ಮಾನವೀಯತೆಯ ಮಾತು: ಕುರಿತೊಂದು ಮಂಥನ

Main Article Content

ಅನ್ನಪೂರ್ಣ ಹೆಚ್.

Abstract

“ಮಾನವೀಯತೆಯ ಮಾತು" ಶಿಕ್ಷಕ ಕವಿಯೊಬ್ಬರ ಕಲ್ಪನೆ, ಆಲೋಚನೆ, ಅನುಭವಗಳು ಮುಪ್ಪುರಿಗೊಂಡ ಕವನ ಸಂಕಲನವಾಗಿದೆ. ಕವಿ ಫಾಲಾಕ್ಷಪ್ಪ ಎಸ್. ಎನ್. ರವರ ಚೊಚ್ಚಲ ಸಂಕಲನವಾಗಿದ್ದರೂ ವಿಷಯ ವೈವಿಧ್ಯತೆಗಳನ್ನು ಮೈಗೂಡಿಸಿಕೊಂಡಿರುತ್ತದೆ. ಈ ಕವಿಗೆ ಸೃಷ್ಟಿಯ ಅದ್ಭುತಗಳಂತೆಯೇ ಮಾನವ ಸೃಷ್ಟಿಯ ಅಪಸವ್ಯಗಳೂ ಕಾಡಿವೆ. ಹಕ್ಕಿ, ಚುಕ್ಕಿ, ಪ್ರೀತಿ, ಮೋಡ, ಮಳೆ, ಗಿಡ, ಮರಗಳು ಕಾವ್ಯದಲ್ಲಿ ಜಾಗ ಪಡೆದಿವೆ. ಪ್ರಕೃತಿಯ ವ್ಯಾಪಾರಗಳನ್ನು ಹೇಳುತ್ತಲೇ ಅದರ ಸಂದೇಶಗಳನ್ನು ನಿಜ ಜೀವನಕ್ಕೆ ಸಂಬಂಧಕಲ್ಪಿಸುತ್ತಾ ಹೋಗಿದ್ದಾರೆ. ಮನುಷ್ಯ ಸಂಬಂಧಗಳ ಬಗ್ಗೆ ಅತೀವ ಆಸ್ಥೆ ಈ ಕವಿಗಿದೆ. ಅಮ್ಮ, ಅಪ್ಪ, ಮಡದಿ, ಮಗಳು, ಮಗ, ಸೋದರ ಹೀಗೆ ಯಾವ ಸಂಬಂಧವೂ ಇವರ ಲೇಖನಿಯಿಂದ ತಪ್ಪಿಸಿಕೊಂಡಿಲ್ಲ. ಇಲ್ಲೆಲ್ಲಾ ಕವಿಯ ಜೀವನಪ್ರೀತಿ ಎದ್ದು ಕಾಣುತ್ತದೆ. ಸಮಾಜದಲ್ಲಿನ ಮೂಢನಂಬಿಕೆಗಳು, ಜೀವ ವಿರೋಧಿ ಸಂಗತಿಗಳ ಬಗ್ಗೆಯೂ ಕವಿ ಧ್ವನಿ ಎತ್ತಿದ್ದಾರೆ. ವಸ್ತ್ರಗಳೆ ಅಸ್ತ್ರವಾಗಿರುವ ಕಾಲದ ವ್ಯಂಗವನ್ನೂ ಕವಿತೆಯಲ್ಲಿ ಹರಿಯಬಿಟ್ಟಿದ್ದಾರೆ. 'ಹೆಣ್ಣು' ಎಂಬ ಜೀವಶಕ್ತಿಯನ್ನು ಅಗ್ನಿಕುಂಡದಲ್ಲಿ ಬೀಳಿಸೇಳಿಸುವ ಜೀವ ವಿರೋಧಿ ಸಂಗತಿಗಳನ್ನು ವ್ಯಾಕುಲತೆಯಿಂದಲೆ ದಾಖಲಿಸಿದ್ದಾರೆ. ಆಷಾಢಭೂತಿತನ, ನಾಸ್ತಿಕರೆಂದು ಹೇಳುವವರ ನಾಟಕೀಯತೆಯೂ ಆಸ್ತಿಕರೆನ್ನುವವರ ಅತಿರೇಕವನ್ನೂ ವ್ಯಂಗ್ಯನೋಟದಲ್ಲಿ ಕಾಣಲಾಗಿದೆ. 'ಶ್ರಮಸಂಸ್ಕೃತಿ'ಯ ಬಗ್ಗೆ ಕವಿಗೆ ಆದರವಿದೆ. ಹಾಗಾಗಿಯೇ ಶ್ರಮವನ್ನು ಕಾವ್ಯದಲ್ಲಿ ಕಡೆಯುವಾಗ ಕವಿಯ ಕಟ್ಟುವಿಕೆ ಪ್ರತಿಮೆ, ಧ್ವನಿಗಳಿಂದ ಅನುರಣನಗೊಳ್ಳುತ್ತದೆ. ಈ ಕುರಿತು ಪ್ರಸ್ತುತ ಲೇಖನದಲ್ಲಿ ವಿವರವಾಗಿ ಚರ್ಚಿಸಲಾಗಿದೆ. ನಿತ್ಯ ಜೀವನದ ಹಸಿ ಹಸಿ ಉದಾಹರಣೆಗಳನ್ನೆ ಪ್ರತಿಮೆಯಾಗಿ, ಅಲಂಕಾರವಾಗಿ ಬಳಸಿರುವುದೂ ಕೂಡ ಈ ಕವಿಯ ಪ್ರತಿಭೆಯನ್ನು ಅನಾವರಣಗೊಳಿಸುತ್ತದೆ. ಇದು ಒಂದು ಪುಸ್ತಕವನ್ನು ಅವಲೋಕಿಸುವ ಲೇಖನವಾಗಿದ್ದು ವಿಮರ್ಶೆಯ ಆಳಕ್ಕಿಳಿದಿರುವುದಿಲ್ಲ. ಆದರೆ ಕಾವ್ಯದಲ್ಲಿ ವಾಚ್ಯತೆಯ ಹೇರಳತೆಯನ್ನು ದಾಖಲಿಸಲು ಮರೆಯುವುದಿಲ್ಲ.

Article Details

Section

Book Review

Author Biography

ಅನ್ನಪೂರ್ಣ ಹೆಚ್.

ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕಾನಲೆ, ತಾ. ಸಾಗರ, ಜಿ. ಶಿವಮೊಗ್ಗ.

References

ಮಾನವಿಯತೆಯ ಮಾತು (2023), ಪಾಲಕ್ಷಪ್ಪ ಎಸ್. ಎನ್., ಅಂತರಂಗನ ಪ್ರಕಾಶನ, ಸಾಗರ.

ಕಣ್ಣಹನಿಗಳೆ ಕಾಣಕೆ (2012), ರಾಘವೇಂದ್ರ ರಾವ್ ಹೆಚ್. ಎಸ್., ಇಳ ಪ್ರಕಾಶನ, ಬೆಂಗಳೂರು.