ಕನ್ನಡ ರಂಗಭೂಮಿ ಪರಂಪರೆ ಮತ್ತು ಆಧುನಿಕತೆ
Main Article Content
Abstract
ಕನ್ನಡ ರಂಗಭೂಮಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಒಂದು ಭಾಗ. ಕನ್ನಡ ನಾಡಿನ ಜನಪದ ಕಲೆಗಳು, ಯಕ್ಷಗಾನ, ಬಯಲಾಟ, ದೊಡ್ಡಾಟ, ಸಣ್ಣಾಟ, ತಾಳಮದ್ದಲೆ ಮುಂತಾದ ಕಲಾ ಪ್ರಕಾರಗಳು ಕನ್ನಡ ರಂಗಭೂಮಿಯ ಬೆಳವಣಿಗೆಗೆ ಭದ್ರವಾದ ಅಡಿಪಾಯವನ್ನು ನಿರ್ಮಿಸಿವೆ. ಕಾಲಕ್ರಮೇಣ ಪಾಶ್ಚಾತ್ಯ ರಂಗಭೂಮಿಯ ಪ್ರಭಾವ, ಹೊಸ ತಂತ್ರಜ್ಞಾನ, ಹೊಸ ನಾಟಕಕಾರರು ಮತ್ತು ನಿರ್ದೇಶಕರ ಪ್ರಯೋಗಗಳಿಂದ ಕನ್ನಡ ರಂಗಭೂಮಿಯ ಆಧುನಿಕ ರೂಪವನ್ನು ಪಡೆದುಕೊಂಡಿದೆ. 19ನೆಯ ಶತಮಾನದ ಕೊನೆಯ ಸುಮಾರಿಗೆ ಆಧುನಿಕ ಕನ್ನಡ ರಂಗಭೂಮಿ ಅಸ್ತಿತ್ವದಲ್ಲಿ ಬಂದರೂ ಕನ್ನಡದಲ್ಲಿ ನಾಟಕ ಸಾಹಿತ್ಯ ರಚನೆಯಾಗಿರಲಿಲ್ಲ. ಕನ್ನಡದ ಆರಂಭಕಾಲದ ನಾಟಕಗಳು ಇತರ ಭಾಷೆಗಳ ಹಾಗೂ ಕಂಪನಿಗಳ ಅನುವಾದಿತ ನಾಟಕಗಳಾಗಿದ್ದವು. ಜಾನಪದ ಪರಂಪರೆಗೆ ಅನುಗುಣವಾಗಿ ಪುರಾಣದ ವಸ್ತುಗಳನ್ನು ಒಳಗೊಂಡ ನಾಟಕಗಳು ರಚಿತವಾದವು. ಸಂಸ್ಕೃತ ಭಾಷೆಯ ಕಾಳಿದಾಸ, ಭವಭೂತಿ, ಭಟ್ಟನಾರಾಯಣ ಮೊದಲಾದ ನಾಟಕಕಾರರ ಕೃತಿಗಳು ಕನ್ನಡಕ್ಕೆ ಅನುವಾದಗೊಂಡವು. ಮೈಸೂರಿನಲ್ಲಿ ರಾಜರ ಪ್ರೋತ್ಸಾಹದಿಂದ ಸಂಸ್ಕೃತ ನಾಟಕಗಳ ಅನುವಾದದ ಜೊತೆಗೆ, ರಂಗಭೂಮಿಯ ಪ್ರದರ್ಶನಗಳು ಪ್ರಾರಂಭಗೊಂಡವು. ಸಂಸ್ಕೃತ ನಾಟಕಗಳ ಅನುವಾದಗಳಿಂದ ಆಧುನಿಕ ನಾಟಕ ಸಾಹಿತ್ಯವು ಪ್ರಾರಂಭವಾಯಿತು. ಸಂಸ್ಕೃತದ ‘ಶಾಕುಂತಲ’ ಮತ್ತು ‘ರತ್ನಾವಳಿ’ ನಾಟಕಗಳು ಕನ್ನಡಕ್ಕೆ ಅನುವಾದಗೊಂಡವು. ಚುರಮರಿ ಶೇಷಗಿರಿರಾಯರು ‘ಶಾಕುಂತಲ’ ನಾಟಕವನ್ನು, ಬಸವಪ್ಪ ಶಾಸ್ತ್ರಿಗಳು ‘ಶಾಕುಂತಲ’ ಹಾಗೂ ‘ರತ್ನಾವಳಿ’ ನಾಟಕವನ್ನು ಕನ್ನಡಕ್ಕೆ ಭಾಷಾಂತರಿಸಿದರು. ಇವು ರಂಗದ ಮೇಲೆ ಪ್ರದರ್ಶನವನ್ನು ಕಂಡವು. ಇದು ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಒಂದು ಮಹತ್ವದ ಹೆಜ್ಜೆಯಾಯಿತು. ನಂತರ ವೃತ್ತಿ ನಾಟಕ ಕಂಪನಿಗಳು ಪ್ರಾರಂಭಗೊಂಡವು. ಪೌರಾಣಿಕ ನಾಟಕಗಳು, ಸಾಮಾಜಿಕ ನಾಟಕಗಳು ರಂಗಭೂಮಿಯನ್ನು ಪ್ರವೇಶಿಸಿದವು. ವಿವಿಧ ನಾಟಕ ಕಂಪನಿಗಳು ರಂಗಭೂಮಿಯಲ್ಲಿ ಮಹತ್ವದ ಪಾತ್ರವನ್ನು ಬೀರಿದವು. ಆಧುನಿಕ ಸಂದರ್ಭದಲ್ಲಿ ವೃತ್ತಿ ರಂಗಭೂಮಿಯು ನಾಟಕಗಳ ಪ್ರದರ್ಶನದಲ್ಲಿ ಅನೇಕ ಮಾರ್ಪಾಡುಗಳನ್ನು ತಂದಿತು. ಹವ್ಯಾಸಿ ರಂಗಭೂಮಿಯು ರಂಗಭೂಮಿಗೆ ಆಧುನಿಕತೆಯ ಸ್ಪರ್ಶವನ್ನು ನೀಡಿತು. ಹೊಸ ತಂತ್ರಜ್ಞಾನ, ನಿರ್ದೇಶನದ ತಂತ್ರಗಾರಿಕೆ, ವಿನೂತನ ಶೈಲಿ, ಸಂವಹನ ಮಾಧ್ಯಮಗಳ ಬಳಕೆ ಇಂದು ರಂಗಭೂಮಿಯಲ್ಲಿ ಅನೇಕ ಮಾರ್ಪಾಡುಗಳನ್ನು ತಂದಿದೆ. ಪಾಶ್ಚಾತ್ಯ ರಂಗಭೂಮಿಯ ಪ್ರಭಾವ ಬಹಳ ಮಟ್ಟಿಗೆ ನಾಟಕ ಪ್ರದರ್ಶನದ ಜೊತೆಗೆ ರಂಗಭೂಮಿಯಲ್ಲಿ ಹೊಸ ಹೆಜ್ಜೆಯನ್ನು ಇಡುತ್ತಾ ಮುಂದೆ ಸಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಶ್ರೀರಂಗ, (1987), ಕನ್ನಡ ರಂಗಭೂಮಿ ನಡೆದುಬಂದ ದಾರಿ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ಪ್ರಭುದೇವ ಅ. ಗಂಜೀಹಾಳ, (2009), ಕನ್ನಡ ವೃತ್ತಿ ರಂಗಭೂಮಿ ಮತ್ತು ಚಲನ ಚಿತ್ರರಂಗ, ಬೆಂಗಳೂರು: ಜೆ.ಎಂ. ಎಂಟರ್ ಪ್ರೈಸಸ್.
ಮರುಳ ಸಿದ್ದಪ್ಪ ಕೆ., (2018), ಆಧುನಿಕ ಕನ್ನಡ ನಾಟಕ, ಬೆಂಗಳೂರು: ಸ್ವಪ್ನ ಬುಕ್ ಹೌಸ್.
ಶಿವಗಂಗಾ ಯು. ಬಿಲಗುಂದಿ, (2018), ಕನ್ನಡ ರಂಗಭೂಮಿಯ ಪರಂಪರೆ-ಪ್ರವೇಶಿಕೆ, ಬೆಂಗಳೂರು (ನೆಲಮಂಗಲ): ಶ್ರೀ ಅನ್ನಪೂರ್ಣ ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್.
ಅಕ್ಷರ ಕೆ. ವಿ., (2009), ರಂಗಭೂಮಿಯ ಮುಖಾಂತರ, ಹೆಗ್ಗೋಡು: ಅಕ್ಷರ ಪ್ರಕಾಶನ.
ರಂಗನಾಥ ಎಚ್. ಕೆ., (2024), ಕರ್ನಾಟಕ ರಂಗಭೂಮಿ, ಬೆಂಗಳೂರು: ಹೇಮಂತ ಸಾಹಿತ್ಯ.