತ್ನಾವಳಿ, ಮಹರ್ಷಿ ಗೋರಕ್ಷನಾಥರು ರಚಿಸಿದ ಗೋರಕ್ಷ ಷಟ್ಕ ಮುಂತಾದವುಗಳು ಹಠಯೋಗ ಗ್ರಂಥಗಳಾಗಿವೆ. ಇಷ್ಟೇ ಅಲ್ಲದೇ ಮಹರ್ಷಿ ಪತಂಜಲಿ ಅವರಿಂದ ರಚಿಸಲ್ಪಟ್ಟ ಯೋಗದರ್ಶನವು ಭಾರತೀಯ ತತ್ವಶಾಸ್ತ್ರದ ಆಸ್ತಿಕ ದರ್ಶನಗಳಲ್ಲಿ ಒಂದಾಗಿದೆ. ಆದ್ದರಿಂದ ಯೋಗ ಶಾಸ್ತ್ರದ ಸಂಪೂರ್ಣ ಹಾಗೂ ಯಥಾರ್ಥ ಜ್ಞಾನವನ್ನು ಹೊಂದಲು ಸಂಸ್ಕೃತ ಭಾಷಾ ಜ್ಞಾನ ಅತೀ ಮುಖ್ಯ ಪಾತ್ರವನ್ನು ವಹಿಸುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಪಾಣಿನಿ, (2014), ಅಷ್ಟಾಧ್ಯಾಯೀ, ಚೌಖಂಬಾ ಸುರಭಾರತಿ ಪ್ರಕಾಶನ, ವಾರಾಣಸಿ.
ಕಾಶೀನಾಥ ಶರ್ಮಾ, (2009), ಸುಭಾಷಿತರತ್ನ ಭಾಂಡಾಗಾರ, ಭಾರತೀಯ ವಿದ್ಯಾಸಂಸ್ಥಾನ, ವಾರಾಣಸಿ.
ಅನಂತರಂಗಾಚಾರ್ ಎನ್.ಎಸ್., (2022), ವೈದಿಕ ಸಾಹಿತ್ಯ ಚರಿತ್ರೆ, ಪ್ರಸಾರಾಂಗ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು.
ರವಿದತ್ತ ತ್ರಿಪಾಠಿ, (2018), ಅಷ್ಟಾಂಗ ಹೃದಯ, ಚೌಖಂಬಾ ಸಂಸ್ಕೃತ ಪ್ರತಿಷ್ಠಾನ, ದೆಹಲಿ.
ಲಕ್ಷ್ಮೀಧರ ದ್ವಿವೇದಿ, (2016), ಚರಕ ಸಂಹಿತಾ, ಚೌಖಂಬಾ ಕೃಷ್ಣದಾಸ ಅಕಾಡೆಮಿ, ವಾರಾಣಸಿ.
ನಾರಾಯಣರಾಮ ಆಚಾರ್ಯ, (2014), ಸುಶ್ರುತ ಸಂಹಿತಾ, ಚೌಖಂಬಾ ಕೃಷ್ಣದಾಸ ಅಕಾಡೆಮಿ, ವಾರಾಣಸಿ.
ಸಂಸ್ಕೃತ ಭಾರತಿ, (2012), ಹೆಮ್ಮೆಯ ಭಾರತ, ಸಂಸ್ಕೃತ ಭಾರತಿ, ಬೆಂಗಳೂರು.
ಗಣಪತಿ ಹೆಗಡೆ, (2019), ಸಂಸ್ಕೃತದ ಮಹತ್ವ ಸಾರಿದ ವಿವೇಕಾನಂದರು, ವಿಶ್ವವಾಣಿ ಪತ್ರಿಕೆ, ಬೆಂಗಳೂರು, ದಿನಾಂಕ: 15 ಅಗಸ್ಟ್ 2024
ಮಹಾದೇವಪ್ಪ ಎನ್.ಜಿ., (2008), ಯೋಗ ಮತ್ತು ಭಾರತೀಯ ತತ್ವಶಾಸ್ತ್ರ, ಸುಯೋಗ ಪ್ರಕಾಶನ, ಧಾರವಾಡ.