ಕನ್ನಡ ಸಂಸ್ಕೃತಿ ಹಾಗೂ ಸ್ತ್ರೀವಾದಿ ಚಿಂತನೆಯ ತಾತ್ವಿಕ ನೆಲೆಗಳು

Main Article Content

ಹೊನ್ನಪ್ಪ ಹೆಚ್. ಕಡೇನಾಯ್ಕನಹಳ್ಳಿ

Abstract

ಸ್ತ್ರೀ ಅಥವಾ ಮಹಿಳೆ ಪದವು ಸಂಸ್ಕೃತದ್ದು, ಕನ್ನಡದಲ್ಲಿ ಈ ಪದಕ್ಕೆ ‘ಹೆಣ್ಣು’ ಎಂಬ ಅರ್ಥವಿದೆ. ಇದು ನಾಗರಿಕ ಗೌರವದ ಮತ್ತು ಪುರುಷ ಪದದ ಸಮಾನ ಪದವಾಗಿದ್ದು ವಯಸ್ಕ ಹೆಣ್ಣನ್ನು ಸೂಚಿಸಲು ಉಪಯೋಗಿಸಲಾಗುತ್ತದೆ. ಆದಿಯಿಂದಲೂ ಸೃಷ್ಟಿಯ ಮೂಲ ಸ್ತ್ರೀಯಾಗಿದ್ದಾಳೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಅವಳದೇ ಆದ ಗೌರವ, ಸ್ಥಾನಮಾನಗಳಿರುವುದನ್ನು ಗುರುತಿಸಬಹುದಾಗಿದೆ. ಸ್ತ್ರೀ ಅವಿನಾಶಿ, ಸಂಜೀವಿನಿ. ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ. ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ಭೂಮಿತೂಕದ ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಹಿಳೆಯ ಜಾಯಮಾನ ಪುರುಷನ ಜಾಯಮಾನಕ್ಕಿಂತ ಭಿನ್ನವಾದದ್ದು. ಮಹಿಳೆಯನ್ನು ಹಿಂದಿನಿಂದಲೂ ಅಬಲೆಯೆಂದೇ ಕಡೆಗಣಿಸಲಾಗುತ್ತಿತ್ತು. ಮಾನವರಲ್ಲಿ ಗಂಡು ಅಥವಾ ಹೆಣ್ಣು ಎಂಬ, ನಿಸರ್ಗಬದ್ಧವಾಗಿ ಅಂಗಾಂಗ ವಿನ್ಯಾಸದಲ್ಲಿ ಭಿನ್ನತೆಯ ದೇಹಧಾರಣೆಯಾಗುತ್ತದೆ. ಹೆಣ್ಣು ಮತ್ತು ಗಂಡು ಎಂಬ ಜೈವಿಕ ಲಕ್ಷಣಗಳು ವ್ಯಕ್ತಿಯ ಹುಟ್ಟಿನಿಂದಲೇ ನಿರ್ಧಾರವಾಗುತ್ತದೆ.

ಸ್ತ್ರೀ ಕನಸೂ ಹೌದು, ವಾಸ್ತವವೂ ಹೌದು. ಪ್ರಕೃತಿಗೂ - ಸ್ತ್ರೀಗೂ ಅವಿನಾಭಾವ ಸಂಬಂಧವಿದೆ. ಈಕೆ ಭೂಮಿಯಾಗಿ, ಮುಗಿಲಾಗಿ, ಮೇರುಪರ್ವತವಾಗಿ ಬೆಳೆದು ನಿಂತಿದ್ದಾಳೆ. ಹಾಗಾಗಿ ಸ್ತ್ರೀಯನ್ನು ಸಮೃದ್ಧಿಯ ಸಂಕೇತವೆಂದು ಪರಿಭಾವಿಸಲಾಗಿದೆ. ಇಡೀ ವಿಶ್ವವೇ ಆರೋಗ್ಯಕರ ಮನೋಭಾವ ಹೊಂದಲು ಸಹಕಾರ ಶಕ್ತಿ ಸ್ತ್ರೀಯಾಗಿದ್ದಾಳೆ. ನಿಸರ್ಗದಲ್ಲಿ ಹಲವು ಬಗೆಯ ವೈವಿಧ್ಯತೆಗಳಿರುವಂತೆ ಸ್ತ್ರೀಯರಲ್ಲೂ ಹಲವು ವಿಧದ ಮಹಿಳೆಯರನ್ನು ಕಾಣಬಹುದು. ಚರಿತ್ರೆಯಲ್ಲಿ ಹಿಂದೆ ಮಾತೃಪ್ರಧಾನ ಕುಟುಂಬಗಳಿದ್ದುದನ್ನು ನಾವು ಸ್ಮರಿಸಬಹುದಾಗಿದೆ.

ತೊಂಬತ್ತರ ದಶಕದಲ್ಲಿ ಕನ್ನಡ ವಿಮರ್ಶಾ ಲೋಕಕ್ಕೆ ಸ್ತ್ರೀವಾದಿ ವಿಮರ್ಶೆಯ ಪ್ರವೇಶ ಅಧಿಕೃತವಾಗಿ ಆಗಿದೆ. ಸಾಹಿತ್ಯ ಕೃತಿಯ ವಿಮರ್ಶೆಗೆ ಅಲ್ಲಿಯವರೆಗೆ ಇದ್ದ ವಿವಿಧ ಮಾನದಂಡಗಳ ಜೊತೆಗೆ ಸ್ತ್ರೀವಾದವು ಇನ್ನೊಂದು ಮಾನದಂಡವೆಂದು ಭಾವಿಸಲಾಯಿತು. ಮಾರ್ಕ್ಸ್ ವಾದಿ ಮತ್ತು ಸಮಾಜವಾದಿ ವಿಮರ್ಶಾ ಸಿದ್ಧಾಂತದ ಭಾಗವಾಗಿಯೇ ಸ್ತ್ರೀವಾದಿ ವಿಮರ್ಶೆಯ ಉಗಮವನ್ನು ಗುರುತಿಸಬಹುದಾಗಿದೆ. ಕನ್ನಡದ ವಿವಿಧ ಕಾಲಘಟ್ಟದ ಸಾಹಿತ್ಯ ಕೃತಿಗಳಲ್ಲಿ ಸ್ತ್ರೀವಾದಿ ನೆಲೆಗಳನ್ನು ಗುರುತಿಸುವ ಕೆಲಸಗಳನ್ನು ನಾವು ಇಂದು ಕಾಣಬಹುದಾಗಿದೆ. ಅನಂತರದಲ್ಲಿ ಪಾಶ್ಚಾತ್ಯ ಸ್ತ್ರೀವಾದಿ ಚಿಂತಕಿಯರು ಮತ್ತು ಅವರ ಚಿಂತನೆಯ ಮುಖ್ಯ ಅಂಶಗಳನ್ನು ಕನ್ನಡಿಗರಿಗೆ ಪರಿಚಯಿಸುವಂಥ ಕಾರ್ಯವನ್ನು ಕಾಣುತ್ತೇವೆ. ಈ ಕೆಲಸಗಳು ವೈಯಕ್ತಿಕ ನೆಲೆ ಹಾಗೂ ಸಾಂಘಿಕ ನೆಲೆಗಳಲ್ಲಿ ಏಕಕಾಲಕ್ಕೆ ಸಾಗಿದವು. ವಿಜಯಾ ದಬ್ಬೆ, ಬಿ.ಎನ್. ಸುಮಿತ್ರಾ ಬಾಯಿ, ನೇಮಿಚಂದ್ರ, ಎನ್. ಗಾಯಿತ್ರಿ ಮುಂತಾದವರು ಹೊಸ ಅಲೆಯ ವಿಮರ್ಶಾ ವಿಧಾನಕ್ಕೆ ಭದ್ರ ಬುನಾದಿಯನ್ನು ಹಾಕಿದರು.

ಪಿತೃಪ್ರಧಾನ ಸಂಸ್ಕೃತಿಯ ಪರಿಪಾಲಕರಿಂದ ಕಸಿದುಕೊಳ್ಳಲ್ಪಟ್ಟ, ಕಟ್ಟಿಹಾಕಲ್ಪಟ್ಟ ಮನುಷ್ಯ ಸಹಜವಾದ ಮೂಲಭೂತ ಸ್ವಾತಂತ್ರ್ಯವನ್ನು ಮರುಸ್ಥಾಪಿಸಿಕೊಳ್ಳುವಲ್ಲಿ, ಪಡೆದುಕೊಳ್ಳುವಲ್ಲಿ, ಮಹಿಳೆಯರು ಮತ್ತು ಶೋಷಿತ ವರ್ಗದವರು ನಡೆಸುವ ಹೋರಾಟವೇ ಸ್ತ್ರೀವಾದ. ಮಾನವನು ಸಮಾನತೆಯ ತತ್ವದಡಿಯಲ್ಲಿ ಉತ್ತಮ ಜೀವನ ನಿರ್ವಹಿಸಲು ಅಗತ್ಯವಾದ ಭೂಮಿಕೆಯನ್ನು ಸ್ತ್ರೀವಾದವು ನಿರ್ಮಿಸಿಕೊಡಲು ಪ್ರಯತ್ನಿಸುತ್ತದೆ. ಹಾಗೂ ಬದುಕಿನ ರೀತಿ-ನೀತಿಗಳನ್ನು ಪುನರ್ ವಿಶ್ಲೇಷಣೆಗೆ ಒಳಪಡಿಸುತ್ತದೆ. ಸ್ತ್ರೀವಾದದ ಮೇಲಿರುವ ಪಿತೃಪ್ರಧಾನ ವ್ಯವಸ್ಥೆಯನ್ನು ಅನುಕರಿಸುವವರ ಅಪಪ್ರಚಾರಗಳ ಹೊರತಾಗಿಯೂ, ಭವಿಷ್ಯದ ಪ್ರಜ್ವಲತೆಗಾಗಿ ಹೋರಾಟದ ಹಾದಿಯಲ್ಲಿ ಸಮಾನತೆಯ ಗುರಿಯೆಡೆಗೆ ಸ್ತ್ರೀವಾದಿಗಳು ಸಾಗುತ್ತಿದ್ದಾರೆ.

Article Details

Section

Research Articles

Author Biography

ಹೊನ್ನಪ್ಪ ಹೆಚ್. ಕಡೇನಾಯ್ಕನಹಳ್ಳಿ

ಸಹಾಯಕ ಪ್ರಾಧ್ಯಾಪಕರು & ಮುಖ್ಯಸ್ಥರು, ಕನ್ನಡ ವಿಭಾಗ, ಜಿ.ಜಿ.ಡಿ. ಕಲೆ, ಬಿ.ಎಂ.ಪಿ ವಾಣಿಜ್ಯ ಮತ್ತು ಎಸ್.ವಿ.ಎಸ್ ವಿಜ್ಞಾನ ಪದವಿ ಮಹಾವಿದ್ಯಾಲಯ, ಬೈಲಹೊಂಗಲ.

How to Cite

ಹೊನ್ನಪ್ಪ ಹೆಚ್. ಕಡೇನಾಯ್ಕನಹಳ್ಳಿ. (2026). ಕನ್ನಡ ಸಂಸ್ಕೃತಿ ಹಾಗೂ ಸ್ತ್ರೀವಾದಿ ಚಿಂತನೆಯ ತಾತ್ವಿಕ ನೆಲೆಗಳು. ಅಕ್ಷರಸೂರ್ಯ (AKSHARASURYA), 12(01), 72 to 79. https://aksharasurya.com/index.php/latest/article/view/317

References

ಕೇಶವಶರ್ಮ ಕೆ., (1992), ಸ್ತ್ರೀವಾದಿ ವಿಮರ್ಶೆ, ಬೆಂಗಳೂರು: ಅನ್ವೇಷಣೆ ಪ್ರಕಾಶನ.

ಗಾಯಿತ್ರಿ ಎನ್., (1992), ಮಹಿಳೆ ಬಿಡುಗಡೆಯ ಹಾದಿಯಲ್ಲಿ, ಬೆಂಗಳೂರು: ನವ ಕರ್ನಾಟಕ ಪಬ್ಲಿಕೇಷನ್ಸ್.

ಮಂಗಳಾ ಪ್ರಿಯದರ್ಶಿನಿ ಡಿ., (2007), ಸ್ತ್ರೀವಾದ ಮತ್ತು ಮಹಿಳಾ ಅಧ್ಯಯನ ಒಂದು ಪ್ರವೇಶಿಕೆ, ಬೆಂಗಳೂರು: ಹೇಮಂತ ಸಾಹಿತ್ಯ.

ಸುಮಿತ್ರಾಬಾಯಿ ಬಿ.ಎನ್., (1999), ಸ್ತ್ರೀವಾದ ಒಂದು ಅವಲೋಕನ, ಶಿವಮೊಗ್ಗ: ಅಹರ್ನಿಶಿ ಪ್ರಕಾಶನ

Most read articles by the same author(s)