ಡಾ. ಬಿ. ಆರ್. ಅಂಬೇಡ್ಕರ್ ಅವರ ಬದುಕಿನಿಂದ ಕಲಿಯಬೇಕಾದ ಸಂದೇಶ
Main Article Content
Abstract
ಕಲಿಕೆ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿದೆ. ಅದು ನಿತ್ಯ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಹುಟ್ಟಿನಿಂದ ಸಾವಿನವರೆಗೂ ಜೀವನುದ್ದಕ್ಕೂ ವಿವಿಧ ಜ್ಞಾನಶಾಖೆಗಳ ಮೂಲಕ ಜೀವನಾನುಭವ ಪಡೆಯುತ್ತ, ಹಳೆ ಬೇರು ಹೊಸ ಚಿಗುರು ಎಂಬಂತೆ ಗುರುಹಿರಿಯರ ನಡೆ-ನುಡಿ, ಆಚಾರ ವಿಚಾರಗಳನ್ನು ಅನುಲಕ್ಷಿಸುತ್ತ, ಭವಿಷ್ಯದ ಬದುಕಿನ ಅಗತ್ಯತೆಗಳನ್ನು ಕಲ್ಪಿಸಿಕೊಳ್ಳುತ್ತ ಹಳೆಯ ಮತ್ತು ಹೊಸದರ ಸಮ್ಮಿಶ್ರಣದೊಂದಿಗೆ ಸುಂದರ ಬದುಕು ಕಟ್ಟಿಕೊಳ್ಳಲು ‘ಕಲಿಕೆ’ ಎಂಬ ಪ್ರಕ್ರಿಯೆ ನಡೆಯುತ್ತಲೇ ಸಾಗುತ್ತದೆ.
‘ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ’ ಯಿಂದ ಆರಂಭವಾಗಿ ಕಲಿಕೆ ಮುಂದುವರೆಯುತ್ತದೆ. ‘ದೇಶ ಸುತ್ತು ಇಲ್ಲವೇ ಕೋಶ ಓದು’ ಎಂಬಂತೆ ಸಾಹಿತ್ಯ, ಕಾವ್ಯ, ಪುರಾಣ, ಶಾಸ್ತ್ರ, ಕಲೆ ಹೀಗೆ ನೂರಾರು ಪ್ರಕಾರದ ಗ್ರಂಥಗಳ ಅಧ್ಯಯನದ ಮೂಲಕ ಹಾಗೂ ಶಾಲಾ ಶಿಕ್ಷಕರು, ಗುರು-ಹಿರಿಯರಿಂದ, ಮಠಮಾನ್ಯಗಳಿಂದ, ಅನುಭಾವಿಗಳ ಸಂಪರ್ಕಗಳ ಮೂಲಕ ಕಲಿಕೆ ನಡೆಯುತ್ತದೆ. ಅಷ್ಟೇ ಏಕೇ ಪಶು-ಪ್ರಾಣಿ, ಜೀವ ಸಂಕುಲಗಳು, ನಿಸರ್ಗದ ಗಿಡ-ಮರ, ಬೆಟ್ಟ, ನದಿ, ಸರೋವರ, ಗಾಳಿ ಹೀಗೆ ಪ್ರಕೃತಿಯನ್ನು ನೋಡಿಯೂ ಮನುಷ್ಯ ಸಾಕಷ್ಟು ವಿಚಾರಗಳನ್ನು ಕಲಿತುಕೊಳ್ಳುತ್ತಾನೆ. ಹೀಗೆ ಸಾವಿರಾರು ದಾರಿಯಿಂದ ಜ್ಞಾನ ಹರಿದುಬರುತ್ತಲೇ ಇರುತ್ತದೆ. ಇವೆಲ್ಲವೂ ಮನುಷ್ಯನ ಜ್ಞಾನಶಾಖೆಗಳೆಂದು ಕರೆಯಲಾಗುತ್ತದೆ.
ಕೋಶ ಓದುವಿಕೆಯಿಂದ ಒಂದು ರೀತಿಯ ಜ್ಞಾನ ಲಭಿಸುತ್ತದೆ ಎಂಬುದು ನಿಜವೇ. ಆದರೆ ಪ್ರಕೃತಿಯಿಂದ, ಲೋಕಾನುಭವದಿಂದ ದೊರೆಯುವ ಜ್ಞಾನ ಮಹತ್ವದ್ದಾಗುತ್ತದೆ. ಕಾರಣ ಲೋಕಾನುಭವು ಮನುಷ್ಯನಲ್ಲಿ ಮಾನವೀಯತೆ, ಮಾನವೀಯ ಮೌಲ್ಯಗಳ ಮೂಲಕ ಹೃದಯ ಶ್ರೀಮಂತಿಕೆ, ಭಾವಶ್ರೀಮಂತಿಕೆಗೊಳಿಸಿ ಆತನಲ್ಲಿ ಆತ್ಮವಿಶ್ವಾಸ, ಧೈರ್ಯ ತುಂಬುತ್ತದೆ. ಭಕ್ತಿ, ಶ್ರದ್ದೇ, ಸತತ ಪ್ರಯತ್ನ, ಪ್ರಮಾಣಿಕತೆ, ನ್ಯಾಯ-ನೀತಿ, ಹಸಿವು, ನೋವು-ನಲಿವು ಮುಂತಾದವುಗಳ ಅನುಭವ ನೀಡುತ್ತದೆ. ಅಲ್ಪವಿರಾಮದಿಂದ ಪೂರ್ಣ ವಿರಾಮದೆಡೆಗೆ, ಸಂಶಯದಿಂದ ನಿಸ್ಸಂಶಯದೆಡೆಗೆ, ಪೂರ್ಣತೆಯಿಂದ ಪರಿಪೂರ್ಣತೆಯೆಡೆಗೆ, ದೃಢತೆಯಿಂದ ಸದೃಢತೆಯೆಡೆಗೆ ಕೊಂಡ್ಯೊಯುತ್ತದೆ.
ಹಸಿದವನಿಗೆ ಮಾತ್ರ ಗೊತ್ತು ಅನ್ನದ ಬೆಲೆ. ಈ ಜಗತ್ತಿನಲ್ಲಿ ಪ್ರತಿಯೊಂದು ವಸ್ತುವಿನ ಬೆಲೆ, ಮೌಲ್ಯ ಗೊತ್ತಾಗುವುದು ಕಷ್ಟಪಟ್ಟು ದುಡಿದು ಸಂಪಾದಿಸಿದವನಿಗೆ ಮಾತ್ರ. ಅಂದಾಗಲೇ ಆ ವಸ್ತುವಿನ ಸದ್ಬಳಕೆಯು ಸಾಧ್ಯವಾಗುತ್ತದೆ. ಆದ್ದರಿಂದ ಕೆಟ್ಟ ಪರಿಸ್ಥಿತಿಯಲ್ಲಿ ಬದುಕಿ, ನೂರಾರು ಅವಮಾನ, ಸಮಸ್ಯೆಗಳನ್ನು ಎದುರಿಸಿದ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರು ಅಪ್ಪಟ ದೇಶಾಭಿಮಾನಿಗಳು, ಸ್ವಾಭಿಮಾನಿಗಳು, ಹೋರಾಟಗಾರರು, ತತ್ವನಿಷ್ಠರು, ಜೀವಪರ ಚಿಂತಕರು, ಶಿಕ್ಷಣ ತಜ್ಞರು, ಅರ್ಥಶಾಸ್ತ್ರಜ್ಞರು, ಸಮಾಜಸುಧಾಕರು, ಮಾನವೀಯ ಮೌಲ್ಯಗಳ ಸಾಕಾರ ಮೂರ್ತಿಗಳು ಆಗಿದ್ದಾರೆ.
2011ರಲ್ಲಿ ಇಂಗ್ಲೆಂಡ್ನ ಕೆಂಬ್ರಿಡ್ಜ ವಿಶ್ವವಿದ್ಯಾಲಯವು ಜಗತ್ತಿನ ಅತ್ಯಂತ ಶ್ರೇಷ್ಠ ವಿದ್ವಾಂಸರ ಸರ್ವೇ ನಡೆಸಿ, ಅದರಲ್ಲಿ ನೂರು ಜನ ಶ್ರೇಷ್ಠ ವಿದ್ವಾಂಸರ ಪಟ್ಟಿ ತಯ್ಯಾರಿಸಿತ್ತು. ಆ ನೂರು ಜನ ಘನ ವಿದ್ವಾಂಸರ ಪಟ್ಟಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ ಅವರೇ ಮೊಟ್ಟ ಮೊದಲಿಗರಾಗಿದ್ದಾರೆ. ಜಗತ್ತಿನ ಹತ್ತಾರು ಸಂವಿಧಾನಗಳನ್ನು ಅಧ್ಯಯನ, ಅನುಶೀಲನಗೈದು, ಈ ನಮ್ಮ ಭಾರತ ದೇಶಕ್ಕೆ ಅಗತ್ಯವೆನಿಸುವ ಸರ್ವ ಜನಾಂಗದ ಶಾಂತಿಯ ತೋಟವಾಗಿ ನಿರ್ಮಿಸಲು, ಸಕಲ ಜೀವರಾಶಿಗಳ ಏಳಿಗೆಯನ್ನು ಗಮನದಲ್ಲಿರಿಸಿಕೊಂಡು ಜಗತ್ ಪ್ರಸಿದ್ದವಾದ ಸಂವಿಧಾನ ರಚಿಸಿ, ಸಂವಿಧಾನ ಶಿಲ್ಪಿಯಾಗಿದ್ದಾರೆ. ಡಾ. ಬಿ. ಆರ್. ಅಂಬೇಡ್ಕರ ಅವರು ಆರಂಭಿಕ ಜೀವನ, ಶೈಕ್ಷಣಿಕ ಸಾಧನೆ, ಧಾರ್ಮಿಕ, ಸಾಮಾಜಿಕ, ರಾಜಕೀಯ ಹೋರಾಟ ಮಾಡಿ ಗಗನದೆತ್ತರಕ್ಕೆ ಬೆಳದುನಿಂತ ಅವರ ಪರಿಯು ಜಗತ್ತನ್ನೇ ಬೆರಗುಗೊಳಿಸುತ್ತದೆ. ಅವರ ಜೀವನದ ಪ್ರತಿಯೊಂದು ಹೆಜ್ಜೆಗಳು, ಪ್ರತಿ ಉಸಿರು ಜಗತ್ತಿಗೆ ಮಾದರಿಯಾಗಿವೆ. ಅವರು ನಡೆದು ಬಂದ ದಾರಿಯನ್ನು ಅವಲೋಕಿಸುತ್ತ, ಅನುಸರಿಸುತ್ತ, ಮುನ್ನಡೆದು ಬದುಕು ಹಸನುಗೊಳಿಸಿಕೊಳ್ಳಬೇಕಾಗಿದೆ. ಅಂತಹ ಮೇರು ಸಾಧಕರ ಸಾಧನೆ ಕುರಿತು ಅರಿತುಕೊಳ್ಳುವ ಸಣ್ಣದಾದ ಪ್ರಯತ್ನ ಇಲ್ಲಿ ಮಾಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಶಿವರಾಂ ಎನ್.ಆರ್., (2016), ಡಾ. ಬಾಬಾ ಸಾಹೇಬ ಅಂಬೇಡ್ಕರ ಜೀವನ ಚರಿತ್ರೆ, ಆಶೋಕ ಪಬ್ಲಿಕೇಶನ, ಹಾಸನ.
ಚಂದ್ರಶೇಖರ ಭಂಡಾರಿ (ಅನು), (2014), ಸಾಮಾಜಿಕ ಕ್ರಾಂತಿ ಸೂರ್ಯ ಡಾ. ಬಾಬಾಸಾಹೇಬ ಅಂಬೇಡ್ಕರ, ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು.
ಅಂಬೇಡ್ಕರ ಬಿ.ಆರ್. (ಮೂಲ), ಕೃಷ್ಣಯ್ಯ ಎ.ಡಿ. (ಅನು), (1996), ಬುದ್ಧ ಮತ್ತು ಆತನ ಧಮ್ಮ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.
ಅನುಪಮಾ ಹೆಚ್.ಎಸ್. (ಸಂ), (2023), ಬುದ್ಧ ಬೆಳಕಿನಲ್ಲಿ ಅಂಬೇಡ್ಕರ ಭಾರತ, ಲಡಾಯಿ ಪ್ರಕಾಶನ, ಗದಗ.
ಮಾಧವರಾವ ಎಂ.ಎಸ್. (ಅನು), (2014), ಡಾ. ಅಂಬೇಡ್ಕರ: ಜೀವನ ಮತ್ತು ಸಾಧನೆ, ಆಶೋಕ ಪಬ್ಲಿಕೇಶನ, ಹಾಸನ.